Advertisement

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

10:53 PM Sep 23, 2021 | Team Udayavani |

ಕಟಪಾಡಿ : ಉದ್ಯಾವರ ಗ್ರಾಮದಲ್ಲಿ ನಕಲಿ ದಾಖಲಾತಿಯಿಂದ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಂಡಿರುವ ಬಗ್ಗೆ ಉದ್ದಿಮೆದಾರರು, ಪರವಾನಿಗೆ ನೀಡಿದ ಅಧಿಕಾರಿಗಳ ವಿರುದ್ಧ ಎಸಿಬಿ ಗೆ ದೂರು ನೀಡುವ ಸಿದ್ಧತೆಯ ವಿಚಾರದಲ್ಲಿ  ಉದ್ಯಾವರ ಗ್ರಾಮ ಸಭೆಯಲ್ಲಿ ಆರೋಪ ಪ್ರತ್ಯಾರೋಪ, ಅಧಿಕಾರಿಗಳ ವಿರುದ್ಧದ ನಿಲುವುಗಳ ಬಗ್ಗೆ ಸುದೀರ್ಘ ವಾಗ್ವಾದಗಳು ನಡೆದು ಬೆಳಿಗ್ಗೆ ಆರಂಭಗೊಂಡ ಸಭೆಯು ಸಂಜೆ 4 ಗಂಟೆಯವರೆಗೆ ನಡೆದು ಬಳಿಕ ತಾರ್ಕಿಕ ಅಂತ್ಯ ಕಂಡು ಕೊಂಡಿತು.

Advertisement

ಎಸಿಬಿ ಗೆ ದೂರು ನೀಡುವಂತೆ ಪಂಚಾಯತ್ ಸಾಮಾನ್ಯ ಸಭೆಯ ನಿರ್ಣಯ ಕೈಗೊಂಡು ಮುಂದಾಗಿದ್ದರೂ ಸಹಿ ಹಾಕಲು ಕರ್ತವ್ಯ ನಿರತ ಪಿಡಿಒ ಸಹಿ ಹಾಕದೇ ಇರುವ ಬಗ್ಗೆ ಸಭೆಗೆ ಮಾಹಿತಿ ತಿಳಿದಾಗ ಗ್ರಾಮ ಸಭೆಯಲ್ಲಿಯೇ ಪಿಡಿಒ ಸಹಿ ಹಾಕಬೇಕೆಂದು ಒತ್ತಾಯಿಸಲಾಗಿದ್ದು ಪಿಡಿಒ ನಿರಾಕರಿಸಿದ ವಿರುದ್ಧ ಗ್ರಾಮಸ್ಥರು, ಗ್ರಾ.ಪಂ. ಆಡಳಿತವು ಘರಂ ಆಗಿದ್ದು, ಸಹಿ ಹಾಕದಂತೆ ಒತ್ತಡ ಹೇರುವ ಮೇಲಧಿಕಾರಿಗಳು  ಗ್ರಾಮ ಸಭೆಗೆ ಬಂದು ಸ್ಪಷ್ಟನೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿ ಅಧಿಕಾರಿಗಳ ಕ್ರಮದ ವಿರುದ್ಧ ಆರೋಪ ಪ್ರತ್ಯಾರೋಪಗಳನ್ನು ನಡೆಸಿದ್ದು, ವಾಗ್ವಾದಕ್ಕೆ ಕಾರಣವಾಗಿತ್ತು. ಉದ್ದಿಮೆಗಳಿಂದ ಈಗಾಗಲೇ ಉದ್ಯಾವರ ಗ್ರಾಮಸ್ಥರು ನಲುಗಿದ್ದು, ಮತ್ತಷ್ಟು ಉದ್ದಿಮೆಗಳು ಪರಿಸರಕ್ಕೆ ಅಪಾಯ ತಂದೊಡ್ಡುವ ಭೀತಿಯನ್ನು ವ್ಯಕ್ತ ಪಡಿಸಿದ ಗ್ರಾಮಸ್ಥರು ಉದ್ದಿಮೆಗಳಿಂದ ಈಗಾಗಲೇ ಹೊಳೆಯಲ್ಲಿ ಮೀನುಗಳ ಮಾರಣ ಹೋಮ ನಡೆಯುತ್ತಿದೆ. ಪರಿಸರ ವಿನಾಶದತ್ತ ಸಾಗುತ್ತಿದೆ. ನಮಗೆಲ್ಲಾ ವಿಷ ಕೊಟ್ಟಂತಾಗಿದೆ. ಹೊಳೆಯಲ್ಲಿ ಅಳವಡಿಸಲಾಗಿರುವ ಅಕ್ರಮ ಪೈಪ್ಲೈನ್ ಕಿತ್ತೊಗೆಯುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲಾ ಸಮಸ್ಯೆಗಳ ಬಗೆ ಹರಿಸಲು ಮೇಲಧಿಕಾರಿಗಳು ಸಭೆಗೆ ಬರುವಂತೆ ಹಾಗೂ  ಗ್ರಾಮಸ್ಥರು ಪಿಡಿಒ ಸಹಿ ಹಾಕದೇ ಗ್ರಾಮಸಭೆಯಿಂದ ಅಧಿಕಾರಿಗಳನ್ನು ಹೊರ ನಡೆಯಲು ಬಿಡಿವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ನೋಡಲ್ ಅಧಿಕಾರಿಯಾಗಿದ್ದ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ್ ಕುಮಾರ್ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಮಾಹಿತಿ ರವಾನಿಸಿದ್ದು, ಮೇಲಧಿಕಾರಿಗಳ ಮಾರ್ಗದರ್ಶನ ಪಡೆದೇ ಅಧಿಕಾರಿ ಸಹಿ ಹಾಕಲು ಸಾಧ್ಯ ಎಂದು ತಿಳಿಸಿದರು. ಮತ್ತಷ್ಟು ರೊಚ್ಚಿಗೆದ್ದ ಗ್ರಾಮಸ್ಥರು, ಉದ್ಯಾವರದ ಜನತೆಗೆ ದ್ರೋಹ ವಂಚನೆಯು ಅಧಿಕಾರಿಗಳ ಆಟಾಟೋಪದಿಂದಲೇ ಉದ್ಯಾವರ ಕುಗ್ರಾಮವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಆ ಬಳಿಕ ಪಿಡಿಒ ಎರಡು ದಿನಗಳ ಕಾಲಾವಕಾಶದಡಿ ಮೇಲಧಿಕಾರಿಗಳ ಗಮನಕ್ಕೆ ತಂದು ಸಹಿ ಹಾಕುವುದಾಗಿ ವಿನಂತಿಸಿಕೊಂಡ ಮೇರೆಗೆ ಸಭೆಯು ಮುಕ್ತಾಯದ ಹಂತ ತಲುಪಿತ್ತು.

ಅಕ್ರಮಗಳಿಗೆ ಪಂಚಾಯತ್ ಕಡಿವಾಣ ಹಾಕಲಿ:

Advertisement

ಪಂಚಾಯತ್ ಪರವಾನಿಗೆ ಇಲ್ಲದೆ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಅಕ್ರಮವಾಗಿ ನಡೆಯುವ ಜೂಜಿನ ಅಡ್ಡೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಗ್ರಾಮಸ್ಥರು ಲೋಕೋಪಯೋಗಿಇಲಾಖೆ ರಸ್ತೆಯ ಬದಿಯಲ್ಲಿ ಅನಧಿಕೃತ ಸಂಘ ಸಂಸ್ಥೆಗಳ ಕಟ್ಟಡಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.

ಮೀನುಗಾರಿಕಾ ರಸ್ತೆಯಲ್ಲಿನ ಹೊಂಡಗುಂಡಿಗಳಿಗೆ ಮುಕ್ತಿ ನೀಡಲು ಒತ್ತಾಯಿಸಿದ ಗ್ರಾಮಸ್ಥರು, ಮೆಸ್ಕಾಂ ಇಲಾಖೆಯ ವಿದ್ಯುತ್ ಕಂಬಗಳು,  ರಸ್ತೆಯಂಚಿನಲ್ಲಿ ತೋಡಿರುವ ಗುಂಡಿಯು ಅವಾಂತರವನ್ನು ಸೃಷ್ಟಿಸುತ್ತಿದ್ದು ಗಮನಹರಿಸುವಂತೆ ಒತ್ತಾಯಿಸಿದರು.

ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮಸ್ಥರು ಕೈ ಜೋಡಿಸುವಂತೆ ಅಧ್ಯಕ್ಷ ರಾಧಕೃಷ್ಣ ಶ್ರೀಯಾನ್ ವಿನಂತಿಸಿಕೊಂಡಿದ್ದು, ವೇದಿಕೆಯಲ್ಲಿ ಉಪಾಧ್ಯಕ್ಷೆ ಮಧುಲತಾ ಶಶಿಧರ್, ಗ್ರಾ.ಪಂ. ಸದಸ್ಯರು,  ಪ್ರಭಾರ ಪಿಡಿಒ ಅಶೋಕ್, ವಿವಿಧ ಇಲಾಖಾಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next