Advertisement

ಅನಿತಾ ವಿರುದ್ಧ ಟ್ರೋಲ್‌: ದಳ ಗರಂ

11:58 AM May 16, 2019 | Team Udayavani |

ರಾಮನಗರ: ಶಾಸಕಿ ಅನಿತಾ ಎಲ್ಲಿದ್ದೀರಾ? ಅನಿತಕ್ಕ ಎಲ್ಲಿದ್ಯಕ್ಕಾ ಟ್ರೋಲ್ಗೆ ಜೆಡಿಎಸ್‌ ಕಿಡಿಕಾರಿದೆ. ಟ್ರೋಲ್ಗೆ ಕಾರಣ ಬಿಜೆಪಿ ಮುಖಂಡರು, ಅವರಿಂದ ನಾವು ಬುದ್ಧಿ ಹೇಳಿಸಿಕೊಳ್ಳಬೇಕಿಲ್ಲ ಎಂದು ಮುಖಂಡರು ಹರಿಹಾಯ್ದಿದ್ದಾರೆ.

Advertisement

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಜಶೇಖರ್‌, ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಕ್ಷೇತ್ರದ ಬಗ್ಗೆ ಕಾಳಜಿ ಇದೆ. ನೀರಿನ ಸಮಸ್ಯೆ ಬಗ್ಗೆಯೂ ಅರಿವಿದೆ. ಕ್ಷೇತ್ರಕ್ಕೆ ಬರದಿದ್ದರು ಅಧಿಕಾರಿಗಳ ಜೊತೆ ನಿರಂತರ ಮೌಖೀಕವಾಗಿ ಸಂಪರ್ಕದಲ್ಲಿದ್ದಾರೆ. ವಸ್ತುಸ್ಥಿತಿ ತಿಳಿದುಕೊಳ್ಳದೆ ಕೇವಲ ಪ್ರಚಾರದ ಗೀಳಿಗಾಗಿ ಶಾಸಕರ ವಿರುದ್ಧ ಅಪಪ್ರಚಾರ ಮಾಡಿದರೆ ತಮ್ಮ ಪಕ್ಷದ ಕಾರ್ಯಕರ್ತರು ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.

ಪರಿಣಾಮ: ಕ್ಷೇತ್ರ ಬೇಕು, ಬೇಡಿಕೆಗಳ ಬಗ್ಗೆ, ಅಭಿವೃದ್ಧಿ ಏನಾಗಬೇಕು, ಕ್ಷೇತ್ರಕ್ಕೆ ಯಾವಾಗ ಬರಬೇಕು ಎಂಬುದು ಶಾಸಕಿ ಅನಿತಾ ಅವರಿಗೆ ತಿಳಿದಿದೆ. ಅದನ್ನು ಬಿಜೆಪಿಯವರಿಂದ ಕೇಳಿ ತಿಳಿದುಕೊಳ್ಳಬೇಕಾಗಿಲ್ಲ. ಅನಿತಾರವರ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ರಾಮನಗರದಲ್ಲಿ ನೀರು ಸರಬರಾಜಿನಲ್ಲಿ ಮೇ ತಿಂಗಳಲ್ಲಿ ವ್ಯತ್ಯಯವಾಗಿದೆ. ವಿದ್ಯುತ್‌ ಕಂಬಗಳನ್ನು ಬದಲಾಯಿಸುತ್ತಿದ್ದರಿಂದ ಕೊಂಚ ಸಮಸ್ಯೆ ಉಂಟಾಗಿತ್ತು. ಆದರೆ, ಈಗ ಸರಿಹೋಗಿದೆ. ಸಮಸ್ಯೆಗಳ ಬಗ್ಗೆ ಶಾಸಕರು ಅಧಿಕಾರಿಗಳಿಗೆ ಅಗತ್ಯ ಸೂಚನೆ, ಸಲಹೆಗಳನ್ನು ಕೊಡುತ್ತಿದ್ದಾರೆ ಎಂದರು.

ಲೇಡಿ ಸಿಎಂ: ನೀರಿನ ಸಮಸ್ಯೆ ಇದ್ದರೆ ಜಲಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಲಿ, ಅದು ಬಿಟ್ಟು, ಶಾಸಕರನ್ನು ಗುರಿಯಾಗಿಸುವುದು ಸರಿಯಲ್ಲ. ಅನಿತಾ ಕುಮಾರಸ್ವಾಮಿ ಅವರನ್ನು ‘ಲೇಡಿ ಸಿಎಂ’ ಎಂದು ಅಧಿಕಾರಿಗಳೇ ಕರೆಯುತ್ತಿದ್ದಾರೆ. ರಾಮಗನರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮಂಚನಬೆಲೆ ನೀರಿನ ಶುದ್ಧೀಕರಣಕ್ಕೆ 3.5 ಕೋಟಿ ರೂ. ಮಂಜೂರಾಗಿದ್ದು, ಕೆಲವೆ ದಿನಗಳಲ್ಲಿ ಟೆಂಡರ್‌ ಕರೆಯಲಾಗುತ್ತದೆ ಎಂದು ತಿಳಿಸಿದರು.

Advertisement

ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಶಾಸಕರ ಕಚೇರಿಗೆ ಅನಿತಾರವರು ಭೇಟಿ ನೀಡುತ್ತಿಲ್ಲ. ಕಚೇರಿಯಲ್ಲಿಯೇ ಕುಳಿತು ಅನಿತಾಕುಮಾರಸ್ವಾಮಿ ಅವರು ಜನರ ಕಷ್ಟಸುಖಗಳನ್ನು ಆಲಿಸಲಿದ್ದಾರೆ ಎಂದು ರಾಜಶೇಖರ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡರಾದ ಪಾಪಣ್ಣ, ರಕ್ಷಿತ್‌ ದೇವೇಗೌಡ ಇದ್ದರು.

‘ಅನಿತಾ ಮೇಡಂ, ಎಲ್ಲಿದ್ದೀರಾ ‘

ರಾಮನಗರ: ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಗೆದ್ದ ನಂತರ ಒಂದಿಷ್ಟು ಖಾಸಗಿ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಅವರು ನಂತರ ಬಂದಿದ್ದು ಲೋಕಸಭಾ ಚುನಾವಣಾ ಪ್ರಚಾರಕ್ಕೆ.

ಕ್ಷೇತ್ರದಲ್ಲಿ ಹಲವಾರು ಸಮಸ್ಯೆ ಕಾಡುತ್ತಿದ್ದು, ಅವರು ಈ ಕಡೆ ಮುಖ ಮಾಡುತ್ತಿಲ್ಲ ಎಂದು ರಾಮನಗರ ಕ್ಷೇತ್ರದ ಜನತೆ ಆರೋಪಿಸಿ ‘ಅನಿತಕ್ಕ ಎಲ್ಲಿದ್ಯಕ್ಕ’ ‘ಅನಿತಾ ಮೇಡಂ, ಎಲ್ಲಿದ್ದೀರಾ’ ಎಂಬ ಟ್ರೋಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇಷ್ಟು ದಿನ ನಿಖೀಲ್ ಎಲ್ಲಿದ್ದೀಯಪ್ಪಾ ಎಂಬ ಟ್ರೋಲ್ ಸಾಮಾನ್ಯವಾಗಿ ಹರಿದಾಡುತ್ತಿತ್ತು. ಇದೀಗ ರಾಮನಗರ ದಲ್ಲಿ ಅನಿತಾ ಮೇಡಂ ಎಲ್ಲಿದ್ದೀರಾ, ಅನಿತಕ್ಕಾ ಎಲ್ಲಿದ್ಯಾಕ್ಕ ಟ್ರೋಲ್ ಆರಂಭವಾಗಿದೆ.

ಟ್ರೋಲಲ್ಲೇನಿದೆ: ಅನಿತಕ್ಕೆ ಎಲ್ಲಿದ್ಯಕ್ಕ? ಟ್ರೋಲ್ನಲ್ಲಿ ರುದ್ರಣ್ಣ ಮತ್ತು ವಿನೋದ್‌ ಎಂಬ ಇಬ್ಬರು ವ್ಯಕ್ತಿಗಳು ರಾಮನಗರದ ನೀರಿನ ಪರಿಸ್ಥಿತಿಯ ಬಗ್ಗೆ ಮಾತನಾಡಿ ದ್ದಾರೆ. ಮೂರ್‍ನಾಲ್ಕು ದಿನಕ್ಕೆ ಬಿಡುತ್ತಿದ್ದ ಮೋರಿ ನೀರು ಈಗ 15 ದಿನ ಆದ್ರೂ ಬಿಡ್ತಿಲ್ಲ ಎಂದು ಲೇವಡಿಯಾಡಿ ದ್ದಾರೆ. ಅನಿತಕ್ಕ ಎಲ್ಲಿದ್ದೀರ? ಎಂದು ಪ್ರಶ್ನಿಸುವ ಈ ಸಂಭಾಷಣೆ ಇರುವ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ಕಾಣಿಸಿಕೊಂಡಿದ್ದೇ ತಡ, ಅದನ್ನು ಜನ ಶೇರ್‌, ಕಾಮೆಂಟ್ ಮಾಡಲಾರಂಭಿ ಸಿದ್ದಾರೆ. 15ದಿನ ಬರದಿದ್ದರೂ ಕೇಳ್ಳೋ ಹಾಗಿಲ್ಲ ಅನಿತಕ್ಕಾ ಎಲ್ಲಿದ್ಯಕ್ಕಾ ? ಎಂಬ ಪ್ರಶ್ನೆ ವಿಡಿಯೋದಲ್ಲಿದೆ.

ಶಾಸಕರಾಗಿ ಗೆದ್ದ ನಂತರ ಖಾಸಗಿ ಕಾರ್ಯಕ್ರಮಗಳು, ಗುದ್ದಲಿ ಪೂಜೆ ಕಾರ್ಯಕ್ರಮಗಳಿಗೆ ಬರುತ್ತಿದ್ದು, ಲೋಕಸಭಾ ಚುನಾವಣೆ ಆರಂಭವಾದ ನಂತರ ಜನರ ಸಮಸ್ಯೆ ಕೇಳಲು ಬರಲೇ ಇಲ್ಲ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರ ತಾಳಿದರು ನಾಗರಿಕರು ಯಾರನ್ನು ಪ್ರಶ್ನಿಸುವಂತಿಲ್ಲ ಎಂದು ಹರಿಹಾಯ್ದಿದ್ದಾರೆ.

ಈ ಕ್ಷೇತ್ರದಿಂದ ಶಾಸಕರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಕೂಡ ಬರುತ್ತಿರಲಿಲ್ಲ. ಅನಿತಾರವರೂ ಇದೇ ಜಾಡು ಹಿಡಿದಿದ್ದಾರೆ ಎಂದು ನಾಗರಿಕರು ದೋಷಿಸಿದ್ದಾರೆ.

ಅಪಪ್ರಚಾರದ ವಿರುದ್ಧ ಅಗತ್ಯ ಕ್ರಮ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾಕುಮಾರಸ್ವಾಮಿ ಅವರು ಬೆಂಗಳೂರಿನಿಂದ ಮೈಸೂರಿಗೆ ತೆರಳುವಾಗ ಇಲ್ಲಿನ ಸಮಸ್ಯೆಗಳ ಬಗ್ಗೆ ವಿಚಾರಿಸಿಯೇ ತೆರಳುತ್ತಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಜಶೇಖರ್‌ ಎಚ್ಚರಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next