Advertisement

ಸಕಲೇಶಪುರ-ಮಂಗಳೂರು ಮಾರ್ಗ ರೈಲು ಓಡಾಟಕ್ಕೆ ಸಿದ್ಧ

10:01 AM Oct 03, 2018 | |

ಸುಬ್ರಹ್ಮಣ್ಯ: ಮಂಗಳೂರು- ಸಕಲೇಶಪುರ ರೈಲು ಮಾರ್ಗದಲ್ಲಿ ಹಳಿ ಮೇಲೆ ಬಿದ್ದ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದೆ. ಮಂಗಳವಾರ ಹಗಲು ಎರಡು ಗೂಡ್ಸ್‌ ರೈಲುಗಳು ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಿವೆ, ಶೀಘ್ರ ಪ್ಯಾಸೆಂಜರ್‌ ರೈಲು ಓಡಾಟಕ್ಕೆ ಮಾರ್ಗ ಮುಕ್ತವಾಗಲಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

Advertisement

ಈ ರೈಲು ಮಾರ್ಗದ ನಡುವೆ 65 ಕಡೆ ಭೂಕುಸಿತ ಸಂಭವಿಸಿತ್ತು. ಬೃಹತ್‌ ಗಾತ್ರದ ಗುಡ್ಡಗಳು ಹಳಿ ಮೇಲೆ ಬಿದ್ದಿದ್ದವು. ತೆರವು ಕಾರ್ಯ ಒಂದು ತಿಂಗಳಿನಿಂದ ನಡೆದು, ವಾರದ ಹಿಂದೆ ಬಹುತೇಕ ಕಡೆ ಪೂರ್ಣವಾಗಿದ್ದರೂ ಸಿರಿಬಾಗಿಲು ಬಳಿ ಮಾತ್ರ ಬಾಕಿ ಇತ್ತು. ಇಲ್ಲಿ ಒಂದೆಡೆ ಗುಡ್ಡ ಕುಸಿದು ಸುರಂಗ ಮಾರ್ಗವೇ ಮುಚ್ಚಿಹೋಗಿತ್ತು. ಇಲ್ಲಿ ಸುಮಾರು13 ಹಿಟಾಚಿಗಳು, ಕಾರ್ಮಿಕರು ಕಾರ್ಯನಿರತರಾಗಿದ್ದರು. ತೆರವು ಸೋಮವಾರ ಮುಗಿದಿದ್ದು, ಅಂದು ಒಂದು ಸರಕು ರೈಲು ಪರೀಕ್ಷಾರ್ಥ ಮಂಗಳೂರಿನಿಂದ ಸಕಲೇಶಪುರ ತನಕ ಸಂಚರಿಸಿದೆ. ಮಂಗಳವಾರ ಸಕಲೇಶಪುರ ಭಾಗದಿಂದ ಎರಡು ಗೂಡ್ಸ್‌ ರೈಲುಗಳು ಸಂಚರಿಸಿವೆ. ಬುಧವಾರದಿಂದ ಗೂಡ್ಸ್‌ ರೈಲುಗಳು ನಿರಂತರ ಓಡಾಟ ನಡೆಸಲಿದ್ದು, ವಾರದೊಳಗೆ ಪ್ಯಾಸೆಂಜರ್‌ ರೈಲು ಓಡಾಟಕ್ಕೂ ಮುಕ್ತವಾಗುವ ಸಾಧ್ಯತೆ ಇದೆ.

ತೆರವು ಕಾರ್ಯ ನಡೆದಿದ್ದರೂ ಕೆಲವು ಕಡೆ ಗುಡ್ಡ ಜರಿಯುವ ಸಾಧ್ಯತೆ ಕುರಿತು ಮುನ್ನೆಚ್ಚರಿಕೆ ವಹಿಸಬೇಕಿದೆ. ನೈಋತ್ಯ ರೈಲ್ವೇಯ ಉನ್ನತ ಅಧಿಕಾರಿಗಳ ತಂಡ ಮಾರ್ಗ ಪರಿಶೀಲಿಸಿದ್ದು, ತಾಂತ್ರಿಕ ಸುರಕ್ಷಾ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಳಿಯ ಗುಣಮಟ್ಟ ಖಚಿತಪಡಿಸಿದ ಬಳಿಕ ಪ್ಯಾಸೆಂಜರ್‌ ರೈಲು ಓಡಾಟ ನಡೆಸಲಿದೆ ಎಂದು ಹೆಸರು ಹೇಳಲು ಇಚ್ಛಿಸದ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದಲ್ಲಿ ಸೆ. 30ರಿಂದ ರೈಲು ಓಡಾಟ ಸ್ಥಗಿತಗೊಂಡಿತ್ತು. ಅ. 10ರ ತನಕ ನಿಷೇಧ ಆದೇಶ ಜಾರಿಯಲ್ಲಿದೆ. ಕಾಮಗಾರಿ ಮುಗಿದು ಮಾರ್ಗ ಸಂಚಾರಕ್ಕೆ ಮುಕ್ತವಾಗಿದ್ದರೂ ಅ.10ರ ಬಳಿಕವೇ ಪ್ಯಾಸೆಂಜರ್‌ ರೈಲು ಓಡಾಟಕ್ಕೆ ನೈಋತ್ಯ ರೈಲ್ವೇ ಅನುಮತಿ ನೀಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next