Advertisement

Train ಬೆಂಗಳೂರು – ಮೈಸೂರು – ಮುರ್ಡೇಶ್ವರ ರೈಲು: ಅವೈಜ್ಞಾನಿಕ ವೇಳಾಪಟ್ಟಿಯಿಂದ ವಿಳಂಬ: ಆರೋಪ

12:53 AM Sep 21, 2023 | Team Udayavani |

ಕುಂದಾಪುರ: ಮಂಗಳೂರುವರೆಗೆ ಮಾತ್ರವಿದ್ದ ಬೆಂಗಳೂರು – ಮೈಸೂರು ರೈಲನ್ನು ಈಗ ಮುರ್ಡೇಶ್ವರದವರೆಗೆ ವಿಸ್ತರಿಸಲಾಗಿದೆ.

Advertisement

ಈ ರೈಲು ಮಂಗಳೂರಿಗೆ 8.15ಕ್ಕೆ ಬರುತ್ತಿದ್ದು, ಅಲ್ಲಿಂದ ಸುರತ್ಕಲ್‌ಗೆ ಬರುವಾಗ 11 ಗಂಟೆ ಆಗುತ್ತಿದೆ. ಅವೈಜ್ಞಾನಿಕ ವೇಳಾಪಟ್ಟಿಯಿಂದ ಈ ರೀತಿಯ ವಿಳಂಬ ಆಗುತ್ತಿದೆ ಎಂದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಆರೋಪಿಸಿದೆ.

ಮಂಗಳೂರಿನಿಂದ ಸುರತ್ಕಲ್‌ನ 20 ಕಿ.ಮೀ. ದೂರಕ್ಕೆ 3.30 ಗಂಟೆಯ ಅವಧಿ ತೆಗೆದುಕೊಳ್ಳುವುದಕ್ಕೆ ಏನು ಕಾರಣ. ಕೇರಳ ಲಾಬಿ ಅಥವಾ ಸ್ಥಾಪಿತ ಹಿತಾಸಕ್ತಿಗೆ ದಕ್ಷಿಣ ರೈಲ್ವೇಯವರು ಮಣಿದಿದ್ದಾರೆಯೇ ಎನ್ನುವುದಾಗಿ ಆರೋಪಿಸಿರುವ ಸಮಿತಿಯು, ಈ ರೈಲನ್ನು ಸರಿಯಾದ ವೇಳಾಪಟ್ಟಿ ತಯಾರಿಸಿ, ಕರ್ನಾಟಕ ಕರಾವಳಿ ಭಾಗದಲ್ಲಿ ಸಂಚರಿಸುವಂತೆ ಮಾಡಿದರೆ, ಗೋಕರ್ಣ, ಕಾರವಾರದವರೆಗೂ ವಿಸ್ತರಿಸಬಹುದು ಎಂದು ತಿಳಿಸಿದೆ.

3 ಗಂಟೆ ಯಾಕೆ?
ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಮಂಗಳೂರಿನಿಂದ ಕುಂದಾಪುರಕ್ಕೆ ಬರಲು 2 ಗಂಟೆ ಸಾಕು. ಅಷ್ಟೇ ನಿಲುಗಡೆ ಇರುವ ಈ ರೈಲಿಗೆ ಮಾತ್ರ 3 ಗಂಟೆ ಯಾಕೆ ಅನ್ನುವುದಾಗಿ ಪ್ರಶ್ನಿಸಿರುವ ಸಮಿತಿ, ನೈಋತ್ಯ ರೈಲ್ವೇಯವರಿಂದ ಮೊದಲಿಗಿಂತಲೂ ಅರ್ಧ ಗಂಟೆ ಬೇಗನೆ ರೈಲನ್ನು ಪಡೆದು, ಕೊಂಕಣ ರೈಲ್ವೇಗೆ ಮಾತ್ರ ವಿಳಂಬವಾಗಿ ರೈಲನ್ನು ಹಸ್ತಾಂತರಿಸುವ ದಕ್ಷಿಣ ರೈಲ್ವೇಯ ಕ್ರಮ ಅನುಮಾನ ಮೂಡಿಸಿದೆ. ಪ್ರತಿ ದಿನ ರೈಲು ಜೋಕಟ್ಟೆ, ತೋಕೂರು, ಸುರತ್ಕಲ್‌ ನಿಲ್ದಾಣಕ್ಕೆ 30 ರಿಂದ 40 ನಿಮಿಷ ಬೇಗ ಬಂದು ನಿಲ್ಲುವ ಬದಲು, 9.30ಕ್ಕೆ ಕೊಂಕಣ ರೈಲ್ವೇಗೆ ಹಸ್ತಾಂತರಿಸಿದರೆ, ಉಡುಪಿ, ಕುಂದಾಪುರಕ್ಕೆ ಒಂದು ಗಂಟೆ ಬೇಗನೇ ತಲುಪಬಹುದು ಎನ್ನುವ ಸಲಹೆ ನೀಡಿದೆ.

ಮೈಸೂರು, ಉಡುಪಿ, ಆನೆಗುಡ್ಡೆ, ಹಟ್ಟಿಯಂಗಡಿ, ಕೊಲ್ಲೂರು, ಇಡಗುಂಜಿ, ಗೋಕರ್ಣಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗುವ ವೇಳಾಪಟ್ಟಿ ತಯಾರಿಸಬೇಕು. ಯಾವುದೇ ಕಾರಣಕ್ಕೂ ಉಳಿದ ರೈಲುಗಳ ಸಂಚಾರದ ಅವಧಿಯಷ್ಟೇ ಈ ರೈಲಿಗೂ ಅನ್ವಯವಾಗುವ ವೇಳಾಪಟ್ಟಿ ತಯಾರಿಸಿ ಅನುಕೂಲ ಮಾಡಬೇಕು ಎಂದು ಸಮಿತಿ ಆಗ್ರಹಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next