Advertisement

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

11:30 AM Apr 27, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಊರಿಗೆ ಮತ ಹಾಕಲು ವಾಹನಗಳಲ್ಲಿ ತೆರಳಿದವರು, ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮತ ಹಾಕಿ ಊರಿಗೆ ಹೊರಟವರು ಹಾಗೂ ಮತ ಹಾಕದೇ ಊರು/ಪ್ರವಾಸಿ ತಾಣಗಳ ಭೇಟಿಗೆ ತೆರಳುವವರ ಪ್ರಮಾಣ ಹೆಚ್ಚಿದ್ದರಿಂದ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ಶುಕ್ರವಾರ ಭಾರಿ ಸಂಚಾರ ದಟ್ಟಣೆ ಉಂಟಾಯಿತು.

Advertisement

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನದ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು. ಮತ ಹಾಕಲು ಬೆಂಗಳೂರಿನ ಲಕ್ಷಾಂತರ ಉದ್ಯೋಗಿಗಳು ಖಾಸಗಿ ವಾಹನಗಳಲ್ಲಿ ತಮ್ಮ ತಮ್ಮ ಊರಿಗಳಿಗೆ ಶುಕ್ರವಾರ ಮುಂಜಾನೆಯೇ ತೆರಳಿದರು. ಶುಕ್ರವಾರ ಮತದಾನಕ್ಕಾಗಿ ರಜೆಯಿದ್ದರೆ, ಏ.27ರಂದು 4ನೇ ಶನಿವಾರವಾಗಿದ್ದು, ಅಂದೂ ಸರ್ಕಾರಿ ರಜೆ ಇದೆ. ಇನ್ನು ಭಾನುವಾರ ಎಂದಿನಂತೆ ರಜೆ ಇದ್ದೇ ಇರುತ್ತದೆ. ಒಟ್ಟಾರೆ 3 ದಿನ ಸಾಲು-ಸಾಲು ರಜೆಯಿರುವ ಹಿನ್ನೆಲೆಯಲ್ಲಿ ಅಂದಾಜು ಬೆಂಗಳೂರಿನ ಶೇ.25ರಷ್ಟು ಮಂದಿ ಊರುಗಳಿಗೆ ತೆರಳಿದ್ದಾರೆ ಇನ್ನು ಬೆಂಗಳೂರಿನಲ್ಲೇ ನೆಲೆಸಿರುವ ಬಹುತೇಕ ಜನ ತಾವು ಮೊದಲೇ ಪ್ಲ್ರಾನ್‌ ಮಾಡಿದ್ದಂತೆ ಬೆಳಗ್ಗೆಯೇ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಅಲ್ಲಿಂದ ನೇರವಾಗಿ ಊರುಗಳತ್ತ ಸಾಗಿದರು. ಈ ಪೈಕಿ ಕೆಲವರು ಮತ ಚಲಾಯಿಸದೇ ಬೇರೆ ಜಿಲ್ಲೆಗಳಲ್ಲಿರುವ ತಮ್ಮ ಮನೆಗಳಿಗೆ ಕಾರು, ಬೈಕ್‌ಗಳಲ್ಲಿ ಸಾಗುತ್ತಿರುವುದೂ ಕಂಡು ಬಂತು.

ಸಾಫ್ಟ್ವೇರ್‌ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟೆಕಿಗಳು, ಖಾಸಗಿ ಉದ್ಯೋಗಿಗಳು, ಬ್ಯಾಂಕ್‌ ನೌಕರರು, ಚಾರಣ ಪ್ರಿಯರು, ಪ್ರವಾಸಿಗರು 3 ದಿನಗಳ ಕಾಲ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಜೋಶ್‌ನಲ್ಲಿ ಬೆಂಗಳೂರಿಗೆ ಬೈ ಬೈ ಹೇಳಿದರು. ಏಕಕಾಲಕ್ಕೆ ಇವರೆಲ್ಲರೂ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಗಳ ಮಾರ್ಗವಾಗಿ ಹೋದ ಪರಿಣಾಮ ಇಲ್ಲಿ ಅತೀಯಾದ ಸಂಚಾರ ದಟ್ಟಣೆ ಉಂಟಾಯಿತು.

ತುಮಕೂರು ರಸ್ತೆಯಲ್ಲಿ ಯಶವಂತಪುರ, ಪೀಣ್ಯ, ಜಾಲಹಳ್ಳಿ, ನೆಲಮಂಗಲ ಟೋಲ್‌ಗೇಟ್‌ವರೆಗೂ ಶುಕ್ರವಾರ ಮುಂಜಾನೆಯಿಂದ ತಡರಾತ್ರಿವರೆಗೂ ಕಿಲೋಮೀಟರ್‌ಗಟ್ಟಲೆ ಸರದಿ ಸಾಲಿನಲ್ಲಿ ಸಾವಿರಾರು ವಾಹನಗಳು ನಿಂತಿದ್ದರೆ, ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ನಿಧಾನ ಗತಿಯಲ್ಲಿತ್ತು. ಬಳ್ಳಾರಿ ರಸ್ತೆ, ಹೊಸೂರು ರಸ್ತೆಗಳಲ್ಲೂ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಸಂಚಾರ ದಟ್ಟಣೆ ಇತ್ತು. ವಾಹನ ಸವಾರರು ತಾಸುಗಟ್ಟಲೆ ಸಂಚಾರ ದಟ್ಟಣೆಗೆ ಸಿಲುಕಿ ತಡವಾಗಿ ಊರು ಸೇರಿದರು.

ತುಮಕೂರು, ಮೈಸೂರು ರಸ್ತೆಯಲ್ಲೇಕೆ ಹೆಚ್ಚಿನ ವಾಹನ ದಟ್ಟಣೆ?: ಬೆಂಗಳೂರಿನಿಂದ ತುಮಕೂರು, ಹಾಸನ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗ, ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ತುಮಕೂರು ರಸ್ತೆ ಮೂಲಕವೇ ಸಾಗಬೇಕಾಗಿದೆ. ಇನ್ನು ಮೈಸೂರು ರಸ್ತೆ ಮೂಲಕವೂ ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಗೆ ತೆರಳಬಹುದಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕರು ಈ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಬಂದವರಾಗಿದ್ದಾರೆ. ಇವರೆಲ್ಲರೂ ಇದೇ ಮಾರ್ಗವಾಗಿ ತಮ್ಮ ವಾಹನಗಳಲ್ಲಿ ಊರುಗಳಿಗೆ ಹೋದ ಹಿನ್ನೆಲೆಯಲ್ಲಿ ತುಮಕೂರು ರಸ್ತೆ, ಮೈಸೂರು ರಸ್ತೆಯಲ್ಲಿ ಸಂಜೆವರೆಗೂ ಅತಿಯಾದ ಟ್ರಾಫಿಕ್‌ ಜಾಮ್‌ ಕಂಡು ಬಂತು.

Advertisement

ಅಲ್ಲಲ್ಲಿ ಟ್ರಾಫಿಕ್‌ ನಿರ್ವಹಣೆ: ಸಂಚಾರ ದಟ್ಟಣೆ ನಿರ್ವಹಿಸುವ ಬೆಂಗಳೂರಿನ ಸಂಚಾರ ವಿಭಾಗದ ಬಹುತೇಕ ಪೊಲೀಸರು ಚುನಾವಣಾ ಕರ್ತವ್ಯಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿರ್ವಹಿಸಲು ಸಿಬ್ಬಂದಿ ಕೊರತೆ ಎದುರಾಯಿತು. ಇಷ್ಟಾದರೂ, ಉತ್ತರ ಸಂಚಾರ ವಿಭಾಗದ ಎಸಿಪಿ ನೇತೃತ್ವದ ಪೊಲೀಸರ ತಂಡವು ಪೀಣ್ಯ ಮೇಲ್ಸೇತುವೆ, ಜಾಲಹಳ್ಳಿ, ಯಶವಂತಪುರ, ನೆಲಮಂಗಲದವರೆಗೂ ಉಂಟಾಗಿದ್ದ ಅತೀಯಾದ ಸಂಚಾರ ದಟ್ಟಣೆ ನಿರ್ವಹಿಸಿ, ಸುಗಮ ಸಂಚಾರಕ್ಕೆ ಎಡೆಮಾಡಿಕೊಟ್ಟರು. ಮೈಸೂರು, ತುಮಕೂರು ರಸ್ತೆಗಳಲ್ಲಿ ಟ್ರಾμಕ್‌ ಜಾಮ್‌ ಆಗುವ ಬಗ್ಗೆ ಮೊದಲೇ ಮುನ್ಸೂಚನೆ ಸಿಕ್ಕಿದ್ದರಿಂದ ಲಕ್ಷಾಂತರ ವಾಹನಗಳು ಸಾಗಲು ಸೂಕ್ತ ಕ್ರಮ ಕೈಗೊಂಡಿದ್ದೆವು ಎಂದು ಉತ್ತರ ಸಂಚಾರ ವಿಭಾಗದ ಎಸಿಪಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಎರಡು ವಾಹನಗಳು ಡಿಕ್ಕಿ:

ಪೀಣ್ಯ ಮೇಲ್ಸೇತುವೆ ಬಳಿ ಶುಕ್ರವಾರ ಬೆಳಗ್ಗೆ 2 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿತ್ತು. ಎರಡೂ ವಾಹನ ಚಾಲಕರೂ ರಸ್ತೆ ಮಧ್ಯೆಯೇ ವಾಹನಗಳನ್ನು ನಿಲುಗಡೆ ಮಾಡಿ ಕೆಲ ಕಾಲ ವಾಗ್ವಾದ ನಡೆಸಿದರು. ನಂತರ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ಸುಖಾಂತ್ಯಗೊಳಿಸಿ ಸುಗಮ ಸಂಚಾರಕ್ಕೆ ಎಡೆಮಾಡಿಕೊಟ್ಟರು. ತುಮಕೂರು ರಸ್ತೆಯಲ್ಲಿ ಬೆಳಗ್ಗೆ ಟ್ರಾಫಿಕ್‌ ಜಾಮ್‌ ಮತ್ತಷ್ಟು ಹೆಚ್ಚಲು ಈ ಪ್ರಕರಣವೂ ಕಾರಣವಾಯಿತು.

ಬಿಕೋ ಎನುತ್ತಿದ್ದ ರಸ್ತೆಗಳು :  ಬೆಂಗಳೂರಿನಲ್ಲಿ ಬಹುತೇಕ ಅಂಗಡಿ- ಮುಂಗಟ್ಟುಗಳು ಶುಕ್ರವಾರ ಮುಚ್ಚಿದ್ದವು. ಮತದಾನದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಅಂಗಡಿ ತೆರೆದಿರಲಿಲ್ಲ. ಇನ್ನೀತರ ವಾಣಿಜ್ಯ ಚಟುವಟಿಕೆಗಳೂ ಸ್ತಬ್ಧವಾಗಿತ್ತು. ಪರಿಣಾಮ ಬೆಂಗಳೂರು ನಗರದೊಳಗಿನ ರಸ್ತೆಗಳೆಲ್ಲವೂ ಖಾಲಿ-ಖಾಲಿಯಾಗಿ ಬಿಕೋ ಎನ್ನುತ್ತಿದ್ದವು. ಸಾಮಾನ್ಯ ದಿನಕ್ಕಿಂತ ಕಡಿಮೆ ವಾಹನ ಸಂಚಾರವಿತ್ತು. ಕೆ.ಆರ್‌.ಮಾರುಕಟ್ಟೆ, ಯಶ ವಂತಪುರ, ಮಡಿವಾಳ ಮಾರುಕಟ್ಟೆಗಳಲ್ಲಿ ಜನರ ಓಡಾಟ ವಿರಳವಾಗಿತ್ತು. ಆದರೆ, ಮೆಜೆಸ್ಟಿಕ್‌, ಸೆಟಲೈಟ್‌, ಶಾಂತಿನಗರದಿಂದ ಬೇರೆ ಜಿಲ್ಲೆಗಳಿಗೆ ಸಾಗುವ ಸರ್ಕಾರಿ ಬಸ್ಸುಗಳೆಲ್ಲಾ ತುಂಬಿ ತುಳುಕುತ್ತಿದ್ದವು. ಖಾಸಗಿ ಬಸ್‌ಗಳಲ್ಲೂ ಹೆಚ್ಚಿನ ರಶ್‌ ಇರುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next