Advertisement

ಉಡುಪಿ ಜಿಲ್ಲೆ: ಮಳೆ ಎದುರಿಸಲು ಸರ್ವ ಸಿದ್ಧತೆ

01:55 AM Jul 07, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ವಿಪರೀತ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲಾಡಳಿತ ರೆಡ್‌ ಅಲರ್ಟ್‌ ಘೋಷಣೆ ಮಾಡಿರುವ ಜತೆಗೆ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.

Advertisement

ಸ್ಥಳೀಯಾಡಳಿತ ಹಾಗೂ ನಗರಾಡಳಿತ ವ್ಯಾಪ್ತಿಯ ತಗ್ಗು ಪ್ರದೇಶ, ನಿರಂತರ ಮಳೆಯಿಂದ ಹಾನಿಗೆ ಒಳಗಾಗಬಹುದಾದ ಪ್ರದೇಶಗಳನ್ನು ಗುರುತಿಸಿ ಈಗಾಗಲೇ ವಿಪತ್ತು ನಿರ್ವಹಣ ತಂಡದಿಂದ ಗುರುತಿಸಲಾಗಿದೆ.

ಪ್ರವಾಹ ಬರಬಹುದಾದ ಪ್ರದೇಶಗಳನ್ನು ಆಯಾ ತಹಶೀಲ್ದಾರ್‌ಗಳ ಮೂಲಕ ಗ್ರಾ.ಪಂ., ಪ.ಪಂ., ಪುರಸಭೆ, ನಗರಸಭೆ ವ್ಯಾಪ್ತಿಯ ಅಧಿಕಾರಿಗಳಿಗೆ ನೀಡಲಾಗಿದೆ. ಅಪಾಯಕಾರಿ ಪ್ರದೇಶದಲ್ಲಿ ಜನವಸತಿ ಮಾಡಿಕೊಂಡಿರುವವರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಮತ್ತು ಸಂತ್ರಸ್ತರ ಶಿಬಿರ ತೆರೆಯಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ.

ಮಲ್ಪೆಯಲ್ಲಿ ಎಸ್‌ಡಿಆರ್‌ಎಫ್ ತಂಡ
ಉಡುಪಿಗೆ ಪ್ರತ್ಯೇಕವಾಗಿ ಎಸ್‌ಡಿಆರ್‌ಎಫ್ ಘಟಕ ಬಂದಿದ್ದು ಅದರ ಕಚೇರಿ ಇನ್ನಷ್ಟೇ ನಿರ್ಮಾಣವಾಗಬೇಕಿದೆ. ಸದ್ಯ ಎಸ್‌ಡಿಆರ್‌ಎಫ್ ತಂಡದವರು ಮಲ್ಪೆಯಲ್ಲಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಿಸಲು ಮತ್ತು ಜನ, ಜಾನುವಾರುಗಳನ್ನು ಒಂದುಕಡೆಯಿಂದ ಇನ್ನೊಂದು ಕಡೆಗೆ ಸಾಗಿಲು ಮೀನುಗಾರಿಕೆ ದೋಣಿ, ಅಗ್ನಿಶಾಮಕ ದಳದ ದೋಣಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ 100 ಮಂದಿಗೆ 12 ದಿನಗಳ ತರಬೇತಿಯನ್ನು ನೀಡಲಾಗಿದೆ. ಅವರ ಸೇವೆಯೂ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ತಿಳಿಸಿದರು.

ಉಡುಪಿ ನಗರದ ಬೈಲಕೆರೆ, ಮಠದಬೆಟ್ಟು, ಬನ್ನಂಜೆ ಗರಡಿ ರಸ್ತೆ ಸೂಕ್ಷ್ಮ ಪ್ರದೇಶಗಳಾಗಿದ್ದು ಇಂದ್ರಾಣಿ ತುಂಬಿದ ಕೂಡಲೇ ಇಲ್ಲಿ ನೆರೆ ಆವರಿಸುವ ಹಿನ್ನೆಲೆಯಲ್ಲಿ ನಗರಸಭೆ ಸೂಕ್ತ ಮುಂಜಾಗ್ರತ ಕ್ರಮ ತೆಗೆದುಕೊಂಡಿದೆ.

Advertisement

ಮಳೆ ಹಾನಿ ವಿವರ
ಜಿಲ್ಲಾದ್ಯಂತ ಮಂಗಳವಾರ ತಡರಾತ್ರಿ ಬಿಟ್ಟುಬಿಟ್ಟು ಧಾರಾಕಾರ ಮಳೆಯಾಗಿದ್ದು, ಮಳೆ, ಗಾಳಿ ಪರಿಣಾಮ ಜಿಲ್ಲೆಯ ಬೈಂದೂರಿನಲ್ಲಿ 2 ಮನೆಗಳಿಗೆ, ಕುಂದಾಪುರ 13, ಕಾಪು 2, ಬ್ರಹ್ಮಾವರ 7, ಉಡುಪಿ 5 ಮನೆ ಸಹಿತ ಒಟ್ಟು 29 ಮನೆಗಳಿಗೆ ಹಾನಿ ಸಂಭವಿಸಿದೆ. ಹೆಬ್ರಿ, ಅಂಡಾರು ಭಾಗದಲ್ಲಿ ವ್ಯಾಪಕ ಮಳೆಯಿಂದ ಭತ್ತ ಕೃಷಿಗೆ ಹಾನಿ ಸಂಭವಿಸಿದೆ. ಬುಧವಾರ ಮಳೆ ಪ್ರಮಾಣ ಕೊಂಚ ತಗ್ಗಿದ್ದು, ಸಾಧಾರಣ ಮಳೆಯಾಗಿತ್ತು. ಸಂಜೆ ಅನಂತರ ಹಲವೆಡೆ ನಿರಂತರ ಮಳೆ ಸುರಿದಿದೆ.

9 ಮಂದಿಯ ರಕ್ಷಣೆ
ಕೋಟ: ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಉಪ್ಲಾಡಿಯಲ್ಲಿ ನೆರೆಯಿಂದಾಗಿ ಹಲವು ಮನೆಗಳು ಜಲಾವೃತಗೊಂಡಿದ್ದು ಅತೀ ಹೆಚ್ಚು ಅಪಾಯದಲ್ಲಿದ್ದ ನೀಲು ಹಾಗೂ ಶಾಂತಿ ಅವರ ಮನೆಯಿಂದ ಗರ್ಭಿಣಿ, ಒಂದು ವರ್ಷದ ಮಗು ಹಾಗೂ ಮೂವರು ವೃದ್ಧರು ಸೇರಿದಂತೆ 9 ಮಂದಿಯನ್ನು ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದ್ದಾರೆ.

ವಿಪತ್ತು ನಿರ್ವಹಣೆ ಸಂಬಂಧ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಗ್ರಾ.ಪಂ., ತಾ.ಪಂ. ವ್ಯಾಪ್ತಿಯ ಕಾರ್ಯಪಡೆ ಸಹಿತ ತಹಶೀಲ್ದಾರ್‌ಗಳಿಗೂ ನಿರ್ದೇಶನ ನೀಡಲಾಗಿದೆ. ನೆರೆ ಬರಬಹುದಾದ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ.
– ಕೂರ್ಮಾರಾವ್‌ ಎಂ., ಉಡುಪಿ ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಮಳೆ ಸಂಬಂಧಿಸಿದ ವಿಪತ್ತು ನಿರ್ವಹಣೆಗೆ ಕಂಟ್ರೋಲ್‌ ರೂಂ ತೆರೆಯಲಾಗಿದೆ. 1077 (0820 2574802) ಕರೆ ಮಾಡಿ ದೂರುಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next