ದಾವಣಗೆರೆ: ಬಡ ವಿದ್ಯಾರ್ಥಿಗಳ ವೈದ್ಯಕೀಯ ವ್ಯಾಸಂಗಕ್ಕೆ ಕಲಬುರ್ಗಿಯ ಡಾ| ಪಿ.ಎಸ್. ಶಂಕರ್ ಪ್ರತಿಷ್ಠಾನ ನೀಡುವ ವಿದ್ಯಾರ್ಥಿ ವೇತನಕ್ಕೆ ನಗರದ ಸಿದ್ಧಗಂಗಾ ಪಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಪ್ರತಿಷ್ಠಾನವು ಕಳೆದ 20 ವರ್ಷಗಳಿಂದ ವೈದ್ಯಕೀಯ ಕೋರ್ಸಿಗೆ ಸೇರುವ ಬಡ ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತ ಬಂದಿದೆ. ಈ ವರ್ಷ ಪ್ರತಿಷ್ಠಾನದ ವತಿಯಿಂದ ರಾಜ್ಯದ 10 ಮಕ್ಕಳನ್ನು ಆಯ್ಕೆ ಮಾಡಿದೆ. ಇವರಲ್ಲಿ ಹರ್ಷಿತ್ ಎಸ್. ಮತ್ತು ಅಭಿಲಾಷ ಕೆ.ಎಸ್. ದಾವಣಗೆರೆಯ ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಪ್ರಸ್ತುತ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ಎಂಬಿಬಿಎಸ್ ಪ್ರವೇಶ ಪಡೆದಿದ್ದಾರೆ. ಪಿಯುಸಿ ಮತ್ತು ನೀಟ್ ಪರೀಕ್ಷೆ ರ್ಯಾಂಕಿಂಗ್ ಆಧಾರಿತ ಆಯ್ಕೆಯ ಈ ವಿದ್ಯಾರ್ಥಿವೇತನದಲ್ಲಿ ಪ್ರತಿ ತಿಂಗಳು 1500 ರೂ.ಗಳ ಸಹಾಯಧನವನ್ನು ವ್ಯಾಸಂಗ ಪೂರ್ಣ ಮಾಡುವವರೆಗೆ ಪಡೆಯುತ್ತಾರೆ. ಹರ್ಷಿತ್ ಎಸ್.ಪಿಯುಸಿಯಲ್ಲಿ 600ಕ್ಕೆ 598, ನೀಟ್ನಲ್ಲಿ 720ಕ್ಕೆ 659 ಅಂಕ ಪಡೆದಿದ್ದನು. ಅಭಿಲಾಷ ಕೆ.ಎಸ್. ಪಿಯುಸಿಯಲ್ಲಿ 600ಕ್ಕೆ 600, ನೀಟ್ ನಲ್ಲಿ 720 ಕ್ಕೆ 654 ಅಂಕ ಪಡೆದಿದ್ದಳು.
ಈ ಪ್ರತಿಭಾವಂತರ ಆರ್ಥಿಕ ಪರಿಸ್ಥಿತಿ ಗುರುತಿಸಿದ ಸಿದ್ಧಗಂಗಾ ಆಡಳಿತ ಮಂಡಳಿ ಇವರಿಗೆ ಎರಡು ವರ್ಷ ಪಿಯುಸಿ ವಿದ್ಯಾಭ್ಯಾಸ ಉಚಿತವಾಗಿ ನೀಡಿದ್ದು ವೈದ್ಯಕೀಯ ಕೋರ್ಸ್ ಗೆ ನೆರವಾಗುವಂತೆ ಎಂಎಸ್ಎಸ್ ಸ್ಕಾಲರ್ಶಿಪ್ ಯೋಜನೆಯಲ್ಲಿ ತಲಾ 50 ಸಾವಿರ ರೂ. ಪ್ರೋತ್ಸಾಹಧನ ಘೋಷಿಸಿದೆ.
ಆಡಳಿತ ಮಂಡಳಿ ನಿರ್ದೇಶಕ ಡಾ| ಜಯಂತ್, ಕಾರ್ಯದರ್ಶಿ ಹೇಮಂತ್, ಮುಖ್ಯಸ್ಥೆ ಜಸ್ಟಿನ್ ಡಿಸೌಜ ಮತ್ತು ಪ್ರಾಚಾರ್ಯ ಜಿ.ಸಿ. ನಿರಂಜನ್ ಹಾಗೂ ಎಲ್ಲ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.