Advertisement

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಲಾಸ್‌ಮೇಟ್‌ಗಳ “ಬಲಿಷ್ಠ’ಸ್ಪರ್ಧೆ

06:20 AM Apr 29, 2018 | |

ಉಡುಪಿ: ಮಕ್ಕಳ ಮನಸ್ಸು ಮುಗ್ಧ. ಯಾವುದೇ ರಾಗ ದ್ವೇಷಗಳಿರುವುದಿಲ್ಲ. ದೊಡ್ಡವರಾದಂತೆ ಮನಸ್ಸು ರಾಗ ದ್ವೇಷ ತುಂಬಿಕೊಳ್ಳುತ್ತದೆ ಎಂಬ ಮಾತು ಕೇಳುತ್ತಿರುತ್ತೇವೆ. ಇದು ಸತ್ಯ …ಇದು ಸತ್ಯ… ಇದು ಸತ್ಯ… ಎಂದು ಸಾರಲು ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯೇ ಸಾಕ್ಷಿ.ಉಡುಪಿ  ಕ್ಷೇತ್ರದಲ್ಲಿ ಜಿಲ್ಲೆಯ ಏಕೈಕ ಸಚಿವ ಪ್ರಮೋದ್‌ ಮಧ್ವರಾಜ್‌ ಮತ್ತು ಬಿಜೆಪಿ ಸಕ್ರಿಯ ರಾಜಕಾರಣಿ ಕೆ. ರಘುಪತಿ ಭಟ್‌ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ.

Advertisement

ಎರಡು ಶಾಲೆಗಳಲ್ಲಿ …
ಇವರಿಬ್ಬರೂ ಐದು ವರ್ಷ ಕ್ಲಾಸ್‌ಮೇಟ್‌ಗಳಾಗಿದ್ದರು. ಉಡುಪಿ ಮುಕುಂದಕೃಪಾ ಶಾಲೆಯಲ್ಲಿ 6, 7ನೇ ತರಗತಿ, ಕುಂಜಿಬೆಟ್ಟಿನ ಇಎಂಎಚ್‌ಎಸ್‌ನಲ್ಲಿ 8ರಿಂದ 10ನೇ ತರಗತಿವರೆಗೆ ಒಟ್ಟಿಗೇ ಓದಿದವರು. ಈ ಸಹಪಾಠಿ ಜೀವನ 1979ರಿಂದ 1984ರ ವರೆಗೆ ನಡೆಯಿತು. ಇಬ್ಬರೂ ಭಾರೀ ದೋಸ್ತಿಗಳು, ಒಬ್ಬರ ಮನೆಗೆ ಒಬ್ಬರು ಹೋಗುತ್ತಿದ್ದರು. ಈಗ ಇಬ್ಬರೂ ಪಕ್ಕಾ ರಾಜಕೀಯ ಎದುರಾಳಿಗಳು !

2008ರಲ್ಲಿ ಉಡುಪಿ ಕ್ಷೇತ್ರ, 2004ರಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಜಯ ಅನುಭವಿ ಸಿದ್ದ ಪ್ರಮೋದ್‌ ಮಧ್ವರಾಜ್‌ 2013ರಲ್ಲಿ ಉಡುಪಿಯಿಂದ ಗೆಲುವು ಸಾಧಿಸಿ ಮೊದಲ ಅವಧಿಯಲ್ಲಿ ಸಂಸದೀಯ ಕಾರ್ಯದರ್ಶಿ, ಸಹಾಯಕ ಸಚಿವ, ಸಂಪುಟ ದರ್ಜೆ ಸಚಿವ ಹೀಗೆ ನಾಲ್ಕು ಭಡ್ತಿಗಳನ್ನು ಪಡೆದವರು. ಮುಖ್ಯಮಂತ್ರಿಗಳೇ ಮೊದಲಾದವರೊಂದಿಗೆ ನಿಕಟ ಸಂಪರ್ಕ ಹೊಂದಿದವರು. 

2004 ಮತ್ತು 2008ರಲ್ಲಿ 2 ಬಾರಿ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಘುಪತಿ ಭಟ್‌ ಎರಡೂ ಬಾರಿ ಗೆಲುವು ಸಾಧಿಸಿ
ದ್ದರು. ಡಾ| ವಿ.ಎಸ್‌. ಆಚಾರ್ಯ ಸಚಿವರಾಗಿದ್ದಾಗ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಕೆಲಸ ಮಾಡಿದ ಕಾರಣ ಆಡಳಿತದ ಒಳಹೊರಗು ಚೆನ್ನಾಗಿ ಬಲ್ಲವರು. 2013ರಲ್ಲಿ ಸ್ಪರ್ಧಿಸಿರಲಿಲ್ಲ. ಈಗ ಮತ್ತೆ ಸ್ಪರ್ಧಿಸುತ್ತಿದ್ದಾರೆ.

ಒಬ್ಬರು ಹಾಲಿ ಸಚಿವರು, ಇನ್ನೊಬ್ಬರು ಮಾಜಿ ಶಾಸಕರಾದ ಕಾರಣ ತಮ್ಮ ತಮ್ಮ ಅವಧಿಯಲ್ಲಿ ಆದ ಸಾಧನೆಗಳನ್ನು ಜನರೆದುರು ಹೇಳುತ್ತಿದ್ದಾರೆ; ಜನರೂ ತುಲನೆ ಮಾಡಲು ಆರಂಭಿಸಿದ್ದಾರೆ. ಇಬ್ಬರೂ ಪಕ್ಷದಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದವರು. ಇಬ್ಬರೂ ಉದ್ಯಮಿಗಳು. ಪ್ರಮೋದ್‌ ಪರಂಪರಾಗತ ಮತೊÕéàದ್ಯಮಿಯಾ ದರೆ ರಘುಪತಿ ಭಟ್‌ ಹಣಕಾಸು ಸಂಸ್ಥೆ, ದ್ವಿಚಕ್ರವಾಹನದ ಡೀಲರ್‌ಶಿಪ್‌ ಹೊಂದಿದ್ದಾರೆ. ಇಬ್ಬರ ಕೆಲಸ ಮಾಡುವ ಸಾಮರ್ಥ್ಯ, ಪಕ್ಷಪ್ರೇಮದ ಆಧಾರದಲ್ಲಿ ಇಬ್ಬರಿಗೂ ಸಾಕಷ್ಟುಅಭಿಮಾನಿ ವರ್ಗವಿದೆ. ಇವರಿಬ್ಬರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಿಶ್ಚಿತ. ಕಳೆದ ಬಾರಿ ಪ್ರಮೋದ್‌ ಮಧ್ವರಾಜರು 39,524 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಇಂತಹ ಅಂತರ ಯಾರು ಗೆದ್ದರೂ ಇರುವುದಿಲ್ಲ ಎನ್ನುವುದು ಕಂಡುಬರುತ್ತಿದೆ.
 
ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಶ್ರೀ ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ನರೇಂದ್ರ ಮೋದಿ, ಅಮಿತ್‌ ಶಾಗೆ ಬೆಂಬಲ ಸೂಚಿಸಿ ನಾಮಪತ್ರ ಹಿಂದೆಗೆದುಕೊಂಡಿದ್ದಾರೆ. ಪ್ರಮೋದ್‌ ಮತ್ತು ರಘುಪತಿ ಭಟ್‌ ಅಲ್ಲದೆ, ಬಿರ್ತಿ ಗಂಗಾಧರ ಭಂಡಾರಿ (ಜೆಡಿಎಸ್‌), ಶೇಖರ ಹಾವಂಜೆ (ರಿಪಬ್ಲಿಕನ್‌ ಪಾರ್ಟಿ), ಮಧುಕರ (ಶಿವಸೇನೆ), ವೈ.ಎಸ್‌. ವಿಶ್ವನಾಥ್‌ (ಆಲ್‌ ಇಂಡಿಯಾ ಮಹಿಳಾ ಎಂಪವರೆ¾ಂಟ್‌ ಪಾರ್ಟಿ), ಸುಧೀರ್‌ ಕಾಂಚನ್‌, ಮಹೇಶ (ಪಕ್ಷೇತರರು) ಸಹಿತ 8 ಮಂದಿ ಕಣದಲ್ಲಿದ್ದಾರೆ.

Advertisement

ಸುಮಾರು 20 ವರ್ಷಗಳಿಂದ ಜೆಡಿಎಸ್‌ ಕಾರ್ಯಕರ್ತ ರಾಗಿದ್ದ ಬಿರ್ತಿ ಗಂಗಾಧರ ಭಂಡಾರಿ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಮನೆಮನೆ ಪ್ರಚಾರದಲ್ಲಿ ತೊಡಗಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಅವರು ನೀಡಿದ 20 ತಿಂಗಳ ರಾಜ್ಯಾಡಳಿತವನ್ನು ನೆನಪಿಸಿ ಜೆಡಿಎಸ್‌ ಅಭ್ಯರ್ಥಿ ಚುನಾವಣೆ ಎದುರಿಸುತ್ತಿದ್ದಾರೆ.

ಶೇಖರ ಹಾವಂಜೆ ರಿಪಬ್ಲಿಕನ್‌ ಪಾರ್ಟಿ, ಮಧುಕರ ಶಿವಸೇನೆ, ವಿಶ್ವನಾಥ್‌ ಎಂಎಂಪಿ ಪಕ್ಷದ ಅಭ್ಯರ್ಥಿಯಾಗಿ ಪ್ರಚಾರದಲ್ಲಿದ್ದಾರೆ. ಸುಧೀರ್‌ ಕಾಂಚನ್‌ 1983ರಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಬ್ರಹ್ಮಾವರ ಕ್ಷೇತ್ರದಿಂದ ಕ್ರಾಂತಿರಂಗ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. 1989 ಮತ್ತು 2014ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.

ಹೇಳಿಕೊಳ್ಳಬಹುದಾದ ಯಾವ ದೊಡ್ಡ  ಸಾಧನೆಯೂ ಈ ಅವಧಿಯಲ್ಲಿ ನಡೆದಿಲ್ಲ. ನಮ್ಮ ಅವಧಿಯಲ್ಲಿ ಆದ ಕೆಲಸಗಳನ್ನು ಇಂದಿಗೂ ಜನರು ಹೇಳುತ್ತಿದ್ದಾರೆ. ಮೋದಿ ಆಡಳಿತ ದೇಶದಲ್ಲಿ ಬದಲಾವಣೆ ತಂದಂತೆ, ರಾಜ್ಯದಲ್ಲಿಯೂ ಬದಲಾವಣೆ ಬರಲಿದೆ. ಡಾ| ಆಚಾರ್ಯರ ಮಾದರಿಯಲ್ಲಿ  ಹಿಂದಿನಂತೆ ಮುನ್ನಡೆಸುತ್ತೇನೆ. ಇದೇ ನಮಗೆ ಶ್ರೀರಕ್ಷೆ.
– ಕೆ.ರಘುಪತಿ ಭಟ್‌, ಬಿಜೆಪಿ ಅಭ್ಯರ್ಥಿ

ಇದುವರೆಗೆ ಕಾಣದಷ್ಟು ಅನುದಾನವನ್ನು ಉಡುಪಿ ಕ್ಷೇತ್ರಕ್ಕೆ ತರಲಾಗಿದೆ. ಈಗ ರಾಜ್ಯದಲ್ಲಿಯೇ ನಂಬರ್‌ 1 ಕ್ಷೇತ್ರವಾಗಿ ಮೂಡಿಬಂದಿದೆ. ಮುಂದೆ ದೇಶದಲ್ಲಿಯೇ ನಂಬರ್‌ 1 ಆಗಿ ಮಾಡುವ ಇರಾದೆ ಇದೆ. ಇದನ್ನು ಜನರು ಗುರುತಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಸರಕಾರ ಜನಪರ ಕೆಲಸ ಮಾಡಿದೆ. ಈ ಕಾರಣ ನಮ್ಮ ಗೆಲುವು ನಿಶ್ಚಿತ. 
-ಪ್ರಮೋದ್‌ ಮಧ್ವರಾಜ್‌, 
ಕಾಂಗ್ರೆಸ್‌ ಅಭ್ಯರ್ಥಿ

ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿ ಮನೆಮನೆಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದೇವೆ. ಇನ್ನು 8-10 ದಿನಗಳಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪ್ರಚಾರ ನಡೆಸಲಿದ್ದೇವೆ. ನಮ್ಮ ನಾಯಕರು ಪ್ರಚಾರಕ್ಕೆ ಬರುವುದು ಒಂದೆರಡು ದಿನಗಳಲ್ಲಿ ನಿಗದಿಯಾಗುತ್ತದೆ. ಎಚ್‌.ಡಿ. ಕುಮಾರಸ್ವಾಮಿಯವರು 20 ತಿಂಗಳು ನೀಡಿದ ಆಡಳಿತವನ್ನು ಯಾರೂ ಮರೆತಿಲ್ಲ.
– ಬಿರ್ತಿ ಗಂಗಾಧರ ಭಂಡಾರಿ, ಜೆಡಿಎಸ್‌ ಅಭ್ಯರ್ಥಿ

ಮತದಾರರು – ಜಾತಿವಾರು ಲೆಕ್ಕಾಚಾರ
ಬಂಟರು, ಬಿಲ್ಲವರು, ಮೊಗವೀರರು  ಸುಮಾರು ತಲಾ 40,000, ಬ್ರಾಹ್ಮಣರು, ಜಿಎಸ್‌ಬಿ ಸೇರಿ ಸುಮಾರು 33,000, ಕ್ರೈಸ್ತರು ಸುಮಾರು 9,000, ಮುಸ್ಲಿಮರು ಸುಮಾರು 13,000, ಪರಿಶಿಷ್ಟ ಜಾತಿ ಸುಮಾರು 11,000, ಪರಿಶಿಷ್ಟ ಪಂಗಡ ಸುಮಾರು 10,000, ವಿಶ್ವಕರ್ಮರು, ನೇಕಾರರು ಸುಮಾರು ತಲಾ 6,000 ಮಂದಿ, ಇತರರು ಸುಮಾರು 20,000 ಇದ್ದಾರೆ.

ಒಟ್ಟು ಮತದಾರರು: 2,03,777
ಪುರುಷರು: 98,759
ಮಹಿಳೆಯರು:1,05,018

-  ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next