Advertisement

ತುಳುಕೂಟ ಐರೋಲಿ ಹನ್ನೊಂದನೇ ವಾರ್ಷಿಕೋತ್ಸವ ಸಾಧಕರಿಗೆ ಸಮ್ಮಾನ

01:54 PM Jan 16, 2019 | Team Udayavani |

ನವಿಮುಂಬಯಿ: ದಾನಿಗಳು ಶೈಕ್ಷಣಿಕ ನೆರವಿಗಾಗಿ ನೀಡಿದ ನಿಧಿಯು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವುದಲ್ಲದೆ, ಬೇರಾವುದೇ ಕಾರಣಕ್ಕೆ ಉಪಯೋಗಿಸುವುದಿಲ್ಲ. ದಾನಿಗಳು ನೀಡಿದ ದಾನವು ಸರಿಯಾದ ಕಾರ್ಯಕ್ಕೆ ವಿನಿಯೋಗವಾಗುತ್ತಿದ್ದು, ಇದರ ಬಗ್ಗೆ ದಾನಿಗಳಿಗೆ ಯಾವುದೇ ರೀತಿಯ ಸಂಶಯ ಬೇಡ. ಈ ನಿಟ್ಟಿನಲ್ಲಿ ನಾವು ಕಳೆದ ದಶಮಾನೋತ್ಸವ ಸಂದರ್ಭದಲ್ಲಿ ಶೈಕ್ಷಣಿಕ ನಿಧಿ ಕುಂಭದ ಮು ಖಾಂತರ 50 ಲಕ್ಷ ರೂ. ಗಳನ್ನು ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡು ಯಶಸ್ವಿಯಾಗಿದ್ದೇವೆ ಎಂದು ತುಳುಕೂಟ ಐರೋಲಿಯ ಅಧ್ಯಕ್ಷ ಕೆ. ಕೆ. ಹೆಬ್ಟಾರ್‌ ನುಡಿದರು.

Advertisement

ಜ. 13 ರಂದು ಅಪರಾಹ್ನ 2 ರಿಂದ ಐರೋಲಿ ಯ ಹೆಗ್ಗಡೆ ಭವನದಲ್ಲಿ ನಡೆದ ತುಳುಕೂಟ ಐರೋಲಿ ಇದರ ಹನ್ನೊಂದನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಂತ ಭವನ ನಿರ್ಮಾಣದ ಕನಸನ್ನು ನಾವು ಹೊಂದಿದ್ದು, ಇದಕ್ಕೆ ದಾನಿಗಳ ಸಹಕಾ ರವಿದ್ದರೆ ನಮ್ಮ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದು ನುಡಿದು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ  ಬೋಂಬೆ ಬಂಟ್ಸ್‌ ಅಸೋ. ಮಾಜಿ ಅಧ್ಯಕ್ಷ ಉಪ್ಪೂರು ನ್ಯಾಯವಾದಿ ಶೇಖರ್‌ ಶೆಟ್ಟಿ ಅವರು ಮಾತನಾಡಿ, ತುಳುಕೂಟದ ಸಮಾಜರ ಚಟುವಟಟಿಕೆಗಳು ಮೆಚ್ಚುವಂಥದ್ದಾಗಿದೆ. ಇದು ಜಾತಿ, ಧರ್ಮವನ್ನು ಮೀರಿ ಕೆಲಸ ಮಾಡುತ್ತಿದೆ. ಸಂಸ್ಥೆಯ ಶಿಕ್ಷಣ ನಿಧಿಗೆ ತಾನು ತನ್ನಿಂದಾದ ಸಹಕಾರ ಮಾಡುವುದರೊಂದಿಗೆ ಇತರ ಸಮಾಜಪರ ಕಾರ್ಯಗಳಿಗೆ ಸಹಕಾರವಿದೆ ಎಂದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ತುಳುಕೂಟವು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸದಾ ತನ್ನನ್ನು  ತೊಡಗಿಸಿಕೊಂಡು ಮಾತೃಭಾಷೆಯ ರಕ್ಷಣೆಯಲ್ಲಿ ತೊಡಗಿರುವುದು ಅಭಿನಂದನೀಯ ಎಂದರು.

ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು ಅವರು ಮಾತನಾಡಿ, ತುಳುಕೂಟ ಜನಬಲದೊಂದಿಗೆ ಧನ ಬಲವನ್ನು ಹೊಂದಿದ್ದು, ಜನಬಲ ಮತ್ತು ಧನಬಲವು ಸಮಾಜಪರ ಕಾರ್ಯಗಳಿಗೆ ವಿನಿಯೋಗವಾಗುತ್ತಿರುವುದು ಶ್ಲಾಘನೀಯ ಎಂದು ನುಡಿದರು.

Advertisement

ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಥಾಣೆ ಬಂಟ್ಸ್‌ ಅಸೋ. ಉಪಾಧ್ಯಕ್ಷ ವೇಣುಗೋಪಾಲ್‌ ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆ ಕಲಂಬೋಲಿ ಇದರ ಉಪಾಧ್ಯಕ್ಷ ರವೀಶ್‌ ಜಿ. ಶೆಟ್ಟಿ ಅವರು ಮಾತನಾಡಿ ಶುಭಹಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಶೈಕ್ಷಣಿಕ ವಿಭಾಗದಲ್ಲಿ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ ಅರಾಟೆ,  ಸಮಾಜ ಸೇವೆಗಾಗಿ ರಂಗಭೂಮಿ ಫೈನ್‌ಆಟ್ಸ್‌ ನವಿಮುಂಬಯಿ ಮಾಜಿ ಅಧ್ಯಕ್ಷ ವಿ. ಕೆ. ಸುವರ್ಣ, ಸಾಂಸ್ಕೃತಿಕ ವಿಭಾಗದಲ್ಲಿ ಇನ್ನ ಆನಂದ ಶೆಟ್ಟಿ, ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಖೋಖೋ ಆಟಗಾರ ರಂಜನ್‌ ಎಸ್‌. ಶೆಟ್ಟಿ ಇವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಸಂಸ್ಥೆಯ ವಾರ್ಷಿಕ ಹಿರಿಯ ನಾಗರಿಕ ಸಮ್ಮಾನವನ್ನು ಸುಂದರ್‌ ಡಿ. ಕುಂದರ್‌, ಬಾಬು ಬಿ. ಪೂಜಾರಿ, ಶಂಭು ಕೋಟ್ಯಾನ್‌ ಹಾಗೂ ಶೇಖರ್‌ ಪಿ. ಪೂಜಾರಿ ಇವರಿಗೆ ಪ್ರದಾನಿಸಲಾಯಿತು. ತುಳುಕೂಟದ ನಿಕಟಪೂರ್ವ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ದಂಪತಿಯನ್ನು ಗೌರವಿಸಲಾಯಿತು.

ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಳುಕೂಟ ವಿವಿಧ ವಲಯಗಳಾದ ಐರೋಲಿ, ಹಾಫಾ, ಖೋಪರ್‌ಖರ್ಣೇ, ಸಿಬಿಡಿ ವಲಯದ ಸದಸ್ಯರ ಮಕ್ಕಳಿಂದ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ ಮತ್ತು ರಂಗಭೂಮಿ ಫೈನ್‌ಆರ್ಟ್ಸ್ ಸದಸ್ಯರಿಂದ ನೃತ್ಯ ವೈವಿಧ್ಯ ನಡೆಯಿತು. ಸಹನಾ ಭಾರದ್ವಾಜ್‌ ಅವರ ನಿರ್ದೇಶನದಲ್ಲಿ ತುಳುಕೂಟದ ಸದಸ್ಯರಿಂದ ಕೃಷ್ಣ ಶ್ರೀಕೃಷ್ಣ ನೃತ್ಯ ರೂಪಕ ಹಾಗೂ ತುಳುಕೂಟದ ಸದಸ್ಯರಿಂದ ಕಿರು ಪ್ರಹಸನಗಳು, ಆತ್ಮರಾಂ ಆಳ್ವ ಬೆಂಗಳೂರು ಇವರಿಂದ ಸಂವಹನ ಸಂಗೀತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷರುಗಳಾದ ಹರೀಶ್‌ ಶೆಟ್ಟಿ ಪಡುಬಿದ್ರೆ ಮತ್ತು ಜಗದೀಶ್‌ ಶೆಟ್ಟಿ ನಾಡಾಜೆಗುತ್ತು ನಿರ್ವಹಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ನಾಗೇಶ್‌ ಶೆಟ್ಟಿ ಬೈಕಾಡಿ ಹೆದ್ದಾರಿಮನೆ ಮತ್ತು ಅಮರ್‌ನಾಥ್‌ ಶೆಟ್ಟಿ ಕಳತ್ತೂರು, ಗೌರವ ಪ್ರಧಾನ ಕಾರ್ಯದರ್ಶಿ ಕೃಷ್ಣ ವಿ. ಶೆಟ್ಟಿ, ಕೋಶಾಧಿಕಾರಿ ಉದಯ ಎನ್‌. ಶೆಟ್ಟಿ, ವಾರ್ಷಿಕ ಸಮಾರಂಭದ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ಮುಲ್ಕಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್‌ ದೇವಾಡಿಗ ಹಾಗೂ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುಜಾತಾ ಹೆಗ್ಡೆ, ಪುಷ್ಪಾ ಹರೀಶ್‌ ಶೆಟ್ಟಿ, ಹರೀಶ್‌ ಶೆಟ್ಟಿ ಪಡುಬಿದ್ರೆ, ಜಗದೀಶ್‌ ಶೆಟ್ಟಿ ನಿರಾಜೆಗುತ್ತು ಅವರು ಸಮ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಮಧು ಕೋಟ್ಯಾನ್‌, ಲ್ಯಾನ್ಸಿ ಡಿಕುನ್ಹಾ, ಪ್ರಕಾಶ್‌ ಆಳ್ವ, ಜಗದೀಶ್‌ ಶೆಟ್ಟಿ ನಾಡಾಜೆಗುತ್ತು, ಸದಸ್ಯ ಬಾಂಧವರು, ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next