Advertisement

ನದಿಯಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು

02:38 AM Jan 11, 2021 | Team Udayavani |

ಬೆಳ್ತಂಗಡಿ: ಅನಾರೋಗ್ಯದಲ್ಲಿದ್ದ ಅಜ್ಜಿಯ ಯೋಗಕ್ಷೇಮ ವಿಚಾರಿಸಲು ಪೋಷಕರೊಂದಿಗೆ ಬಂದಿದ್ದ ಎಂಟು ವರ್ಷದ ಬಾಲಕ, ಕಕ್ಕಿಂಜೆ ಸನಿಹದ ಚಿಬಿದ್ರೆ ಗ್ರಾಮದ ಅನ್ನಾರು ನದಿಯಲ್ಲಿ ರವಿವಾರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.

Advertisement

ತೋಟತ್ತಾಡಿ ಗ್ರಾಮದ ದಡ್ಡು ನಿವಾಸಿ ಪುತ್ತಾಕ ಅವರ ಮೊಮ್ಮಗ ಇಹಾನ್‌ ಅಬ್ದುಲ್ಲ (8) ಮೃತಪಟ್ಟ ಬಾಲಕ. ಚಿಕ್ಕಮಗಳೂರಿನಲ್ಲಿ ನೆಲೆಸಿರುವ ಪುತ್ತಾಕ ಅವರ ಮಗಳಾದ ಆಬಿದಾ ಮತ್ತು ಫಾರೂಕ್‌ ಅಬ್ದುಲ್ಲ ಅವರ ಪುತ್ರ ಇಹಾನ್‌ ಅಬ್ದುಲ್ಲ ಅಜ್ಜಿಗೆ ಅನಾರೋಗ್ಯ ಇದ್ದುದರಿಂದ ತಂದೆ, ತಾಯಿ ಜತೆ ರವಿವಾರ ಬೆಳಗ್ಗೆ ಕಕ್ಕಿಂಜೆಗೆ ಬಂದಿದ್ದರು.

ಆಟದಲ್ಲಿ ನಿರತನಾಗಿದ್ದ :

ಉಪಹಾರ ಮುಗಿಸಿ ಮನೆಮಂದಿ ಜತೆ ಸೇರಿ ಪಕ್ಕದಲ್ಲೆ ಇರುವ ನದಿಗೆ ಬಟ್ಟೆ ಒಗೆಯಲು ಮತ್ತು ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ನದಿ ಪಾತ್ರದಲ್ಲಿ ಆಟದಲ್ಲಿ ನಿರತನಾಗಿದ್ದ ಬಾಲಕ ಎಲ್ಲರ ಕಣ್ಣ ಮುಂದೆಯೇ ಆಯತಪ್ಪಿ ನೀರಿನಲ್ಲಿ ಮುಳುಗಿದ್ದ.

ತತ್‌ಕ್ಷಣ ಬಾಲಕನ ಮಾವ ದಡ್ಡು ಸೂಫಿ ಸಹಿತ ಇತರರು ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿ ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿಂದ ಬೆಳ್ತಂಗಡಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ಮಗು ಕೊನೆಯಿಸಿರೆಳೆದಿತ್ತು.

Advertisement

ಘಟನೆ ಬಗ್ಗೆ ಬಾಲಕನ ತಂದೆ ಫಾರೂಕ್‌ ಅಬ್ದುಲ್ಲ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಹಾನ್‌ ಅಬ್ದುಲ್ಲ ಅವರು ತಂದೆ, ತಾಯಿ, ಸಹೋದರಿ, ಸಹೋದರನನ್ನು ಅಗಲಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next