Advertisement

ಬಾರಕೂರು ಪೇಟೆಯಲ್ಲಿ ಪ್ರತಿನಿತ್ಯ ಟ್ರಾಫಿಕ್‌ ಸಮಸ್ಯೆ

11:42 PM Apr 29, 2019 | Team Udayavani |

ಬ್ರಹ್ಮಾವರ: ತುಳುನಾಡ ರಾಜಧಾನಿ ಖ್ಯಾತಿಯ ಬಾರಕೂರಿನಲ್ಲಿ ಪ್ರತಿನಿತ್ಯ ಟ್ರಾಫಿಕ್‌ ಜಾಮ್‌ ಸಮಸ್ಯೆ ತಲೆದೋರುತ್ತಿದೆ. ಪೇಟೆ ವಿಸ್ತರಣೆ ಆಗದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

Advertisement

ಮುಖ್ಯವಾಗಿ ಕಲ್ಚಪ್ರ ಬಳಿ ವಾಹನ ದಟ್ಟಣೆಯಿಂದ ಸವಾರರು ಪರದಾಡುತ್ತಿದ್ದಾರೆ. ಹೊಸ್ಕೆರೆಯಿಂದ ಕತ್ತಲೆಬಸದಿ ತನಕವೂ ಸಮಸ್ಯೆ ಗಂಭೀರವಾಗಿದೆ.

ರಾಜ ವೈಭವ
ರಾಜ ಆಳ್ವಿಕೆ ಅವಧಿಯಲ್ಲಿ ವೈಭವದ ದಿನಗಳನ್ನು ಕಂಡ ನಗರಿ ಬಾರಕೂರು. ಪ್ರತಿನಿತ್ಯ ಉತ್ಸವ ನಡೆಯಲೆಂದು 365 ದೇವಸ್ಥಾನಗಳನ್ನು ಸ್ಥಾಪಿಸಲಾಗಿತ್ತು ಎನ್ನುವುದು ಇತಿಹಾಸ. ಹಲವು ವೈಶಿಷ್ಟÂಗಳಿಂದ ಪಾರಂಪರಿಕ ನಗರಿಯಾಗಿ ಗುರುತಿಸಿ ಕೊಳ್ಳುವ ಹಂತದಲ್ಲಿದೆ. ಆದರೆ ಬಾರಕೂರಿನಲ್ಲಿ ಅತೀ ಅವಶ್ಯವೆನಿಸಿದ ಸಂಚಾರೀ ವ್ಯವಸ್ಥೆ ಮಾತ್ರ ಹದಗೆಟ್ಟಿದೆ.

ಅಭಿವೃದ್ದಿಯತ್ತ..
ಬಾರಕೂರಿನಲ್ಲಿ ಜೀರ್ಣಾವಸ್ಥೆ ತಲುಪಿದ ಹಲವು ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿವೆ. ಅನೇಕ ಸಮುದಾಯದವರು ಕುಲದೇವರಾಗಿ ಆರಾಧಿಸುತ್ತಿದ್ದಾರೆ. ಪರವೂರಿನಿಂದ ಬಾರಕೂರಿಗೆ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಂತದಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವುದು ಆವಶ್ಯಕ.

ಮದುವೆ ಸೀಸನ್‌
ಬಾರಕೂರಿನ ಹಲವು ದೇವಸ್ಥಾನಗಳಲ್ಲಿ ಸುಸಜ್ಜಿತ ಸಭಾಭವನಗಳಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಮದುವೆ, ಉಪನಯನ ಇನ್ನಿತರ ಕಾರ್ಯಕ್ರಮಗಳು ಜರಗುತ್ತವೆ. ಬೇಸಗೆ ಅವಧಿಯಲ್ಲಿ ಸಾವಿರಾರು ವಾಹನಗಳು ಹೆಚ್ಚುವರಿಯಾಗಿ ಸಂಚರಿಸುವುದರಿಂದ ಸಂಚಾರೀ ಸಮಸ್ಯೆ ತೀವ್ರಗೊಂಡಿದೆ.

Advertisement

ಕೊರತೆಗಳ ಸಾಲು
ಬಾರಕೂರಿನಲ್ಲಿ ಸುಸಜ್ಜಿತ ಬಸ್‌ ತಂಗುದಾಣವಿಲ್ಲ, ವ್ಯವಸ್ಥಿತ ರಿಕ್ಷಾ ನಿಲ್ದಾಣವಿಲ್ಲ, ಶೌಚಾಲಯ ಉಪಯೋಗಿಸುವ ಸ್ಥಿತಿಯಲ್ಲಿಲ್ಲ. ಹೀಗೆ ಬಾರಕೂರಿನಲ್ಲಿ ಸಮಸ್ಯೆಗಳೇ ಕಣ್ಣಿಗೆ ರಾಚುತ್ತಿದೆ.

ಸಾವಿರಾರು ವಿದ್ಯಾರ್ಥಿಗಳು
ಬಾರಕೂರಿನಲ್ಲಿ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ತನಕ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಾರಕೂರು ಪೇಟೆಯಿಂದ ಕಾಲೇಜು ತನಕ ಇಕ್ಕಟ್ಟಾದ ರಸ್ತೆಯಲ್ಲಿ ಪ್ರಾಣಭಯದಿಂದಲೇ ಸಂಚರಿಸುವಂತಾಗಿದೆ. ಅಲ್ಲದೆ ನೂರಾರು ವಿದ್ಯಾರ್ಥಿಗಳು ರಸ್ತೆಯಲ್ಲೇ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದೆ.

ಮತ್ತಷ್ಟು ಉಲ್ಬಣ
ಪ್ರಸ್ತುತ ಆಗುಂಬೆ ಘಾಟಿ ರಸ್ತೆ ದುರಸ್ತಿಯಲ್ಲಿರುವುದರಿಂದ ಹೆಚ್ಚಿನ ವಾಹನಗಳು ಬ್ರಹ್ಮಾವರ ಬಾರಕೂರು ಸಿದ್ಧಾಪುರ ಮೂಲಕ ಸಂಚರಿಸುತ್ತಿವೆ. ಇದರಿಂದ ಬ್ರಹ್ಮಾವರ ಆಕಾಶವಾಣಿ, ಬಾರಕೂರು ಪೇಟೆ ಸೇರಿದಂತೆ ಹಲವು ಕಡೆ ಸಂಚಾರಿ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.

ಉತ್ಸವ ಸಾಲದು
ಬಾರಕೂರಿನಲ್ಲಿ ಕಳೆದ ಜನವರಿಯಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ಆಳುಪೋತ್ಸವ ವಿಜೃಂಭಣೆಯಿಂದ ಜರಗಿತ್ತು. ಆದರೆ ಉತ್ಸವಗಳ ಜತೆಗೆ ಬಾರಕೂರಿನ ಸಮಗ್ರ ಅಭಿವೃದ್ಧಿ ಕಡೆಗೂ ಗಮನ ಹರಿಸಬೇಕೆಂದು ಜನತೆ ಆಶಿಸಿದ್ದಾರೆ.

ಮೇಲ್ದರ್ಜೆಗೇರಿಸಿ
ಬ್ರಹ್ಮಾವರ ಜನ್ನಾಡಿ ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕೆನ್ನುವ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಈ ರಸ್ತೆಯನ್ನು ರಾಜ್ಯಹೆದ್ದಾರಿಯಾಗಿ ಪರಿವರ್ತಿಸುವುದರಿಂದ ಸುಗಮ ಸಂಚಾರ ಸಾಧ್ಯವಿದೆ.

ತುರ್ತು ಗಮನ ಹರಿಸಿ
ಬಾರಕೂರು ಪೇಟೆಯಲ್ಲಿ ತೀವ್ರ ಟ್ರಾಫಿಕ್‌ ಜಾಮ್‌ ಸಮಸ್ಯೆ ಇದೆ. ಜನ ಸಂಚಾರ, ವಾಹನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಪೇಟೆ ವಿಸ್ತರಣೆಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವತ್ತ ತುರ್ತು ಗಮನ ಹರಿಸಿ.
-ಸತೀಶ್‌ ಎಸ್‌. ಅಮೀನ್‌ ಬಾರಕೂರು

  • ಪ್ರವೀಣ್ ಮದ್ದೂರ್
Advertisement

Udayavani is now on Telegram. Click here to join our channel and stay updated with the latest news.

Next