Advertisement

ಬೀದಿಗೆ ಬಂತು ಬದುಕು

10:34 AM Aug 17, 2019 | Suhan S |

ಚಿಕ್ಕೋಡಿ: ಬೇಸಿಗೆಯಲ್ಲಿ ನೀರು ಇಲ್ಲದೇ ವನವಾಸ ಅನುಭವಿಸಿದೆವು. ಈಗ ನೀರಿನಲ್ಲಿ ಮುಳುಗಿ ಮನೀ, ಬೆಳಿ ಹಾಳಾಗಿ ಹೋಗಿವೆ. ಪ್ರವಾಹ ನಮ್ಮ ಮಗ್ಗಲು ಮುರಿದ ಮೇಲೆ ಈ ಭೂಮಿ ಮೇಲೆ ಇದ್ದರೇನು ಸತ್ತರೇನು, ಎಲ್ಲ ಬದುಕು ಕೃಷ್ಣಾ ನದಿಯಲ್ಲಿ ಹರಿದು ಹೋಗಿದೆ.

Advertisement

ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ ಗ್ರಾಮಗಳು ಪ್ರವಾಹಕ್ಕೆ ಸಿಕ್ಕು ನಲುಗಿ ಹೋಗಿದ್ದವು. ಈಗ ಪ್ರವಾಹ ಕಡಿಮೆಯಾದ ಮೇಲೆ ಗ್ರಾಮಸ್ಥರ ನೋವಿನ ನುಡಿಗಳಿವು. ಕಳೆದ 20 ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆ ಮತ್ತು ಕೊಯ್ನಾ ಹಾಗೂ ವಿವಿಧ ಜಲಾಶಯಗಳಿಂದ ಹರಿದು ಬಂದಿರುವ ಅಪಾರ ಪ್ರಮಾಣದ ನೀರಿನಿಂದ ಮಾಂಜರಿ, ಅಂಕಲಿ ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಕಳೆದುಕೊಂಡ ನಿರಾಶ್ರಿತರು ಮರಳಿ ಸ್ವಗ್ರಾಮಗಳಿಗೆ ತೆರಳಿ ಪ್ರವಾಹದಿಂದ ಉಂಟಾದ ಹಾನಿಯನ್ನು ನೋಡಿ ಅತೀ ನೋವಿನಲ್ಲಿದ್ದಾರೆ. ಅವರ ಮಾತುಗಳು ನಿಜಕ್ಕೂ ಹೃದಯ ತಟ್ಟುವಂತಿವೆ.

ಪ್ರತಿ ವರ್ಷ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಆಗುತ್ತದೆ. ಸ್ವಲ್ಪ ನದಿಗಳು ಅಪಾಯ ಮಟ್ಟ ಮೀರಿ ಹರಿದು ನಂತರ ಕಡಿಮೆ ಆಗುತ್ತದೆ ಅಂತ ಅಂದು ಕೊಂಡಿದ್ದೆವು. ಆದರೆ ನಮ್ಮ ಬದುಕಿಗೆ ದೇವರು ತುಂಬ ಮೋಸ ಮಾಡಿದ್ದಾನೆ. ಕಳೆದ 2005 ಮತ್ತು 2006ರಲ್ಲಿ ಇದೇ ರೀತಿ ನಮ್ಮ ಬದುಕು ಮೂರಾಬಟ್ಟೆಯಾಗಿತ್ತು. ಅಂದು ಹಾನಿಯಾಗಿದ್ದು ಇಂದಿನವರಿಗೂ ಮರೆಯಲಿಕ್ಕೆ ಆಗಿಲ್ಲ, ಆದರೆ ಈ ರೀತಿ ಪ್ರವಾಹ ಬಂದು ನಮ್ಮ ಹೊಟ್ಟೆ ಮೇಲೆ ಕಲ್ಲು ಹಾಕುತ್ತದೆ ಅಂತ ನಾವು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ ಎನ್ನುತ್ತಾರೆ ಸಂತ್ರಸ್ತ ಮಹಿಳೆಯೊಬ್ಬರು.

ಕೃಷ್ಣಾ ನದಿ ದಡದಲ್ಲಿರುವ ಮಾಂಜರಿ ಗ್ರಾಮವೇ ಭೀಕರ ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾಗಿತ್ತು. ಗ್ರಾಮದ ನೂರಾರು ಮನೆಗಳು ಧರೆಗೆ ಉರುಳಿವೆ. ಆರ್‌ಸಿಸಿ ಮನೆಗಳಲ್ಲೂ ನೀರು ಹೊಕ್ಕು ಮನೆ ತುಂಬ ಕೆಸರು, ರಾಡಿ ಆವರಿಸಿಕೊಂಡಿದೆ. ಮನೆಗಳಲ್ಲಿರುವ ದಿನಸಿ ವಸ್ತುಗಳು ನೀರಲ್ಲಿ ತೇಲಾಡುತ್ತಿವೆ. ಕಾಳು ಕಡಿಗಳು ಮೊಳಕೆ ಒಡೆದಿವೆ. ಬಟ್ಟೆ, ಬರೆಗಳು ಕೊಳೆತ ವಾಸನೆ ಬರುತ್ತಿವೆ. ಗ್ರಾಮದ ರಸ್ತೆಗಳೆಲ್ಲ, ಹಾಳಾಗಿವೆ. ಗಟಾರು ಕಿತ್ತು ಹೋಗಿವೆ. ಗ್ರಾಮದಲ್ಲೆಲ್ಲ ಸಹಿಸಲಾರದ ವಾಸನೆ. ಇಂತಹ ಪರಿಸ್ಥಿತಿಯಲ್ಲಿಯೂ ಸಂತ್ರಸ್ತರು ಮರಳಿ ಮನೆಗೆ ಹೋಗಿ ಮನೆಗಳನ್ನು ಸ್ವಚ್ಛ ಮಾಡುವಲ್ಲಿ ತಲ್ಲೀನರಾಗಿ ಮತ್ತೂಮ್ಮೆ ಹೊಸ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯ ಕಣ್ಣಿರು ತರಿಸುವಂತಿದೆ.

ಬೀಗರಿಂದ ಶುದ್ಧ ಕುಡಿಯುವ ನೀರು: ಗ್ರಾಮದ ಪಕ್ಕವೇ ಸಾಗರೋಪಾದಿಯಲ್ಲಿ ಕೃಷ್ಣಾ ನದಿ ನೀರು ಹರಿಯುತ್ತಿದ್ದರೂ ಅದು ಕುಡಿಯಲು ಅಯೋಗ್ಯವಾಗಿದೆ. ಹೀಗಾಗಿ ಪ್ರವಾಹದಿಂದ ಊರು ಬಿಟ್ಟ ಸಂತ್ರಸ್ತರು ಮರಳಿ ಮನೆಗೆ ಹೋಗಿ ಕುಡಿಯಲು ನೀರಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪರಿಹಾರ ಕೇಂದ್ರದಿಂದ ಮರಳಿ ಮನೆಗೆ ಹೋದವರ ಸಂತ್ರಸ್ತರ ಮನೆಗೆ ಬೀಗರು ಎರಡು ಅಥವಾ ಮೂರು ದಿನಗಳವರಿಗೆ ಸಾಕಾಗುವಷ್ಟು ಶುದ್ಧ ಕುಡಿಯುವ ನೀರು, ದಿನಸಿ ವಸ್ತುಗಳು ಹಾಗೂ ರೇಶನ್‌ ತಂದು ಕೊಡುತ್ತಿದ್ದಾರೆ.

Advertisement

ಮನೆಗಳಲ್ಲಿ ಹೋಗಲು ಭಯ: ಕಂಡರಿಯದ ಭೀಕರ ಪ್ರವಾಹದಿಂದ ಈ ಮಟ್ಟದ ಪ್ರಹಾರವಾಗುತ್ತಿದೆಯೆಂದು ನಮಗೆ ಲೆಕ್ಕವೇ ಸಿಗಲಿಲ್ಲ, ಹೀಗಾಗಿ ನದಿ ನೀರು ಮನೆ ಬಾಗಿಲು ಬಡಿಯುವ ವೇಳೆಯಲ್ಲಿ ರಾತ್ರೋರಾತ್ರಿ ಮನೆ ಬಿಟ್ಟು ಹೋಗಿದ್ದೆವು. ಈಗ ಮನೆಗೆ ಬಂದಿದ್ದೇವೆ. ಆದರೆ ಮನೆಯಲ್ಲಿ ಹೋಗಲು ಭಯವಾಗುತ್ತಿದೆ. ಒಂದು ವಾರದಿಂದ ಮನೆ ನೀರಿನಲ್ಲಿ ನಿಂತುಕೊಂಡಿದೆ. ಹೀಗಾಗಿ ಹಾವು, ಚೇಳು, ಝರಿ ಹೀಗೆ ವಿಷಕಾರಿ ಕೀಟಗಳು ಮನೆಯೊಳಗೆ ಇರಬಹುದು ಹೀಗಾಗಿ ಮನೆಯೊಳಗೆ ಹೋಗಲು ತುಂಬ ಭಯವಾಗುತ್ತಿದೆಯೆಂದು ಮಾಂಜರಿ ಗ್ರಾಮದ ವಿಜಯ ಬಾಬರ ಹೇಳುತ್ತಾರೆ.

ಸ್ವಚ್ಛತೆ ಕಾರ್ಯ ಜೋರು: ಹಿರಿಹೊಳೆ ಪ್ರವಾಹಕ್ಕೆ ಸಿಕ್ಕು ನಲುಗಿ ಹೋಗಿರುವ ಕೃಷ್ಣಾ ನದಿ ತೀರದ ಮಾಂಜರಿ ಮತ್ತು ಅಂಕಲಿ ಗ್ರಾಮದ ಜನರು ಈಗ ಮನೆಗೆ ತೆರಳಿ ಸ್ವಚ್ಛತೆ ನಡೆಸಿದ್ದಾರೆ. ಗ್ರಾಮದ ಕೆಲ ಕಡೆಗಳಲ್ಲಿ ನೀರು ಹರಿಯುತ್ತಿದೆ. ನೀರು ಇದ್ದ ಕಡೆಗೆ ಹೋಗಿ ಭಾಂಡೆ, ಬಟ್ಟೆ, ಹಾಸಿಗೆ ತೊಳೆಯುವ ಕಾರ್ಯ ಭರದಿಂದ ನಡೆದಿದೆ.

ಸ್ವಗ್ರಾಮಕ್ಕೆ ಮರಳುತ್ತಿರುವ ಗ್ರಾಮಸ್ಥರು:

ಮನೆಗಳಲ್ಲಿರುವ ದಿನಸಿ ವಸ್ತುಗಳು ನೀರಲ್ಲಿ ತೇಲಾಡುತ್ತಿವೆ. ಕಾಳು ಕಡಿಗಳು ಮೊಳಕೆ ಒಡೆದಿವೆ. ಬಟ್ಟೆ, ಬರೆಗಳು ಕೊಳೆತ ವಾಸನೆ ಬರುತ್ತಿವೆ. ಗ್ರಾಮದ ರಸ್ತೆಗಳೆಲ್ಲ, ಹಾಳಾಗಿವೆ. ಗಟಾರು ಕಿತ್ತು ಹೋಗಿವೆ.

ಬೇಸಿಗೆಯಲ್ಲಿ ಕುಡಿಯಲು ನೀರು ಸಿಗಲಿಲ್ಲ, ಈಗ ಅದೇ ನೀರಿನಿಂದ ನಮ್ಮ ಬದುಕು ಕೊಚ್ಚಿಕೊಂಡು ಹೋಗಿದೆ. ಕೊಯ್ನಾ ಮತ್ತು ಆಲಮಟ್ಟಿ ಡ್ಯಾಂದಿಂದ ನಮಗೆ ಯಾವುದೇ ಪ್ರಯೋಜನವಿಲ್ಲ, ಬೇಸಿಗೆಯಲ್ಲಿ ನೀರು ಇದ್ದರೂ ಕೊಯ್ನಾದಿಂದ ನೀರು ಬರಲಿಲ್ಲ, ಈಗ ಆಲಮಟ್ಟಿ ಡ್ಯಾಂದಿಂದ ನೀರು ತಡೆಹಿಡಿದಿದ್ದು ಮತ್ತು ಕೊಯ್ನಾದಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ನಮಗೆ ಇಷ್ಟೊಂದು ಪ್ರಮಾಣದ ಹಾನಿಯಾಗಿದೆ.• ಕುಮಾರ ಬಾಬರ, ಮಾಂಜರಿ ಗ್ರಾಮದ ನಿರಾಶ್ರಿತ

 

•ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next