Advertisement

ಅನುಭವವು ಸವಿಯಲ್ಲ ಅದರ ನೆನಪೇ ಸವಿಯೂ

04:17 PM Jul 03, 2021 | Team Udayavani |

ಪಿಯುಸಿಯಲ್ಲಿ ಕಲಿಯುತ್ತಿದ್ದ ದಿನಗಳವು. ಕಾಲೇಜಿನಿಂದ ಒಂದು ಪ್ರವಾಸವನ್ನು ಆಯೋಜಿಸಿದ್ದರು. ಶ್ರೀರಂಗಪಟ್ಟಣ, ಕೆಮ್ಮಣ್ಣುಗುಂಡಿ ಕಡೆಗೆ.  ಪ್ರವಾಸ ಹೋಗುವುದೆಂದರೆ ನಮಗೆಲ್ಲರಿಗೂ ಭಾರೀ ಖುಷಿ. ಹೊಸ ಪ್ರದೇಶ, ಹೊಸ ಜನ, ಹೊಸ ಅನುಭವ ಎಲ್ಲವೂ ನಮಗೆ ಪ್ರಿಯವಾಗಿದ್ದವು. “ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎಂಬಂತೆ ಪ್ರವಾಸದ ಕ್ಷಣಗಳು ಕೊಡುವ ಆನಂದದಷ್ಟೇ ಅದರ ನೆನಪುಗಳು ಕೂಡ ಕೊಡುತ್ತವೆ. ಅದೂ ಗೆಳೆಯರ ಜತೆ ಪ್ರವಾಸವೆಂದರೆ ಹೇಳಬೇಕೆಂದಿಲ್ಲ. ಮತ್ತೆ ಮತ್ತೆ ಬೇಕೆನಿಸುವಷ್ಟು ಖುಷಿ. ಎಲ್ಲರೂ ಹೊರಡುವುದೆಂದು ನಿರ್ಧಾರವಾದ ಮೇಲೆ ಪ್ರವಾಸ ಹೋಗುವ ದಿನ ನಿಗದಿಯಾಗಿತ್ತು.

Advertisement

ಅದು ನಮ್ಮೆಲ್ಲರಿಗೂ ತುಂಬಾ ಖುಷಿಯ ಸಮಯ. ಅಂತೂ ಇಂತೂ ಪ್ರವಾಸ ಹೋಗುವ ದಿನ ಬಂದೇ ಬಿಟ್ಟಿತು. ರಾತ್ರಿ ಯಾವಾಗ ಆಗುತ್ತೆ ಬಸ್‌ ಯಾವಾಗ ಬರುತ್ತೆ ಎಂದು ಎದುರು ನೋಡ ತೊಡಗಿದೆವು. ರಾತ್ರಿ 8:30 ರ ಸುಮಾರಿಗೆ ಬಸ್‌ನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಹಾಡು ಹಾಡುಹಾಡುತ್ತಾ, ಮಲಗಿದ್ದ ಗೆಳೆಯರ ಕಾಲೆಳೆಯುತ್ತಾ ಕೊನೆಯಲ್ಲಿ ನಾವೇ ನಿದ್ದೆಗೆ ಜಾರಿದೆವು.

ಬೆಳಗ್ಗೆ ಎದ್ದು ನೋಡುವುದರೊಳಗಾಗಿ ಬೆಟ್ಟಗಳ ನಡುವೆ ಬಸ್‌ ಸಾಗುತ್ತಿತ್ತು.  ಉದಯಿಸುತ್ತಿದ್ದ ಸೂರ್ಯನ ಸೌಂದರ್ಯ  ಕಣ್ಣಿಗೆ ಮುದವನ್ನು ನೀಡುವಂತಿತ್ತು. ನಾವು ಮೊದಲನೆೆ ದಿನ ಶ್ರೀರಂಗಪಟ್ಟಣಕ್ಕೆ ತಲುಪಿದೆವು. ಬೆಳಗಿನ ಕರ್ಮಾದಿಗಳನ್ನು ಮುಗಿಸಿ ಬರುವಷ್ಟರಲ್ಲಿ  ಬಿಸಿ ಬಿಸಿಯಾದ ಉಪಿಟ್ಟು ಸಿದ್ಧವಾಗಿತ್ತು. ಉಪಾಹಾರ ಸೇವಿಸಿ ಟಿಪ್ಪುಸುಲ್ತಾನರ ಬೇಸಗೆ ಅರಮನೆಯ ಸೌಂದರ್ಯವನ್ನು ನೋಡಲು ತೆರಳಿದೆವು. ಆ ಅರಮನೆಯ ಗೋಡೆಯ ಮೇಲಿನ ಟಿಪ್ಪುವಿನ ಆಡಳಿವನ್ನು ವಿವರಿಸುವ ಚಿತ್ರಗಳು,ಅವರ ಆಯುಧ ವಸ್ತ್ರ,ವಂಶಸ್ಥರ ಭಾವ ಚಿತ್ರಗಳು ಅತ್ಯಂತ ಮನಮೋಹಕವಾಗಿದ್ದವು.

ಅಲ್ಲಿಂದ ನಾವು ಮೈಸೂರಿಗೆ ಪ್ರಯಾಣ ಬೆಳೆಸಿದೆವು. ಸಾಂಸ್ಕೃತಿಕ ನಗರಿ ಮೈಸೂರೆಂದರೆ ಹೇಳಬೇಕೆಂದೇನಿಲ್ಲ. ಅಲ್ಲಿ ಎಲ್ಲವೂ ಅದ್ಭುತವೇ. ಅದರಲ್ಲಿಯೂ ಕೂಡ ಮೈಸೂರು ಅರಮನೆಯ ಸೊಬಗು ನಮ್ಮ ಕಣ್ಣು ಸೆಳೆಯ ತೊಡಗಿತು. ಅಲ್ಲಿನ ಪ್ರತಿಯೊಂದು ವಸ್ತುಗಳು ಕೂಡ ದೇಶದ ಸಂಸ್ಕೃತಿಯನ್ನು ಸಾರಿ ಸಾರಿ ಹೇಳುತ್ತಿದ್ದವು. ಅರಮನೆಯಲ್ಲಿನ ಒಡೆಯರ ಚಿತ್ರಪಟಗಳು ಮೈಸೂರು ರಾಜರ ಇತಿಹಾಸನವನ್ನು ತಿಳಿಸುವಂತಿದ್ದವು. ಪುಷ್ಪಗಳಿಂದ ಅಲಂಕೃತಗೊಂಡ ಅರಮನೆಯ ಮುಂದಿನ ಉದ್ಯಾನವನದಲ್ಲಿ ಕೆಲವು  ಕ್ಷಣಗಳನ್ನು ಕಳೆದು ಬಂದೆವು.

Advertisement

ಮೈಸೂರಿಗೆ ಬಂದ ಮೇಲೆ ನಗರ ರಕ್ಷಕಿಯನ್ನು ಭೇಟಿಯಾಗಿ ಪ್ರಾರ್ಥನೆ ಸಲ್ಲಿಸದೆ ತೆರಳಲಾದೀತೇ! ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ಹೋಗಿ ಚಾಮುಂಡಿ ದೇವಿ ದರ್ಶನ ಪಡೆದು “ಕೆ.ಆರ್‌.ಎಸ್‌.ಗಾರ್ಡನ್‌’ಗೆ ಹೋದಾಗ ಸಂಜೆಯಾಗಿತ್ತು. ಅಲ್ಲಿನ ವರ್ಣರಂಜಿತ ಸಂಗೀತಮಯ ಕಾರಂಜಿಯನ್ನು ನೋಡಿ ಆನಂದಿಸಿದೆವು. ಅನಂತರ ಬಸ್‌ ಹತ್ತಿ “ಕೆಮ್ಮಣ್ಣುಗುಂಡಿ’ಯತ್ತ ಪ್ರಯಾಣ ಬೆಳೆಸಿದೆವು. ಅಲ್ಲಿನ ತಂಪಾದ ವಾತಾವರಣ ಹಿತಕರವಾಗಿತ್ತು. ಬೆಟ್ಟಗಳ ತುದಿಯಲ್ಲಿ ಅರುಣೋದಯ ದೃಶ್ಯ ಅತ್ಯಂತ ಮನಮೋಹಕವಾಗಿತ್ತು. ಅಲ್ಲಿಯೇ ಬೆಳಗಿನ ಉಪಾಹಾರವನ್ನು ಮುಗಿಸಿ ಬೆಟ್ಟಗಳ ಸೌಂದರ್ಯವನ್ನು ಸವಿಯಲು ಹೊರಟೆವು. ಬೆಟ್ಟಗಳನ್ನು ಏರುತ್ತಾ ಕೇಕೆ ಹಾಕುತ್ತಾ ಸಿಳ್ಳೆ ಹೊಡೆಯುತ್ತಾ ಬೆಟ್ಟಗಳ ತುದಿಯಲ್ಲಿ ನಿಂತು ಅಲ್ಲಿನ ಸೊಬಗನ್ನು ಸವಿದೆವು.

ಒಟ್ಟಿನಲ್ಲಿ ಕೆಮ್ಮಣ್ಣುಗುಂಡಿಯಲ್ಲಿನ ಮನಮೋಹಕ ದೃಶ್ಯಗಳು  ಮರೆಯಲಾಗದು. ಅಲ್ಲಿಂದ ಮುಂದೆ ನಮ್ಮ ಪಯಣ ಶೃಂಗೇರಿ ಶಾರದಾ ಪೀಠಕ್ಕೆ. ಮಧ್ಯಾಹ್ನದ ಹೊತ್ತಿಗೆ ಶೃಂಗೇರಿಗೆ ತಲುಪಿದೆವು. ಅಲ್ಲಿ ಶಾರದಾಂಬೆಯ ದರ್ಶನ ಮಾಡಿದೆವು. ಅಲ್ಲಿನ ಶಾಂತವಾದ ವಾತಾವರಣ ನಮ್ಮೆಲ್ಲ ಗೊಂದಲಗಳಿಗೆ ಉತ್ತರವನ್ನು ಹುಡುಕುವಂತಿತ್ತು. ಅನಂತರ ಅಲ್ಲಿನ ಕಣ್ಮನಸೆಳೆಯುವಂತಹ ಮೀನುಗಳನ್ನು ನೋಡಿದೆವು. ಅನಂತರ ಊಟ ಮುಗಿಸಿ ಕೊಲ್ಲೂರಿನ ಮುಖಾಂತರ “ಮುರುಡೇಶ್ವರ’ವನ್ನು ರಾತ್ರಿ ತಲುಪಿದೆವು. ಬೆಳಗಿನ ಜಾವ ರೆಡಿಯಾಗಿ ಶಿವನ ದರ್ಶನ ಪಡೆದು ಅಲ್ಲಿನ ಭೂಕೈಲಾಸ ಗುಹೆಯ ಒಳಗೆ ಹೋದೆವು. ಅಲ್ಲಿ ರಾವಣನು ಆತ್ಮಲಿಂಗವನ್ನು ಪಡೆದದ್ದು ಮತ್ತು ಕಳೆದುಕೊಂಡ ಪ್ರಸಂಗದ ಚಿತ್ರಗಳು ಮತ್ತು ರಾಮಾಯಣದ ದರ್ಶನವಾಯಿತು. ಆಮೇಲೆ” ಓಂ ಬೀಚ್‌” ಗೆ ಹೋಗಿ ಸಮುದ್ರದಲ್ಲಿ  ಗೆಳೆಯರ ಜತೆೆ ಆಟ ಆಡಿ, ನೀರಿನ ಅಲೆಯಲ್ಲಿ ಮುಳುಗಿ ಎದ್ದು ತುಂಬಾ ಸುಂದರ ಕ್ಷಣಗಳನ್ನು ಅನುಭವಿಸಿದೆವು. ಗೋಕರ್ಣದಿಂದ ಮತ್ತೆ ನಮ್ಮ ಹಾದಿ ಬಾಗಲಕೋಟದ ಕಡೆಗೆ ಸಾಗಿತು.

ಒಟ್ಟಿನಲ್ಲಿ “ದೇಶ ಸುತ್ತು ಕೋಶ ಓದು’ ಎಂಬ  ನಾಣ್ಣುಡಿಯಂತೆ ಪಿಯುಸಿ ವಿದ್ಯಾರ್ಥಿ ಜೀವನದಲ್ಲಿ ನಾವು ಒಂದು ಪ್ರವಾಸದ ಮೂಲಕ ಸುಂದರ ಕ್ಷಣಗಳನ್ನು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸಿಕೊಂಡೆವು. ನಮ್ಮ ಸಂಸ್ಕೃತಿ ಬಹಳ ವಿಶಾಲವಾಗಿದೆ. ನೋಡಿದಷ್ಟೂ ಮುಗಿಯದ, ಕೇಳಿದಷ್ಟೂ ತೀರದ ಹಲವಾರು ಪ್ರವಾಸಿ ತಾಣಗಳಿವೆ ನಮ್ಮಲ್ಲಿವೆ. ಒಂದರ ಹಿಂದೆಯೂ ಹಲವು ಅದ್ಭುತ ಕಥೆಗಳಿವೆ.  ಅವುಗಳನ್ನು ಭೇಟಿಯಾಗಿ ಕಣ್ಣು ತುಂಬಿಸಿಕೊಂಡರೆ ಸಾಲದು ಅವುಗಳ ಕಥೆಗಳಿಗೆ ಕಿವಿಯಾಗಬೇಕು. ಆಗಲೇ ನಮ್ಮ ಪ್ರವಾಸ ಸಾರ್ಥಕತೆಯನ್ನು ಪಡೆಯುತ್ತದೆ.

 

ಭೂಮಿಕಾ ದಾಸರಡ್ಡಿ,ಬಿದರಿ

ಕಂಠಿ ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next