Advertisement

ಕೋಡ್ಲು ಮತ್ತೆ ಉದ್ಭವ

10:15 AM Jan 25, 2020 | mahesh |

ಕೋಡ್ಲು ರಾಮಕೃಷ್ಣ ನಿರ್ದೇಶನದ “ಉದ್ಭವ’ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ್ದ ಚಿತ್ರ. ಈಗ “ಮತ್ತೆ ಉದ್ಭವ’ ಚಿತ್ರ ನಿರ್ದೇಶಿಸುವ ಮೂಲಕ ಒಂದಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ ಕೋಡ್ಲು ರಾಮಕೃಷ್ಣ. ಹೌದು, ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಬಿಡಗಡೆಗೆ ಸಜ್ಜಾಗಿದೆ. ನಟ ದರ್ಶನ್‌ ಅವರು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

Advertisement

1990ರ ದಶಕದಲ್ಲಿ “ಉದ್ಭವ’ ಮಾಡಿದ್ದ ಕೋಡ್ಲು, “ಮತ್ತೆ ಉದ್ಭವ’ ಚಿತ್ರಕ್ಕೆ ಕಳೆದ ಏಳೆಂಟು ವರ್ಷಗಳಿಂದಲೂ ಕಥೆ, ಚಿತ್ರಕಥೆ ರೆಡಿಮಾಡಿಕೊಂಡು ಇದೀಗ ಚಿತ್ರ ಮುಗಿಸಿದ್ದಾರೆ. ಮೊದಲ ಚಿತ್ರ ಕ್ಲಾಸ್‌ ಆಗಿತ್ತು. ಈ ಚಿತ್ರ ಮಾಸ್‌ ಆಗಿದೆ ಎಂಬುದು ಕೋಡ್ಲು ಮಾತು. ಅಂದಹಾಗೆ, ಆ ಚಿತ್ರದಲ್ಲಿ ಅನಂತ್‌ನಾಗ್‌ ಇದ್ದರು. ಈ ಚಿತ್ರದಲ್ಲಿ ರಂಗಾಯಣ ರಘು ಇದ್ದಾರೆ. ಅಪ್ಪನಿಗೆ ತಕ್ಕ ಮಗನಾಗಿ ಪ್ರಮೋದ್‌ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಸಹೋದರನಾಗಿ ಮಂಡ್ಯ ರವಿ ನಟಿಸಿದ್ದಾರೆ. ಇನ್ನು, ಮಿಲನ ನಾಗರಾಜ್‌ ಅವರು ಪರಿಸರ ಪ್ರೇಮಿಯಾಗಿ, ರಾಜಕಾರಣಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೋಹನ್‌ ಸಂಭಾಷಣೆಯ ಜೊತೆಯಲ್ಲಿ ಸ್ವಾಮೀಜಿ ಪಾತ್ರ ನಿರ್ವಹಿಸಿದರೆ, ಆವರ ಆಪ್ತ ಭಕ್ತೆಯಾಗಿ ಶುಭರಕ್ಷಾ ನಟಿಸಿದ್ದಾರೆ.

ಚಿತ್ರವನ್ನು ನಿತ್ಯಾನಂದ ಭಟ್‌, ಸತ್ಯ, ಮಹೇಶ್‌ ಮುದ್ಗಲ್‌ ಮತ್ತು ರಾಜೇಶ್‌ ನಿರ್ಮಾಣ ಮಾಡಿದ್ದಾರೆ. ಅಷ್ಟಕ್ಕೂ ಕೋಡ್ಲು ರಾಮಕೃಷ್ಣ “ಮತ್ತೆ ಉದ್ಭವ’ ಚಿತ್ರ ಮಾಡೋಕೆ ಕಾರಣ, ಅವರು ಎಲ್ಲೇ ಹೋದರೂ ಜನರು “ಉದ್ಭವ’ ರೀತಿಯ ಸಿನಿಮಾ ಮಾಡಿ ಅಂತ ಹೇಳುತ್ತಿದ್ದರಂತೆ.ಹಾಗಾಗಿ, ಕಥೆ ಬರೆದು, ಅದಕ್ಕೆ ತಕ್ಕ ಚಿತ್ರಕಥೆ ರೆಡಿಮಾಡಲು ವರ್ಷಗಟ್ಟಲೇ ಹಿಡಿಯಿತಂತೆ. ಈಗ ಚಿತ್ರ ಮಾಡಿ, ಪ್ರೇಕ್ಷಕರ ಮುಂದೆ ತರೋಕೆ ಅಣಿಯಾಗಿದ್ದಾರೆ.

ಚಿತ್ರದಲ್ಲಿ ಸುಧಾಬೆಳವಾಡಿ, ಅವಿನಾಶ್‌, ಗಿರೀಶ್‌ಭಟ್‌, ಚೇತನ್‌ ಚಮನ್‌, ನರೇಶ್‌, ಶಂಕರ್‌ ಅಶ್ವಥ್‌, ನಿರಂಜನ್‌ ಇತರರು ನಟಿಸಿದ್ದಾರೆ. ಜಯಂತ್‌ ಕಾಯ್ಕಣಿ, ಪ್ರಹ್ಲಾದ್‌ ಸಾಹಿತ್ಯದ ಮೂರು ಗೀತೆಗಳಿಗೆ ವಿ. ಮನೋಹರ್‌ ಸಂಗೀತ ನೀಡಿದ್ದಾರೆ. ಮೋಹನ್‌ ಛಾಯಾಗ್ರಹಣ ಮಾಡಿದ್ದಾರೆ.

ಅಂದಹಾಗೆ, “ಮತ್ತೆ ಉದ್ಭವ’ ಹಾಡುಗಳ ಬಿಡುಗಡೆ ವೇಳೆ ನಿರ್ದೇಶಕ ಟಿ.ಎನ್‌.ಸೀತಾರಾಮ್‌ ಸೇರಿದಂತೆ ಇತರರು ಇದ್ದರು. ಚಿತ್ರವನ್ನು ಧೀರಜ್‌ಎಂಟರ್‌ ಪ್ರೈಸಸ್‌ನ ಮೋಹನ್‌ದಾಸ್‌ ಪೈ ವಿತರಣೆ ಮಾಡುತ್ತಿದ್ದು, ಫೆಬ್ರವರಿ 7ರಂದು ಬಿಡುಗಡೆ ಮಾಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next