Advertisement

ಪಾಲಿಕೆ ಬೇಜವಾಬ್ದಾರಿತನಕ್ಕೆ ಟ್ರಾಫಿಕ್‌ ಪೊಲೀಸ್‌ ಪಾಠ !

11:46 AM Feb 23, 2018 | Team Udayavani |

ಮಹಾನಗರ: ಬಂಟ್ಸ್‌ ಹಾಸ್ಟೆಲ್‌ ವೃತ್ತದ ಬಳಿ ಕಾಂಕ್ರೀಟ್‌ ರಸ್ತೆಗೆ ಅಳವಡಿಸಲಾಗಿದ್ದ ಕಬ್ಬಿಣದ ಪಟ್ಟಿಯು ಸವೆದ ಪರಿ
ಣಾಮ ಮೇಲೆ ಬಂದು ವಾಹನ ಸವಾರರ ಪಾಲಿಗೆ ಅಪಾಯಕಾರಿ ಸ್ಥಿತಿಯಲ್ಲಿ ಇತ್ತು. ಸಾರ್ವಜನಿಕರು ಪಾಲಿಕೆಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಈ ವೃತ್ತದಲ್ಲಿ ಎರಡು ವರ್ಷಗಳಿಂದ ಟ್ರಾಫಿಕ್‌ ಪೊಲೀಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರೇವಣ ಸಿದ್ದಪ್ಪ ಅವರು ಈ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ವೈರಲ್‌
ವಿಶೇಷ ಅಂದರೆ, ರೇವಣ ಸಿದ್ದಪ್ಪನವರು ರಸ್ತೆ ಮಧ್ಯೆ ಕುಳಿತು ಕಬ್ಬಿಣದ ಪಟ್ಟಿ ಮರು ಜೋಡಣೆ ಮಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿಯೂ ವೈರಲ್‌ ಆಗಿದೆ. ವಾಹನದ ಒತ್ತಡದಿಂದಾಗಿ ಬಂಟ್ಸ್‌ ಹಾಸ್ಟೆಲ್‌ ಸರ್ಕಲ್‌ನಿಂದ ಮಲ್ಲಿಕಟ್ಟೆ ಕಡೆಗೆ ತೆರಳುವ ಕಾಂಕ್ರೀಟ್‌ ಮಾರ್ಗದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಪಟ್ಟಿ ಕೆಲವು ದಿನಗಳ ಹಿಂದೆಯೇ ಸವೆದ ಪರಿಣಾಮ ಮೇಲೆ ಬಂದಿತ್ತು. ಸವಾರರು ಇದನ್ನು ಗಮನಿಸದೇ ವಾಹನ ಚಲಾಯಿಸುತ್ತಿದ್ದರು. ಒಂದು ವೇಳೆ ಈ ಕಬ್ಬಿಣದ ಪಟ್ಟಿ ಬೈಕ್‌ ಅಥವಾ ಕಾರುಗಳ ಚಕ್ರಕ್ಕೆ ಸಿಲುಕಿಕೊಂಡರೆ ಅಪಾಯ ಗ್ಯಾರಂಟಿ. 

ಇದನ್ನು ಗಮನಿಸಿದ್ದ ಸಾರ್ವಜನಿಕರೇ ಆ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ, ಸಂಬಂಧಪಟ್ಟವರು ಅಪಾಯದಲ್ಲಿದ್ದ ಕಬ್ಬಿಣದ ಪಟ್ಟಿಯನ್ನು ಸರಿಪಡಿಸುವ ಗೋಚಿಗೆ ಹೋಗಿರಲಿಲ್ಲ. ಇದನ್ನು ಗಮನಿಸಿದ ಟ್ರಾಫಿಕ್‌ ಪೊಲೀಸ್‌ ರೇವಣ ಸಿದ್ದಪ್ಪ ಅವರು ಕೆಲವು ನಿಮಿಷಗಳ ಕಾಲ ವಾಹನವನ್ನು ತಡೆದು ತಾವೇ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಲು ಮುಂದಾದರು. ಪಕ್ಕದ ಅಂಗಡಿಯಿಂದ ಸುತ್ತಿಗೆ ಮತ್ತು ಮೊಳೆಯನ್ನು ತೆಗೆದುಕೊಂಡು ಕಬ್ಬಿಣದ ಪಟ್ಟಿಯನ್ನು ಕಾಂಕ್ರೀಟ್‌ಗೆ ಸೇರಿಸಿದರು. 

ಇವರ ಜತೆಗೆ ಸ್ಥಳೀಯ ರಿಕ್ಷಾ ಚಾಲಕರು ಕೂಡ ಕೈ ಜೋಡಿಸಿದರು. ರೇವಣ ಸಿದ್ದಪ್ಪ ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಅವರು ಮೂಲತಃ ದಾವಣಗೆರೆಯವರು. ಎರಡು ವರ್ಷಗಳಿಂದ ಮಂಗಳೂರಿನಲ್ಲಿ ಟ್ರಾಫಿಕ್‌ ಪೊಲೀಸ್‌ ಆಗ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾನವೀಯತೆ ಮೆರೆದರು 
ಬಂಟ್ಸ್‌ ಹಾಸ್ಟೆಲ್‌ ವೃತ್ತದಲ್ಲಿ ಟ್ರಾಫಿಕ್‌ ಪೊಲೀಸರು ಮಾನವೀಯತೆ ಮೆರೆಯುವುದು ಇದೇನು ಮೊದಲಲ್ಲ. ಕಳೆದ ವರ್ಷ ಟ್ರಾಫಿಕ್‌ ಪೊಲೀಸ್‌ ಬೋಪಯ್ಯ ಅವರು ಮಂಗಳೂರಿನಲ್ಲಿ ಸುರಿದ ಜಡಿ ಮಳೆಯ ನಡುವೆಯೇ ಟ್ರಾಫಿಕ್‌ ಸಮಸ್ಯೆ ಉಂಟಾಗಬಾರದು ಎಂದು ವಾಹನ ದಟ್ಟಣೆಯನ್ನು ಸಮರ್ಪಕವಾಗಿ ನಿಭಾಯಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಕೆಲವು ತಿಂಗಳುಗಳ ಹಿಂದೆ ಲಾಲ್‌ಬಾಗ್‌ ಬಳಿ ಸಿಗ್ನಲ್‌ನಲ್ಲಿ ಕಾರೊಂದು ಕೆಟ್ಟು ನಿಂತಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಅಲ್ಲದೆ ಹಿಂದಿದ್ದ ವಾಹನ ಚಾಲಕರು ಹಾರ್ನ್ ಹಾಕಲು ಶುರುವಿಟ್ಟುಕೊಂಡಿದ್ದರು. ಆಗ ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್‌ ಪೊಲೀಸ್‌ ದೇರಣ್ಣ ಅವರು ಮಾನವೀಯತೆ ಮೆರೆದಿದ್ದರು.

Advertisement

ದೂರಿಗೆ ಸ್ಪಂದಿಸಲಿಲ್ಲ
ಬಂಟ್ಸ್‌ ಹಾಸ್ಟೆಲ್‌ ಬಳಿಯ ಕಾಂಕ್ರಿಟ್‌ ರಸ್ತೆಯಲ್ಲಿ ಈ ರೀತಿಯ ಎರಡು ಕಬ್ಬಿಣದ ಪಟ್ಟಿ ಇದೆ. ಇವುಗಳು ಸದಾ ಕಾಂಕ್ರಿಟ್‌ನಿಂದ ಮೇಲೆ ಬರುತ್ತಿದ್ದು, ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಮಹಾನಗರ ಪಾಲಿಕೆ ದೂರು ನೀಡಿದ್ದರು. ಆದರೆ ಪಾಲಿಕೆ ದೂರಿಗೆ ಸ್ಪಂದಿಸಲಿಲ್ಲ ಎಂಬುವುದು ಸ್ಥಳೀಯರ ಅಭಿಪ್ರಾಯ.

ಎಲ್ಲರಿಂದಲೂ ಇಂತಹ ಕೆಲಸವಾಗಲಿ
ಬಂಟ್ಸ್‌ ಹಾಸ್ಟೆಲ್‌ ಸಮೀಪ ಕರ್ತವ್ಯದಲ್ಲಿದ್ದಾಗ ರಸ್ತೆ ಕಾಂಕ್ರೀಟ್‌ ಗೆ ಹಾಕಲಾಗಿದ್ದ ಕಬ್ಬಿಣದ ಪಟ್ಟಿ ತಗುಲಿ ಅಪಘಾತ ಸಂಭವಿಸಿತ್ತು. ಇದನ್ನು ಕಂಡು ಮುಂದೆ ಈ ರೀತಿ ಘಟನೆ ನಡೆಯದಿರಲಿ ಎಂದು ಈ ಕೆಲಸ ಮಾಡಿದೆ. ಪ್ರತಿಯೊಬ್ಬರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. 
ರೇವಣ ಸಿದ್ದಪ್ಪ , ಟ್ರಾಫಿಕ್‌ ಪೊಲೀಸ್‌ 

ಮಾದರಿ ಕೆಲಸ
ಟ್ರಾಫಿಕ್‌ ಪೊಲೀಸ್‌ ರೇವಣ ಸಿದ್ದಪ್ಪ ಅವರ ಕೆಲಸ ಮಾದರಿಯಾಗಿದೆ. ಟ್ರಾಫಿಕ್‌ ಪೊಲೀಸರು ಸಾರ್ವಜನಿಕರ ಕಷ್ಟಕ್ಕೂ ಸ್ಪಂದಿಸಬೇಕಿದೆ. ಮಂಗಳೂರಿನಲ್ಲಿ ಟ್ರಾಫಿಕ್‌ ಪೊಲೀಸರು ಈ ರೀತಿ ಮಾನವೀಯತೆ ಮೆರೆಯುತ್ತಿರುವುದು ಇದೇ ಮೊದಲಲ್ಲ. 
ಮಂಜುನಾಥ ಶೆಟ್ಟಿ,
   ಎಸಿಪಿ ಟ್ರಾಫಿಕ್‌ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next