Advertisement

Tragic: ಹೆದ್ದಾರಿಯಲ್ಲಿ ಸ್ಕೂಟರ್‌ಗೆ ಲಾರಿ ಡಿಕ್ಕಿ; 8 ತಿಂಗಳ ಗರ್ಭಿಣಿ ಸಾವು

10:44 AM Aug 08, 2024 | Team Udayavani |

ನೆಲಮಂಗಲ: ಸ್ಕೂಟರ್‌ಗೆ  ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದ ಪರಿಣಾಮ ತುಂಬು ಗರ್ಭಿಣಿ ಹಾಗೂ ಹೊಟ್ಟೆಯಿಂದ ಹೊರ ಬಂದ 8 ತಿಂಗಳ ಭ್ರೂಣ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ತಾಲೂಕಿನ ಸೋಂಪುರ ಹೋಬಳಿಯ ರಾಷ್ಟ್ರೀಯ  ಹೆದ್ದಾರಿ 48ರ ಎಡೇಹಳ್ಳಿ ಬಳಿ ಬುಧವಾರ ಬೆಳಗ್ಗೆ 7.45ರಲ್ಲಿ ಘಟನೆ  ಸಂಭವಿಸಿದೆ.

Advertisement

ತಾಲೂಕಿನ ತ್ಯಾಮ ಗೊಂಡ್ಲು ಹೋಬಳಿಯ ತೋಟನಹಳ್ಳಿಯ ಸಿಂಚನಾ (30) ಹಾಗೂ ಗರ್ಭಿಣಿ ಹೊಟ್ಟೆಯಲ್ಲಿದ್ದ 8 ತಿಂಗಳ ಭ್ರೂಣ ಕೂಡ ಸಾವನ್ನಪ್ಪಿದೆ. ಸ್ಕೂಟರ್‌ ಓಡಿಸುತ್ತಿದ್ದ ಸಿಂಚನಾ ಪತಿ ಮಂಜುನಾಥ್‌ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: ಮಂಜುನಾಥ್‌ ಸೋಂಪುರ ಕೈಗಾರಿಕಾ ಪ್ರದೇಶದ ಎಲ್‌.ಎಂ.ಕಾರ್ಖಾನೆಯಲ್ಲಿ ನೌಕರನಾ ಗಿದ್ದು, ಕಂಪನಿಯಿಂದ ಬೇರೆ ರಾಜ್ಯಕ್ಕೆ ವರ್ಗಾವಣೆ ಯಾಗಿದ್ದರು. ಸಿಂಚನಾಳ ಬಾಣಂತನ ಹಾಗೂ ಬೇರೆ ರಾಜ್ಯದಲ್ಲಿ ಕೆಲಸ ಸುಸೂತ್ರವಾಗಿ ನಡೆಯಲಿ ಎಂದು ಹೋಬಳಿಯ ದಕ್ಷಿಣ ಕಾಶಿ ಖ್ಯಾತಿಯ ಶಿವಗಂಗೆ ತೆರಳಿ ಪೂಜೆ ಸಲ್ಲಿಸಿ, ದಾಬಸ್‌ ಪೇಟೆ ಮೂಲಕ ಎಡೇಹಳ್ಳಿ ಬಳಿ ಬರುವಾಗ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದಿದೆ. ಬಳಿಕ ಕೆಳಗೆ ಬಿದ್ದ ಪತ್ನಿ ಸಿಂಚನಾ ಮೇಲೆ ಟಿಪ್ಪರ್‌ ಲಾರಿ ಹರಿದಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಸಿಂಚನಾ ಹೊಟ್ಟೆಯಿಂದ ಭ್ರೂಣ ಆಚೆ ಬಂದು ವಿಲವಿಲ ಒದ್ದಾಡಿ ಸಾವನ್ನಪ್ಪಿದೆ. ಅಪಘಾತ ಬಳಿಕ  ಟಿಪ್ಪರ್‌ ಲಾರಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.  ಘಟನೆ ಸಂಬಂಧ ನೆಲಮಂಗಲ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಿಂಚನಾ ಪತಿ ಮಂಜುನಾಥ್‌, “ನಾವಿಬ್ಬರೂ ವಿವಾಹವಾಗಿ 10 ತಿಂಗಳಾಗಿತ್ತು. ಹೆರಿಗೆ ಸುಸೂತ್ರವಾಗಿ ಆಗಲಿ ಹಾಗೂ ನನ್ನ ನೌಕರಿ ಕೈ ಹಿಡಿಯಲಿ’ ಎಂದು ಶಿವಗಂಗೆಯ ಹರಕೆ ಗಣೇಶನ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು, ದಾಬಸ್‌ ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಡೆಹಳ್ಳಿಯ ತೋಟನಹಳ್ಳಿಗೆ ಹೋಗುತ್ತಿದ್ದೆವು. ಈ ವೇಳೆ ವೇಗವಾಗಿ ಬಂದ ಟಿಪ್ಪರ್‌ ಲಾರಿ ನಾವಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಪತ್ನಿ ಹಾಗೂ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next