ಉಡುಪಿ: ಬಿಜೆಪಿ ಉಡುಪಿ ನಗರ ಮತ್ತು ಗ್ರಾಮಾಂತರ ಆಶ್ರಯದಲ್ಲಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಎಂಜಿಎಂ ಮೈದಾನದಲ್ಲಿ ಹಮ್ಮಿಕೊಂಡಿರುವ ಅಟಲ್ ಉತ್ಸವದ ಪ್ರಯುಕ್ತ ಡಿ. 24 ರಂದು ನಡೆಯಲಿರುವ ಹೊನಲು ಬೆಳಕಿನ ರಾಷ್ಟ್ರಮಟ್ಟದ ಮುಕ್ತ ಪ್ರೊ ಕಬಡ್ಡಿ ಪಂದ್ಯಾಟ “ಅಟಲ್ ಟ್ರೋμ’ ಮತ್ತು ಡಿ. 25 ರಂದು ನಡೆಯಲಿರುವ “ಬೂತ್ ಸಂಗಮ’ ಕಾರ್ಯಕ್ರಮಕ್ಕೆ ಉಡುಪಿ ನಗರ ಸಜ್ಜುಗೊಂಡಿದೆ.
ವಿದ್ಯುದ್ದೀಪಾಲಂಕಾರ
ಉತ್ಸವಕ್ಕೆ ಇನ್ನಷ್ಟು ಕಳೆ ಕಟ್ಟುವ ನಿಟ್ಟಿನಲ್ಲಿ ಉಡುಪಿ ನಗರದ ಕಲ್ಸಂಕ ವೃತ್ತದಿಂದ ಎಂಜಿಎಂ ವರೆಗೆ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ಹಬ್ಬದೋಪಾದಿ ಕಂಗೊಳಿಸುತ್ತಿದೆ. ಕಲ್ಸಂಕದಿಂದ ಎಂಜಿಎಂ ವರೆಗಿನ ರಸ್ತೆಯ ಇಕ್ಕೆಡೆಗಳಲ್ಲಿ ಆಕರ್ಷಕ ವಾಗಿ ಫ್ಲೆಕ್ಸ್, ಧ್ವಜ, ಪತಾಕೆಗಳು, ಬ್ಯಾನರ್ ಗಳನ್ನು ಅಳವಡಿಸಿ ಶೃಂಗರಿಸಲಾಗಿದೆ.
ಸಂಗೀತೋತ್ಸವ
ಪಂದ್ಯಾಟದಲ್ಲಿ ಸುಮಾರು 6 ಸಾವಿರ ಮಂದಿ ಆಸೀನರಾಗಲು ಗ್ಯಾಲರಿಗಳ ವ್ಯವಸ್ಥೆ, ಸ್ಟೇಡಿಯಂನಲ್ಲಿ ಸುಮಾರು 5 ಸಾವಿರ ಮಂದಿ ವೀಕ್ಷಿಸಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 25 ಸಾವಿರ ಮಂದಿ ಪಂದ್ಯಾಟ ವೀಕ್ಷಿಸುವ ನಿರೀಕ್ಷೆ ಇದೆ. ಬೂತ್ ಸಂಗಮದಲ್ಲಿ ವಿಶೇಷ ಆಕರ್ಷಣೆಯಾಗಿ ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ನೇತೃತ್ವದ ತಂಡದಿಂದ ಸಂಗೀತೋತ್ಸವ ಆಯೋಜಿಸಲಾಗಿದೆ. ಬೂತ್ ಸಂಗಮದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಹಬ್ಬದ ವಾತಾವರಣ
ಎರಡು ದಿನ ನಡೆಯಲಿರುವ ಅಟಲ್ ಉತ್ಸವದ ಕಾರ್ಯಕ್ರಮಗಳಲ್ಲಿ ಕೇಂದ್ರ, ರಾಜ್ಯ ಸರಕಾರದ ಸಚಿವರು, ಪ್ರಮುಖ ಬಿಜೆಪಿ ನಾಯಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಟಲ್ ಉತ್ಸವ ದಿಂದ ಉಡುಪಿಯಲ್ಲಿ 2 ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣ ವಾಗಲಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದ್ದಾರೆ.