Advertisement

ವಜಾ ಅಸ್ತ್ರ ಪ್ರಯೋಗ

12:19 AM Apr 09, 2021 | Team Udayavani |

ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ವಜಾ ಅಸ್ತ್ರ ಪ್ರಯೋಗಿಸಿರುವ ಸರಕಾರ, ಗುರುವಾರ ಕೆಲಸಕ್ಕೆ ಹಾಜರಾಗದ, ತರಬೇತಿಯಲ್ಲಿರುವ 96 ನೌಕರರನ್ನು ಮನೆಗೆ ಕಳುಹಿಸಿದೆ. ಪ್ರೊಬೆಷನರಿಯಲ್ಲಿ ಇರುವವರಿಗೆ ಕರ್ತವ್ಯಕ್ಕೆ ಹಾಜರಾಗಲು ಶುಕ್ರವಾರದ ಗಡುವು ವಿಧಿಸಿದೆ. ಬಸ್‌ ಸಂಚಾರ ಪುನರ್‌ಸ್ಥಾಪಿಸುವ ಸಂಬಂಧ ನಿವೃತ್ತ ನೌಕರರಿಗೆ ಬುಲಾವ್‌ ನೀಡಿದೆ.  ಇದ್ಯಾವುದಕ್ಕೂ ಮಣಿಯದ ನೌಕರರು ಹೋರಾಟ ಮುಂದುವರಿಸುವ ಸುಳಿವು ನೀಡಿದ್ದಾರೆ.

Advertisement

ಬಿಎಂಟಿಸಿಯಲ್ಲಿ ಹೆಚ್ಚು ಗೈರುಹಾಜರಿ ಮತ್ತು ಅಸಮರ್ಪಕ ಸೇವೆ ನೆಪದಲ್ಲಿ ಗುರುವಾರ 96 ಮಂದಿಯನ್ನು ಖಾಯಂ ಆಗಿ ಆಯ್ಕೆ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪ್ರೊಬೆಷನರಿಯಲ್ಲಿ ಇರುವವರಿಗೂ ಇಂಥದ್ದೇ ಶಾಕ್‌ ಕಾದಿದೆ ಎಂದು ನೋಟಿಸ್‌ ನೀಡಲಾಗಿದೆ. ಈ ಪಟ್ಟಿಯಲ್ಲಿ 1,293 ನೌಕರರಿದ್ದಾರೆ. ಮತ್ತೂಂದೆಡೆ 62 ವರ್ಷ ಮೀರದ ನಿವೃತ್ತ ಚಾಲಕ, ನಿರ್ವಾಹಕರನ್ನು ತಾತ್ಕಾಲಿಕ ಒಪ್ಪಂದದ ಆಧಾರದಲ್ಲಿ ನಿಯೋಜಿಸಲು ತೀರ್ಮಾನಿಸಲಾಗಿದೆ.

ಎಷ್ಟು ನಷ್ಟ? :

ಮುಷ್ಕರದಿಂದ ಶೇ. 98ರಷ್ಟು ಬಸ್‌ಗಳು ರಸ್ತೆಗಿಳಿದಿಲ್ಲ. ಡೀಸೆಲ್‌ ಖರ್ಚು ಇಲ್ಲ. ನೌಕರರಿಗೆ ಸಂಬಳ ನೀಡುವುದಿಲ್ಲ ಎಂದು ಸಾರಿಗೆ ಸಂಸ್ಥೆಗಳು ಹೇಳಿವೆ. ಆದರೂ ಸಾರಿಗೆ ನಿಗಮಗಳು 17 ಕೋ.ರೂ. ನಷ್ಟ ತೋರಿಸಿವೆ. ಇದು ಹೇಗೆ ಸಾಧ್ಯ? ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ನೌಕರರು ಒತ್ತಾಯಿ ಸಿದ್ದಾರೆ. ಸಾರಿಗೆ ನಿಗಮಗಳು ತೋರಿಸಿರುವ ನಷ್ಟದ ಬಾಬ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. 2ನೇ ದಿನದ ನಷ್ಟದ ಬಗ್ಗೆ ನಿಗಮಗಳು ಮೌನವಾಗಿವೆ.

ಇಂದು 25 ಸಾವಿರ ಖಾಸಗಿ ವಾಹನ  :

Advertisement

ಶನಿವಾರದಿಂದ ಬುಧವಾರದ ವರೆಗೆ ಸರಣಿ ರಜೆ ಇದೆ. ಈ ಹಿನ್ನೆಲೆಯಲ್ಲಿ ಸುಮಾರು 25ರಿಂದ 26 ಸಾವಿರ ಖಾಸಗಿ ವಾಹನಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಗುರುವಾರ 20 ಸಾವಿರಕ್ಕೂ ಹೆಚ್ಚು ಖಾಸಗಿ ವಾಹನಗಳು ಸಂಚರಿಸಿವೆ. ಆದರೆ ಖಾಸಗಿಯವರು ಬೇಕಾಬಿಟ್ಟಿ ದರ ನಿಗದಿ ಮಾಡಿ, ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಾನೂನು ಹೋರಾಟ: ನೌಕರರ ಕೂಟ :

ಸುದೀರ್ಘ‌ ರಜೆಯಲ್ಲಿದ್ದವರು, ಕೆಲಸಕ್ಕೆ ಬಾರದಿದ್ದವರನ್ನು ವಜಾಗೊಳಿಸಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸು ತ್ತೇವೆ. 6ನೇ ವೇತನ ಆಯೋಗ ಶಿಫಾರಸು ಜಾರಿ ಮಾಡಿದರೆ ಕರ್ತವ್ಯಕ್ಕೆ ಬರುತ್ತೇವೆ. ಇಲ್ಲದಿದ್ದರೆ ಇಲ್ಲ ಎಂದು ನೌಕರರ ಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

 

  • ತೆಲಂಗಾಣ, ಆಂಧ್ರಪ್ರದೇಶ, ತ. ನಾಡುಗಳಿಂದ ಹೆಚ್ಚುವರಿ ಬಸ್‌ ಒದಗಿಸುವಂತೆ ಸರಕಾರದಿಂದ ಮನವಿ
  • ಮುಷ್ಕರದಲ್ಲಿ ಭಾಗವಹಿಸಿದ ನೌಕರರನ್ನು ವಸತಿಗೃಹಗಳಿಂದ ಒಕ್ಕಲೆಬ್ಬಿಸುವ ಕೃತ್ಯಕ್ಕೂ ಮುಂದಾದ ಸಾರಿಗೆ ನಿಗಮಗಳು
  • 6ನೇ ವೇತನ ಆಯೋಗ ಜಾರಿ ಸಾಧ್ಯವೇ ಇಲ್ಲ. ಶೇ. 8ರಷ್ಟು ವೇತನ ಪರಿಷ್ಕರಣೆಗೆ ಸಿದ್ಧ ಎಂದು ಸರಕಾರ ಸ್ಪಷ್ಟನೆ
  • ಯುಗಾದಿ ಹಿನ್ನೆಲೆಯಲ್ಲಿ ಎ. 14ರ ವರೆಗೂ ಜನರಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮ
  • ಖಾಸಗಿ ಬಸ್‌ಗಳು ಹೆಚ್ಚು ಶುಲ್ಕ ಪಡೆಯುತ್ತಿವೆ ಎಂಬ ದೂರು ಕುರಿತು ತಪಾಸಣೆ ನಡೆಸಲು ಸೂಚನೆ
Advertisement

Udayavani is now on Telegram. Click here to join our channel and stay updated with the latest news.

Next