Advertisement

ಟೋಲ್‌ ಬದಲು ಟ್ರೋಲ್‌ ರಾಜಕೀಯ

09:54 AM Apr 05, 2019 | keerthan |

ಕುಂದಾಪುರ: ಎರಡು ಜಿಲ್ಲೆಗಳಲ್ಲಿ ವಾಹನ ಸವಾರರ ಪಾಲಿಗೆ ಸಮಸ್ಯೆಯಾಗಿರುವ ಟೋಲ್‌ ಗೇಟ್‌ ಕುರಿತು ಯಾರೊಬ್ಬರೂ ಮಾತನಾಡುತ್ತಿಲ್ಲ. ಆದರೆ ಅಭ್ಯರ್ಥಿಗಳು ಮಾತಾಡಿದ್ದೆಲ್ಲ ಟ್ರೋಲ್‌ ಆಗುತ್ತಿದೆ!

Advertisement

ಅಭ್ಯರ್ಥಿಗಳಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಮಿಥುನ್‌ ರೈ ಅತಿಹೆಚ್ಚು ಟ್ರೋಲ್‌ಗೆ ಒಳಗಾದವರು. ಪ್ರಮೋದ್‌ ಈ ಪ್ರಮಾಣದ ಟ್ರೋಲ್‌ಗೆ ಸಿಲುಕಿಕೊಳ್ಳಲಿಲ್ಲ. “ನಿಖೀಲ್‌ ಎಲ್ಲಿದ್ದಿಯಪ್ಪಾ?’ ಕರಾವಳಿಯಲ್ಲಿ ಸಂಚಲನ ಮೂಡಿಸಿದ ಟ್ರೋಲ್‌. ಈ ಮಾತಿಗೆ ತುಳು ಚಲನಚಿತ್ರ ನಟರ ಚಿತ್ರಗಳನ್ನು, ಚಲನಚಿತ್ರಗಳ ತುಣುಕುಗಳನ್ನು ಸೇರಿಸಿ ಟ್ರೋಲ್‌ ಮಾಡಲಾಗಿತ್ತು. ನಾಟಕ, ಯಕ್ಷಗಾನದಲ್ಲೂ ಪ್ರಚಾರ ಆಯಿತು.

ಫ್ಲೈಓವರ್‌ ತಮಾಷೆ
ಇದರೊಂದಿಗೆ ಪಂಪ್‌ವೆಲ್‌ ಫ್ಲೈಓವರ್‌ನ ಅರೆ ಕಾಮಗಾರಿಯ ಚಿತ್ರಗಳನ್ನು ನಳಿನ್‌ ಜತೆ, ಕುಂದಾಪುರ ಫ್ಲೈ ಓವರ್‌ನ ಅರೆ ಕಾಮಗಾರಿಯ ಚಿತ್ರಗಳನ್ನು ಶೋಭಾ ಜತೆ ಹಾಕಿ ಟ್ರೋಲ್‌ ಮಾಡಲಾಗಿದೆ. ಸಂಸದರ ವಿರುದ್ಧ ಟ್ರೋಲ್‌ ಬಂದಾಗ ಅದಕ್ಕೆ ಉತ್ತರವಾಗಿ ಅವರ ಬೆಂಬಲಿಗರು ಒಂದೊಂದೇ ತುಣುಕುಗಳನ್ನು ಹರಡಿಸಿದರು.

“ತದನಂತರ’ ವೈರಲ್‌
ಮಿಥುನ್‌ ರೈ ಅವರ ಭಾಷಣದ ತುಣುಕುಗಳು ಸಾಕಷ್ಟು ಟ್ರೋಲ್‌ ಆಯಿತು. ಬಿಜೆಪಿಯವರಿಗೆ ಇದೇ ಪ್ರಚಾರದ ಅಸ್ತ್ರವಾಯಿತು. ತದನಂತರ, ಮಗದೊಮ್ಮೆ, ಎಂಕೋಸ್ಕರ (ನನಗೋಸ್ಕರ) ಎನ್ನುವ ಶಬ್ದಗಳನ್ನು ಬಳಸಿ ಭಾಷಣ ಮಾಡಿದ ಮಿಥುನ್‌ ಮಾತುಗಳನ್ನು ಬಿಜೆಪಿಯು ಮೋದಿ ಮೋದಿ ಘೋಷಣೆಗೆ (ತದನಂತರ ಮೋದಿ, ಮಗದೊಮ್ಮೆ ಮೋದಿ) ಬಳಸಿಕೊಂಡದ್ದು ತೀರಾ ಈಚಿನ ಬೆಳವಣಿಗೆ. ವಿಜಯ ಬ್ಯಾಂಕನ್ನು ನಳಿನ್‌ ಗುಜರಾತ್‌ಗೆ ಮಾರಿದರು, ಮಂಗಳೂರು ವಿಮಾನ ನಿಲ್ದಾಣವನ್ನು ನಳಿನ್‌ ಅದಾನಿಗೆ ಮಾರಿದರು ಎಂದು ಕಾಂಗ್ರೆಸ್‌ ಅಭಿಮಾನಿಗಳು ಚಿತ್ರಗಳನ್ನು ಬಳಸಿ ಟ್ರೋಲ್‌ ಮಾಡಿದ್ದಾರೆ.

ಟ್ರೋಲ್‌ ಮಧ್ಯೆ ಮರೆತ ಟೋಲ್‌
ಬಿ.ಸಿ.ರೋಡ್‌, ತಲಪಾಡಿ, ಸುರತ್ಕಲ್‌, ಹೆಜಮಾಡಿ, ಸಾಸ್ತಾನ ಟೋಲ್‌ ಗೇಟ್‌ ಕುರಿತು ಅದೆಷ್ಟೋ ಪ್ರತಿಭಟನೆಗಳು ನಡೆದಿವೆ. ಸ್ಥಳೀಯರು ಈ ಟೋಲ್‌ನಿಂದ ಅನುಭವಿಸಿದಷ್ಟು ಸಮಸ್ಯೆ ಯಾರೂ ಅನುಭವಿಸಿರಲಿಕ್ಕಿಲ್ಲ. ಈ ಟೋಲ್‌ ಇಂದು ಮುಚ್ಚುತ್ತದೆ, ನಾಳೆ ಮುಚ್ಚುತ್ತದೆ ಎಂದು ಅಧಿಕಾರದಲ್ಲಿದ್ದವರು ಭರವಸೆ ಕೊಟ್ಟಿದ್ದರು. ಸ್ಥಳೀಯರಿಗೆ ಟೋಲ್‌ ರದ್ದಾಗುತ್ತದೆ ಎಂದು ಮೆಚ್ಚಿಸಿದ್ದರು. ಆದರೆ ಯಾವುದೂ ಆಗಿಲ್ಲ. ಟೋಲ್‌ ಸುಂಕ ನಿರಂತರವಾಗಿದೆ. ಲಕ್ಷಾಂತರ ರೂ. ತೆರಿಗೆ ನೀಡಿ ವಾಹನ ಖರೀದಿಸಿದವರು ಅರೆಬರೆ ಕಾಮಗಾರಿಯ, ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಿ ವೇಗನಿಯಂತ್ರಣಗೊಳಿಸಿದ ರಸ್ತೆಯಲ್ಲಿ ಸಾಗಲು ಹಣ ಕಟ್ಟಬೇಕಾದ ಸ್ಥಿತಿ ಇದೆ. ವರ್ಷವೂ ಟೋಲ್‌ ದರ ಹೆಚ್ಚಾಗುತ್ತಲೇ ಇದೆ.

Advertisement

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next