Advertisement

ದೀನದಲಿತರಿಗೆ ಅರಿವಿನ ಬೆಳಕನ್ನು ನೀಡಿದ ಯು. ರಮಣಿ ಟೀಚರ್‌

07:45 AM Aug 01, 2017 | Team Udayavani |

ಕಾಸರಗೋಡು: ಉಳಿಯತ್ತಡ್ಕ ನಿವಾಸಿ ಯು.ರಮಣಿ ಅವರು ಕೇರಳ ಸರಕಾರದ ವಿದ್ಯಾ ಇಲಾಖೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ಕಿನ್ಯ, ತಲಪಾಡಿ, ಕುಂಜತ್ತೂರು, ಉಪ್ಪಳ, ಅಡ್ಕತ್ತಬೈಲ್‌, ಮೀಪುಗುರಿ, ಶಿರಿಬಾಗಿಲು ಶಾಲೆಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಅವರು ಕಲಿಸಿದ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಮಾನಗಳಿಸಿದ್ದಾರೆ.

Advertisement

ರಮಣಿ ಟೀಚರ್‌ ಅವರು ಮೊಗೇರ ಸಮುದಾಯದ ಕೃಷಿ ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ವಿದ್ಯಾರ್ಜನೆ ಮಾಡಿದವರು. ಬಡತನ ಮತ್ತು ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಅಕ್ಷರದ ಬೆಳಕನ್ನು ಅರಸುತ್ತಾ ತರಬೇತಿ ಪಡೆದು ಶಿಕ್ಷಕಿಯಾದರು. ಇದೇ ಕಾಲಘಟ್ಟದಲ್ಲಿ ಮಂಜೇಶ್ವರದ ಕಣ್ಣಪ್ಪ ಐಲ್‌ ಮತ್ತು ಅವರ ಪತ್ನಿ ಲಕ್ಷಿ$¾ ಕುಂಜತ್ತೂರು, ಉಡುಪಿಯ ನಾಗಮ್ಮ ಮೊದಲಾದವರು ಮಾರ್ಗದರ್ಶಕರಾಗಿದ್ದರು.

ಬಡತನದ ಕಷ್ಟ ನಷ್ಟಗಳನ್ನು ಸ್ವತಃ ಅನುಭವಿಸಿದ್ದ ರಮಣಿ ಟೀಚರ್‌ ತಮ್ಮ ವೃತ್ತಿ ಜೀವನದ ನಡುವೆ ಸಮಾಜ ಸೇವೆಯಲ್ಲೂ ಭಾಗವಹಿಸುತ್ತಿದ್ದರು. ದೀನದಲಿತರ ಮಕ್ಕಳಿಗೆ ವಿದ್ಯಾಭ್ಯಾಸದ ಅಗತ್ಯವನ್ನು ಮನಗಂಡು ಚೇನೆಕ್ಕೋಡು, ಪೆರಿಯಡ್ಕ, ಪೆರ್ನಡ್ಕ, ಸಿರಿಬಾಗಿಲು, ಉಳಿಯತ್ತಡ್ಕ  ಮೊದಲಾದೆಡೆಗಳ ಪರಿಶಿಷ್ಟ ಜಾತಿ ಕಾಲನಿಗಳ ಬಡ ಕುಟುಂಬದ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾದರು. ಟàಚರ್‌ ಅವರ ಒತ್ತಾಯಕ್ಕೆ ಮಣಿದು ವಿದ್ಯಾರ್ಜನೆ ಮಾಡಿ ಉನ್ನತ ಉದ್ಯೋಗವನ್ನು ಪಡೆದ ಹಲವರು ಈಗಲೂ ಇದ್ದಾರೆ. 

ಯಾವುದೇ ರಾಜಕೀಯ ಪಕ್ಷದಲ್ಲಿ ತೊಡಗಿಸಿಕೊಳ್ಳದ ಅವರು ಎಲ್ಲಾ ರಾಜಕೀಯ ಪಕ್ಷದವರಿಗೆ ಆತ್ಮೀಯರಾಗಿದ್ದರು.
ರಜಾದಿನಗಳಲ್ಲೂ ಮಕ್ಕಳೊಂದಿಗೆ ಬೆರೆಯುತ್ತಿದ್ದ ರಮಣಿ ಟೀಚರ್‌ ಮಕ್ಕಳಿಗೆ ಕಥೆ ಹೇಳುವ ಕಲೆಯನ್ನು ಕರಗತಮಾಡಿಕೊಂಡಿದ್ದರು. ಪತ್ರಿಕೆ, ಪುಸ್ತಕಗಳನ್ನು ಓದಲು ಪ್ರೇರೇಪಿ ಸುತ್ತಿದ್ದರು. ರಾಜ್ಯದಲ್ಲಿ ಸಾಕ್ಷರತಾ ಆಂದೋಲನ ಪ್ರಾರಂಭ ವಾಗುವ ಎಷ್ಟೋ ವರ್ಷಗಳ ಮೊದಲೇ ಕುಂಬಳೆ ರಾಮ ಮಾಸ್ತರ್‌, ನೆಲ್ಲಿಕುಂಜೆ ಅಮ್ಮು ಮಾಸ್ತರ್‌, ಬೇಳ ಸೂರ್ಯ ಮಾಸ್ತರ್‌ ಮೊದಲಾದವರು ಹಳ್ಳಿ ಹಳ್ಳಿಗಳಲ್ಲಿ ಬಡ ಕಾರ್ಮಿಕರಿಗೆ ಅಕ್ಷರದ ಬೆಳಕನ್ನು ನೀಡುತ್ತಿದ್ದರು. ಬೇಳ, ನೆಲ್ಲಿಕುಂಜೆ, ಕಜಂಪಾಡಿ, ಉಳಿಯತ್ತಡ್ಕ ಮೊದಲಾದೆಡೆಗಳಲ್ಲಿ ಪರಿಶಿಷ್ಟ ಜಾತಿಯವರಿಗೇ ವಿದ್ಯಾಲಯಗಳು ಸ್ಥಾಪಿತವಾಗಿತ್ತು. ಹಿರಿಯ ಅಧ್ಯಾಪಕರ ಸಾಧನೆಗಳು ರಮಣಿ ಟೀಚರ್‌ ಅವರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿತ್ತು.

ವಿದ್ಯಾರ್ಥಿನಿಯಾಗಿದ್ದಾಗಲೇ ಓದುವ ಹವ್ಯಾಸ ಅವರಿಗಿತ್ತು. ಅಧ್ಯಾಪಕಿಯಾದ ಮೇಲೆ ಹವ್ಯಾಸ ಇನ್ನಷ್ಟು ಬೆಳೆಯಿತು. ಕಥೆ ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತಿದ್ದರು. ನಿರಂಜನ, ಭೈರಪ್ಪ, ಕುವೆಂಪು, ಕಾರಂತರ ಕಾದಂಬರಿಗಳು ಇಷ್ಟ. ತ್ರಿವೇಣಿ, ಎಂ.ಕೆ. ಇಂದಿರಾ, ಅನುಪಮಾ ನಿರಂಜನರ ಎಲ್ಲಾ ಕಾದಂಬರಿಗಳನ್ನು ಓದಿದ್ದಾರೆ. ಪುರಾಣ ಇತಿಹಾಸಗಳ ಬಗ್ಗೆಯೂ ಅರಿವಿತ್ತು. ಭಜನೆಯಲ್ಲೂ ಆಸಕ್ತಿಯಿತ್ತು. ಸಿನಿಮಾ, ಯಕ್ಷಗಾನ, ನಾಟಕಗಳನ್ನು ನೋಡುವ, ವಿಮರ್ಶಿಸುವ ಗುಣವಿತ್ತು. ತುಳು ಜಾನಪದ ನೃತ್ಯ ಪಾಡªನ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು.

Advertisement

ರಮಣಿ ಟೀಚರ್‌ ಅವರನ್ನು ಕೇರಳ ಶಿಕ್ಷಣ ಇಲಾಖೆ ಗೌರವಿಸಿದೆ. ಎ.ಕೆ. ವಾಸುದೇವ ರಾವ್‌ ಅಧ್ಯಕ್ಷರಾಗಿದ್ದಾಗ ಮಧೂರು ಗ್ರಾಮ ಪಂಚಾಯತ್‌ ವತಿಯಿಂದ ಸಮ್ಮಾನಿಸಲಾಗಿದೆ. ಹಿರಿಯ ನಾಗರಿಕರ ವೇದಿಕೆಯ ಮಧೂರು ಘಟಕ, ಪಿಂಚಣಿದಾರರ ಸಂಘಟನೆಯ ಜಿಲ್ಲಾ ಸಮಿತಿ, ಸಿರಿಬಾಗಿಲು ಶಾಲೆಯ ರಕ್ಷಕ ಶಿಕ್ಷಕ ಸಂಘ ಮೊದಲಾದ ಸಂಸ್ಥೆಗಳು ಸಮ್ಮಾನಿಸಿವೆ. 

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸುವರ್ಣ ಕರ್ನಾಟಕ ಪ್ರಶಸ್ತಿಯೂ ಅವರಿಗೆ ಲಭಿಸಿದೆ. ಪತಿ ಕೆ. ಕಮಲಾಕ್ಷ ಅವರು ಭಾರತೀಯ ಸೈನ್ಯದಲ್ಲಿ ಯೋಧರಾಗಿ ಸುದೀರ್ಘ‌ಕಾಲ ಸೇವೆ ಸಲ್ಲಿಸಿದ್ದರು. ಎರಡನೇ ಲೋಕ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ನಿವೃತ್ತರಾದ ಬಳಿಕ ಕೆಲವು ಕಾಲ   ಜನತಾ ಪಾರ್ಟಿಯ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಭೋಪಾಲದಲ್ಲಿದ್ದಾಗ ಕೆ.ಚಂದ್ರಶೇಖರ್‌, ಬೆಂಗಳೂರಿನಲ್ಲಿದ್ದಾಗ ರಾಮಕೃಷ್ಣ ಹೆಗ್ಗಡೆಯವರ ಪರಿಚಯ ಮತ್ತು ಸಂಪರ್ಕವಿತ್ತು. ಉಳಿಯ ಮದರ (ರಮಣಿ ಟೀಚರ್‌ ಅವರ ತಂದೆ) ಶಿರಿಬಾಗಿಲು ಶಾಲೆಗೆ ಉದಾರವಾಗಿ ನಿರ್ಮಿಸಿಕೊಟ್ಟ ರಂಗಸ್ಥಳವನ್ನು ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್‌. ನಂಬೂದಿರಿಪಾಡ್‌ ಉದ್ಘಾಟಿಸಿದ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಗಿತ್ತು. ಕೆ. ಕಮಲಾಕ್ಷ ಅವರು 1994ರಲ್ಲಿ ನಿಧನ ಹೊಂದಿದರು.

ರಮಣಿ ಟೀಚರ್‌ ಅವರಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಕವಿಯಾಗಿ, ಪತ್ರಕರ್ತರಾಗಿ ಪ್ರಸಿದ್ಧರು. ಕಿರಿಯ ಪುತ್ರ ರಾಜಶೇಖರ ಕೆ. ಕೇರಳ ಗ್ರಾಮೀಣ ಬ್ಯಾಂಕ್‌ನಲ್ಲಿ ದುಡಿಯುತ್ತಿದ್ದಾರೆ. ಸರಳತೆ, ಸಹೃದಯತೆ, ಪ್ರಾಮಾಣಿಕತೆ, ವೃತ್ತಿ ಘನತೆ ಮತ್ತು ಪರೋಪಕಾರ ಪ್ರವೃತ್ತಿಯಿಂದ ರಮಣಿ ಟೀಚರ್‌ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೊಗೇರ ಸಮುದಾಯದ ಈ ಹಿರಿಯ ಚೇತನ 88ರ ಹರೆಯದಲ್ಲಿ ಜುಲೈ 16 ರಂದು ನಿಧನ ಹೊಂದಿದರು.

ಜು.16ರಂದು ನಿಧನ ಹೊಂದಿದ ಉಳಿಯತ್ತಡ್ಕದ ರಮಣಿ ಟೀಚರ್‌ ಅಪಾರ ಶಿಷ್ಯ ವಲಯವನ್ನು ವಿಸ್ತರಿಸಿದವರು. ಮೊಗೇರ ಸಮುದಾಯದ ಈ ಹಿರಿಯ ಚೇತನ ದೀನದಲಿತರಿಗೆ ಅರವಿನ ಬೆಳಕನ್ನು ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಿದವರು. ಸರಳತೆಯ ಪ್ರತೀಕವಾಗಿದ್ದ ಟೀಚರ್‌ ಅವರ ಅಗಲುವಿಕೆ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆಂದೇ ಹೇಳಬಹುದು.

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next