Advertisement

ಜಾಲತಾಣ: ನಿಗಾ ವಹಿಸಲು ಕೇಂದ್ರ ವೀಕ್ಷಕರ ಸೂಚನೆ

02:48 AM Mar 29, 2019 | Team Udayavani |

ಉಡುಪಿ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣ ಪ್ರಚಾರ ನಡೆಸುವುದರ ವಿರುದ್ಧ ತೀವ್ರ ನಿಗಾ ಇಡಬೇಕು. ಸಾಮಾಜಿಕ ಜಾಲತಾಣಗಳು ಎಲೆಕ್ಟ್ರಾನಿಕ್‌ ಮಾಧ್ಯಮ ವಾಗಿರುವುದರಿಂದ ಅವುಗಳಲ್ಲಿ ನಡೆಸುವ ಯಾವುದೇ ಪ್ರಚಾರವು ಪೂರ್ವಾನುಮತಿ ಪಡೆದಿರಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕೇಂದ್ರ ವೀಕ್ಷಕ ಕೃಷ್ಣ ಕುನಾಲ್‌ ಸೂಚಿಸಿದ್ದಾರೆ.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಧಿಕಾರಿಗಳ ಜಂಟಿ ಸಭೆ ನಡೆಸಿ ಅವರು ಮಾತನಾಡಿದರು.

ಮತದಾನ ಪ್ರಮಾಣ ಹೆಚ್ಚಳವಾಗಲು ಇನ್ನಷ್ಟು ಪರಿಣಾಮಕಾರಿಯಾದ ಜಾಗೃತಿ
ಕಾರ್ಯಕ್ರಮಗಳನ್ನು ನಡೆಸಬೇಕು. ಮತದಾನಕ್ಕೆ ಅಡ್ಡಿಯಾಗುವಂತಹ ಯಾವುದೇ ವ್ಯಕ್ತಿ ಅಥವಾ ಸಮಸ್ಯೆಗಳನ್ನು ಮೊದಲೇ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಕೇಂದ್ರ ಚುನಾವಣಾ ವೀಕ್ಷಕರು ಉಭಯ ಜಿಲ್ಲೆಗಳ ಅಧಿಕಾರಿ ಗಳಿಗೆ ನಿರ್ದೇಶಿಸಿದರು.

ಮತದಾರರ ವಿವರ
ಪ್ರತೀ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವ ಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮತಗಟ್ಟೆಯ ಮತದಾರರ ಅಂಕಿಅಂಶ ಹಾಗೂ ವಿವರ ಸಂಗ್ರಹಿಸಿರಬೇಕು. ಇದರಿಂದ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಕೈಬಿಟ್ಟಿರುವುದರ ಬಗ್ಗೆ ಯಾವುದೇ ದೂರು ಬಂದರೆ ಕೂಡಲೇ ಸ್ಪಂದಿಸಬಹುದಾಗಿದೆ. ಚುನಾವಣೆಯಲ್ಲಿ ಮತದಾನ ಮಾಡಲು ಎಪಿಕ್‌ ಕಾರ್ಡ್‌ ಅಥವಾ ವೋಟರ್‌ ಸ್ಲಿಪ್‌ ಇಲ್ಲದಿದ್ದರೆ ಇತರ 11 ಯಾವುದಾದರೂ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು. ಈ ಬಗ್ಗೆ ಮತದಾರರಿಗೆ ವ್ಯಾಪಕ ಪ್ರಚಾರ ನೀಡುವಂತೆ ಕೇಂದ್ರ ವೀಕ್ಷಕರು ತಿಳಿಸಿದರು.

ಖುದ್ದು ಭೇಟಿ ನೀಡಿ
ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಮತಗಟ್ಟೆಗಳಲ್ಲಿ ಎಲ್ಲ ಸೌಲಭ್ಯಗಳು ಇರುವಂತೆ ಆಯಾ ಎಆರ್‌ಒಗಳು ಖುದ್ದು ಭೇಟಿ ನೀಡಿ ಗಮನಹರಿಸಬೇಕು. ಚುನಾವಣೆ ದಿನ ಆಯಾ ಮತಗಟ್ಟೆಯ ಹೊರಗಡೆ ಮತಗಟ್ಟೆಯ ಮಾಹಿತಿ ನೀಡುವ ಬ್ಯಾನರ್‌ ಅಳವಡಿಸಬೇಕು ಎಂದು ಕೃಷ್ಣ ಕುನಾಲ್‌ ತಿಳಿಸಿದರು.

Advertisement

ಚುನಾವಣಾ ಸಿಬಂದಿಗೆ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡಬೇಕು. ಇದರಿಂದ ಮತದಾನ ದಿನದಂದು ಮತಗಟ್ಟೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೂ ತ್ವರಿತವಾಗಿ ಪರಿಹರಿಸಬಹುದು ಎಂದರು.

ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಅವರು ತಮ್ಮ ಜಿಲ್ಲೆಯಲ್ಲಿ ನಡೆದಿರುವ ಚುನಾವಣಾ ಸಿದ್ಧತೆಗಳ ಬಗ್ಗೆ ಕೇಂದ್ರ ವೀಕ್ಷಕರಿಗೆ ವಿವರ ನೀಡಿದರು.

ಸಭೆಯಲ್ಲಿ ಉಡುಪಿ ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌, ಚಿಕ್ಕಮಗಳೂರು ಸಿಇಒ ಅಶ್ವಥಿ, ಉಭಯ ಜಿಲ್ಲೆಗಳ ಎಸ್‌ಪಿಗಳಾದ ನಿಶಾ ಜೇಮ್ಸ್‌, ಹರೀಶ್‌ ಪಾಂಡೆ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕುಮಾರ್‌ ಉಪಸ್ಥಿತರಿದ್ದರು.

ಚೆಕ್‌ಪೋಸ್ಟ್‌ ತಪಾಸಣೆ ಬಿಗಿ
ಕೇಂದ್ರ ಚುನಾವಣಾ ಆಯೋಗದ ಪೊಲೀಸ್‌ ವೀಕ್ಷಕ ಸಂದೀಪ್‌ ಪ್ರಕಾಶ್‌ ಕಾರ್ಣಿಕ್‌ ಮಾತನಾಡಿ, ಚುನಾವಣೆ ಪ್ರಚಾರದಲ್ಲಿ ಅಭ್ಯರ್ಥಿಗಳು ಪ್ರಚೋದನಕಾರಿ ಭಾಷಣ ಮಾಡಿದರೆ ತತ್‌ಕ್ಷಣವೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಗಳು ತಮ್ಮ ಪಕ್ಷಗಳ ನೀತಿ ಹಾಗೂ ಸಾಧನೆಗಳ ಬಗ್ಗೆ ಮಾತನಾಡಬಹುದು. ಆದರೆ ಯಾವುದೇ ರೀತಿಯಲ್ಲಿ ಪರಸ್ಪರ ಸಾಮರಸ್ಯಕ್ಕೆ ಭಂಗ ತರುವಂತೆ ಪ್ರಚಾರ ಕೈಗೊಂಡರೆ ಕ್ರಮ ಜರುಗಿಸಬೇಕು. ಚೆಕ್‌ಪೋಸ್ಟ್‌ ತಪಾಸಣೆಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next