Advertisement

ತುಳುವಿನ ‘ಪಡ್ಡಾಯಿ’ಗೆ ರಾಷ್ಟ್ರೀಯ ಗೌರವ

06:00 AM Apr 14, 2018 | Karthik A |

ಮಂಗಳೂರು: ಕಡಲ ತೀರದ ಮೀನುಗಾರರ ಕಥೆಯನ್ನು ಆಧರಿಸಿ ಕಾರ್ಕಳದ ನಿತ್ಯಾನಂದ ಪೈ ನಿರ್ಮಾಣ ಹಾಗೂ ಅಭಯಸಿಂಹ ನಿರ್ದೇಶಿಸಿದ ತುಳುವಿನ ‘ಪಡ್ಡಾಯಿ’ ಸಿನೆಮಾ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದ ತುಳುವಿನಲ್ಲಿ ರಾಷ್ಟ್ರೀಯ ಗೌರವ ಪಡೆದುಕೊಂಡಿದೆ. ಇದು ತುಳು ಚಲನಚಿತ್ರಕ್ಕೆ ಐದನೇ ಬಾರಿಗೆ ರಾಷ್ಟ್ರೀಯ ಗೌರವ. ಈ ಮೊದಲು ‘ಬಂಗಾರ್‌ ಪಟ್ಲೇರ್‌’, ‘ಕೋಟಿ ಚೆನ್ನಯ’, ‘ಗಗ್ಗರ’ ಹಾಗೂ ‘ಮದಿಪು’ ಸಿನೆಮಾಗಳು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದವು.

Advertisement

ಪ್ರಸಿದ್ಧ ನಾಟಕಕಾರ ಶೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್‌’ ನಾಟಕದಿಂದ ಸ್ಫೂರ್ತಿ ಪಡೆದು ‘ಪಡ್ಡಾಯಿ’ ತಯಾರಿಸಲಾಗಿದೆ. ಮೊಗವೀರ ಸಮುದಾಯದ ಬದುಕು ಬವಣೆಯನ್ನು ಈ ಸಿನೆಮಾದಲ್ಲಿ ಕಟ್ಟಿಕೊಡಲಾಗಿದೆ. ತುಳುನಾಡಿನ ಜನಪದ ಸಂಸ್ಕೃತಿ, ಪ್ರದರ್ಶನ ಕಲೆಗಳು ಸಮೃದ್ಧವಾಗಿ ಚಿತ್ರಣಗೊಂಡಿವೆ. ಒಂದು ಗಂಟೆ 40 ನಿಮಿಷ ಅವಧಿಯ ಈ ಸಿನೆಮಾದಲ್ಲಿ ಮೋಹನ್‌ ಶೇಣಿ, ಬಿಂದು ರಕ್ಷಿದಿ, ಗೋಪಿನಾಥ್‌ ಭಟ್‌, ಚಂದ್ರಹಾಸ್‌ ಉಳ್ಳಾಲ್‌, ರವಿ ಭಟ್‌, ಸದಾಶಿವ ಧರ್ಮಸ್ಥಳ, ಶ್ರೀನಿಧಿ ಆಚಾರ್‌, ಅವಿನಾಶ್‌ ರೈ, ಮಲ್ಲಿಕಾ ಜ್ಯೋತಿಗುಡ್ಡೆ, ವಾಣಿ ಪೆರಿಯೋಡಿ, ಸಂತೋಷ್‌ ಶೆಟ್ಟಿ, ಪ್ರಭಾಕರ್‌ ಕಾಪಿಕಾಡ್‌ ಪ್ರಮುಖ ಭೂಮಿಕೆಗಳಲ್ಲಿದ್ದಾರೆ. 

ಮಣಿಕಾಂತ್‌ ಕದ್ರಿ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಪುತ್ತೂರಿನ ವಿಷ್ಣುಪ್ರಸಾದ್‌ ಛಾಯಾಗ್ರಹಣ ಮಾಡಿದ್ದಾರೆ. ಪ್ರಕಾಶ್‌ ಪಂಡಿತ್‌ ಸಂಕಲನ, ಜೇಮೀ ಡಿ’ಸಿಲ್ವ ಧ್ವನಿಗ್ರಹಣ, ಜೇಮೀ ಹಾಗೂ ಶಿಶಿರ ಕೆ.ವಿ. ಧ್ವನಿ ವಿನ್ಯಾಸ ಮತ್ತು ರಾಜೇಶ್‌ ಕುಡ್ಲ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ‘ಪಡ್ಡಾಯಿ’ ಸಿನೆಮಾವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ನ್ಯೂಯಾರ್ಕ್‌ ಭಾರತೀಯ ಚಲನಚಿತ್ರೋತ್ಸವ ಹಾಗೂ ಇನ್ನೋವೇಟಿವ್‌ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಮೇ ಕೊನೆಯ ವಾರ ಅಥವಾ ಜೂನ್‌ ಮೊದಲ ವಾರದಲ್ಲಿ ಕರಾವಳಿಯಲ್ಲಿ ತೆರೆ ಕಾಣಲಿದೆ.

ಕಡಲ ತೀರದಿಂದ ‘ಪಡ್ಡಾಯಿ’ಗೆ!
ತುಳುವಿನಲ್ಲಿ ‘ಪಡ್ಡಾಯಿ’ ಅಂದರೆ ಪಶ್ಚಿಮ ಎಂದರ್ಥ. ಕರಾವಳಿ ಭಾಗದಲ್ಲಿ ಮೀನುಗಾರರು, ಮೀನುಗಾರಿಕೆಗೆ ಹೋಗುವುದನ್ನು ‘ಪಡ್ಡಾಯಿ’ಗೆ ಹೋಗುವುದು ಎಂದೇ ಹೇಳುತ್ತಾರೆ. ಮಲ್ಪೆಯ ಪಡುಕರೆಯಲ್ಲಿ 19 ದಿನ ಶೂಟಿಂಗ್‌ ನಡೆಸಲಾಗಿತ್ತು. ಉಳಿದಂತೆ ಮಂಗಳೂರು ಹಾಗೂ ಉಡುಪಿಯಲ್ಲಿ ಚಿತ್ರೀಕರಣವಾಗಿದೆ. ಮೀನುಗಾರ ಕುಟುಂಬ ಮಾತನಾಡುವ ತುಳುವಿನ ಶೈಲಿ ಹಾಗೂ ಅವರ ಹಾವಭಾವದ ಅಧ್ಯಯನಕ್ಕಾಗಿ ಒಂದು ವಾರ ಈ ಸಿನೆಮಾದ ಎಲ್ಲ ಕಲಾವಿದರು ಮಲ್ಪೆಯ ಮೀನುಗಾರ ಕುಟುಂಬದ ಜತೆಗಿದ್ದರು. ತುಳುವಿನಲ್ಲಿ ಮೊದಲ ಬಾರಿಗೆ ಸಿಂಕ್‌ ಸೌಂಡ್‌ನ‌ಲ್ಲಿ ಈ ಸಿನೆಮಾ ಮಾಡಲಾಗಿದೆ. ಮೌಲ್ಯಯುತ ಹಾಗೂ ಸಾಮಾಜಿಕ ಕಳಕಳಿಯ ಸಿನೆಮಾ ಮಾಡಬೇಕೆಂಬ ತುಡಿತದೊಂದಿಗೆ ನಿರ್ಮಾಪಕರಾದ ಕಾರ್ಕಳದ ನಿತ್ಯಾನಂದ ಪೈ ಅವರು ಈ ಸಿನೆಮಾಕ್ಕೆ ಹೊಸ ಆಯಾಮ ಒದಗಿಸಿದ್ದಾರೆ. ಪ್ರಸ್ತುತ ಸಿನೆಮಾ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವುದು ಸಂಭ್ರಮ ತಂದಿದೆ’ ಎನ್ನುತ್ತಾರೆ ನಿರ್ದೇಶಕ ಅಭಯಸಿಂಹ. 

ಅಭಯಸಿಂಹ ಅವರ ಮೊದಲ ಚಿತ್ರ ‘ಗುಬ್ಬಚ್ಚಿಗಳು’ 2008ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದೆ. ಅವರ ಎರಡನೇ ಚಿತ್ರ ‘ಶಿಕಾರಿ’ (2012) ಮಲಯಾಳದ ಖ್ಯಾತ ನಟ ಮಮ್ಮುಟ್ಟಿ ಅವರನ್ನು ಕನ್ನಡಕ್ಕೆ ಕರೆತಂದು ಸುದ್ದಿ ಮಾಡಿತ್ತು. 3ನೇ ಚಿತ್ರ ಗಣೇಶ್‌ ಅಭಿನಯದ (2013) ಸಕ್ಕರೆ ಸಿನೆಮಾ. ನಾಲ್ಕನೆಯದ್ದಾಗಿ ತುಳುವಿನಲ್ಲಿ ಮೊದಲ ಬಾರಿಗೆ ‘ಪಡ್ಡಾಯಿ’ ನಿರ್ದೇಶಿಸಿದ್ದಾರೆ. 

Advertisement

ತುಳು ಸಿನೆಮಾ ಕ್ಷೇತ್ರಕ್ಕೆ ದೊರೆತ ಗೌರವ
ಅತ್ಯಂತ ಅಪೂರ್ವ ನೆಲೆಯಲ್ಲಿ ‘ಪಡ್ಡಾಯಿ’ ಮೂಡಿ ಬಂದಿದ್ದು, ಈಗ ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿರುವುದು ನಮಗೆಲ್ಲ ಖುಷಿ ತಂದಿದೆ. ಒಟ್ಟು ತಂಡದ ನಿರ್ವಹಣೆಯ ಮೂಲಕ ಗೆಲುವು ದೊರೆತಿದೆ. ಇದು ತುಳು ಸಿನೆಮಾ ಕ್ಷೇತ್ರಕ್ಕೆ ದೊರೆತ ಗೌರವವಾಗಿದೆ. 
– ನಿತ್ಯಾನಂದ ಪೈ, ‘ಪಡ್ಡಾಯಿ’ ನಿರ್ಮಾಪಕರು

Advertisement

Udayavani is now on Telegram. Click here to join our channel and stay updated with the latest news.

Next