Advertisement

ಪಾಕ್‌ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ:ಯೋಧ,ಪತ್ನಿ ದಾರುಣ ಸಾವು

09:53 AM Jul 08, 2017 | Team Udayavani |

ಶ್ರೀನಗರ: ಶನಿವಾರ ಪಾಕ್‌ ಪಡೆಗಳು ಗಡಿ ನಿಯಂತ್ರಣ ರೇಖೆಯ ಪೂಂಛ್  ಸೆಕ್ಟರ್‌ನಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಮನೆಯಲ್ಲಿದ್ದ ಯೋಧ ಮತ್ತು ಪತ್ನಿ  ದಾರುಣವಾಗಿ ಸಾವನ್ನಪ್ಪಿದ್ದು, ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ರಜೆ ಪಡೆದು ಮನೆಗೆ ಬಂದಿದ್ದ ಯೋಧ ಶೌಕತ್‌ ಅಲಿ (35), ಪತ್ನಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬೆಳಗ್ಗೆ 6.30 ರ ವೇಳೆ ಚಕ್ಕಾದಾ ಭಾಗ್‌ ಮತ್ತು ಖರ್‌ರಿ ಪ್ರದೇಶದಲ್ಲಿ ಭಾರೀ ಗುಂಡಿನ ದಾಳಿ ನಡೆಸಲಾಗಿದ್ದು, ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮೋರ್ಟಾರ್‌ ಶೆಲ್‌ಗ‌ಳನ್ನು ದಾಳಿಗೆ ಪಾಕ್‌ ಪಡೆಗಳು ಬಳಸಿವೆ. 

ಪಾಕ್‌ ಪಡೆಗಳ ದಾಳಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. ಗಾಯಗೊಂಡ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. 

ಬಂಡಿಪೋರಾದ ಹಾಜಿನ್‌ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ ಶನಿವಾರ ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದು , ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಭದ್ರತಾ ಪಡೆಗಳು ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. 

Advertisement

ಹಿಜ್‌ಬುಲ್‌ ಮುಜಾಹಿದೀನ್‌ ಕಮಾಂಡರ್‌, ಉಗ್ರ ಬುರ್ಹಾನ್‌ ವಾನಿಯ ಹತ್ಯೆಗೆ ಇಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಸಲು ಸಿದ್ಧತೆ ನಡೆಸಲಾಗಿದೆ.  ಭದ್ರತೆಯನ್ನು ಆಯೋಜಿಸಲಾಗಿದೆ. ಕಣಿವೆಯಲ್ಲಿ ಲೀಸ್‌ ಲೈನ್‌ನಲ್ಲಿ ನಡೆಯುವ ಸಾಮಾಜಿಕ ಜಾಲ ತಾಣಗಳನ್ನು ಬ್ಲಾಕ್‌ ಮಾಡಲಾಗಿದ್ದು ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಶ್ರೀನಗರ ಮತ್ತು ಬಾರಾಮುಲ್ಲಾದಲ್ಲಿ ಕರ್‌ಫ್ಯೂ ರೀತಿಯ ಪರಿಸ್ಥಿತಿ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next