Advertisement

ಎತ್ತಿನ ಭುಜದ ತಪ್ಪಲಿನಲ್ಲಿ ನೆಲೆನಿಂತ

10:47 PM Apr 23, 2021 | Team Udayavani |

ಸುತ್ತಲೂ ಹಚ್ಚ ಹಸುರಿನ ವನಸಿರಿ, ಸಸ್ಯಶ್ಯಾಮಲೆಯ ಮಧ್ಯೆ ಸಾಗುವ ಕಿರಿದಾದ ರಸ್ತೆಗಳ ಇಕ್ಕೆಲಗಳಲ್ಲಿ ತಲೆ ಎತ್ತಿ ನಿಂತಿರುವ ಗಿರಿ ಶಿಖರಗಳು.

Advertisement

ಅಲ್ಲಿಂದ ಚಿಮ್ಮಿ ಬರುವ ಜಲಧಾರೆ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಾವು ಕಣ್ತುಂಬಿಕೊಳ್ಳಬಹುದಾದ ಸರ್ವೇ ಸಾಮಾನ್ಯ ದೃಶ್ಯಗಳು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುತ್ತಲೂ ಸಂಚರಿಸುತ್ತಿದ್ದರೆ ಇಂತಹ ಬೆಟ್ಟಗಳು ಸಾಲು ಸಾಲಾಗಿ ಕಾಣಸಿಗುತ್ತವೆ. ಇಂತಹ ಬೆಟ್ಟಗಳ ಸಾಲಿನಲ್ಲಿ ಎತ್ತರವಾಗಿ ಎತ್ತಿನ ಭುಜದಂತಹ ರಚನೆ ಹೊಂದಿರುವ ಶಿಖರವೇ ಎತ್ತಿನ ಭುಜ. ಇದರ ತಪ್ಪಲಿನಲ್ಲಿ ನೃತ್ಯ ಭಂಗಿಯಲ್ಲಿ ನಿಂತಿರುವವನೇ ನಾಣ್ಯ ಭೈರವೇಶ್ವರ.

ದಾರಿ ಹೇಗೆ?
ಮೂಡಿಗೆರೆಯಿಂದ ದಾರಹಳ್ಳಿ ಮುಖಾಂತರ ಇಪ್ಪತ್ತೈದು ಕಿ.ಮೀ. ಸಾಗಿದರೆ ಭೈರವೇಶ್ವರ ನೆಲೆನಿಂತ ಸಾವಿರ ವರ್ಷಗಳ ಇತಿಹಾಸವಿರುವ ಭೈರಾಪುರ ತಲುಪಬಹುದಾಗಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದ ಹೊಳೆಗಂಡಿಯಿಂದಲೂ ಚಾರಣ ಹೊರಟು ಎತ್ತಿನಭುಜ ಮಾರ್ಗವಾಗಿ ಇಲ್ಲಿಗೆ ತಲುಪಬಹುದಾಗಿದೆ. ಜನವರಿಯಿಂದ-ಮೇ ತಿಂಗಳ ವರೆಗೆ ಅರಣ್ಯ ಇಲಾಖೆಯಿಂದ ನಿರ್ಬಂಧವಿರುವುದರಿಂದ ಈ ಅವಧಿಯಲ್ಲಿ ಚಾರಣಕ್ಕೆ ಅವಕಾಶವಿಲ್ಲ. ಮಳೆಗಾಲದಲ್ಲಿ ಜಿಗಣೆಗಳ ಕಾಟವೂ ಹೇರಳವಾಗಿರುವುದರಿಂದ ಅಕ್ಟೋಬರ್‌ತಿಂಗಳಿಂದ ಡಿಸೆಂಬರ್‌ವರೆಗೆ ಈ ಭಾಗದಿಂದ ಚಾರಣ ಕೈಗೊಳ್ಳಬಹುದಾಗಿದೆ.

ನಾಣ್ಯ ಭೈರವೇಶ್ವರ ವಿಶೇಷತೆ ಏನು?
ನಾಟ್ಯ ರೂಪದಲ್ಲಿರುವ ಕಾರಣ ಇದಕ್ಕೆ ನಾಟ್ಯ ಭೈರವೇಶ್ವರ ಎಂದು ಹೆಸರು ಬಂದಿದೆ. ಇದುವೇ ನಾಣ್ಯ ಭೈರವೇಶ್ವರ ಆಯಿತೆಂಬುದು ಪ್ರತೀತಿ. ಇಲ್ಲಿ ಹಿಂದೆ ನವಿಲು ನಾಟ್ಯವಾಡುತ್ತಿತ್ತು ಎಂಬ ಉಲ್ಲೇಖವೂ ಇದೆ. ದೇವಾಲಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಾಕಷ್ಟು ನಗನಾಣ್ಯಗಳನ್ನು ಇರಿಸಿದ್ದರಿಂದ ನಾಣ್ಯಭೈರವೇಶ್ವರ ಎಂಬ ಹೆಸರು ಬಂದಿದೆ ಎನ್ನುವ ಅಭಿಪ್ರಾಯವೂ ಸ್ಥಳೀಯರಲ್ಲಿದೆ.

Advertisement

ಒಂದೇ ದಿನದಲ್ಲಿ ದೇವಾಲಯ ನಿರ್ಮಾಣ!
ಹೊಯ್ಸಳ ಅರಸರು ಚನ್ನಕೇಶ್ವರ ದೇವಾಲಯ ನಿರ್ಮಿಸುವ ಸಂದರ್ಭದಲ್ಲಿ ಅಷ್ಟದಿಕಾ³ಲಕರಾಗಿ ಅಷ್ಟ ಭೈರವೇಶ್ವರ ಸನ್ನಿಧಾನವನ್ನು ನಿರ್ಮಿಸಿದರೆಂದು ಇತಿಹಾಸ ಸಾರುತ್ತದೆ. ದುರ್ಗದಹಳ್ಳಿ, ದೇವರಮನೆ, ಭೈರಾಪುರ, ಮರಗುಂದ, ಕುಂಬರಹಳ್ಳಿ, ಕಬ್ಬಿನಹಳ್ಳಿಗಳಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದ್ದು ಕೇವಲ ಒಂದೇ ದಿನದಲ್ಲಿ ಈ ದೇವಾಲಯಗಳು ನಿರ್ಮಿಸಲ್ಪಟ್ಟಿದ್ದು ವಿಶೇಷ. ಅಷ್ಟ ದೇವಾಲಯಗಳ ಪಟ್ಟಿಯಲ್ಲಿ ಈ ಸನ್ನಿಧಾನವೂ ಒಂದು.
ದ್ರಾವಿಡ- ನಾಗಾರ ಮಿಶ್ರಿತ ಹೊಯ್ಸಳ ವಾಸ್ತುಶಿಲ್ಪ. ದ್ರಾವಿಡ ಮತ್ತು ನಾಗರ ಮಿಶ್ರಿತ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಈ ದೇವಾಲಯದ ನಿರ್ಮಾಣದಲ್ಲಿ ಬಳಸಿರುವುದನ್ನು ನಾವಿಲ್ಲಿ ನೋಡಬಹುದಾಗಿದೆ. ಭೈರವ ವಾಹನ ಶ್ವಾನ, ಹೊಯ್ಸಳರ ಲಾಂಭನ ಹೊಂದಿರುವ ಪ್ರವೇಶದ್ವಾರ, ಬಾಗಿಲುಗಳ ಮೇಲಿನ ಕೆತ್ತನೆಗಳು, ಕಂಬಗಳ ಮೇಲಿನ ರಚನಾತ್ಮಕ ಕೆತ್ತನೆ ಕೆಲಸಗಳು ಮನಸೂರೆಗೊಳಿಸುತ್ತವೆ.

ಧರ್ಮೋತ್ಥಾನ ಟ್ರಸ್ಟ್‌ ವತಿಯಿಂದ ಜೀರ್ಣೋದ್ಧಾರ
14ವರ್ಷಗಳ ಹಿಂದೆ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ ವತಿಯಿಂದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದೆ. ದೇವಸ್ಥಾನದ ಕೆತ್ತನೆಗಳಿಗೆ ಮತ್ತು ಕಲ್ಲುಗಳಿಗೆ ಹಾನಿಯಾಗದಿರಲೆಂದು ಆಧುನಿಕ ಛಾವಣಿ ಸ್ಪರ್ಶ ನೀಡಲಾಗಿದೆ. ಪ್ರಸ್ತುತ ಮುಜರಾಯಿ ಇಲಾಖೆಯ ಸಹಕಾರದೊಂದಿಗೆ ದೇವಾಲಯ ಕಾರ್ಯ ನಿರ್ವಹಿಸುತ್ತಿದೆ.

ಪುಷ್ಕರಣಿಯಲ್ಲಿದೆ ಕೌತುಕದ ಸುರಂಗ ಮಾರ್ಗ
ಈ ದೇವಾಲಯದಲ್ಲಿ ಹಿಂದೆ ಜೋಗಿ ಪುರುಷರು ಪೂಜೆ ಮಾಡುತ್ತಿದ್ದು ಸುರಂಗದ ಮೂಲಕ ಕಲ್ಯಾಣಿಗೆ ಬಂದು ಅಲ್ಲಿ ಸ್ನಾನ ಮಾಡಿ ದೇವಾಲಯದಲ್ಲಿ ಪೂಜಾದಿಗಳನ್ನು ಮುಗಿಸಿ ತೆರಳುತ್ತಿದ್ದರಂತೆ. ಹೀಗೆ ಬಂದು ತೆರಳುವಾಗ ಯಾರೂ ಅವರನ್ನು ನೋಡಬಾರದೆಂಬ ಕಟ್ಟುಪಾಡಿತ್ತು. ಒಮ್ಮೆ ಮೂರ್ತೆದಾರನೊಬ್ಬ (ಕಳ್ಳು ತೆಗೆಯುವವ) ನೋಡಿದ ಮೇಲೆ ಈ ಜೋಗಿ ಪುರುಷರು ಕುಂಡಕ್ಕೆ ಹಾರಿ ಇಹಲೋಕ ತ್ಯಜಿಸಿದರು ಎಂಬ ಜನಪದ ಕಥೆ ಇದೆ. ಇದರ ಕುರುಹಾಗಿ ಇಂದಿಗೂ ಕಲ್ಯಾಣಿಯ ಬಳಿ ಸುರಂಗ ಮಾರ್ಗವಿದೆ. ಇದೇ ಮಾರ್ಗದಿಂದ ನೀರು ಬರುತ್ತಿದ್ದು ಇದನ್ನೇ ಇಂದಿಗೂ ಅಭಿಷೇಕಕ್ಕೆ ಬಳಸಲಾಗುತ್ತದೆ.


-ಸ್ವಸ್ತಿಕ್‌ ಕನ್ಯಾಡಿ, ಎಸ್‌ ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next