Advertisement

ಉಡುಪಿ: ಬಿಎಸ್‌ವೈ ಕಾಲದ ಅಭಿವೃದ್ಧಿ ಶಕೆ

12:00 AM Jul 27, 2019 | Team Udayavani |

ಉಡುಪಿ: ಸುಮಾರು ಐದು ವರ್ಷಗಳ ಹಿಂದೆ ಮುಖ್ಯಮಂತ್ರಿಗಳಾಗಿದ್ದ  ಬಿ.ಎಸ್‌.  ಯಡಿಯೂರಪ್ಪನವರಿಗೂ ಉಡುಪಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಬಹು ಹಿಂದಿನಿಂದಲೂ ಬಿಜೆಪಿಯ ಪ್ರಮುಖ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಸ್ವಯಂ ಹೋರಾಟಗಾರ ಯಡಿಯೂರಪ್ಪನವರಿಗೆ ಜಿಲ್ಲೆಯ ಮೂಲೆಮೂಲೆಗಳೂ ಪರಿಚಿತವೇ. ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಡಾ| ವಿ.ಎಸ್‌. ಆಚಾರ್ಯರ ಮುಂದಾಲೋಚನೆಗೆ ಮತ್ತು ಶಾಸಕರಾಗಿದ್ದ ಕೆ. ರಘುಪತಿ ಭಟ್ ಅವರ ಉತ್ಸಾಹಕ್ಕೆ ಬೇಕಾದ ಪ್ರೋತ್ಸಾಹ, ಆರ್ಥಿಕ ಸವಲತ್ತುಗಳನ್ನು ಕೊಟ್ಟವರು ಬಿಎಸ್‌ವೈ ಅಂದರೆ ಅತಿಶಯವಲ್ಲ.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ
1997ರಲ್ಲಿ ಉಡುಪಿ ಜಿಲ್ಲೆ ಉದಯವಾದರೂ 2012ರ ವರೆಗೆ ಜಿಲ್ಲಾಡಳಿತದ ಕೇಂದ್ರ ಸ್ಥಾನವಾದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕೈಗೂಡಿರಲಿಲ್ಲ. ಜಾಗ ಮಂಜೂರಾತಿಯಿಂದ ಹಿಡಿದು ಸುಮಾರು 30 ಕೋ.ರೂ. ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಅಂತಿಮಗೊಳ್ಳುವ ವರೆಗೆ ಬಿಎಸ್‌ವೈ ಮುತುವರ್ಜಿ ವಹಿಸಿದ್ದರು. ಆದರೆ ಉದ್ಘಾಟನೆ ವೇಳೆ ಮಾತ್ರ ಅವರು ಮುಖ್ಯಮಂತ್ರಿಯಾಗಿರಲಿಲ್ಲ.

ಕಲ್ಸಂಕ- ಬನ್ನಂಜೆ ರಸ್ತೆ ವಿಸ್ತರಣೆ
ನಗರದ ಜೀವನಾಡಿಯಾಗಿದ್ದ ಕಡಿಯಾಳಿ- ಕಲ್ಸಂಕ- ಬನ್ನಂಜೆ- ಕರಾವಳಿ ಬೈಪಾಸ್‌ ಕಲ್ಸಂಕದ ಬಳಿ ಒಂದೇ ವಾಹನ ಹೋಗುವಷ್ಟು ಕಿರಿದಾಗಿತ್ತು. ಇದನ್ನು ಅಗಲಗೊಳಿಸುವ ಡಾ| ಆಚಾರ್ಯ, ಭಟ್ ಪಣಕ್ಕೆ 10 ಕೋ.ರೂ.ಗೂ ಮಿಕ್ಕಿ ಅನುದಾನ ನೀಡಿವರು ಬಿಎಸ್‌ವೈ.ಗುಂಡಿಬೈಲು- ಕಲ್ಸಂಕ ರಸ್ತೆ ಅಗಲ ಕಾಮಗಾರಿ, ಉಡುಪಿನಗರದ ಪುರಭವನದ ಅಭಿವೃದ್ಧಿ, ಅದುವರೆಗೆ ಪರ್ಯಾಯೋತ್ಸವಕ್ಕೆ ರಸ್ತೆ ದುರಸ್ತಿ ಮಾತ್ರ ನಡೆಯುತ್ತಿದ್ದರೆ ಬಿಎಸ್‌ವೈ ಅಧಿಕಾರಕ್ಕೆ ಬಂದ ಅನಂತರ ‘ನಾಡಹಬ್ಬ’ದ ಹೆಸರಿನಲ್ಲಿ ರಸ್ತೆ ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನ, ಕಾರ್ಕಳದ ಮಿಯಾರಿನಲ್ಲಿ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ಗೆ 4 ಕೋ.ರೂ., ಕೋಟದ ಶಿವರಾಮ ಕಾರಂತ ಥೀಮ್‌ ಪಾರ್ಕ್‌ಗೆ2 ಕೋ.ರೂ., ಉಡುಪಿ ಎಂಜಿಎಂಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಕನಕದಾಸ ಅಧ್ಯಯನ ಕೇಂದ್ರ ಆರಂಭಿಸಲು 1 ಕೋ.ರೂ., ಹೆಜಮಾಡಿ, ಮರವಂತೆ, ಕೋಡಿ ಬಂದರು ಅಭಿವೃದ್ಧಿಗೆ ಅನುದಾನ… ಉಡುಪಿ ಜಿಲ್ಲೆಗೆ ಬಿಎಸ್‌ವೈಕೊಡುಗೆಗಳಲ್ಲಿ ಪ್ರಮುಖವಾದವನ್ನು ಹೀಗೆ ಪಟ್ಟಿ ಮಾಡಬಹುದು. ಬಾರಕೂರು ಬೆಣ್ಣೆಕುದ್ರು ಕುಲಮಹಾಸ್ತ್ರೀ ದೇವಸ್ಥಾನ, ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನ ಸಹಿತ ಅನೇಕ ದೇಗುಲಗಳ ಅಭಿವೃದ್ಧಿ ಕೆಲಸಗಳಿಗೆ ಇದುವರೆಗೆ ಬಾರದಷ್ಟು ದೊಡ್ಡ ಮೊತ್ತದ ಅನುದಾನ, ಅದೇ ಮೊದಲ ಬಾರಿಗೆ ಧಾರ್ಮಿಕ ದತ್ತಿ ದೇವಸ್ಥಾನಗಳಿಗೆ 6,000 ರೂ. ವಾರ್ಷಿಕ ತಸ್ತೀಕು ಏರಿಕೆ ಉಲ್ಲೇಖನೀಯ.

ನಗರೋತ್ಥಾನ ಯೋಜನೆ
2008-13ರ ಅವಧಿಯಲ್ಲಿ ನಗರ ಪ್ರದೇಶಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳಿಗೆ ದೊಡ್ಡ ಮೊತ್ತದ ವಿಶೇಷ ಅನುದಾನ ಮಂಜೂರಾಗಿತ್ತು. ಉಡುಪಿ ನಗರಸಭೆಯ ಅಮೃತ ಮಹೋತ್ಸವಕ್ಕೆ ಆಗಮಿಸಿದ ಬಿ.ಎಸ್‌. ಯಡಿಯೂರಪ್ಪನವರು ವಿಶೇಷ ಅನುದಾನ 25 ಕೋ.ರೂ. ಮಂಜೂರು ಮಾಡಿದ್ದರು. ಉಡುಪಿ ಜಿಲ್ಲೆಗೆ ಆ ಐದು ವರ್ಷಗಳಲ್ಲಿ ಮಂಜೂರಾದ ವಿಶೇಷ ಅನುದಾನ ಸುಮಾರು 1,500 ಕೋ.ರೂ. ಇದರಲ್ಲಿ ಉಡುಪಿ ನಗರಸಭೆಗೆ ಮಂಜೂರಾದದ್ದು ಸುಮಾರು 136 ಕೋ.ರೂ.

ಹೆಣ್ಣುಮಕ್ಕಳು ಜನಿಸಿದರೆ ಅವರಿಗೆ 18 ವರ್ಷ ತುಂಬುವಾಗ 1 ಲ.ರೂ. ಮೊತ್ತ ಸಿಗುವ ಭಾಗಲಕ್ಷ್ಮೀ ಬಾಂಡ್‌, ಪ್ರೌಢಶಾಲಾ ಮಕ್ಕಳಿಗೆ ಬೈಸಿಕಲ್, ವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆಯಿಂದ ಜಿಲ್ಲೆಯ ಸಾವಿರಾರು ಜನರಿಗೆ ಪ್ರಯೋಜನವಾಗಿದೆ.

Advertisement

ಮುಂದಿನ ನಿರೀಕ್ಷೆ
• ಉಡುಪಿ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂಜೂರಾದ ವಾರಾಹಿ ಯೋಜನೆಯನ್ನು ಶೀಘ್ರ ಕಾರ್ಯಗತಗೊಳಿಸುವುದು.
• ಮರಳು ಸಮಸ್ಯೆಯಿಂದ ತತ್ತರಿಸಿದ ಉಡುಪಿ ಜಿಲ್ಲೆಯ ಸಾಮಾನ್ಯ ಜನರಿಗೆ ಮುಕ್ತಿ ಸಿಗಬೇಕು.
• ಹೊಸ ಹೊಸ ಯೋಜನೆ ಜಾರಿಯಾಗುತ್ತಿದೆ ವಿನಾ ಅವನ್ನು ಅನುಷ್ಠಾನಗೊಳಿಸಬೇಕಾದ ಮಾನವ ಸಂಪನ್ಮೂಲದ ಕೊರತೆ ಎಲ್ಲ ಇಲಾಖೆಗಳನ್ನು ಕಾಡುತ್ತಿದೆ. ಯೋಜನೆಗಳನ್ನು ಜಾರಿಗೊಳಿಸಬೇಕಾದ ಸಿಬಂದಿಯ ನೇಮಕ ಆಗಬೇಕಾಗಿದೆ.
• ಅತಿವೃಷ್ಟಿಯಾಗಲೀ ಅನಾವೃಷ್ಟಿಯಾಗಲೀ ಸಕಾಲದಲ್ಲಿ ಜನರಿಗೆ ಸ್ಪಂದಿಸಲು ಜಿಲ್ಲಾಡಳಿತವನ್ನು ಚುರುಕುಗೊಳಿಸಬೇಕಿದೆ.
• ಗ್ರಾಮಾಂತರದ ರಸ್ತೆಗಳು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಅಗತ್ಯ.
• ಬೆಳೆಯುತ್ತಿರುವ ನಗರ ಪ್ರದೇಶಗಳಿಗೆ ಆ ವೇಗಕ್ಕೆ ತಕ್ಕುದಾದ ಸ್ಮಾರ್ಟ್‌ ಸಿಟಿ ಮಾದರಿ ಯೋಜನೆ ಅಗತ್ಯ.
• ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನದ ಆವಶ್ಯಕತೆ ಇದೆ.
• ನಗರ ಪ್ರದೇಶಗಳಿಗೆ ವ್ಯವಸ್ಥಿತಿ ಒಳಚರಂಡಿ ಯೋಜನೆ ಬೇಕು.

Advertisement

Udayavani is now on Telegram. Click here to join our channel and stay updated with the latest news.

Next