Advertisement

ಕಾರ್ಕಳ : “ವಾಹನ ದಟ್ಟಣೆ ತಗ್ಗಿಸಲು ಶುಲ್ಕ ಸಹಿತ ಪಾರ್ಕಿಂಗ್‌’

10:48 PM Feb 25, 2022 | Team Udayavani |

ಕಾರ್ಕಳ : ನಗರದಲ್ಲಿ ಸಾರ್ವಜನಿಕರು ವಾಹನ ಒಂದೇ ಕಡೆ ನಿಲ್ಲಿಸಿ ತೆರಳಲು ಅನುಕೂಲವಾಗುವಂತೆ, ಪಾರ್ಕಿಂಗ್‌ನಲ್ಲಿ ವಾಹನ ದಟ್ಟಣೆ ತಗ್ಗಿಸಲು ಶುಲ್ಕ ಸಹಿತ ಪಾರ್ಕಿಂಗ್‌ ವ್ಯವಸ್ಥೆ ಆವಶ್ಯಕತೆಯಿದೆ ಎಂದು ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾಕೇಶವ್‌ ಅಭಿಪ್ರಾಯ ಪಟ್ಟರು.

Advertisement

ಪುರಸಭೆಯಲ್ಲಿ ಶುಕ್ರವಾರ ಆಯವ್ಯಯದ ಕುರಿತು ಸಾರ್ವಜನಿಕರ ಸಲಹೆ ಸೂಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಗರಿಕ ದಯಾನಂದ ಪೈ ಅವರು ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪೊಲೀಸ್‌ ಅಧಿಕಾರಿ ಅಣ್ಣಾಮಲೈ ಅವರ ಅವಧಿಯಲ್ಲಿ ನಗರದ ಪಾರ್ಕಿಂಗ್‌ ಸಮಸ್ಯೆಗೆ ಕಡಿವಾಣ ಬಿದ್ದಿತ್ತು.

ಪಾರ್ಕಿಂಗ್‌ನದ್ದೇ ಈಗ ದೊಡ್ಡ ಸಮಸ್ಯೆ ಎಂದರು.

ಅಧ್ಯಕ್ಷೆ ಸುಮಾಕೇಶವ್‌ ಉತ್ತರಿಸಿ, ನಗರದಿಂದ ವಿವಿಧ ಕೆಲಸ ಕಾರ್ಯಗಳಿಗೆ, ಉದ್ಯೋಗ ನಿಮಿತ್ತ ಬೇರೆ ಬೇರೆ ಕಚೇರಿಗೆ ತೆರಳುವವರು ನಗರ, ಆನೆಕೆರೆ ಮುಂತಾದ ಕಡೆ ರಸ್ತೆ ಬದಿ ತಮ್ಮ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಬೆಳಗ್ಗೆ ಹೋದವರು ರಾತ್ರಿ ವಾಪಸ್‌ ಬರುವ ತನಕವೂ ವಾಹನ ಅಲ್ಲೇ ಇರುತ್ತದೆ. ಇದರಿಂದ ಸಮಸ್ಯೆಗಳಾಗುತ್ತಿವೆ. ಶುಲ್ಕ ವ್ಯವಸ್ಥೆಯ ಪಾರ್ಕಿಂಗ್‌ ವ್ಯವಸ್ಥೆ ಮಾಡಿದರೆ, ಒತ್ತಡ ತಕ್ಕ ಮಟ್ಟಿಗೆ ಶಮನವಾಗುತ್ತದೆ. ಪುರಸಭೆಗೆ ಆದಾಯವೂ ಬರುತ್ತದೆ ಎಂದರು.

ಈ ಕುರಿತು ಟ್ರಾಫಿಕ್‌ ಪೊಲೀಸರ ಜತೆ ಸಂವಹನ ನಡೆಸಿ, ಚರ್ಚಿಸಿ ನಿರ್ಧಾರಕ್ಕೆ ಬರುವ ಬಗ್ಗೆ ಮುಖ್ಯಾಧಿಕಾರಿ ಟಿ. ರೂಪಾ ಶೆಟ್ಟಿ ಸಲಹೆ ನೀಡಿದರು. ಮೂರು ಮಾರ್ಗ ರಸ್ತೆಯ ಮಾರ್ಕೆಟ್‌ ರಸ್ತೆಯಲ್ಲಿ ಕಿರಿದಾದ ಜಾಗದಲ್ಲಿ ಹೊಟ್ಟೆ ಪಾಡಿಗೆ ವ್ಯಾಪಾರ ಮಾಡುತ್ತಿದ್ದಾರೆ. ಈ ಸ್ಥಳ ಇಕ್ಕಟ್ಟಾಗಿದೆ. ರಸ್ತೆಯಲ್ಲೇ ವ್ಯಾಪಾರ, ಖರೀದಿ ಮಾಡುವುದರಿಂದ ವಾಹನ ಸಂಚಾರ ಕಷ್ಟ ಎಂದು ವಸಂತ ಭಟ್‌ ಹೇಳಿದರು.

Advertisement

ಪುರಸಭೆ ವ್ಯಾಪ್ತಿಯಲ್ಲಿ ನಗರ ಬಸ್‌ಸ್ಟಾಂಡ್‌ ಮತ್ತು ಬಂಡಿಮಠ ಎರಡೂ ಬಸ್‌ ನಿಲ್ದಾಣಗಳನ್ನು ಸಮನಾಗಿ ಬಳಸುವಂತೆ ಆದೇಶವಿರುವ ಬಗ್ಗೆ ಪ್ರಸ್ತಾವ ಬಂತು. 23 ವಾರ್ಡ್‌ಗಳಲ್ಲಿ ಅಂಗಡಿ ಕಟ್ಟಡ ತೆರೆದು ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಕಟ್ಟಡ ಬಾಡಿಗೆಯಿಂದ ಪುರಸಭೆಗೆ ಆದಾಯ ಬರುತ್ತದೆ ಎಂದು ಚಂದ್ರಹಾಸ ಸುವರ್ಣ ಸಲಹೆ ನೀಡಿದರು.
ಬಹುತೇಕ ವಾರ್ಡ್‌ಗಳಲ್ಲಿ ಅಂಗಡಿ ತೆರೆಯಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಸ್ಥಾಯೀ ಸಮಿತಿ ಅಧ್ಯಕ್ಷ ಯೋಗೀಶ್‌ ದೇವಾಡಿಗ ಹಳೆಯ ಕಟ್ಟಡಗಳಿಗೆ ಹಳೆಯ ತೆರಿಗೆ ದರವೇ ಇದೆ. ಕಟ್ಟಡ ಕಟ್ಟಿದವರು ವಿಸ್ತರಿಸಿಕೊಂಡಿದ್ದಾರೆ. ವಿಸ್ತರಿಸಿದ ಜಾಗಕ್ಕೆ ಸೇರಿ ತೆರಿಗೆ ವಿಧಿಸಿದರೆ ಪುರಸಭೆಗೆ ಆದಾಯ ಬರುತ್ತದೆ ಎಂದರು. ಈ ಬಗ್ಗೆ ಸಮೀಕ್ಷೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವ ಎಂದು ಅಧ್ಯಕ್ಷರು ಸಲಹೆ ನೀಡಿದರು. ಸದಸ್ಯ ಪ್ರಸನ್ನ ಸ್ಥಳ ಬಾಡಿಗೆ ಹೆಚ್ಚಳ ವಿಚಾರ ಪ್ರಸ್ತಾವಿಸಿದರು.

ಬಜೆಟ್‌ ಆದಷ್ಟು ಬೇಗ ಮಂಡಿಸಲು ಸಾರ್ವ ಜನಿಕರು ಸಲಹೆ ಸೂಚನೆಗಳನ್ನು ನೀಡಿದಲ್ಲಿ ಅಭಿಪ್ರಾಯ ನೋಡಿಕೊಂಡು ಅವಕಾಶವಿದ್ದಲ್ಲಿ ಸೇರಿಸಿ ಕೊಳ್ಳುವುದಾಗಿ ಮುಖ್ಯಾಧಿಕಾರಿಗಳು ಹೇಳಿದರು.

ಉಪಾಧ್ಯಕ್ಷೆ ಪಲ್ಲವಿ, ಸ್ಥಾಯೀ ಸಮಿತಿ ಅಧ್ಯಕ್ಷ ಯೊಗೀಶ್‌ ದೇವಾಡಿಗ, ಸದಸ್ಯರು ಉಪಸ್ಥಿತರಿದ್ದರು.

ಸಾರ್ವಜನಿಕರು ನಾಲ್ಕೇ ಮಂದಿ!
2022-23ನೇ ಸಾಲಿನ ಆಯವ್ಯಯ ತಯಾರಿ ಸಲಾಗಿದ್ದು, ಇದಕ್ಕೆ ಸಂಬಂಧಿಸಿ ಸಾರ್ವಜನಿಕರ ಸಲಹೆ ಸೂಚನೆ ಪಡೆಯಲು ಸಭೆಯನ್ನು ಕರೆಯ ಲಾಗಿತ್ತು. ಸಭೆಗೆ ಮುಂಚಿತ ಪ್ರಕಟನೆ ನೀಡಿ ಸಾಕಷ್ಟು ಪ್ರಚಾರ ಕೂಡ ನೀಡಲಾಗಿತ್ತು. ಇಷ್ಟಿದ್ದರೂ ಸಭೆಗೆ ಹಾಜರಾದ ಸಾರ್ವಜನಿಕರು ಕೇವಲ ನಾಲ್ಕು ಮಂದಿ ಮಾತ್ರ. ಸಭೆಯಲ್ಲಿ ಸದಸ್ಯರನ್ನು ಹೊರತುಪಡಿಸಿ ನಾಲ್ಕೆ ಮಂದಿ ಹಾಜರಿರುವ ಮೂಲಕ ಸಭೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next