Advertisement

ಭಾರತದ ಪರಿಕಲ್ಪನೆಯ ಎರಡು ಕನಸುಗಳು

09:58 AM Feb 12, 2020 | sudhir |

ಚೀನ, ಅಮೆರಿಕ, ರಷ್ಯಾ, ಜಪಾನ್‌ ಹೀಗೆ ಹಲವು ದೇಶಗಳು ಇಂದು ಬಲಿಷ್ಟ ರಾಷ್ಟ್ರೀಯತೆಯ ಮಂತ್ರ ಜಪಿಸುತ್ತಿವೆ. ಈಗ ಇರುವ ಮುಖ್ಯ ಪ್ರಶ್ನೆ ಒಂದೇ: ನಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನು ಇಟ್ಟುಕೊಂಡು ಶಕ್ತಿಯುತ ದೇಶವನ್ನು ನಾವು ಆಂತರಿಕ ಕ್ಷೊಭೆ ಇಲ್ಲದೆ, ಹೇಗೆ ಸೃಷ್ಟಿಸಬಲ್ಲೆವು ಎನ್ನುವುದು.

Advertisement

ದೇಶ ಹೇಗಿರಬೇಕು ಎನ್ನುವ ಕುರಿತ 2 ಪರಿಕಲ್ಪನೆಗಳು ಇಂದು ನಮ್ಮ ಮುಂದಿವೆ: ನೆಹರೂ ಪರಿಕಲ್ಪನೆ ಮತ್ತು ಹಿಂದುತ್ವ ಪರಿಕಲ್ಪನೆ. ಇವೆರಡನ್ನೂ ಸರಿಯಾಗಿ ಅರ್ಥ ಮಾಡಿಕೊಂಡರೆ ಬಹುಶಃ ಕಾಶ್ಮೀರ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಯಾವ ನಿಲುವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಸ್ಪಷ್ಟವಾಗಬಹುದು.

ನಮ್ಮ ಮುಂದೆ ಹಿಂದೆ ಇನ್ನೂ ಒಂದು ದಾರಿ ಇತ್ತು. ಆ ದಾರಿ ಈಗ ಅಳಿಸಿ ಹೋಗಿದೆ. ಅದು 19ನೇ ಶತಮಾನದ ಹಿಂದೆ ಭಾರತದಲ್ಲಿ ಇದ್ದ, ಸಾವಿರಾರು ವರ್ಷಗಳಿಂದ ಪರಂಪರಾಗತವಾಗಿ ಬಂದಿದ್ದ ದೇಶದ ಕುರಿತಾದ ಪರಿಕಲ್ಪನೆ. ಕುತೂಹಲವೆಂದರೆ ಆ ದರ್ಶನದಲ್ಲಿ ದೇಶ ಒಂದು “ಕಲ್ಪಿತ ವಾಸ್ತವ’ವಾಗಿತು.¤ ಅಂದರೆ ಅಲ್ಲಿನ ಪರಿಕಲ್ಪನೆಯಲ್ಲಿ ದೇಶ ರಾಜಕೀಯವಾಗಿ ಹೇಗಿರಬೇಕು ಎನ್ನುವ ಅಂಶಗಳೇ ಇರಲಿಲ್ಲ. ದೇಶದ ಅಸ್ತಿತ್ವ ಕೇವಲ ಒಂದು ಸಾಂಸ್ಕೃತಿಕ/ಧಾರ್ಮಿಕ ಪರಿಕಲ್ಪನೆಯಾಗಿತ್ತು. ಜನಜೀವನದ ಕೇಂದ್ರದಲ್ಲಿದ್ದುದು ಸಮಾಜ ಹಾಗೂ ಧರ್ಮ. ರಾಜಕೀಯ ವಾಗಿ ಯಾರು ಯಾರೋ ದೇಶವನ್ನು ಆಳಿಕೊಂಡು ಹೋದರು. ಆದರೆ ಸಮಾಜ ತನ್ನದೇ ದಾರಿಯಲ್ಲಿ ನಡೆಯುತ್ತಿತ್ತು. ರಾಜಕೀಯವು ಸಮಾಜ ವನ್ನು ಹತೋಟಿಯಲ್ಲಿಡುವ/ಮುನ್ನಡೆಸುವ ಶಕ್ತಿಯಾಗಿರಲಿಲ್ಲ. ಜನರ ದಿನನಿತ್ಯದ ಬದುಕಿಗೂ ರಾಜಕೀಯಕ್ಕೂ ಸಂಬಂಧವೇ ಇರಲಿಲ್ಲ. ನಿಜಕ್ಕೂ ಜನರನ್ನು ಆಳುತ್ತಿದ್ದುದು ಧರ್ಮ ಮತ್ತು ಸಂಸೃತಿ. ಜನ ಬದ್ಧರಾಗಿ ಬದು ಕಿದ್ದು ಕೂಡ ಒಂದು ದೇಶಕ್ಕಾಗಿ ಅಲ್ಲ. ದೇಶಾಭಿಮಾನ ಇತ್ಯಾದಿ ಪರಿಕಲ್ಪನೆ ಗಳು ಜಾಗ್ರತವಾಗಿರಲಿಲ.É ಜನರ ಬದ್ಧತೆ ಇದ್ದಿದ್ದು ಒಂದು ಸಂಸ್ಕೃತಿಗೆ.

ಹೀಗೆ ರಾಜಕೀಯೇತರವಾದ, ಸಂಸ್ಕೃತಿ ಪ್ರಧಾನವಾದ ದೇಶದ ಪರಿಕಲ್ಪನೆ ಅದು. ರೊಮಿಲಾ ಥಾಪರ್‌ ಹೇಳುವಂತೆ ಅಂತಹ ರಾಜಕೀಯೇ ತರವಾಗಿದ್ದ ಭಾರತವನ್ನು “ಒನ್‌ ನೇಶನ್‌ ಸ್ಟೇಟ್‌’ ಅನ್ನಾಗಿ ಪರಿವರ್ತಿಸಿದ್ದು ಗಾಂಧಿಯನ್‌ ಚಳವಳಿ. ನೇಶನ್‌-ಸ್ಟೇಟ್‌ ಅನ್ನು ಪಡೆದುಕೊಂಡ ನಾವು ಕಳೆದುಕೊಂಡಿದ್ದು ಅಂದಿನಂತಹ, ರಾಜಕೀಯ ದಿಂದ ವಿಮುಕ್ತಿ ಹೊಂದಿದ ದೇಶದ ಪರಿಕಲ್ಪನೆಯನ್ನು. ಗಾಂಧೀಜಿ ದೇಶದ ಚಳವಳಿಯನ್ನು ಮುನ್ನಡೆಸಿದರೂ ಕೂಡ ಅವರಿಗೆ ಒನ್‌ ನೇಶನ್‌ ಸ್ಟೇಟ್‌ ಆಗಿ ಭಾರತ ಹೇಗಿ ರಬೇಕು ಎನ್ನುವ ವಿಷಯದಲ್ಲಿ ಗೊಂದಲವಿತ್ತು ಎನಿಸುತ್ತದೆ. ಅವರ ಕನಸು ಒಂದು ಬಲವಾದ ದೇಶವನ್ನು ಕಟ್ಟುವುದು ಆಗಿರಲಿಲ್ಲ. ಎಲ್ಲರಿಗೂ ತಿಳಿದಂತೆ ಅವರ ಉದ್ದೇಶ ವ್ಯಕ್ತಿಗಳ ಕಲ್ಯಾಣವನ್ನು ಸಾಧಿಸುವತ್ತ ಕೆಂದ್ರೀಕೃತ ವಾಗಿತ್ತು. ದೇಶಕ್ಕಿಂತಲೂ ಅವರಿಗೆ ಮಹತ್ವವಾದದ್ದು ವ್ಯಕ್ತಿ. ನೇಶನ್‌-ಸ್ಟೇಟ್‌ಗಳೆಲ್ಲವೂ ರಕ್ತಸಿಕ್ತ ವ್ಯವಸ್ಥೆಗಳು ಮತ್ತು ಎಲ್ಲೋ ಒಂದು ಕಡೆ ವ್ಯಕ್ತಿಯ ಸ್ವಾತಂತ್ರÂವನ್ನು ಅವು ಹರಣ ಮಾಡುತ್ತವೆ ಎನ್ನುವುದು ಗಾಂಧೀಜಿಗೆ ತಿಳಿದಿತ್ತು. ಆದರೆ ಅದೇ ಸಮಯದಲ್ಲಿ ರಾಜಕೀಯ ದೇಶವೊಂದು ಹಿಂದಿನಂತೆ ಕಲ್ಪಿತ ದೇಶವಾಗಿ, ರಾಜಕೀಯ ಶಕ್ತಿ ಇಲ್ಲದ ದೇಶವಾಗಿ ಉಳಿಯಲು ಸಾಧ್ಯವಿಲ್ಲ ಎನ್ನುವುದೂ ಅವರಿಗೆ ತಿಳಿದಿತ್ತು. ಹೀಗೆ ಬಹುಶಃ ಗಾಂಧಿ ಗೊಂದಲದಲ್ಲಿದ್ದರು. ತಮ್ಮ ಮನಸ್ಸಿನಲ್ಲಿದ್ದ ಗೊಂದಲವೇ ನೆಹರೂ ಮನಸ್ಸಿನಲ್ಲಿಯೂ ಇದೆ ಎನ್ನುವುದು ಗಾಂಧಿಗೆ ಗೊತ್ತಿತ್ತು. ಸರ್ದಾರ್‌ ಪಟೇಲರನ್ನು ಅಪಾರ ಗೌರವಿಸಿದರೂ ಕೂಡ ಪ್ರಧಾನಿಯನ್ನಾಗಿಸಲು ಗಾಂಧಿ ಮನಸ್ಸು ಮಾಡದಿದ್ದುದರ ಕಾರಣವೂ ಇದೇ.

ಪಟೇಲರು ಗಟ್ಟಿಯಾದ ರಾಷ್ಟ್ರದ ಪ್ರವಾದಿಗಳು ಎನ್ನುವುದು ಗಾಂಧಿಗೆ ತಿಳಿದಿತ್ತು. ಅಂತಹ ನಿಲುವು, ಮೂಲತಃ ನೇಶನ್‌-ಸ್ಟೇಟ್‌ನ ಮಿತಿಗಳನ್ನು ತಿಳಿದಿದ್ದ ಗಾಂಧಿಯವರಿಗೆ ಬೇಕಿರಲಿಲ್ಲ. ಹಾಗೆ ನೋಡಿದರೆ ಮಹಾತ್ಮರಾಗಿದ್ದ, ಅಹಿಂಸಾ ಮಾರ್ಗದಲ್ಲಿದ್ದ ಗಾಂಧಿ ಗಟ್ಟಿಯಾದ ರಾಷ್ಟ್ರವೊಂದನ್ನು ಪೋಷಿಸಲು ಮನಸ್ಸು ಮಾಡದೆ ಇದ್ದಿದ್ದು ಅವರ ಶ್ರೇಷ್ಟ ವ್ಯಕ್ತಿತ್ವಕ್ಕೆ ಅನುಗುಣ ವಾಗಿಯೇ ಇದೆ. ಬಹುಶಃ ಗಾಂಧಿಗೆ ಭಾರತದಲ್ಲಿ ಹಿಂದೆ ಇದ್ದ ರಾಜಕೀ ಯೇತರ ವ್ಯವಸ್ಥೆಯೇ ಒಳ್ಳೆಯದು ಎಂದು ಕೂಡ ಮನಸ್ಸಿನಲ್ಲಿತ್ತೇನೋ!

Advertisement

ರಾಜಕೀಯ ದೇಶವಾಗಿ ಭಾರತಕ್ಕೆ ಒಂದು ಪರಿಕಲ್ಪನೆಯನ್ನು ನೆಹರೂ ಮತ್ತು ಸಹಚರರು ನೀಡಿದ್ದು ಹೌದು. ಗಾಂಧಿ ಮತ್ತು ನೆಹರೂ ನಡುವೆ ಕೂಡ ಅಪಾರ ತಾತ್ವಿಕ ಭಿನ್ನತೆಗಳಿದ್ದವು. ಗಾಂಧಿ ತಾನೊಬ್ಬ ಸನಾತನಿ ಹಿಂದು ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಸಮಾಜವಾದಿ ಧೋರಣೆಗಳಿಂದ ಆಳವಾಗಿ ಪ್ರಭಾವಿತರಾಗಿದ್ದ ನೆಹರೂ ಆದರ್ಶಗಳು ವಿಭಿನ್ನವಾಗಿದ್ದವು. ಮೂಲತಃ ಕನಸುಗಾರರಾಗಿದ್ದ, ಮಾರ್ಕ್ಸ್, ಷಾ, ರಸೆಲ್‌ ಮುಂತಾದ ಪಾಶ್ಚಾತ್ಯ ಚಿಂತಕರ ರ್ಯಾಡಿಕಲ್‌ ವಾದಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದ ನೆಹರೂ ಭಾರತವನ್ನು ಒಂದು ಕನಸಿನ ಸಾಮ್ರಾಜ್ಯವನ್ನಾಗಿ ಕಟ್ಟುವ ಭರದಲ್ಲಿ ಇದ್ದರು. ಭಾರತದ ಕುರಿತಾದ ತಮ್ಮ ಪರಿಕಲ್ಪನೆಗೆ ಹಿನ್ನೆಲೆಯಾಗಿ ನೆಹರೂ ಮನಸ್ಸಿನಲ್ಲಿ ಕೆಲವು ಗ್ರಹೀತಗಳಿದ್ದವು ಅನಿಸುತ್ತದೆ. ಅವುಗಳಲ್ಲಿ ಪ್ರಧಾನ ವಾಗಿದ್ದೆಂದರೆ ಜಾತ್ಯತೀತ ಮತ್ತು ಸಮಾಜವಾದಿ ಪರಿಕಲ್ಪನೆಗಳ ಮೂಲಕ ಭಾರತೀಯ ಮನಸ್ಸನ್ನು ಉದಾತ್ತವಾಗಿಸಿ ಧಾರ್ಮಿಕ ಆಧಾರದ ಮೇಲೆ ನಡೆದ ದೇಶದ ವಿಭಜನೆಯಂತಹ ನೋವನ್ನು ಕೂಡ ಮರೆಸಲು ಸಾಧ್ಯವಿದೆ ಎನ್ನುವುದು. ಹಾಗೆಯೇ, ಆದರ್ಶವಾದಿ ಪರಿಕಲ್ಪನೆಗಳಿಂದ ದೇಶವಾಸಿಗಳ ಮನಸ್ಸನ್ನು ಮೇಲೆತ್ತಿ ಅವರನ್ನು ಜಾತ್ಯತೀತರನ್ನಾಗಿಸಲು, ಸಮಾಜವಾದಿ ಚಿಂತಕರನ್ನಾಗಿಸಲು ಸಾಧ್ಯವಿದೆ. ಹೀಗಾದಾಗ ಇಡೀ ದೇಶದ ಜನರ ಧಾರ್ಮಿಕ ಹಿನ್ನೆಲೆ ಹಿಂದೆ ಹೋಗಿ ದೇಶವಾಸಿಗಳೆಲ್ಲರೂ ಅಣ್ಣ ತಮ್ಮಂದಿರಂತೆ ಬದುಕಬಹುದಾದ ಕನಸನ್ನು ಕಂಡವರು ನೆಹರೂ.

ಹಾಗೆಯೇ, ತನ್ನ ಪಾಲನ್ನು ತೆಗೆದುಕೊಂಡು ಹೋದ ಪಾಕಿಸ್ತಾನ ಹಿಂದಿನದನ್ನು ಮರೆತು ಭಾರತದ ಜತೆ ಸ್ನೇಹದಿಂದ, ಭಾÅತೃತ್ವದಿಂದ ಬದುಕುತ್ತದೆ ಎಂದು ಅವರು ಭಾವಿ ಸಿ ದ್ದ ರು. ಇದೇ ರೀತಿಯ ನಿಲುವನ್ನು ನೆಹರೂ ಚೀನಾದ ಕುರಿತಾಗಿಯೂ ಹೊಂದಿದ್ದು ನಮಗೆ ಗೊತ್ತಿದೆ. ಅಷ್ಟೇ ಅಲ್ಲ, ಪಾಕಿಸ್ತಾನ ಭಾರತದಲ್ಲಿ ಉಳಿದಿರುವ ಅಲ್ಪಸಂಖ್ಯಾತರನ್ನು ಉತ್ತೇಜಿಸಿ ಅವರಲ್ಲಿ ಕೆಲವರನ್ನಾದರೂ ಎತ್ತಿಕಟ್ಟುವ ಸಾಧ್ಯತೆ ಇದೆ ಎನ್ನುವ ವಿಷಯವನ್ನು, ಭವಿಷ್ಯದಲ್ಲಿ ಭಾರತದ ಚುನಾಚಣೆಗಳಲ್ಲಿ ಅಲ್ಪಸಂಖ್ಯಾತ ಎನ್ನುವ ಶಬ್ದ ರಾಜಕೀಯಕ್ಕಾಗಿ ಬಳಸಲ್ಪಡುವ ಸಾಧ್ಯತೆಯನ್ನು ಕೂಡ ಮನಸ್ಸಿನಿಂದ ತಳ್ಳಿ ಹಾಕಿದ್ದ ನೆಹರೂರದ್ದು ಆದರ್ಶ ಸಾಮ್ರಾಜ್ಯದ ಪರಿಕಲ್ಪನೆ. ದಾರ್ಶನಿಕ ಮೌಲ್ಯ ಹೊಂದಿದ್ದ ನೆಹರೂ ಭಾರತವನ್ನು ಜಗತ್ತಿನಲ್ಲೇ ವಿಶಿಷ್ಟ ದೇಶವನ್ನಾಗಿ ಕಟ್ಟುವ ಹಂಬಲ ಹೊಂದಿದ್ದರು ಅನಿಸುತ್ತದೆ. ನೆಹರೂ ಅವರ ಕನಸಿನ ಭಾರತದ ಆಧಾರಸ್ತಂಭ ಒಂದು ಲಿಬರಲ್‌ ಆದ, ಮಾನವೀಯ ವಾದ, ಐತಿಹಾಸಿಕ ವೆÂವಿಧ್ಯತೆಗಳನ್ನು, ವೆÂರುಧ್ಯಗಳನ್ನು ಉದಾರವಾಗಿ ಒಪ್ಪಿಕೊಳ್ಳುವ ಜಾತ್ಯತೀತ ಮತ್ತು ಸಮಾಜವಾದಿ ಮನಸ್ಥಿತಿ. ಇಂತಹ ದೇಶವನ್ನು ನಿರ್ಮಿಸುವ ಕನಸಿನಲ್ಲಿದ್ದ ನೆಹರು ಮನುಷ್ಯರ ಮನಸ್ಸಿನ ಕಟು ವಾಸ್ತವಗಳನ್ನು ಅರಿಯಲೇ ಇಲ್ಲ.

ವಿಭಜನೆಯ ನಂತರ ದೇಶದೊಳಗಿದ್ದ ನೋವನ್ನೂ ನೆಹರೂ ಅರಿಯಲಿಲ್ಲ. ಒಟ್ಟಾರೆ ಕನಸು ಮತ್ತು ವಾಸ್ತವಿಕ ರಾಜಕೀಯದ ನಡುವೆ ದೊಡ್ಡ ಕಂದರ ನೆಹರೂ ಲಕ್ಷ Âಕ್ಕೆ ಬರಲೇ ಇಲ್ಲ.

ದೇಶ ನೆಹರೂ ಕಲ್ಪನೆಯನ್ನು ಕೆಲವು ವರ್ಷಗಳ ಕಾಲ ಒಪ್ಪಿಕೊಂಡಂತಿತ್ತು. ಇದಕ್ಕೆ ಮುಖ್ಯ ಕಾರಣ ನೆಹರೂ ವ್ಯಕ್ತಿತ್ವವೇ. ಆದರೆ ಕ್ರಮೇಣ ನೆಹರೂ ಪರಿಕಲ್ಪನೆ-ಅವರ ನಂತರವಂತೂ- ಓಲೈಕೆಯ ರಾಜಕೀಯವಾಗಿ ಮಾರ್ಪಟ್ಟು ಹೋಯಿತು. ಸಮಾಜವಾದಿ ಯೋಚನೆಗಳು ದೇಶದಲ್ಲಿ ಧಾರ್ಮಿಕ ಸೂಕ್ಷ್ಮತೆಗಳನ್ನು ಗಮನಿಸಲೇ ಇಲ್ಲ. ಅಲ್ಲದೆ ವಿಶೇಷವಾಗಿ ಹಲವು ಸಮಾಜವಾದಿ ಚಿಂತಕರು ನಿರಂತರವಾಗಿ ಹಿಂದು ಧರ್ಮವನ್ನು ಹೀಯಾಳಿಸುತ್ತಲೇ ಮುನ್ನಡೆದರು. ಹಲವೊಮ್ಮೆ ಅದೇ ಚಿಂತಕರ ವಿಚಾರ ಧಾರೆಗಳು ದೇಶ ವಿರೋಧಿ ಶಕ್ತಿಗಳನ್ನು ಬಲಗೊಳಿಸುತ್ತಲೇ ಸಾಗಿದವು ಎನ್ನುವುದೂ ಸತ್ಯವೇ. ನೆಹರೂ ಪ್ರಣೀತ ಭಾರತದ ಪರಿಕಲ್ಪನೆ, ದೇಶ ದೊಳಗಿನ ವೆÂವಿಧ್ಯತೆಗಳೇ ಹಲವೊಮ್ಮೆ ದೇಶ ವಿರೋಧಿ ಶಕ್ತಿಗಳಾಗಿ ರೂಪಾಂತರ ಹೊಂದಲು ಅನುವು ನೀಡಿತು ಎನ್ನುವ ವಾದದಲ್ಲಿಯೂ ಸತ್ಯಾಂಶಗಳಿವೆ. ಭಾರತದ ಇನ್ನೊಂದು ಪರಿಕಲ್ಪನೆಯಾದ “ಹಿಂದುತ್ವ ರಾಜಕೀಯ’ ಹುಟ್ಟಿಕೊಂಡಿದ್ದು ನೆಹರೂ ಪರಿಕಲ್ಪನೆಯಲ್ಲಿದ್ದ ದೋಷಗಳಿಗೆ ಪ್ರತಿಕ್ರಿಯೆಯಾಗಿ.

ಅದು ದೇಶದಲ್ಲಿ ಪ್ರಬಲ ಶಕ್ತಿಯಾಗಿ ಮೂಡಿಬರಲು ಇನ್ನೂ ಕೆಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಇಡೀ ಜಗತ್ತನ್ನೇ ಆವರಿಸಿಕೊಂಡಿರುವ ಬಲವಾದ ರಾಷ್ಟೀಯತೆಯ ಗಾಳಿ ಹಾಗೂ ಆರ್ಥಿಕವಾಗಿ ಸಬಲವಾಗುವ ದೇಶವೊಂದು ತನ್ನ ಅಸ್ಮಿತೆಯ ಕುರಿತು ತೀವ್ರ ಜಾಗೃತಿಗೊಳ್ಳುವ ಮಾನಸಿಕ ಪ್ರಕ್ರಿಯೆ. ವ್ಯಂಗ್ಯವೆಂದರೆ ಹಿಂದುತ್ವ ರಾಜಕೀಯದ ಸಿದ್ಧಾಂತ ಹಳೆಯದಾದರೂ (ಶ್ಯಾಮಾ ಪ್ರಸಾದ ಮುಖರ್ಜಿ ಮತ್ತು ವೀರ ಸಾವರ್ಕರ ಅವರನ್ನು ನೆನಪಿಸಿಕೊಳ್ಳಲೇಬೇಕು) ದೇಶದಲ್ಲಿ ಹಿಂದುತ್ವದ ರಾಜಕೀಯದ ಸಾಧ್ಯತೆಗಳನ್ನು ಮತ್ತು ಸಾಮರ್ಥ್ಯ ವನ್ನು ಎತ್ತಿ ತೋರಿಸಿದವರು ನೆಹರೂ ಪುತ್ರಿ ಇಂದಿರಾ ಗಾಂಧಿಯವರೇ. ಆಪರೇಶನ್‌ ಬ್ಲೂಸ್ಟಾರ್‌ನಂತಹ ಇಂದಿರಾರ ಕ್ರಮಗಳು ಯಾವ ಬಣ್ಣ ಹೊಂದಿದ್ದವು ಎನ್ನುವುದು ತಿಳಿದ ವಿಷಯ. ಬಹುಶಃ ಹಿಂದುತ್ವದ ರಾಜಕೀಯದ ಸಾಧ್ಯತೆಗಳ ಅರಿವು ದೊಡ್ಡ ಪ್ರಮಾಣದಲ್ಲಿ ಮೂಡಿದ್ದು ಆವಾಗಲೇ. ನಂತರ ಈ ಪರಿಕಲ್ಪನೆಯನ್ನು ಒಂದು ಕಾಂಗ್ರೆಸ್ಸೇತರ ಪರಿಕಲ್ಪನೆ ಯನ್ನಾಗಿ ಅದನ್ನು ಸ್ಪಷ್ಟವಾಗಿ ಜನತೆಗೆ ವಿವರಿಸಿ ಹಿಂದುತ್ವ ಪರಿಕಲ್ಪನೆಗೆ ವ್ಯಾಪಕ ಜನಬೆಂಬಲ ತಂದಿತ್ತವರು ಹಾಗೂ ಈ ಹಿಂದುತ್ವ ರಾಜಕೀಯವನ್ನು ಭಾರತದ ಬದಲಿ ಪರಿಕಲ್ಪನೆಯ°ನಾಗಿ ನಿರೂಪಿಸಿದವರು ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಆಡ್ವಾಣಿ ಮತ್ತು ಪ್ರಧಾನಿ ನರೇಂದ್ರ ಮೋದಿ.

ಹಿಂದುತ್ವ ಪರಿಕಲ್ಪನೆಯ ದರ್ಶನದ ಪ್ರಕಾರ ಭಾರತ ಒಂದು ಗಟ್ಟಿಯಾದ ನೇಶನ್‌-ಸ್ಟೇಟ್‌ ಆಗುವ ಅಗತ್ಯವಿದೆ. ಇಂತಹ ಗಟ್ಟಿತನವನ್ನು ದೇಶಕ್ಕೆ ನೀಡುವ ಶಕ್ತಿ ಇರುವುದು ಹಿಂದುತ್ವ ಆಧರಿಸಿದ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಮಾತ್ರ. ಈ ವಾದ ಹೇಳುವುದೆಂದರೆ ಹಿಂದುತ್ವ ರಾಜಕೀಯ ದೇಶದ ವಿವಿಧತೆಗೆ ಅಡ್ಡಿಯಾಗುವುದಿಲ್ಲ. ಏಕೆಂದರೆ ಹಿಂದುತ್ವಕ್ಕೆ ಎಲ್ಲವನ್ನೂ ಒಳಗೊಳ್ಳುವ ಸಾಮರ್ಥ್ಯವಿದೆ. ದೇಶವಾಸಿ ಗ ಳೆ ಲ್ಲ ತಮ್ಮ ಶ್ರದ್ಧೆಯನ್ನು ಆಚರಿಸುವ ಹಕ್ಕು ಅವಿಛಿನ್ನವಾಗಿರುತ್ತದೆ. ಆದರೆ ಪ್ರತ್ಯೇಕತಾವಾದಿ ಮನಸ್ಥಿತಿಗಳಿಗೆ ಇಲ್ಲಿ ಅವಕಾಶವಿಲ್ಲ ಮತ್ತು ವೆÂವಿಧ್ಯತೆಗಳೆಲ್ಲವೂ ಅಂತಿಮವಾಗಿ ದೇಶದ ಸಮಗ್ರತೆಯ ಅಸ್ಮಿತೆಯಲ್ಲಿ ಒಂದಾಗುವ ಅವಶ್ಯಕತೆ ಇದೆ.

ಹಾಗೆಯೇ ಜಾತ್ಯತೀತತೆ ಎನ್ನುವುದು ಅಲ್ಪಸಂಖ್ಯಾತರನ್ನು ಓಲೈಸುವ ಅಸ್ತ್ರ ಆಗಬಾರದು. ಅಂತೆಯೇ ಸಮಾಜವಾದ ದೇಶದ ಸಂಸ್ಕೃತಿಯ ಬೇರುಗಳನ್ನು ದುರ್ಬಲಗೊಳಿಸಲು ಯತ್ನಿಸುವ ಕುರಿತು ಹಿಂದುತ್ವಕ್ಕೆ ತೀವ್ರ ಆಕ್ರೋಶವಿದೆ. ಹಿಂದುತ್ವ ವಾದಿಸುವುದೆಂದರೆ ಸಾಂಸ್ಕೃತಿಕ ರಾಷ್ಟ್ರೀಯತೆಯ ತತ್ವದಲ್ಲಿ ಜಗತ್ತಿನಲ್ಲಿಲ್ಲದ ವಿಶೇಷವಾದದ್ದೇನೂ ಅಲ್ಲ. ಬಹುತೇಕ ಬಲಾಡ್ಯ ದೇಶಗಳು ಅಳವಡಿಸಿ ಕೊಂಡಿರುವ ನೀತಿ ಇದು. ಭಾರತದ ಸಂವಿಧಾನಕ್ಕೆ ಬದ್ಧ ವಾಗಿಯೇ ಬಲವಾದ ರಾಷ್ಟ್ರವನ್ನು ಕಟ್ಟುವುದು ಹಿಂದುತ್ವದ ಕನಸು.

ಬಹುಶಃ ಇಂದು ಎಲ್ಲರೂ ಒಪ್ಪಿಕೊಳ್ಳಬೇಕಾದ ವಿಷಯವೆಂದರೆ ರಾಷ್ಟ್ರ ಬಲವಾಗಿರಲೇಬೇಕು. ಶಕ್ತಿ ಹೊಂದಿರದ ದೇಶ ಇಂದಿನ ಜಗತ್ತಿನಲ್ಲಿ ತಲೆಯೆತ್ತಿ ನಿಲ್ಲಲಾಗುವುದಿಲ್ಲ. ಅದು ವರ್ತಮಾನದ ಜಗತ್ತಿನಲ್ಲಿನ ದೇಶಗಳ ಅನಿವಾರ್ಯ ಹಣೆಬರಹ. ಚೀನಾ, ಅಮೆರಿಕ, ರಷ್ಯಾ, ಜಪಾನ್‌ ಹೀಗೆ ಹಲವು ದೇಶಗಳು ಇಂದು ಬಲಿಷ್ಟ ರಾಷ್ಟ್ರೀಯತೆಯ ಮಂತ್ರ ಜಪಿಸುತ್ತಿವೆ. ಈಗ ಇರುವ ಮುಖ್ಯ ಪ್ರಶ್ನೆ ಒಂದೇ: ನಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನು ಇಟ್ಟುಕೊಂಡು ಶಕ್ತಿಯುತ ದೇಶವನ್ನು ನಾವು ಆಂತರಿಕ ಕ್ಷೊàಭೆ ಇಲ್ಲದೆ, ಹೇಗೆ ಸೃಷ್ಟಿಸಬಲ್ಲೆವು ಎನ್ನುವುದು. ಹಾಗೆಯೇ ಇರುವ ಪ್ರಶ್ನೆ ಈಗ ದೇಶದಲ್ಲಿ ನಡೆದಿರುವ ರೂಪಾಂತರದ ಸ್ವರೂಪ ಎಷ್ಟು ಸುಲಲಿತವಾಗಬಲ್ಲದು? ಹೇಗೆ ವಿಭಿನ್ನ, ವಿರೋಧಿ ಸ್ವರಗಳನ್ನು ಕೂಡ ತನ್ನೊಡನೆ ಕೂಡಿಸಿಕೊಳ್ಳಬಲ್ಲದು? ಎನ್ನುವುದು. ಇದು ಜಗತ್ತು ಕಾದು ನೋಡುತ್ತಿರುವ ವಿಷಯ.

ಡಾ|| ಆರ್‌.ಜಿ.ಹೆಗಡೆ, ದಾಂಡೇಲಿ

Advertisement

Udayavani is now on Telegram. Click here to join our channel and stay updated with the latest news.

Next