Advertisement

‘ಸಂಚಾರ ನಿಯಂತ್ರಣಕ್ಕೆ ಟ್ರಾಫಿಕ್‌ ವಾಲಂಟೀರ್‌ ವ್ಯವಸ್ಥೆ’

12:43 AM Aug 17, 2019 | mahesh |

ಮಹಾನಗರ: ಶಾಲಾ ಆವರಣದಲ್ಲಿ ಮಕ್ಕಳಿಗೆ ರಸ್ತೆ ದಾಟಲು, ಬಸ್‌ ಮತ್ತು ಇತರ ವಾಹನಗಳನ್ನು ಹತ್ತಲು ಅನುಕೂಲವಾಗುವಂತೆ ಸಂಚಾರ ಸ್ವಯಂ ಸೇವಕರನ್ನು ನೇಮಕ ಮಾಡಲು ಉದ್ದೇಶಿಸಿದ್ದು, ಈ ಬಗ್ಗೆ ಶೀಘ್ರ ಸಂಬಂಧಪಟ್ಟವರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ತಿಳಿಸಿದ್ದಾರೆ.

Advertisement

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿ ಈ ವಿಷಯ ತಿಳಿಸಿದರು.

ಈಗಾಗಲೇ ಇರುವ ಟ್ರಾಫಿಕ್‌ ವಾರ್ಡನ್‌ ಮಾದರಿಯಲ್ಲಿ ಟ್ರಾಫಿಕ್‌ ವಾಲಂಟೀರ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಶಾಲಾ ಸಮಿತಿಯವರು ಮತ್ತು ನಾಗರಿಕರು ಇದಕ್ಕೆ ಸಹಕರಿಸಬೇಕು. ವಾಲಂಟೀರ್‌ (ಸ್ವಯಂ ಸೇವಕ) ಆಗಿ ಸೇವೆ ಸಲ್ಲಿಸಲು ಸಾರ್ವಜನಿಕರು ಮುಂದೆ ಬರಬೇಕು ಎಂದು ಪೊಲೀಸ್‌ ಆಯುಕ್ತರು ಮನವಿ ಮಾಡಿದರು.

ಕೊಟ್ಟಾರ ಚೌಕಿಯ ಸುಬ್ರಹ್ಮಣ್ಯಪುರದಲ್ಲಿ ನೋ ಪಾರ್ಕಿಂಗ್‌ ಫಲಕ, ಬಸ್‌ ತಂಗುದಾಣಕ್ಕೆ ಶೆಲ್ಟರ್‌ ನಿರ್ಮಿಸಬೇಕು ಎಂದು ನಾಗರಿಕರೊಬ್ಬರು ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು, ನೋ ಪಾರ್ಕಿಂಗ್‌ ಬೋರ್ಡ್‌ ಹಾಕಲು ಕ್ರಮ ವಹಿಸಲಾಗುವುದು ಎಂದರು. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಬಸ್‌ ಶೆಲ್ಟರ್‌ ಮತ್ತು ಇತರ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಡಿಸಿಪಿ ಲಕ್ಷ್ಮೀ ಗಣೇಶ್‌ ಹೇಳಿದರು.

ಸಂಚಾರಕ್ಕೆ ಅಡ್ಡಿ
ಮೂಡುಬಿದಿರೆಯ ಮಸೀದಿಯ ಎದುರು ಅನಧಿಕೃತವಾಗಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಸ್ಥಳೀಯ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

Advertisement

ಉಳ್ಳಾಲ- ಸ್ಟೇಟ್ಬ್ಯಾಂಕ್‌ ನಡುವೆ ಸಂಚರಿಸುವ ಸಿಟಿ ಬಸ್‌ಗಳಿಗೆ ಸಮಯ ಪಾಲನೆ ಇಲ್ಲದೆ ಪೈಪೋಟಿಯಿಂದ ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದು ಪ್ರಯಾಣಿಕರೊಬ್ಬರು ದೂರಿದರು. ಈ ಬಗ್ಗೆ ಬಸ್‌ ಮಾಲಕರ ಸಂಘದ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ತಿಳಿಸಿದರು. ಈ ಬಗ್ಗೆ ಶೀಘ್ರದಲ್ಲಿಯೇ ಟೈಮ್‌ ಕೀಪರ್‌ಗಳನ್ನು ನೇಮಕ ಮಾಡ ಲಾಗುವುದು ಎಂದು ದಕ್ಷಿಣ ಕನ್ನಡ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್‌ ಆಳ್ವ ತಿಳಿಸಿದರು.

ಕುಳಾಯಿ ಹೊನ್ನಕಟ್ಟೆ ಜಂಕ್ಷನ್‌, ಬೈಕಂಪಾಡಿಯ ಜೋಕಟ್ಟೆ ಕ್ರಾಸ್‌ ಬಳಿ, ಮಂಗಳೂರಿನ ಗಣಪತಿ ಹೈಸ್ಕೂಲ್ ರೋಡ್‌ (ವಿಮಲೇಶ್‌ ಹೊಟೇಲ್ ಎದುರು) ಮತ್ತಿತರ ಕಡೆ ರಸ್ತೆಯಲ್ಲಿ ಗುಂಡಿ ನಿರ್ಮಾಣ ಆಗಿ ವಾಹನ ಸಂಚಾರ ಕಷ್ಟವಾಗಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದವು. ಈ ಬಗ್ಗೆ ಪಾಲಿಕೆಯ ಅಯುಕ್ತರಿಗೆ ಪತ್ರ ಬರೆದು ರಸ್ತೆ ದುರಸ್ತಿಗೆ ಮನವಿ ಮಾಡಲಾಗುವುದು ಎಂದು ಡಾ| ಹರ್ಷ ತಿಳಿಸಿದರು.

ಕಿರುಕುಳ; ದೂರು
ಕ್ಯಾಬ್‌ ಚಾಲಕ/ ಮಾಲಕರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಓಲಾ ವಾಹನದ ಚಾಲಕರೊಬ್ಬರು ಅಹವಾಲು ಮಂಡಿಸಿದರು. ಈ ಬಗ್ಗೆ ಓಲಾ ಮತ್ತು ಕ್ಯಾಬ್‌ ಚಾಲಕ/ ಮಾಲಕರನ್ನು ಕರೆಸಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಕಾರ್ಮಿಕರಿಗೆ ಸೂಕ್ತ ವಸತಿ ಇಲ್ಲ
ಹೊಟೇಲ್ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆ ಇಲ್ಲ; ಕೆಲವು ಹೊಟೇಲ್ಗಳಲ್ಲಿ ವಾಸ್ತವ್ಯಕ್ಕೆ ನೀಡಲಾಗುವ ಕೊಠಡಿಗಳಲ್ಲಿ ಸ್ವಚ್ಛತೆ ಇಲ್ಲ; ಮಲೇರಿಯಾ, ಡೆಂಗ್ಯೂ ಕಾಯಿಲೆ ಸೋಂಕುವ ಭೀತಿ ಇದೆ ಎಂದು ಕಾರ್ಮಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಸ್ಥಾಯೀ ಸಮಿತಿಯ ಗಮನಕ್ಕೆ ತರಲಾಗುವುದು. ಅಲ್ಲದೆ ಜಿಲ್ಲಾಧಿಕಾರಿ, ಪೊಲೀಸ್‌, ಜಿ.ಪಂ., ಪಾಲಿಕೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಆಗಿಂದಾಗ್ಗೆ ಹೊಟೇಲ್ಗಳಲ್ಲಿ ತಪಾಸಣೆ ನಡೆಸಲಾಗುವುದು ಎಂದು ಪೊಲೀಸ್‌ ಆಯುಕ್ತರು ವಿವರಿಸಿದರು.

ಭಿಕ್ಷುಕರ ಹಾವಳಿ
ನಗರದಲ್ಲಿ ಭಿಕ್ಷುಕರ ಹಾವಳಿ, ಫುಟ್ಪಾತ್‌ನಲ್ಲಿ ಗಲೀಜು ಮಾಡುತ್ತಿರುವ ಬಗ್ಗೆ ಹಲವು ಜನರಿಂದ ದೂರುಗಳು ಬಂದವು. ಭಿಕ್ಷುಕರನ್ನು ಹಿಡಿದು ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಪೊಲೀಸ್‌ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಲೈಸನ್ಸ್‌ ಇಲ್ಲದೆ, ಸೈಲೆನ್ಸರ್‌ ಕಟ್ ಮಾಡಿ ವಾಹನಗಳನ್ನು ಚಲಾಯಿಸಿ ನಿಯಮ ಉಲ್ಲಂಘನೆ, ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಕುರಿತಂತೆ ನಾಗರಿಕರು ದೂರಿದರು. ಮೋಟಾರು ವಾಹನ ನಿಯಮ ಉಲ್ಲಂಘನೆ ಬಗ್ಗೆ ಟ್ರಾಫಿಕ್‌ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಶಬ್ದ ಮಾಲಿನ್ಯದ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ರಸ್ತೆ ಬದಿ ಇರುವ ಅಪಾಯಕಾರಿ ಮರಗಳ ಬಗ್ಗೆ ನಾಗರಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ನುಡಿದರು.

ಕಾನೂನು ಉಲ್ಲಂಘಿಸಿದರೆ ಕ್ರಮ
ನೋ ಪಾರ್ಕಿಂಗ್‌ ಜಾಗದಲ್ಲಿ ಮಾಧ್ಯಮದವರು ವಾಹನ ನಿಲುಗಡೆ ಮಾಡುತ್ತಿರುವುದು ಸರಿಯೇ ಎಂದು ನಾಗರಿಕರೊಬ್ಬರು ಪ್ರಶ್ನಿಸಿದರು. ಕಾನೂನಿಗೆ ಎಲ್ಲರೂ ಸಮಾನರು. ಮಾಧ್ಯಮದವರಾಗಲಿ, ಪೊಲೀಸರಾಗಲಿ, ಕಾನೂನು ಉಲ್ಲಂಘಿಸುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಾ| ಹರ್ಷ ತಿಳಿಸಿದರು.

ಇದು 123ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 21 ಕರೆಗಳು ಬಂದವು. ಕೆನರಾ ಬಸ್‌ ಮಾಲಕರ ಸಂಘದ ಧ್ಯಕ್ಷ ರಾಜವರ್ಮ ಬಲ್ಲಾಳ್‌, ದ.ಕ. ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್‌ ಆಳ್ವ, ಡಿಸಿಪಿಗಳಾದ ಅರುಣಾಂಶುಗಿರಿ, ಲಕ್ಷ್ಮೀ ಗಣೇಶ್‌, ಎಸಿಪಿಗಳಾದ ಮಂಜುನಾಥ ಶೆಟ್ಟಿ , ವಿನಯ್‌ ಎ. ಗಾಂವ್‌ಕರ್‌, ಟ್ರಾಫಿಕ್‌ ಇನ್‌ಸ್ಪೆಕ್ಟರ್‌ಗಳಾದ ಮೋಹನ್‌ ಕೊಟ್ಟಾರಿ, ಗುರುದತ್ತ ಕಾಮತ್‌, ಎಎಸ್‌ಐ ಯುವರಾಜ್‌, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.

ದೂರುಗಳು
– ಪಿ.ವಿ.ಎಸ್‌. ಜಂಕ್ಷನ್‌ ಸಹಿತ ಕೆಲವು ವೃತ್ತಗಳಲ್ಲಿ ವಾಹನಗಳನ್ನು ಅಡ್ಡಾ ದಿಡ್ಡಿ ನಿಲ್ಲಿಸಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಸೃಷ್ಟಿಯಾಗುತ್ತಿದೆ.
– 33 ಸಿ, 60 ನಂಬ್ರದ ಸಿಟಿ ಬಸ್‌ಗಳಲ್ಲಿ ಟಿಕೆಟ್ ನೀಡುತ್ತಿಲ್ಲ.
– ಕಾವೂರು, ಇತರ ಕೆಲವು ಕಡೆ ಶಾಲೆಗಳ ಬಳಿ ಮಕ್ಕಳಿಗೆ ರಸ್ತೆ ದಾಟಲು ಅನುಕೂಲವಾಗಲೆಂದು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕೆಲವು ಬೈಕ್‌ ಸವಾರರು ಬದಿಗೆ ಸರಿಸು ತ್ತಿದ್ದು, ಈ ಬಗ್ಗೆ ಕ್ರಮ ಆಗಬೇಕು.
– ಮಹಾಕಾಳಿಪಡ್ಪು ರೈಲ್ವೇ ಕ್ರಾಸಿಂಗ್‌ ಬಳಿ ಟ್ರಾಫಿಕ್‌ ಪೊಲೀಸ್‌ ಸಿಬಂದಿ ನೇಮಿಸಿ.
– ವಾಮಂಜೂರು ಎಸ್‌ಸಿಡಿಸಿಸಿ ಬ್ಯಾಂಕ್‌ ಎದುರು ಅಪರಿಚಿತರು ಕಸ ತಂದು ರಾಶಿ ಹಾಕುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಿ.

ಡಾ| ಹರ್ಷ ಅವರ ಮೊದಲ ಫೋನ್‌-ಇನ್‌
ಮಂಗಳೂರಿಗೆ ನೂತನ ಪೊಲೀಸ್‌ ಆಯುಕ್ತರಾಗಿ ಬಂದಿರುವ ಡಾ| ಹರ್ಷ ಅವರಿಗೆ ಶುಕ್ರವಾರ ತಮ್ಮ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಸುವ ಮೊದಲ ಫೋನ್‌-ಇನ್‌ ಕಾರ್ಯಕ್ರಮ. ತಮ್ಮ ಮೊದಲ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರಿಂದ ದೂರವಾಣಿ ಮೂಲಕ ಬಂದ ಪ್ರತಿಯೊಂದು ದೂರು-ಸಲಹೆಗಳನ್ನು ಬಹಳ ಶ್ರದ್ಧೆಯಿಂದ ಆಲಿಸಿ ಅದಕ್ಕೆ ತುರ್ತಾಗಿ ಸ್ಪಂದಿಸುವ ಭರವಸೆ ನೀಡುತ್ತಿದ್ದರು. ಮುಂದಿನ ದಿನಗಳಲ್ಲಿ ಮೊದಲೇ ಸಾರ್ವಜನಿಕರಿಗೆ ಪ್ರಚಲಿತ ಸಮಸ್ಯೆ ಅಥವಾ ವಿದ್ಯಮಾನಗಳ ಬಗ್ಗೆ ತಿಳಿಸಿ, ಅದಕ್ಕೆ ಸಂಬಂಧಿಸಿದಂತೆ ಜನರ ಸಮಸ್ಯೆ-ಸಲಹೆಗಳನ್ನು ಪಡೆಯುವ ಮೂಲಕ ಈ ಫೋನ್‌-ಇನ್‌ ಕಾರ್ಯಕ್ರಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವುದಾಗಿ ಇದೇ ಸಂದರ್ಭ ಅವರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next