Advertisement

ಆದರ್ಶ ಬದುಕು ಚಿರಸ್ಥಾಯಿ

03:07 PM Aug 16, 2021 | Team Udayavani |

ಹೊಸದುರ್ಗ: ಮಾನವ ಹುಟ್ಟಿದ ಮೇಲೆ ಸಾಯುವುದು ಖಚಿತ. ಸಾವಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆದರ್ಶ ಜೀವನದ ಮೂಲಕ ಸತ್ತ ಮೇಲೂ ಬದುಕಲು ಸಾಧ್ಯವಿದೆ. ಇದನ್ನು ಅರಿಯದ ಕೆಲವರು ತಮಗೆ ಸಾವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶಾಖಾ ಮಠದಿಂದ ಆಯೋಜಿಸಿರುವ “ಮತ್ತೆ ಕಲ್ಯಾಣ’ ಕಾರ್ಯಕ್ರಮದ 15ನೇ ದಿನದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಸತ್ಯವನ್ನು ಸುಳ್ಳೆಂದು, ಸುಳ್ಳನ್ನು ಸತ್ಯವೆಂದು ಬಿಂಬಿಸುವ ಹರಸಾಹಸ ಮಾಡುವವರೂ ಇದ್ದಾರೆ. ಹೊನ್ನು, ಹೆಣ್ಣು, ಮಣ್ಣುಗಳನ್ನು ಬಯಸಿ ಏನೆಲ್ಲ ಅನಾಹುತ ಮಾಡಿಕೊಳ್ಳುತ್ತಾರೆ.

ಇಂಥವರನ್ನು ಕಂಡು ಉರಿಲಿಂಗ ಪೆದ್ದಿಗಳು “ಅಯ್ಯೋ ಅಯ್ಯೋ ಕೆಡದಿರಿ’ ಎಂದು ಎಚ್ಚರಿಸುವುದರ ಜೊತೆಗೆ ಕಾಯಕದಿಂದ ಬಂದ ಆದಾಯವನ್ನು ಗುರು-ಲಿಂಗ-ದಾಸೋಹಕ್ಕೆ ಅರ್ಪಣೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದಬ ಸಂದೇಶ ಸಾರಿದ್ದಾರೆ ಎಂದರು.

ಉರಿಲಿಂಗ ಪೆದ್ದಿ ಕಳ್ಳತನ ಮಾಡಿ, ಕಟ್ಟಿಗೆ ಕಡಿದು ಜೀವನ ನಡೆಸುತ್ತಿದ್ದ ಕೆಳ ವರ್ಗದ ವ್ಯಕ್ತಿ. ಪೆದ್ದಿ ಎಂದರೆ ಮೂರ್ಖ. ಪತ್ನಿ ಕಾಳವ್ವೆ. ಒಮ್ಮೆ ಶ್ರೀಮಂತನೊಬ್ಬನ ಮನೆಗೆ ಕಳ್ಳತನಕ್ಕೆ ಹೋದಾಗ ಅಲ್ಲಿ ಉರಿಲಿಂಗದೇವರು ಲಿಂಗದೀಕ್ಷೆ ನೀಡುತ್ತಿರುವುದನ್ನು ಕಾಣುತ್ತಾನೆ. ಇದನ್ನು ಕಂಡ ಪೆದ್ದಿಯ ಮನಃಪರಿವರ್ತನೆಯಾಗಿ ತನಗೂ ದೀಕ್ಷೆ ಕರುಣಿಸುವಂತೆ ಪ್ರಾರ್ಥಿಸುತ್ತಾನೆ.

ಅವನ ಕಾಟ ತಪ್ಪಿಸಿಕೊಳ್ಳಲು ಒಂದು ಕಲ್ಲನ್ನು ಎಸೆದು ತೆಗೆದುಕೊಂಡು ಹೋಗು ಎನ್ನುತ್ತಾರೆ. ಪೆದ್ದಿ ಅದನ್ನೇ ಲಿಂಗವೆಂದು ಭಾವಿಸಿ ನಿಷ್ಠೆಯಿಂದ ಪೂಜಿಸುತ್ತಾನೆ. ಇದನ್ನು ಗಮನಿಸಿದ ಉರಿಲಿಂಗದೇವರು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡು ಸಂಸ್ಕೃತ, ವೇದಗಳನ್ನು ಕಲಿಸುವುದಲ್ಲದೆ ಕೊನೆಗೆ ತಮ್ಮ ನಂತರ ಮಠಕ್ಕೆ ಪೀಠಾಧಿ ಕಾರಿಗಳನ್ನಾಗಿ ನೇಮಿಸುತ್ತಾರೆ.

Advertisement

ತಳ ಸಮುದಾಯದ ಕಳ್ಳನೊಬ್ಬ ಸಂಸ್ಕಾರದಿಂದ ಬದಲಾಗಿ ಪೀಠಾ ಧಿಪತಿಯಾದುದು ಬೆರಗುಗೊಳಿಸುವ ಸಂಗತಿ ಎಂದು ತಿಳಿಸಿದರು. ಮಹದೇವ ಬಣಕಾರರು “ಉರಿಲಿಂಗ ಪೆದ್ದಿ’ ಎನ್ನುವ ನಾಟಕದಲ್ಲಿ ಉರಿಲಿಂಗ ಪೆದ್ದಿಯ ಬಗ್ಗೆ ಸಮಗ್ರವಾಗಿ ರೋಚಕವಾಗಿ ಚಿತ್ರಿಸಿದ್ದಾರೆ. ಈ ನಾಟಕವನ್ನು ಶಿವಕುಮಾರ ಕಲಾಸಂಘ, ಶಿವಸಂಚಾರ ನೂರಾರು ಯಶಸ್ವಿ ಪ್ರಯೋಗಗಳನ್ನು ಪ್ರದರ್ಶಿಸಿದೆ.

ಅಲ್ಲದೆ ಇದು ವಿಶ್ವವಿದ್ಯಾಲಯದ ಪಠ್ಯಪುಸ್ತಕವಾಗಿಯೂ ಇತ್ತು. ಇಂಥ ಶರಣನ ಬಗ್ಗೆ ಜನ ಹೆಚ್ಚು ಹೆಚ್ಚು ತಿಳಿದುಕೊಂಡು ಅವರ ತತ್ವ ಸಿದ್ಧಾಂತಗಳನ್ನು ಆಚರಣೆಗೆ ತರುವಂತಾಗಲಿ ಎಂದು ಆಶಿಸಿದರು. ಉಪನ್ಯಾಸ ಮಾಲಿಕೆಯಲ್ಲಿ “ಉರಿಲಿಂಗಪೆದ್ದಿ’ ವಿಷಯದ ಕುರಿತಂತೆ ಲೇಖಕಿ ಬೀರೂರಿನ ಗೌರಿ ಪ್ರಸನ್ನ ಮಾತನಾಡಿ, ಮಾನವ ಸಮಾಜ ವೈವಿಧ್ಯತೆಯಿಂದ ಕೂಡಿದೆ.

ಯಾವುದೇ ವ್ಯಕ್ತಿಯನ್ನು ಹುಟ್ಟಿನಿಂದ ಕನಿಷ್ಠ, ಶ್ರೇಷ್ಠ ಎಂದು ಹೇಳಲಾಗದು. ಒಬ್ಬ ಕಳ್ಳ ಮಹಾನ್‌ ಶಿವಶರಣನೂ ಆಗಬಹುದು ಎನ್ನುವುದಕ್ಕೆ ಉದಾಹರಣೆ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಉರಿಲಿಂಗ ಪೆದ್ದಿಯ ಬದುಕು-ಬರಹಗಳೇ ಸಾಕ್ಷಿ ಎಂದರು.

ಉರಿಲಿಂಗ ಪೆದ್ದಿಯ ಮೂಲ ಹೆಸರು ಪೆದ್ದಣ್ಣ. ಆಂಧ್ರಪ್ರದೇಶದಿಂದ ಬಂದವ. ಕಳ್ಳತನವೇ ಇವನ ಕೆಲಸವಾಗಿತ್ತು. ಇವರ 363 ವಚನಗಳು ಲಭ್ಯವಿವೆ. ಒಬ್ಬ ಕಳ್ಳ ಶರಣನಾಗಿ, ಜ್ಞಾನಿಯಾಗಿ, ವಚನಕಾರನಾಗಿ, ಗುರುವಾದದ್ದು ಜಗತ್ತಿನಲ್ಲಿ ಎಂದೂ ಕೇಳರಿಯದ ಸಂಗತಿ ಎಂದು ಹೇಳಿದರು.

ಬೆಂಗಳೂರಿನ ಮೈಕೋ ಮಂಜು ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ ದಾûಾಯಣಿ, ಎಚ್‌.ಎಸ್‌. ನಾಗರಾಜ್‌ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತನಾಟ್ಯ ಶಾಲೆಯ ಸುಪ್ರಭೆ ಡಿ.ಎಸ್‌ ಹಾಗೂ ಮುಕ್ತ ಡಿ.ಜೆ. ವಚನ ನೃತ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next