Advertisement

ವಿದೇಶಗಳಲ್ಲಿರುವ ಜಿಲ್ಲೆಯವರ ನೆರವಿಗೆ Help Line; ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌

01:45 AM Apr 22, 2020 | Hari Prasad |

ದಕ್ಷಿಣ ಕನ್ನಡ ಮತ್ತು ಉಡುಪಿಯ ಜನತೆಯೂ ಲಾಕ್‌ಡೌನ್‌ ನಿಯಮ ಪಾಲಿಸುತ್ತಿದ್ದಾರೆ. ಇಂದು, ಎಪ್ರಿಲ್‌ 21ರಂದು ಕೊನೆಗೊಳ್ಳಬೇಕಿದ್ದ ನಿರ್ಬಂಧ ಮೇ 3ರ ವರೆಗೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಇರಬಹುದಾದ ಸಂಶಯ ಮತ್ತು ಸಮಸ್ಯೆಗಳ ಕುರಿತು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದಲೇ ವಿವರಣೆ ಪಡೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಯಿತು. ಈ ಸಂಬಂಧ ಏರ್ಪಡಿಸಲಾಗಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಎರಡೂ ಜಿಲ್ಲೆಗಳಿಂದ ಬಂದ ಹಲವಾರು ಪ್ರಶ್ನೆಗಳಿಗೆ ಅನುಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಿಂಧೂ ಬಿ. ರೂಪೇಶ್‌ ಮತ್ತು ಉಡುಪಿಯ ಜಿ. ಜಗದೀಶ್‌ ಉತ್ತರಿಸಿದರು.

Advertisement

ಮಂಗಳೂರು: ಕೊಲ್ಲಿ ಸಹಿತ ಹೊರದೇಶಗಳಲ್ಲಿ ಕೋವಿಡ್ 19 ವೈರಸ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ದಕ್ಷಿಣ ಕನ್ನಡದ ನಿವಾಸಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಹೆಲ್ಪ್ ಲೈನ್‌ ಸ್ಥಾಪಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಹೇಳಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉದಯವಾಣಿ ಮಂಗಳೂರು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಫೋನ್‌-ಇನ್‌ ಸಂದರ್ಭ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಲಾಕ್‌ಡೌನ್‌ ತೆರವಿನ ಬಳಿಕದ ಸವಾಲು
ಲಾಕ್ ‌ಡೌನ್‌ ಮುಗಿದು ವಿಮಾನಯಾನ ಸೇವೆ ಆರಂಭಗೊಂಡರೆ ವಿದೇಶಗಳಲ್ಲಿ ಇರುವ ದಕ್ಷಿಣ ಕನ್ನಡಿಗರು ವಾಪಸಾಗುವ ಸಾಧ್ಯತೆಗಳಿದ್ದು, ಈ ಪರಿಸ್ಥಿತಿ ಎದುರಿಸುವುದು ಜಿಲ್ಲಾಡಳಿತಕ್ಕೆ ಸವಾಲು ಎಂದರು.

ಹೊರ ದೇಶಗಳಿಂದ ಎಷ್ಟು ಜನ, ಯಾವಾಗ ಬರಬಹುದು ಎಂಬ ಬಗ್ಗೆ ಅಂದಾಜು ನಡೆಸಬೇಕಿದೆ. ಆದರೆ ಇದು ರಾಷ್ಟ್ರಮಟ್ಟದ ವಿಷಯವಾಗಿದ್ದು, ಕೇಂದ್ರ ಸರಕಾರವೇ ತೀರ್ಮಾನಿಸಬೇಕು. ಮುಂದೆಯೂ ವಿದೇಶಗಳಿಂದ ಬರುವವರನ್ನು ನಿರ್ದಿಷ್ಟ ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಿಸುವುದು ಅನಿವಾರ್ಯವಾಗಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

ವಲಸೆ ಕಾರ್ಮಿಕರ ಸಮಸ್ಯೆಗಳ ವಿಚಾರವಾಗಿ, ಜಿಲ್ಲೆಯಲ್ಲಿರುವ ಹೊರ ಜಿಲ್ಲೆ, ರಾಜ್ಯಗಳ ಕಾರ್ಮಿಕರು ಇಲ್ಲಿಂದ ತೆರಳಲು ಮತ್ತು ಅಲ್ಲಿಂದ ಇಲ್ಲಿಗೆ ಬರಲು ಕೋರುತ್ತಿದ್ದಾರೆ. ಆದರೆ ಸದ್ಯ ಇದು ಅಸಾಧ್ಯ. ಅವರು ಸ್ವಲ್ಪ ದಿನ ಕಾಯಬೇಕು.

ಇಲ್ಲಿರುವ ಹೊರ ರಾಜ್ಯ, ಜಿಲ್ಲೆಗಳ ಕಾರ್ಮಿಕರಿಗೆ ಜಿಲ್ಲಾಡಳಿತ ಎಲ್ಲ ರೀತಿಯ ನೆರವು – ವ್ಯವಸ್ಥೆ ಕಲ್ಪಿಸಿದೆ. ಅವರ ಅಹವಾಲುಗಳಿಗೆ ಸ್ಪಂದಿಸಲು ಆಪ್ತ ಸಮಾಲೋಚಕರನ್ನು ನೇಮಿಸಿದೆ ಎಂದರು.

ಪರೀಕ್ಷಾ ಕೇಂದ್ರದ ಬಗ್ಗೆ ಸಂಶಯ ಬೇಡ
ವೆನ್ಲಾಕ್‌ನ ಕೋವಿಡ್ ಪರೀಕ್ಷಾ ಕೇಂದ್ರದ ಬಗ್ಗೆ ಸಂಶಯದ ಅಗತ್ಯವಿಲ್ಲ. ಸದ್ಯದ ಆರೋಗ್ಯ ತುರ್ತು ಸ್ಥಿತಿಯಲ್ಲಿ ಈ ಬಗ್ಗೆ ನೇತ್ಯಾತ್ಮಕ ಪ್ರಚಾರ ಸಲ್ಲದು. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ.

ಪರೀಕ್ಷಾ ಕೇಂದ್ರವು ಐಸಿಎಂಆರ್‌ ಮಾನದಂಡದ ಪ್ರಕಾರ ಸ್ಥಾಪನೆಯಾಗಿದೆ. ಪ್ರಯೋಗಾಲಯವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯಾರೂ ಆ ಕುರಿತು ಯಾವುದೇ ರೀತಿಯ ಅನುಮಾನ ಪಡಬೇಕಿಲ್ಲ ಎಂದು ಅವರು ಹೇಳಿದರು.

ಸ್ವಯಂ ಕ್ವಾರಂಟೈನ್‌ ಉತ್ತಮ ಬೆಳವಣಿಗೆ
ಕೋವಿಡ್ 19 ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಸೋಂಕು ಪೀಡಿತರ ಜತೆ ಸಂಪರ್ಕಕ್ಕೆ ಬಂದವರು ಸ್ವಯಂಪ್ರೇರಿತರಾಗಿ ಕ್ವಾರಂಟೈನ್‌ಗೆ ಒಳಗಾಗಲು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಜನರ ಸಹಕಾರವಿದ್ದರೆ ಮಾತ್ರ ಕೋವಿಡ್ 19 ವೈರಸ್ ನಿಯಂತ್ರಣ ಸಾಧ್ಯ ಎಂದರು.

ಕೋವಿಡ್ 19 ವೈರಸ್ ಸೋಂಕಿನ ಲಕ್ಷಣ ಅಥವಾ ಸ್ವರೂಪದ ಬಗ್ಗೆ ಇನ್ನೂ ವೈದ್ಯರಿಗೆ ಖಚಿತವಾಗಿ ಪತ್ತೆ ಮಾಡಲು ಸಾಧ್ಯವಾಗದಿರುವುದೇ ದೊಡ್ಡ ಸವಾಲು. ಈ ಕಾರಣಕ್ಕೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವತ್ತ ಹೆಚ್ಚು ಗಮನ ಕೊಡಬೇಕು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next