Advertisement

ಕುತೂಹಲದಲ್ಲಿದೆ ತ್ರಿಶ್ಶೂರ್‌

11:01 PM Apr 22, 2019 | Team Udayavani |

ಕೇರಳ ಈ ಬಾರಿ ಸಾಕಷ್ಟು ಸದ್ದು ಮಾಡುತ್ತಿದೆ. ವಯನಾಡಿನಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸಿರುವುದು ಹಾಗೂ ಶಬರಿಮಲೆ ವಿವಾದ, ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ಹಲವು ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ವ್ಯೂಹಾತ್ಮಕ ತಂತ್ರ ರೂಪಿಸಿರುವುದು ಈ ಬಾರಿಯ ವಿಶೇಷ ವಾಗಿದೆ. ಈ ಪೈಕಿ ತ್ರಿಶ್ಶೂರ್‌ ಲೋಕಸಭಾ ಕ್ಷೇತ್ರ ಕೂಡ ಒಂದಾ ಗಿದೆ. ಸಿಪಿಐನಿಂದ ರಾಜಾಜಿ ಮೆಥ್ಯೂ ಥಾಮಸ್‌, ಕಾಂಗ್ರೆಸ್‌ನಿಂದ ಟಿ.ಎನ್‌. ಪ್ರತಾಪ್‌ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಮಲೆಯಾಳಂ ಖ್ಯಾತ ನಟ ಸುರೇಶ್‌ ಗೋಪಿ ಅಖಾಡದಲ್ಲಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಆದರೆ, ಬಿಜೆಪಿ ಹಾಗೂ ಸಿಪಿಐ ನಡುವೆ ನೇರ ಹಣಾಹಣಿ ಇರುವುದು ಕಂಡು ಬರುತ್ತಿದೆ.

Advertisement

ಸಿಪಿಐ ಪ್ಲಸ್‌ಪಾಯಿಂಟ್‌: ತ್ರಿಶ್ಶೂರ್‌ ಮೊದಲಿನಿಂದಲೂ ಎಡರಂಗದ ಹಿಡಿತದಲ್ಲಿದೆ. ಒಮ್ಮೆ ಮಾತ್ರ ಕಾಂಗ್ರೆಸ್‌ ಗೆದ್ದಿದೆ. ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಸಿಪಿಐ ಕ್ರಿಶ್ಚಿಯನ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸುವ ಕ್ರೈಸ್ತ ಮತಗಳ ಮೇಲೆ ಕಣ್ಣಿಟ್ಟು ರಾಜಾಜಿ ಮೆಥ್ಯೂ ಥಾಮಸ್‌ ಅವರನ್ನು ಅಖಾಡಕ್ಕಿಳಿಸಿದೆ. ತ್ರಿಶ್ಶೂರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಸಿಪಿಐ ನೇತೃತ್ವದ ಎಲ್‌ಡಿಎಫ್ ಶಾಸಕರಿದ್ದು, ಬಿಗಿ ಹಿಡಿತ ಹೊಂದಿದೆ. ರಾಜ್ಯದಲ್ಲಿ ತಮ್ಮದೇ ಆದ ಸರ್ಕಾರವಿರುವುದರಿಂದ ಕಾರ್ಯಕರ್ತರು ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿ ಪ್ಲಸ್‌ ಪಾಯಿಂಟ್‌: ಹಾಲಿ ರಾಜ್ಯಸಭಾ ಸದಸ್ಯ, ಮಲಯಾಳಂ ಖ್ಯಾತ ನಟ ಸುರೇಶ್‌ ಗೋಪಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ತಾರಾ ವರ್ಚಸ್ಸು ಹೊಂದಿರುವ ಅವರು ಮತದಾರರಿಗೆ ಚಿರಪರಿಚಿತರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಒಂದು ಲಕ್ಷ ಮತಗಳನ್ನು ಪಡೆದಿದ್ದ ಬಿಜೆಪಿ ಇದೀಗ ಸಂಘಟನೆಯಲ್ಲಿ ಚುರುಕಾಗಿದೆ. ಕ್ಷೇತ್ರದಲ್ಲಿ ಶೇ.58 ಹಿಂದು ಮತಗಳು ಇದ್ದು, ಶಬರಿಮಲೆ ದೇವಸ್ಥಾನ ವಿವಾದ, ಭಾವನಾತ್ಮಕ ವಿಷಯಗಳು ಈ ಬಾರಿ ಹಿಂದು ಮತಗಳು ಬಿಜೆಪಿ ಕೈಹಿಡಿಯುವ ಸಾಧ್ಯತೆ ಇದೆ. ಸಂಪ್ರದಾಯಿಕ ನಾಯರ್‌ ಮತಗಳು ಪಕ್ಷದ ಪಾಲಾಗುವ ಸಾಧ್ಯತೆ ಇದೆ. ಜೊತೆಗೆ ಮೋದಿ ಅಲೆ ಕೂಡ ಇದೆ. ಉಜ್ವಲ ಯೋಜನೆಯಡಿ ಪ್ರತಿ ಮನೆಗೂ ಗ್ಯಾಸ್‌ ಸಂಪರ್ಕ ಹಾಗೂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂ. ಪ್ರೋತ್ಸಾಹಧನ ಸೇರಿದಂತೆ ಮೋದಿ ನಾಮಬಲದೊಂದಿಗೆ ಸುರೇಶ್‌ ಗೋಪಿ ಮತಬೇಟೆಗೆ ಇಳಿದಿದ್ದಾರೆ.

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಶೇ.58 ಹಿಂದು ಮತಗಳು ಇವೆ. ಕ್ರಿಶ್ಚಿಯನ್‌-ಶೇ.24 ಹಾಗೂ ಮುಸ್ಲಿಂ-ಶೇ.17 ಮತಗಳು ಇವೆ. ಶಬರಿಮಲೆ ದೇವಸ್ಥಾನ ವಿವಾದಿಂದ ಬಿಜೆಪಿಗೆ ಹಿಂದು ಮತಗಳು ಕ್ರೋಢೀಕರಣವಾಗುವ ಸಂಭವ ಇದೆ. ಕ್ರಿಶ್ಚಿಯನ್‌ ಮತಗಳು ಬಹುತೇಕವಾಗಿ ಸಿಪಿಐ ಪಾಲಾಗಲಿವೆ. ಇನ್ನು ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್‌, ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಕಸರತ್ತು ನಡೆಸುತ್ತಿದೆ.

2014ರ ಫ‌ಲಿತಾಂಶ
ಜಯದೇವನ್‌ (ಸಿಪಿಎಂ) 3,89,209
ಧನಪಾಲನ್‌(ಕಾಂಗ್ರೆಸ್‌) 3,50,982

Advertisement
Advertisement

Udayavani is now on Telegram. Click here to join our channel and stay updated with the latest news.

Next