Advertisement

ಉಡ್ತಾ ಕರ್ನಾಟಕವಾಗಲು ಬಿಡಲ್ಲ-ಡ್ರಗ್ಸ್‌ ಹಾವಳಿ ನಿಲ್ಲಿಸಲು ಕಠಿಣ ಕ್ರಮ: ಡಾ.ಜಿ.ಪರಮೇಶ್ವರ

09:04 PM Jul 12, 2023 | Team Udayavani |

ಬೆಂಗಳೂರು: ರಾಜ್ಯವನ್ನು ಉಡ್ತಾ ಕರ್ನಾಟಕವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಡ್ರಗ್ಸ್‌ ವಿಚಾರದಲ್ಲಿ ಸರ್ಕಾರ ಸದಾ ಕಠಿಣ ಕ್ರಮಕ್ಕೆ ಬದ್ಧವಾಗಿರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

Advertisement

ವಿಧಾನಸಭೆಯಲ್ಲಿ ಬುಧವಾರ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಅವರು ಕೊಪ್ಪಳ ಜಿಲ್ಲೆಯಲ್ಲಿನ ಅಕ್ರಮ ರೇಸಾರ್ಟ್‌ಗಳ ಕುರಿತು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಡ್ರಗ್ಸ್‌ ಜಾಲ ವಿಪರೀತವಾಗಿ ಹರಡಿಕೊಂಡಿದೆ. ಈ ಹಿಂದೇ ನಾನು ಗೃಹ ಸಚಿವನಾಗಿದ್ದಾಗ ಬೆಂಗಳೂರನ್ನು ಉಡ್ತಾ ಬೆಂಗಳೂರು ಆಗಲು ಬಿಡಬೇಡಿ ಎಂದು ಅನೇಕ ಸಂಘ-ಸಂಸ್ಥೆಗಳು ಮನವಿ ಮಾಡಿಕೊಂಡಿದ್ದವು. ಆಗಲೂ ನಾನು ಕ್ರಮ ವಹಿಸಿದ್ದೆ. ಆದರೆ ಈ ಬಾರಿ ಆರಂಭದಿಂದಲೇ ಕಟ್ಟುನಿಟ್ಟಿನ ಕ್ರಮ ವಹಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರ ಭಾಗವಾಗವಾಗಿಯೇ ಸರ್ಕಾರ ಬಂದ ಒಂದೂವರೆ ತಿಂಗಳಿನಲ್ಲಿ 112 ಕೋಟಿ ರೂ. ಮೌಲ್ಯದ ಡ್ರಗ್ಸ್‌ ನಾಶ ಪಡಿಸಿದ್ದೇವೆ ಎಂದರು.

ಕಳೆದ ವಾರ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡ್ರಗ್ಸ್‌ ಮುಕ್ತ ಮಂಗಳೂರು ಮಾಡುವಂತೆ ಅಲ್ಲಿನ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೀಗ ಪ್ರತಿಯೊಂದು ಜಿಲ್ಲೆಯಿಂದಲೂ ಇದೇ ಅಭಿಯಾನ ಆರಂಭಿಸಿ, ಬೆಂಗಳೂರು ಸೇರಿ ಎಲ್ಲಾ ಕಡೆಗೂ ಡ್ರಗ್ಸ್‌ ಹಾವಳಿ ನಿಲ್ಲಿಸಲು ಕಠಿಣ ಕ್ರಮ ವಹಿಸುವುದಾಗಿ ಹೇಳಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ, ಗಂಗಾವತಿ ತಾಲೂಕು ಸೇರಿ, ಹಂಪಿಯ ಸುತ್ತಮುತ್ತ ಅಕ್ರಮ ರೆಸಾರ್ಟ್‌ಗಳು ತಲೆ ಎತ್ತಿವೆ. ಅಲ್ಲಿ ವೇಶ್ಯಾವಾಟಿಕೆ ಮತ್ತು ಡ್ರಗ್ಸ್‌ ಜಾಲಗಳು ತಲೆಯೆತ್ತಿದ್ದು ಇದನ್ನು ನಿಲ್ಲಿಸುವಂತೆ ನಾನು ಸದನದಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ, ಗಂಗಾವತಿಯಲ್ಲಿ ನನ್ನ ವಿರುದ್ಧ ಕೆಲವರು ಅವಹೇಳನಕಾರಿ ಮೆರವಣಿಗೆ ನಡೆಸಿದ್ದಾರೆ. ನನಗೆ ಬೆದರಿಕೆಯನ್ನೂ ಹಾಕಿದ್ದಾರೆ. ನಾನು ಅಲ್ಲಿಗೆ ಮುಂದಿನ ವಾರ ಹೋಗುತ್ತೇನೆ. ಅದೇನು ಮಾಡಿಕೊಳ್ಳುತ್ತಾರೋ ನೋಡುತ್ತೇನೆ ಎಂದರು.

ರೆಡ್ಡಿದ್ವಯರ ಆರೋಪ-ಪ್ರತ್ಯಾರೋಪ: ಈ ಹಂತದಲ್ಲಿ ಬಸವರಾಜ ರಾಯರಡ್ಡಿ ಮತ್ತು ಜನಾರ್ದನ ರೆಡ್ಡಿ ಮಧ್ಯೆ ಆರೋಪ-ಪ್ರತ್ಯಾರೋಪ ವಿಕೋಪಕ್ಕೆ ಹೋಯಿತು. ಹಂಪಿಯಲ್ಲಿ ಹೊಸ ಸರ್ಕಾರ ಬಂದ ಮೇಲೆ ಯಾವುದೇ ಡ್ರಗ್ಸ್‌ ಪ್ರಕರಣ ಪತ್ತೆಯಾಗಿಲ್ಲ. ಹಂಪಿ ಮತ್ತು ಅಂಜನಾದ್ರಿಯಲ್ಲಿ 64 ಸಾವಿರ ಜನ ಪ್ರವಾಸೋದ್ಯಮವನ್ನು ನಂಬಿಕೊಂಡಿದ್ದಾರೆ. ಇದು ಹನುಮಂತನ ನಾಡು ಅಲ್ಲಿಗೆ ವಿದೇಶಿಗರು ಬರುತ್ತಾರೆ. ಬಸವರಾಜ ರಾಯರಡ್ಡಿ ಅವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆಂದು ಕಿಚಾಯಿಸಿದರು. ಕೂಡಲೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಯರಡ್ಡಿ, ನಾನು ಯಾರನೂ ದೂಷಿಸುತ್ತಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನೀಡಿರುವ ಮಾಹಿತಿಯನ್ನೇ ಸದನಕ್ಕೆ ನೀಡಿದ್ದೇನೆ ಎಂದರು.

Advertisement

ಅಕ್ರಮ ನಡೆಯಲು ಬಿಡಲ್ಲ: ಈ ಮಧ್ಯೆ ಸದನ ಪ್ರವೇಶಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್‌ ತಂಗಡಗಿ, ಅಲ್ಲಿನ ಕೆಲವು ರೆಸಾರ್ಟ್‌ಗಳು ಅಕ್ರಮವಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್‌ ಆದೇಶವಿತ್ತು. ಅದರಂತೆ ತೆರವುಗೊಳಿಸಿದ್ದೇವೆ. ಅಂಜನಾದ್ರಿ ಬೆಟ್ಟದ ಪಾವಿತ್ರ್ಯತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಲಾಗುವುದು. ಯಾವುದೇ ಅಕ್ರಮಗಳು ನಡೆಯದಂತೆ ಕ್ರಮ ವಹಿಸುವುದಾಗಿ ಸದನಕ್ಕೆ ಭರವಸೆ ನೀಡಿದರು.

ಡ್ರಗ್ಸ್‌-ರೆಸಾರ್ಟ್‌ : ರಾಯರಡ್ಡಿಅಭಿನಂದಿಸಿದ ಸ್ಪೀಕರ್‌

ರೇಸಾರ್ಟ್‌ಗಳಲ್ಲಿ ಡ್ರಗ್ಸ್‌ ಹಾವಳಿ ಮತ್ತು ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಸದನದಲ್ಲಿ ಪ್ರಸ್ತಾಪಿಸಿದ್ದ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಅವರನ್ನು ಸಭಾಧ್ಯಕ್ಷ ಯು.ಟಿ.ಖಾದರ್‌ ಅಭಿನಂದಿಸಿದರು. ದುಶ್ಚಟ ಮತ್ತು ದ್ವೇಷ ಎರಡನ್ನೂ ತಡೆಗಟ್ಟಿದರೆ ಮಾತ್ರ ಭಾರತಕ್ಕೆ ಭವಿಷ್ಯವಿದೆ. ಎಲ್ಲರೂ ಸಕಾರಾತ್ಮಕ ವಿಚಾರಗಳಿಗೆ ಬೆಂಬಲಿಸಬೇಕು. ಈ ನಿಟ್ಟಿನಲ್ಲಿ ರಾಯರಡ್ಡಿ ಅವರು ಧ್ವನಿಎತ್ತಿದ್ದಕ್ಕೆ ಅವರನ್ನು ನಾನು ಅಭಿನಂದಿಸುತ್ತೇನೆ. ಇಂತಹ ಕಾರ್ಯವನ್ನು ಎಲ್ಲಾ ಸದಸ್ಯರು ಮಾಡಬೇಕೆಂದು ಇದೇ ವೇಳೆ ಸ್ಪೀಕರ್‌ ಖಾದರ್‌ ಸಲಹೆ ನೀಡಿದರು.

ಚಪ್ಪಲಿ ಹಾರದ ಅವಮಾನಕ್ಕೆ ಹೆದರಬೇಕಿಲ್ಲ : ಸ್ಪೀಕರ್‌
ರಾಜಕಾರಣಿಗಳ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕುವುದು, ನಿಂದಿಸುವುದು ಅವಮಾನಿಸುವುದಕ್ಕೆ ಯಾರೂ ತಲೆ ಕೆಡಿಸಿಕೊಳ್ಳಬಾರದು. ಅವೆಲ್ಲ ಅವಮಾನಗಳನ್ನು ಈ ಹಿಂದೆ ಸಹಿಸಿಕೊಂಡವರೇ ದೊಡ್ಡ ಹುದ್ದೆಗೆ ಏರಿದ್ದಾರೆ. ಅದೇ ರೀತಿ ಬಸವರಾಜ ರಾಯರಡ್ಡಿ ಅವರೇ ನೀವು ಕೂಡ ಮುಂದೊಂದು ದಿನ ದೊಡ್ಡ ಹುದ್ದೆಗೆ ಏರುತ್ತೀರಿ. ಹೀಗಾಗಿ ನಿಮಗೆ ಗಂಗಾವತಿಯಲ್ಲಿ ಆಗಿರುವ ಅವಮಾನಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸ್ಪೀಕರ್‌ ಖಾದರ್‌ ಇದೇ ವೇಳೆ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಸಂತೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next