ಮಂಗಳೂರು: ಹಿರಿಯ ಲೇಖಕ ತಮ್ಮ ಲಕ್ಷ್ಮಣ ಅವರು ಬರೆದ “ತುಳು ಬೆಳ್ಳಿತೆರೆಯ ಸುವರ್ಣ ಯಾನ’ ತುಳು ಚಿತ್ರರಂಗದ 50 ವರ್ಷಗಳ ಇತಿಹಾಸ ಗ್ರಂಥ ಕೃತಿ ಬಿಡುಗಡೆ ಸಮಾರಂಭ ದೃಶ್ಯಾಲಯ ಸಂಚಯನ ಸಮಿತಿ ಆಶ್ರಯದಲ್ಲಿ ಫೆ. 27ರಂದು ಸಂಜೆ 4.30ರಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಮ್ಮ ಲಕ್ಷ್ಮಣ್ ಅವರು, ಸಂಜೆ 5 ಗಂಟೆಗೆ ತುಳು ಚಿತ್ರಮಾಲಾ ಕಿರು ಸಾಕ್ಷ್ಯಚಿತ್ರ ಪ್ರದರ್ಶನ ಇದ್ದು, 6.15ಕ್ಕೆ ಕೃತಿ ಬಿಡುಗಡೆ ನಡೆಯಲಿದೆ. ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ| ಎಂ. ಮೋಹನ್ ಆಳ್ವ ನೆರವೇರಿಸಲಿದ್ದಾರೆ.
ಹಿರಿಯ ವಿದ್ವಾಂಸ ಪ್ರೊ| ಬಿ.ಎ. ವಿವೇಕ ರೈ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕರ್ಣಾಟಕ ಬ್ಯಾಂಕ್ ಮಂಗಳೂರು ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಶುಭಾಶಂಸನೆಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೇಯರ್ ಜಯಾನಂದ ಅಂಚನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಭಾಗವಹಿಸಲಿದ್ದಾರೆ. ಕಾಸರಗೋಡು ಚಿನ್ನ ಪ್ರಸ್ತಾವನೆಗೈಯಲಿದ್ದು, ಮನೋಹರ ಪ್ರಸಾದ್ ನಿರೂಪಿಸಲಿದ್ದಾರೆ.
ಟಿ.ಎ. ಶ್ರೀನಿವಾಸ್, ಸಂಜೀವ ದಂಡಕೇರಿ, ರಿಚರ್ಡ್ ಕ್ಯಾಸ್ಟಲಿನೋ, ರಾಮ್ ಶೆಟ್ಟಿ ಅವರನ್ನು ಗೌರವಿಸಲಾಗುವುದು ಎಂದರು. ರಾಜಶೇಖರ ಕೋಟ್ಯಾನ್ ಮಾತನಾಡಿ, ಸುಮಾರು 1 ಗಂಟೆ ಅವಧಿಯ ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದ್ದು, ತುಳು ಚಿತ್ರರಂದ 50 ವರ್ಷಗಳ ಸುದೀರ್ಘ ಪಯಣದ ಹಿನ್ನೋಟ ಇರಲಿದೆ. 2022ರ ಡಿಸೆಂಬರ್ ವರೆಗಿನ ಒಟ್ಟು 126 ತುಳು ಚಿತ್ರಗಳು ಈ ಕೃತಿಯಲ್ಲಿ ದಾಖಲಾಗಿದೆ. ಒಟ್ಟು 432 ಪುಟಗಳಿದ್ದು, ಇದೊಂದು ಅಧ್ಯಯನಕ್ಕೆ ಯೋಗ್ಯವಾಗುವ ಕೃತಿಯಾಗುವುದರಲ್ಲಿ ಸಂಶಯವಿಲ್ಲ ಎಂದರು. ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲು, ಯಶ್ರಾಜ್, ಸಚಿನ್ ಉಪ್ಪಿನಂಗಡಿ ಇದ್ದರು. ಇದೇ ವೇಳೆ ಗಣ್ಯರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.