Advertisement

ಬರೋಬ್ಬರಿ 99.77 ಕೋಟಿ ರೂ. ಬಾಕಿ!ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ಬರೆ

07:05 PM Apr 07, 2021 | Team Udayavani |

ಬೀದರ: ಹೆಮ್ಮಾರಿ ಕೋವಿಡ್‌ ಜತೆಗೆ ಪ್ರಾಕೃತಿಕ ವಿಕೋಪದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಈ ವರ್ಷ ಸಿಹಿ ಕಬ್ಬು ಕಹಿ ಅನುಭವ ನೀಡುತ್ತಿದೆ. ಕ್ರಷಿಂಗ್‌ ಮುಗಿದು ತಿಂಗಳು ಕಳೆದರೂ ಜಿಲ್ಲೆಯ ಸಹಕಾರ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಿದ ಕಬ್ಬಿಗೆ ಹಣ ಪಾವತಿಸದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗಳು ಬರೋಬ್ಬರಿ 99.77 ಕೋಟಿ ರೂ. ಕಬ್ಬಿನ ಬಾಕಿ ಉಳಿಸಿಕೊಂಡಿವೆ.

Advertisement

ಜಿಲ್ಲೆಯ ಸಹಕಾರಿ ಕಾರ್ಖಾನೆಗಳಾದ ಬೀದರ ತಾಲೂಕಿನ ನಾರಂಜಾ ಸಹಕಾರ ಸಕ್ಕರೆ (ಎನ್‌ಎಸ್‌ಎಸ್‌ಕೆ), ಭಾಲ್ಕಿ ತಾಲೂಕಿನ ಮಹಾತ್ಮ ಗಾಂಧಿ  ಸಹಕಾರ ಸಕ್ಕರೆ ಕಾರ್ಖಾನೆ (ಎಂಜಿಎಸ್‌ಎಸ್‌ಕೆ), ಖಾಸಗಿ ಕಾರ್ಖಾನೆಗಳಾದ ಭಾಲ್ಕೇಶ್ವರ ಶುಗರ್ ಮತ್ತು ಬೀದರ ಕಿಸಾನ್‌ ಸಕ್ಕರೆ ಕಾರ್ಖಾನೆ (ಬಿಕೆಎಸ್‌ಕೆ)ಗಳು ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸಿದ್ದು, ನಾಲ್ಕು ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದ ರೈತರಿಗೆ 99.77 ಕೋಟಿ ರೂ. ಪಾವತಿಸಬೇಕಿದೆ. ಕಬ್ಬಿನ ಹಣಕ್ಕಾಗಿ ರೈತರು ಎದುರು ನೋಡುವಂತಾಗಿದೆ.

ಕಬ್ಬಿನ ಬಿಲ್‌ಗಾಗಿ ರೈತರ ಅಲೆದಾಟ:
ಸಕ್ಕರೆ ಕಾರ್ಖಾನೆಗಳು ಕಬ್ಬು ಸಾಗಿಸಿದ 15 ದಿನದೊಳಗೆ ರೈತರ ಖಾತೆಗೆ ಹಣ ಜಮೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಕಾರ್ಖಾನೆಗಳು ನಿಯಮ ಪಾಲಿಸಿದೇ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಬಿತ್ತನೆ, ಗೊಬ್ಬರ, ಔಷಧ ಸಿಂಪರಣೆ ಸೇರಿ ಸಾವಿರಾರು ರೂ. ಖರ್ಚು ಮಾಡಿ ವರ್ಷಪೂರ್ತಿ ಕಷ್ಟಪಟ್ಟು ಬೆಳೆ ಬೆಳೆದ ರೈತರು ಕಬ್ಬು ಸಾಗಿಸಿದ ಹಣಕ್ಕಾಗಿ ತಿಂಗಳುಗಟ್ಟಲೇ ಅಲೆದಾಡುವಂತಾಗಿದೆ. ಇದರಿಂದ ಮಕ್ಕಳ ಮದುವೆ ಸೇರಿ ಇತರ ಕಾರ್ಯಕ್ಕಾಗಿ ಸಾಲ ಮಾಡಬೇಕಾದ ಸ್ಥಿತಿ ಬಂದಿದೆ.

ಟನ್‌ ಕಬ್ಬಿಗೆ ಜಿಲ್ಲಾಡಳಿತ ನಿಗದಿಪಡಿಸಿದ ದರ ಬಿಡಿ ಕಾರ್ಖಾನೆ ನಿರ್ಧರಿಸಿರುವ ಹಣವೂ ಪಾವತಿಸಲು ವಿಳಂಬ ಮಾಡಲಾಗುತ್ತಿದೆ. ಕಳೆದ ಜ.2ರಂದು ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸಹಕಾರ ಸೇರಿ ಎಲ್ಲ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರ ಸಭೆ ನಡೆಸಿ ಪ್ರಸಕ್ತ ಹಂಗಾಮಿಗೆ ಸಾಗಿಸುವ ಟನ್‌ ಕಬ್ಬಿಗೆ 2400 ರೂ. ದರ ನಿಗದಿ ಮಾಡಲಾಗಿತ್ತು. ಆದರೆ, ಈವರೆಗೆ ಯಾವ ಕಾರ್ಖಾನೆ ಸಹ ನಿಗದಿತ ಹಣ ನೀಡಿಲ್ಲ. ಎಫ್‌ಆರ್‌ಪಿಯಂತೆ ಟನ್‌ ಕಬ್ಬಿಗೆ 1900 ರೂ. (ಕಟಾವು ರಹಿತ) ಮತ್ತು 2708 (ಕಟಾವು ಸೇರಿ) ನೀಡಲಾಗುತ್ತಿದೆ.

ಕಾರ್ಖಾನೆಗಳಿಗೆ ನೋಟಿಸ್‌ ಜಾರಿ:
ಕಾರ್ಖಾನೆಗಳಲ್ಲಿ ಸಕ್ಕರೆ ದಾಸ್ತಾನು ಸಾಕಷ್ಟಿದ್ದರೂ ರೈತರಿಗೆ ಕೊಡಬೇಕಾದ ಹಣ ಮಾತ್ರ ಮಾತ್ರ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಕಬ್ಬು ಸಾಗಿಸಿದ ರೈತರಿಗೆ ಬಾಕಿ ಹಣ ಶೀಘ್ರ ಪಾವತಿಸುವ ಕುರಿತು ಇತ್ತೀಚೆಗೆ ಸಕ್ಕರೆ ಆಯುಕ್ತರ ಕಚೇರಿ ನೋಟಿಸ್‌ ನೀಡಿದೆ. ಇದರಿಂದ ಎಚ್ಚೆತ್ತ ಕಾರ್ಖಾನೆಗಳು ಕೆಲ ರೈತರ ಹಣ ಜಮೆ ಮಾಡಿದ್ದು, ಇನ್ನೂ ಸಾವಿರಾರು ರೈತರ ಹಣ ಪಾವತಿಸಬೇಕಿದೆ. ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಕಬ್ಬಿನ ಹಣ ರೈತರ ಕೈಸೇರುವಂತೆ ಕ್ರಮ ವಹಿಸಬೇಕಿದೆ.

Advertisement

ಯಾವ ಕಾರ್ಖಾನೆಯಿಂದ ಎಷ್ಟು ಪಾವತಿ?
ಜಿಲ್ಲೆಯ ಎನ್‌ಎಸ್‌ಎಸ್‌ಕೆ ಕಾರ್ಖಾನೆ 3671 ರೈತರ 2.52 ಲಕ್ಷ ಮೆ. ಟನ್‌ ಕಬ್ಬು ನುರಿಸಿದ್ದು, ಎಫ್‌ಆರ್‌ಪಿ ದರದಂತೆ 68.44 ಕೋಟಿ ರೂ. ಪಾವತಿಸಬೇಕು. ಆದರೆ, ಈವರೆಗೆ 53.06 ಕೋಟಿ ಜಮೆ ಮಾಡಲಾಗಿದ್ದು, ಇನ್ನು 15.37 ಕೋಟಿ ರೂ. ಪಾವತಿಸಬೇಕಿದೆ. ಎಂಜಿಎಸ್‌ಎಸ್‌ಕೆ ಕಾರ್ಖಾನೆ 3859 ರೈತರ 3.23 ಲಕ್ಷ ಮೆ. ಟನ್ ಕಬ್ಬು ನುರಿಸಿದ್ದು, ಎಫ್‌ಆರ್‌ಪಿ ದರದಂತೆ 85.13 ಕೋಟಿ ರೂ. ಪಾವತಿಸಬೇ ಕು. ಆದರೆ, ಈವರೆಗೆ 81.64 ಕೋಟಿ ಜಮೆ ಮಾಡಲಾಗಿದ್ದು, ಇನ್ನು 3.49 ಕೋಟಿ ರೂ. ಪಾವತಿಸಬೇಕು. ಭಾಲ್ಕೇಶ್ವರ ಶುಗರ್ ಕಾರ್ಖಾನೆ 3.74 ಲಕ್ಷ ಮೆ. ಟನ್‌ ಕಬ್ಬು ನುರಿಸಿದ್ದು, 101 ಕೋಟಿ ರೂ. ಪಾವತಿಸಬೇಕು. ಆದರೆ, ಈವರೆಗೆ 54.43 ಕೋಟಿ ರೂ. ಜಮೆ ಮಾಡಿದ್ದು, ಇನ್ನು 46.84 ಕೋಟಿ ರೂ. ನೀಡಬೇಕಿದೆ. ಇನ್ನೂ 2.22 ಲಕ್ಷ ಮೆ. ಟನ್ ಕಬ್ಬು ನುರಿಸಿರುವ ಬಿಕೆಎಸ್‌ಕೆ ಕಾರ್ಖಾನೆ 60.12 ಕೋಟಿ ರೂ. ಪಾವತಿಸಬೇಕು. ಆದರೆ, ಈವರೆಗೆ 26.05 ಕೋಟಿ ರೂ. ಜಮೆ ಮಾಡಿದ್ದು, 34.7 ಕೋಟಿ ರೂ. ನೀಡಬೇಕಿದೆ.

ಕಬ್ಬು ಸಾಗಿಸಿದ ರೈತರಿಗೆ ಕಾರ್ಖಾನೆಗಳು ನಿಯಮದಂತೆ ಹಣ ಜಮೆ ಮಾಡಬೇಕು. ಜಿಲ್ಲೆಯಲ್ಲಿ ಕಬ್ಬು ನುರಿಸಿರುವ ಕಾರ್ಖಾನೆಗಳು ಎಷ್ಟು ಬಾಕಿ ಉಳಿಸಿಕೊಂಡಿವೆ ಎಂಬುದನ್ನು ಮಾಹಿತಿ ಪಡೆದು ನಂತರ ಕಬ್ಬು ಬೆಳೆಗಾರರಿಗೆ ಹಣ ಪಾವತಿಗೆ ಕ್ರಮ ವಹಿಸುತ್ತೇನೆ. ರೈತರು ಆತಂಕ ಪಡುವ ಅಗತ್ಯವಿಲ್ಲ.
ರಾಮಚಂದ್ರನ್‌ ಆರ್‌., ಜಿಲ್ಲಾಧಿಕಾರಿ, ಬೀದರ

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next