Advertisement

ಬಾಳುಗೋಡು: ಗಾಯಾಳು ಕಾಡಾನೆಗೆ ಚಿಕಿತ್ಸೆ

09:07 AM May 11, 2019 | mahesh |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಅರಣ್ಯ ವಿಭಾಗದ ಬಾಳುಗೋಡು ಮೀಸಲು ಅರಣ್ಯದಲ್ಲಿ ಬುಧವಾರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಕಾಡಾನೆಗೆ ಮೂರನೇ ದಿನ ಶುಕ್ರವಾರ ಚಿಕಿತ್ಸೆ ನೀಡಲಾಗಿದೆ. ನಾಗರಹೊಳೆ ರಾಜೀವ ಗಾಂಧಿ ರಾಷ್ಟ್ರೀಯ ಅಭಯಾರಣ್ಯ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜೀಬ್‌ ನೇತೃತ್ವದಲ್ಲಿ ಸ್ಥಳಿಯ ಪಶುವೈದ್ಯರ ಸಹಕಾರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

Advertisement

ಸಮತಟ್ಟು ಜಾಗಕ್ಕೆ ತರಲು ಸಾಹಸ
ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡು ಸುತ್ತಾಡುತ್ತಿದ್ದ ಆನೆ ಯನ್ನು ಸಮತಟ್ಟಾದ ಸ್ಥಳಕ್ಕೆ ತರುವಲ್ಲಿ ಅರಣ್ಯಾಧಿಕಾರಿಗಳ ಪ್ರಯತ್ನ ಶುಕ್ರವಾರ ಫಲ ನೀಡಿತು. ಸುಳ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟ್ರಿನ್‌ ಪಿ. ಸೋನ್ಸ್‌ ಮಾರ್ಗದರ್ಶನದಲ್ಲಿ ಸುಬ್ರ ಹ್ಮಣ್ಯ ವಲಯಾರಣ್ಯಧಿಕಾರಿ ತ್ಯಾಗರಾಜ್‌ ಮತ್ತು ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್‌ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು, ಸಿಬಂದಿ ಹಾಗೂ ಊರವರ ಸಹಕಾರದಿಂದ ಆನೆಯನ್ನು ಪೊದೆಯ ಭಾಗದಿಂದ ಸಮತಟ್ಟಾದ ಸ್ಥಳಕ್ಕೆ ತರಲಾಯಿತು.

ಗಣಪತಿ ದೇವರಿಗೆ ಪೂಜೆ
ಗಾಯಗೊಂಡ ಆನೆಗೆ ಚಿಕಿತ್ಸೆ ಕಾರ್ಯಚರಣೆ ಯಶಸ್ವಿಯಾಗಿದೆ. ದಟ್ಟ ಕಾಡು ಪ್ರದೇಶದಲ್ಲಿ ಆನೆಯನ್ನು ಸುರಕ್ಷಿತ ಸ್ಥಳಕ್ಕೆ ತಂದು ಚಿಕಿತ್ಸೆ ನೀಡುವುದು ದೊಡ್ಡ ಸವಾಲಾಗಿತ್ತು. ತುಸು ಎಚ್ಚರ ತಪ್ಪಿದರೂ ಆನೆಯ ದೇಹಕ್ಕೆ ಗಾಯವಾಗುವ ಸಾಧ್ಯತೆಗಳಿತ್ತು. ಕಾರ್ಯಾಚರಣೆಗೂ ಮೊದಲು ಸುಬ್ರಹ್ಮಣ್ಯ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ್ದೆವು. ದೇವರ ಆಶೀರ್ವಾದ, ವೈದ್ಯರ ಚಿಕಿತ್ಸಾ ವಿಧಾನ, ಸಿಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಚಿಕಿತ್ಸೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಒಂದು ವಾರ ಕಾಲ ಆನೆಯ ಆರೋಗ್ಯ ಸ್ಥಿತಿ ಹಾಗೂ ಚಲನವಲನಗಳ ಮೇಲೆ ಸಿಬಂದಿ ನಿಗಾ ಇರಿಸುತ್ತಾರೆ ಎಂದು ಕಾರ್ಯಾಚರಣೆ ಬಳಿಕ ಎಸಿಎಫ್ ಆಸ್ಟ್ರಿನ್‌ ಪಿ. ಸೋನ್ಸ್‌ ಪ್ರತಿಕ್ರಿಯಿಸಿದರು.

ಆನೆಗಳ ಕಾದಾಟದಲ್ಲಿ ಗಾಯ
ಆನೆ ಮುಂಗಾಲಿಗೆ ಆಳವಾದ ಗಾಯವಾಗಿದ್ದು, ಅದರಲ್ಲಿ ಕೀವು ಉಂಟಾಗಿದೆ. ಆನೆಗಳು ಪರಸ್ಪರ ಜಗಳವಾಡುವ ಸಂದರ್ಭದಲ್ಲಿ ಎದುರಾಳಿ ಆನೆಯು ದಂತದ ತಿವಿತದಿಂದ ಗಾಯಗೊಂಡಿರುವ ಸಾಧ್ಯತೆ ಕಂಡುಬರುತ್ತಿದೆ. ಆನೆಯ ಗಾಯ ಒಣಗಲು ಮತ್ತು ನೋವು ಕಡಿಮೆಯಾಗಲು ಚುಚ್ಚುಮದ್ದು ಹಾಗೂ ಔಷಧ ನೀಡಿದ್ದೇವೆ. ವಾಸಿಯಾಗಲು ಮೂರರಿಂದ 4 ದಿನಗಳ ಕಾಲಾವಕಾಶ ಬೇಕು. ಬಳಿಕ ಪ್ರಕೃತಿ ಸಹಜವಾಗಿ ಅವುಗಳ ನೋವು ಮಾಸುತ್ತವೆ ಎಂದು ವೈದ್ಯರು ತಿಳಿಸಿದರು.

ಗುತ್ತಿಗಾರು ಪಶು ವೈದ್ಯಾಧಿಕಾರಿ ವೆಂಕಟಾಚಲಪತಿ ಸಹಕರಿಸಿದರು. ಫಾರೆಸ್ಟರ್‌ ಸಂತೋಷ್‌, ಸುಬ್ರಹ್ಮಣ್ಯ ಹಾಗೂ ಪಂಜ ವಲಯದ 30ಕ್ಕೂ ಅಧಿಕ ಸಿಬಂದಿ ಎರಡು ದಿನಗಳಿಂದ ಸತತ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಸ್ಥಳಿಯರು ಸಿಬಂದಿಗೆ ಊಟ, ವಸತಿ, ನೀರು ಇತ್ಯಾದಿ ಒದಗಿಸಿ ಸಹಕರಿಸಿದರು.

Advertisement

ಗಾಯಾಗೊಂಡ ಕಾಡಾನೆ ಚಿಕಿತ್ಸೆ ನೀಡುವುದನ್ನು ವೀಕ್ಷಿಸಲು ಸ್ಥಳೀಯರು ಬೆಳಗ್ಗೆಯಿಂದಲೇ ಕಾಡಿನ ಬದಿಯಲ್ಲಿ ಕಾದಿದ್ದರು. ಕೆಲವರು ಮರಗಳನ್ನೇರಿ ವೀಕ್ಷಿಸಿದರು. ಚಿಕಿತ್ಸೆ ವೇಳೆ ಆನೆ ಪಕ್ಕ ನಿಂತು ಸೆಲ್ಫಿ ಕ್ಲಿಕ್ಕಿಸಲೂ ಕೆಲವರು ಮುಂದಾದರು.

ಹೀಗೆ ನಡೆಯಿತು ಚಿಕಿತ್ಸೆ…
ಅಪರಾಹ್ನ 2 ಗಂಟೆಗೆ ಹೊತ್ತಿಗೆ ಆನೆಗೆ ವನ್ಯಜೀವಿ ವಿಭಾಗದ ವೈದ್ಯ ಮುಜೀಬ್‌ ಮತ್ತವರ ತಂಡ ಚಿಕಿತ್ಸೆ ಕಾರ್ಯಾಚರಣೆ ಆರಂಭಿಸಿತು. ಆರಂಭದಲ್ಲಿ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು. ಅದು ಕೆಲಸ ಮಾಡದೇ ಇದ್ದಾಗಿ ತುಸು ಹೊತ್ತಿನಲ್ಲಿ ಹೆಚ್ಚುವರಿ ಡೋಸ್‌ನ ಅರಿವಳಿಕೆ ನೀಡಲಾಯಿತು. ಈ ವೇಳೆ ಆನೆಯು ನಿಧಾನವಾಗಿ ನಡೆದಾಡುತ್ತ ನೀರಿನ ಝರಿಯ ಒಂದು ಭಾಗಕ್ಕೆ ಬಂದು ಸಮತಟ್ಟಾದ ಸ್ಥಳದಲ್ಲಿ ಮರವೊಂದಕ್ಕೆ ಒರಗಿ ನಿಂತಿತು. ಬಳಿಕ ವೈದ್ಯರು ಮುಂಗಾಲಿನ ಮೇಲ್ಭಾಗದಲ್ಲಿ ಆಗಿರುವ ಆಳವಾದ ಗಾಯವನ್ನು ಔಷಧ ಬಳಸಿ ಸ್ವಚ್ಛಗೊಳಿಸಿದರು. ಗಾಯದ ಒಳಭಾಗವನ್ನು ಪೂರ್ಣವಾಗಿ ಶುಚಿಗೊಳಿಸಿ, ಗಾಯದೊಳಗೆ ಮದ್ದು ಇರಿಸಿ, ಚುಚ್ಚುಮದ್ದು ನೀಡಲಾಯಿತು. ಬಳಿಕ ಸ್ವಲ್ಪ ಹೊತ್ತಿನಲ್ಲಿ ಆನೆ ಪ್ರಜ್ಞೆ ಪಡೆದುಕೊಂಡು ಚಲನವಲನ ಆರಂಭಿಸಿತು.

Advertisement

Udayavani is now on Telegram. Click here to join our channel and stay updated with the latest news.

Next