Advertisement

ವರದಕ್ಷಿಣೆ ಕಿರುಕುಳ: ನವವಿವಾಹಿತೆ ಆತ್ಮಹತ್ಯೆ

10:27 AM Jun 08, 2021 | Team Udayavani |

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವ ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬಾಗಲಗುಂಟೆಯ ನಿವಾಸಿ ಶ್ವೇತಾ (28) ಆತ್ಮಹತ್ಯೆ ಮಾಡಿಕೊಂಡವರು. ಈ ಸಂಬಂಧ ಆಕೆ ಪತಿ ಕೃಷ್ಣಮೂರ್ತಿ (32) ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಕಳೆದ 4 ತಿಂಗಳ ಹಿಂದೆ ಉತ್ತರಹಳ್ಳಿಯ ಶ್ವೇತಾ ಅವರನ್ನು ವಿವಾಹವಾಗಿದ್ದು, ದಂಪತಿ ಬಾಗಲಗುಂಟೆಯಲ್ಲಿ ವಾಸವಾಗಿದ್ದರು. ಮದುವೆ ವೇಳೆಯಲ್ಲಿ ಕೃಷ್ಣಮೂರ್ತಿ ಮನೆಯವರು ಕೇಳಿದಷ್ಟು ವರದಕ್ಷಿಣೆ ಕೊಡಲಾಗಿತ್ತು.

ಆದರೂ, ಆರೋಪಿ ಮದುವೆ ಬಳಿಕವೂ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ಕೊಡುತ್ತಿದ್ದ. ಗಲಾಟೆ ಮಾಡುತ್ತಿದ್ದ. ಗಂಡನ ಹಿಂಸೆ ತಾಳಲಾರದೆ ತಾಯಿಗೆ ಕರೆ ಮಾಡಿ ಶ್ವೇತಾ ತನ್ನ ಅಳಲನ್ನು ಹೇಳಿಕೊಳ್ಳುತ್ತಿದ್ದರು. ಆಕೆಯ ಮನೆಯವರು ಕೂಡ ಕೃಷ್ಣಮೂರ್ತಿಗೆ ಮನವಿ ಮಾಡಿದ್ದರು. ಈ ಬೆಳವಣಿಗೆಗಳಿಂದ ಬೇಸತ್ತ ಶ್ವೇತಾ, ಭಾನುವಾರ ರೂಮ್‌ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಬಂಧ ಆಕೆಯ ಪೋಷಕರು ಪತಿ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಕೃಷ್ಣಮೂರ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next