ಉಳ್ಳಾಲ: ತುಳು ಭಾಷೆಯನ್ನು ಮೂಲವಾಗಿಟ್ಟುಕೊಂಡು ರಚಿತವಾಗಿರುವ “ತುಳು ಜ್ಞಾತಿ ಪದಕೋಶ’ ಬಹು ದೀರ್ಘಕಾಲ ನಿಲ್ಲುವಂತಹ ಮಹತ್ವದ ಕೃತಿ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿ.ವಿ.ಯ ತುಳು ಭಾಷಾ ವಿಭಾಗದ ಆಶ್ರಯದಲ್ಲಿ ತುಳು ಭಾಷಾ ತಜ್ಞರಾದ ಡಾ| ಪದ್ಮನಾಭ ಕೇಕುಣ್ಣಾಯ ಹಾಗೂ ಡಾ| ಸಾಯಿ ಗೀತಾ ಸಂಪಾದಕತ್ವದಲ್ಲಿ ರಚಿಸಲಾದ ತುಳು ಭಾಷಾ ನಿಘಂಟು “ತುಳು ಜ್ಞಾತಿ ಪದಕೋಶ’ವನ್ನು ಶುಕ್ರವಾರ ನಿಟ್ಟೆ ವಿ.ವಿ.ಯಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿ ದರು. ಇಂತಹ ಮಹಾಕೃತಿ ರಚನೆಗೆ ಪ್ರೇರಣೆಯೊಂದಿಗೆ ಆರ್ಥಿಕ ಸಹಾಯ ನೀಡಿದ ನಿಟ್ಟೆ ವಿ.ವಿ.ಯ ಕಾರ್ಯ ಶ್ಲಾಘನೀಯ ಎಂದರು.
ಹಂಪಿ ಕನ್ನಡ ವಿ.ವಿ. ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ ಮಾತನಾಡಿ, ಭಾಷಾ ಶಾಸ್ತ್ರ ವಿಚಾರದಲ್ಲಿ ತುಳು ಭಾಷೆ ಯನ್ನು ಮೂಲವನ್ನಾಗಿಸಿ ರಚನೆಗೊಂಡ ಎರಡು ಪ್ರಮುಖ ಜ್ಞಾತಿ ಪದಕೋಶ ಗಳಲ್ಲಿ ಒಂದು ಉಡುಪಿಯಲ್ಲಿ ಕು.ಶಿ. ಹರಿದಾಸ ಭಟ್ ಮುಂದಾಳತ್ವದಲ್ಲಿ ತುಳು – ಕನ್ನಡ -ಇಂಗ್ಲಿಷ್ ನಿಘಂಟಿನ ಆರು ಸಂಪುಟ ಮೊದಲನೆಯದಾದರೆ ಎರಡನೆಯದು ಇಂದು ಬಿಡುಗಡೆ ಯಾದ ಜ್ಞಾತಿ ಪದಕೋಶಗಳು. ಇದನ್ನು ಆನ್ಲೈನ್ಗೆ ತರುವ ಕೆಲಸ ಆಗಬೇಕು ಎಂದರು.
ನಿಟ್ಟೆ ವಿ.ವಿ. ಸಹ ಕುಲಾಧಿಪತಿ ಡಾ| ಎಂ. ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಹಾಗೂ ನಿಟ್ಟೆ ವಿ.ವಿ. ವಿಶ್ರಾಂತ ಕುಲಪತಿ ಡಾ| ಎಸ್. ರಮಾನಂದ ಶೆಟ್ಟಿ, ನಿಟ್ಟೆ ವಿ.ವಿ. ಕುಲಪತಿ ಡಾ| ಕೆ. ಸತೀಶ್ ಕುಮಾರ್ ಭಂಡಾರಿ, ಸಹ ಕುಲಪತಿ ಡಾ| ಎಂ.ಎಸ್. ಮೂಡಿತ್ತಾಯ, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಉಪಸ್ಥಿತರಿದ್ದರು. “ತುಳು ಜ್ಞಾತಿ ಪದಕೋಶ’ ಸಂಪಾದಕಿ ಡಾ| ಸಾಯಿಗೀತಾ ಸ್ವಾಗತಿಸಿದರು. ಸಂಪಾದಕ ಡಾ| ಪದ್ಮನಾಭ ಕೇಕುಣ್ಣಾಯ ವಂದಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕೈಗೊಂಡ ಕನ್ನಡ-ಕನ್ನಡ ನಿಘಂಟು ರಚನೆಗೆ 48 ವರ್ಷಗಳ ಪ್ರಯತ್ನ ನಡೆಯಿತು. ಈ ವೇಳೆ ಸಂಪಾದಕ ಮಂಡಳಿಯ ಸುಮಾರು 18 ಮಂದಿ ಅಗಲಿದ್ದರು. ಆದರೆ ನಿಟ್ಟೆ ವಿ.ವಿ. ಹೊರತಂದ ಜ್ಞಾತಿಪದಕೋಶ ಗಾತ್ರ, ಪಾತ್ರ, ಮಹತ್ವದಲ್ಲಿ ವಿಶಿಷ್ಟವಾದ ಕೃತಿಯಾಗಿದ್ದು, ಅಲ್ಪ ಅವಧಿಯಲ್ಲಿ ಸಂಪಾದನೆ ಮಾಡಿರುವುದು ಶ್ಲಾಘನೀಯ.
ಡಾ| ಹಂಪ ನಾಗರಾಜಯ್ಯ
ಉಳ್ಳಾಲ: ತುಳು ಭಾಷಾ ನಿಘಂಟು “ತುಳು ಜ್ಞಾತಿ ಪದಕೋಶ’ವನ್ನು ನಿಟ್ಟೆ ವಿ.ವಿ.ಯಲ್ಲಿ ಬಿಡುಗಡೆಗೊಳಿಸಲಾಯಿತು.