Advertisement

2023: Deepfake,ಯಶ್‌19..ಈ ವರ್ಷ ದಕ್ಷಿಣ ಸಿನಿವಲಯದಲ್ಲಿ Trend ಆದ ಟಾಪ್‌ 10 ವಿಚಾರಗಳಿವು

03:09 PM Dec 26, 2023 | Team Udayavani |

ದಕ್ಷಿಣ ಸಿನಿರಂಗಕ್ಕೆ ಈ ವರ್ಷ ತೃಪ್ತಿದಾಯಕ ವರ್ಷವೆಂದರೆ ತಪ್ಪಾಗದು. ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ನಲ್ಲಿ ನಿರೀಕ್ಷಿತ ಯಶಸ್ಸು ಹಾಗೂ ಹೊಸ ಸಾಹಸಕ್ಕೆ ಸಿಕ್ಕ ಯಶಸ್ಸುಗಳು ಸೇರಿ ಈ ವರ್ಷ ತೃಪಿದಾಯಕ ವರ್ಷವಾಗಿದೆ. ಹಾಗಂತ ಸಿನಿಮಾಗಳು ಸೋತಿಲ್ಲ ಅಂಥೇನಿಲ್ಲ. ಸೋತ ಸಿನಿಮಾಗಳು, ಗೆದ್ದ ಸಿನಿಮಾಗಳ ಜೊತೆಗೆ ಸಾಧಾರಣ ಯಶಸ್ಸು ಕಂಡ ಸಿನಿಮಾಗಳು ಪ್ರತಿವರ್ಷದಂತೆ ಈ ವರ್ಷವೂ ತೆರೆಕಂಡಿದೆ.

Advertisement

ಸಿನಿಮಾಗಳ ಜೊತೆ ಜೊತೆಗೆ ದಕ್ಷಿಣದ ಕಲಾವಿದರು ಕೆಲವೊಂದು ವಿಚಾರಗಳಿಗೆ ಸುದ್ದಿಯಾಗಿದ್ದಾರೆ. ಆ ವಿಚಾರದಿಂದ ಇಂಟರ್ ನೆಟ್ ಟ್ರೆಂಡ್ ಆಗಿದ್ದರು. ಬನ್ನಿ ಹಾಗಾದರೆ ಯಾವೆಲ್ಲಾ ಕಲಾವಿದರು ಯಾವ ವಿಚಾರಕ್ಕೆ ಸುದ್ದಿಯಾಗಿದ್ದರು ಎನ್ನುವುದನ್ನು ತಿಳಿಯೋಣ.

ಕಂಬ್ಯಾಕ್ ಮಾಡಿದ ರಜಿನಿಕಾಂತ್:

ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ 2023 ಕಂಬ್ಯಾಕ್ ವರ್ಷವೆಂದರೆ ಖಂಡಿತ ತಪ್ಪಾಗದು. ‘ದರ್ಬಾರ್’ ಹಾಗೂ ‘ಅನ್ನಾಥೆ’ ಸಿನಿಮಾಗಳು ಬಾಕ್ಸ್ ಆಫೀಸ್ ಹಾಗೂ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ 73 ರ ಹರೆಯದಲ್ಲೂ ರಜಿನಿಕಾಂತ್ ‘ಜೈಲರ್’ ಮೂಲಕ 600 ಕೋಟಿಗೂ ಅಧಿಕ ಬ್ಯುಸಿನೆಸ್ ‌ಮಾಡಿ ಕಂಬ್ಯಾಕ್ ಮಾಡಿದರು.
ಈ ಸಿನಿಮಾದಿಂದ ಅವರ ಜನಪ್ರಿಯತೆ ಮತ್ತೊಮ್ಮೆ ಹೆಚ್ಚಾಯಿತು.

ಹಿಮಾಲಯದ ದೇವಸ್ಥಾನಕ್ಕೆ ಭೇಟಿ‌ ನೀಡಿ ತಪ್ಪಸ್ಸು ಮಾಡಿದ ರಜಿನಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಆಗಿದ್ದರು. ತಮ್ಮ ಸಿನಿಮಾವನ್ನು ವೀಕ್ಷಿಸಲು ಆಹ್ವಾನ ನೀಡಿದ ವೇಳೆ ತನಗಿಙ ಹಿರಿಯರಾದ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದ ವಿಚಾರ ವಿವಾದಕ್ಕೀಡಾಗಿತ್ತು. ಈ ಕುರಿತು ಟೀಕೆಗಳು ಎದುರಾದ ಬಳಿಕ ರಜಿನಿಕಾಂತ್ “ಸಾಧು-ಸಂತರನ್ನು ಕಂಡರೆ ಕಾಲಿಗೆ ಬೀಳುವುದು ನನ್ನ ಹವ್ಯಾಸ. ಅವರು ನನಗಿಂತ ಕಿರಿಯವರಾದರೂ ನಾನು ಹಾಗೆಯೇ ಮಾಡುತ್ತೇನೆ’ ಎಂದು ಸ್ಪಷ್ಟನೆ ನೀಡಿದ್ದರು.
ರಜಿನಿ – ಯೋಗಿ ಭೇಟಿಗೆ ರಾಜಕೀಯ ಬಣ್ಣ ಹಚ್ಚುವ ಪ್ರಯತ್ನವೂ ನಡೆದಿತ್ತು. ಸದ್ಯ ರಜಿನಿಕಾಂತ್ ‘ವಟೈಯನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಬಳಿಕ ಲೋಕೇಶ್ ಕನಕರಾಜ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಅತಿಥಿ ಪಾತ್ರದಲ್ಲಿ ನಟಿಸಿರುವ ‘ಲಾಲ್ ಸಲಾಂ’ ರಿಲೀಸ್ ಗೆ ರೆಡಿಯಾಗಿದೆ.

Advertisement

ಇತಿಹಾಸ ಬರೆದ ‘RRR’:

ರಾಜಮೌಳಿ ಅವರು‌ ‘RRR’ ಮೂಲಕ ಹಲವು ದಾಖಲೆಗಳನ್ನು ಮುರಿದಿರುವುದು ಗೊತ್ತೇ ಇದೆ.1000 ಕೋಟಿ ಕ್ಲಬ್ ಸೇರಿದ ‘ಆರ್ ಆರ್ ಆರ್’ ಜಗತ್ತೇ ಅರಿಯುವ ಸಾಧನೆಯನ್ನು ಮಾಡಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿತು. 95ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ‘RRR’ ಸಿನಿಮಾದ ‘ನಾಟು ನಾಟು’ ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆಯಿತು. ಆ ಮೂಲಕ ಭಾರತೀಯ ಸಿನಿಲೋಕದಲ್ಲಿ ಹೊಸ ಇತಿಹಾಸ ಬರೆಯಿತು.

ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದಾರೆ. ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ.

ವಿಜಯ್ – ರಜಿನಿಕಾಂತ್ ‘ಸೂಪರ್ ಸ್ಟಾರ್’ ವಿವಾದ:
ದಳಪತಿ ವಿಜಯ್ ಅವರಿಗೆ ಈ ವರ್ಷ ‘ವಾರಿಸು’ ಹಾಗೂ ‘ಲಿಯೋ’ ದೊಡ್ಡ ಹಿಟ್ ತಂದುಕೊಟ್ಟಿದೆ. ‘ಲಿಯೋ’ ಸಿನಿಮಾದಲ್ಲಿನ ಯಶಸ್ಸು ಕಾಲಿವುಡ್ ನಲ್ಲಿ ಸದ್ದು ಮಾಡಿತು. ‘ವಾರಿಸು’ ಸಿನಿಮಾದ ಆಡಿಯೋ ಬಿಡುಗಡೆ ವೇಳೆ ಹಿರಿಯ ನಟ ಶರತ್ ಕುಮಾರ್ ”ವಿಜಯ್ ಭವಿಷ್ಯದ ಸೂಪರ್ ಸ್ಟಾರ್ ” ಎನ್ನುವ ಮಾತೊಂದು ಅಭಿಮಾನಿಗಳ ವಲಯದಲ್ಲಿ ಚರ್ಚಾ ವಿಚಾರವಾಗಿತ್ತು. ‘ಲಿಯೋ’ ಸಿನಿಮಾದವರೆಗೂ ಇದು ಅನೇಕ ಚರ್ಚೆಗೆ ಕಾರಣವಾಗಿತ್ತು.

ಎಲ್ಲಿಯವರೆಗೆ ಅಂದರೆ ಈ ವಿವಾದಕ್ಕೆ ಸ್ವತಃ ವಿಜಯ್ ಅವರೇ ಮಾತನಾಡಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು. ‘ಲಿಯೋ’ ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ ಅವರು, “ಇದನ್ನು ಈ ವೇದಿಕೆಯಲ್ಲಿ ಹೇಳಲು ಬಂದಿದ್ದೇನೆ. ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ. ಆದರೆ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ತಮಿಳು ಚಿತ್ರರಂಗ ನಮಗೆ ನೀಡಿದ ಎಲ್ಲಾ ಸ್ಟಾರ್‌ಗಳಲ್ಲಿ ಒಬ್ಬರೇ ಪುರಚಿ ತಲೈವರ್ (ಎಂಜಿ ರಾಮಚಂದ್ರನ್), ಒಬ್ಬನೇ ಒಬ್ಬ ನಾಡಿಗರ್ ತಿಲಗಂ (ಶಿವಾಜಿ ಗಣೇಶನ್), ಒಬ್ಬನೇ ಒಬ್ಬ ಕ್ಯಾಪ್ಟನ್ (ವಿಜಯಕಾಂತ್), ಒಬ್ಬನೇ ಒಬ್ಬ ಉಲಗನಾಯಗನ್ (ಕಮಲ್ ಹಾಸನ್) ಇದ್ದಾರೆ. ಒಬ್ಬ ಸೂಪರ್ ಸ್ಟಾರ್ (ರಜನಿಕಾಂತ್). ಅಂತೆಯೇ ಒಬ್ಬನೇ ಥಲಾ (ಅಜಿತ್ ಕುಮಾರ್) ಇದ್ದಾರೆ ಎಂದು ಹೇಳಿದ್ದರು.

ಬಿಗ್‌ ಬಾಸ್‌ ನಲ್ಲಿ ಕಮಲ್‌ ಹಾಸನ್ ವಿವಾದ:‌ ಕಮಲ್‌ ಹಾಸನ್‌ ಅವರು ಈ ವರ್ಷ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ʼಲಿಯೋʼ ಸಿನಿಮಾದಲ್ಲಿ ಹಿನ್ನೆಲೆ ಧ್ವನಿ ಹಾಗೂ ಅವರ ಮುಂಬರುವ ಸಿನಿಮಾದ ಟೈಟಲ್‌ (ಥಗ್‌ ಲೈಫ್)‌ ವಿಡಿಯೋ ರಿಲೀಸ್‌ ಆಗಿದೆ. ಆದರೆ ಈ ಎರಡೂ ವಿಚಾರಕ್ಕೆ ಹೊರತಾಗಿಯೂ ಕಮಲ್‌ ಹಾಸನ್‌ ನೆಟ್ಟಿಗರಲ್ಲಿ ಚರ್ಚೆಯ ವಿಷಯವಾಗಿದ್ದರು.

ತಮಿಳು ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನಡೆಸಿಕೊಡುವ ಕಮಲ್‌ ಹಾಸನ್‌, ಕಾರ್ಯಕ್ರಮದಲ್ಲಿನ ಹೇಳಿಕೆಯೊಂದಕ್ಕೆ ಈ ವರ್ಷ ಸುದ್ದಿಯಾಗಿದ್ದರು. ಬಿಗ್‌ ಬಾಸ್ ತಮಿಳು -7 ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ನಟಿ ವಿಚಿತ್ರಾ ಅವರು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ತಾನು ಎದುರಿಸಿದ್ದ ಕಿರುಕುಳದ ಬಗ್ಗೆ ಬಿಗ್‌ ಬಾಸ್ ಮನೆಯಲ್ಲಿ ಮುಕ್ತವಾಗಿ ಮಾತನಾಡಿದ್ದರು.‌ ಅವರ ಸಿನಿಪಯಣದ ಜರ್ನಿಯಲ್ಲಿ ಎದುರಿಸಿದ್ದ ಕರಾಳ ಘಟನೆಗಳ ಬಗ್ಗೆ ಮಾತನಾಡಿದ್ದಕ್ಕಾಗಿ, ಅವರ ಧೈರ್ಯವನ್ನು ಮೆಚ್ಚಿ ಕಮಲ್‌ ಹಾಸನ್‌ ಶಹಬ್ಬಾಸ್‌ ಎಂದಿದ್ದರು. ಆದರೆ ಇದೇ ವಿಚಾರವಾಗಿ ಕಮಲ್‌ ಹಾಸನ್‌ ಟೀಕೆಗೆ ಒಳಗಾಗಿದ್ದರು.

ನಟಿ ವಿಚಿತ್ರಾ ಅವರು “ಗೌರವಯುತ” ರೀತಿಯಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಅವಳನ್ನು ಹಿಂಸಿಸಿದ ಮತ್ತು ಚಲನಚಿತ್ರಗಳಲ್ಲಿನ ತನ್ನ ವೃತ್ತಿಜೀವನವನ್ನು ತ್ಯಜಿಸುವಂತೆ ಒತ್ತಾಯಿಸುವ ಜನರನ್ನು ಹೆಸರಿಸದೆ ತನ್ನ ಸ್ಟೋರಿಯನ್ನು ಹೇಳಿದ್ದಕ್ಕೆ ಕಮಲ್‌ ಹಾಸನ್‌ ವಿಚಿತ್ರಾ ಅವರನ್ನು ಶ್ಲಾಘಿಸಿದ್ದರು. ಆದರೆ ಇದೇ ಅವರ ವಿರುದ್ಧ ಟೀಕೆಗಳು ಕೇಳಿ ಬರಲು ಕಾರಣವಾಯಿತು.

ವಿಚಿತ್ರಾ ಅವರು ತನ್ನ ಕಥೆಯಲ್ಲಿ ವ್ಯಕ್ತಿಗಳ ಹೆಸರನ್ನು ಹೇಳದ್ದಕ್ಕೆ ಶ್ಲಾಘಿಸಿದ ಕಮಲ್‌ ಹಾಸನ್‌ ಅವರ ಹೇಳಿಕೆ ಮಹಿಳೆಯರನ್ನು ಮಾತನಾಡಲು ಪ್ರೋತ್ಸಾಹಿಸುವ #MeToo ಅಭಿಯಾನದಂತಹ ಜಾಗತಿಕ ಚಳುವಳಿಗಳ ಪ್ರಗತಿಗೆ ಹಾನಿಕರವೆಂದು ಹಲವರು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರದೀಪ್‌ ಎನ್ನುವ ಸ್ಪರ್ಧಿಯ ಮೇಲೆ ಅತಿರೇಕದ ವರ್ತನೆ, ವಯಸ್ಕ ಮಾತುಗಳನ್ನಾಡುತ್ತಾರೆ ಆರೋಪವನ್ನು ಮನೆಯಲ್ಲಿನ ಕೆಲ ಸ್ಪರ್ಧಿಗಳು ಹೇಳಿ ರೆಡ್‌ ಗ್ಲೋ ( ವಿಶೇಷ ಅಧಿಕಾರ ಬಳಸಿ ಎಲಿನೇಷನ್‌ ಗೆ ಹೋಗುವಂತೆ ಮಾಡುವುದು) ಬಳಸಿದ್ದರು. ಇದರಿಂದ ಕಮಲ್‌ ಹಾಸನ್‌ ಕಾರ್ಯಕ್ರಮದಿಂದ ಪ್ರದೀಪ್‌ ಅವರನ್ನು ಎಲಿಮಿನೇಟ್‌ ಮಾಡಿದ್ದರು.
ಸತ್ಯವನ್ನು ಪರಿಶೀಲಿಸದೆ ಕಮಲ್‌ ಹಾಸನ್‌ ಅವರು ಪ್ರದೀಪ್‌ ಅವರನ್ನು ಎಲಿಮಿನೇಟ್‌ ಮಾಡಿದ್ದಕ್ಕೆ ಹಲವರು ಅಸಮಾಧಾನಗೊಂಡಿದ್ದರು.

ಕೊನೆಗೂ ಬಂತು ಯಶ್‌ 19 ಅನೌನ್ಸ್‌ ಮೆಂಟ್:‌ ಕನ್ನಡಿಗರು ಸೇರಿದಂತೆ ಇತರೆ ಬಾಷಾದ ಸಿನಿ ಅಭಿಮಾನಿಗಳಿಗೆ ʼಕೆಜಿಎಫ್‌ -2ʼ ಬಳಿಕ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮುಂದಿನ ಸಿನಿಮಾ ಯಾವಾ ಅನೌನ್ಸ್‌ ಆಗುತ್ತದೆ ಎನ್ನುವ ಕುತೂಹಲವಿತ್ತು. ಹಬ್ಬದ ದಿನ, ಬರ್ತ್‌ ಡೇ ದಿನ ಕಾದು ಕಾದು, ಕೊನೆಗೂ ರಾಕಿಂಗ್‌ ಸ್ಟಾರ್‌ ಯಶ್‌ ತನ್ನ ಮುಂದಿನ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಗೀತು ಮೋಹನ್‌ ದಾಸ್‌ ಅವರೊಂದಿಗೆ ಯಶ್‌ ʼಟಾಕ್ಸಿಕ್‌ʼ ಎನ್ನುವ ಸಿನಿಮಾವನ್ನು ಮಾಡಲಿದ್ದಾರೆ. ಈ ವರ್ಷ ಯಶ್‌ ಅವರು ಟ್ರೆಂಡ್‌ ಆಗಲು ಇದೊಂದೇ ಸುದ್ದಿ ಪ್ರಮುಖವಾಗಿತ್ತು.

ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಸ್ಟೈಲಿಸ್ಟ್‌ ಸ್ಟಾರ್:‌
ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಈ ವರ್ಷ ತನ್ನ ʼಪುಷ್ಪʼ ಸಿನಿಮಾದಿಂದಲೇ ಸುದ್ದಿಯಲ್ಲಿದ್ದರು. ʼಪುಷ್ಪʼ ಸಿನಿಮಾದ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಸಂದಿತು. ಈ ಪ್ರಶಸ್ತಿ ಪಡೆದ ತೆಲುಗಿನ ಮೊಲದ ಸೂಪರ್‌ ಸ್ಟಾರ್‌ ಎಂಬ ಹೆಗ್ಗಳಿಕೆಯನ್ನು ಅವರು ಪಡೆದುಕೊಂಡಿದ್ದಾರೆ. ಸದ್ಯ ಅವರು ʼಪುಷ್ಪ-2ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ʼಆದಿಪುರುಷ್‌ʼ ಸೋಲು – ʼಸಲಾರ್‌ʼ ನಿಂದ ಸುದ್ದಿಯಾದ ಪ್ರಭಾಸ್:‌ ಈ ವರ್ಷ ಡಾರ್ಲಿಂಗ್‌ ಪ್ರಭಾಸ್‌ ಅವರಿಗೆ ಮೊದಲು ಕಹಿ ಬಳಿಕ ಸಿಹಿ ಕೊಟ್ಟ ವರ್ಷವೆಂದೇ ಹೇಳಬಹುದು. ಬಹು ನಿರೀಕ್ಷೆಯಿದ್ದ ಅವರ ʼಆದಿಪುರುಷ್‌ʼ ಸಿನಿಮಾ ಬಿಗೆಸ್ಟ್‌ ಫ್ಲಾಪಸ್‌ ಆಗಿ, ನೂರಾರು ಮಂದಿಯಿಂದ ಟೀಕೆಗೆ ಒಳಗಾಯಿತು. ಕಳಪೆ ವಿಎಫ್‌ ಎಕ್ಸ್‌ ಕೆಲಸದಿಂದ ಹನುಮಾನ್ ಪಾತ್ರ ಡೈಲಾಗ್ಸ್‌ ನಿಂದ ರಾಜಕೀಯವಾಗಿಯೂ ಸಿನಿಮಾ ಸುದ್ದಿಯಾಯಿತು. ‌

ಸೋಲಿನಿಂದ ಹೊರಬಂದು ʼಸಲಾರ್‌ʼ ನತ್ತ ಗಮನ ಹರಿಸಿದ ಪ್ರಭಾಸ್‌ ಗೆ ʼಸಲಾರ್‌ʼ ಸಿನಿಮಾ ಯಶಸ್ಸಿನ ಹಾದಿಯಲ್ಲಿ ಮತ್ತೆ ನಡೆಯುವಂತೆ ಮಾಡಿದೆ. ಪ್ರಶಾಂತ್‌ ನೀಲ್‌ ಅವರ ʼಸಲಾರ್‌ʼ ನಲ್ಲಿ ಪ್ರಭಾಸ್‌ ಅಮೋಘವಾಗಿ ನಟಿಸಿದ್ದು, ಸಿನಿಮಾಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ವ್ಯಕ್ತವಾಗಿದೆ.

ಪ್ರಭಾಸ್‌ ಈ ಎರಡೂ ವಿಚಾರಗಳಿಂದ ಮಾತ್ರವಲ್ಲದೆ ಅವರ ಮುಂದಿನ ʼ ಕಲ್ಕಿ 2898 ಕ್ರಿ.ಶʼ ಸಿನಿಮಾದ ವಿಚಾರದಿಂದಲೂ ಟ್ರೆಂಡ್‌ ನಲ್ಲಿದ್ದರು.

ಡೀಪ್‌ ಫೇಕ್‌ ನಿಂದ ಸುದ್ದಿಯಾದ ರಶ್ಮಿಕಾ ಮಂದಣ್ಣ: ಈ ವರ್ಷ ರಶ್ಮಿಕಾ ಮಂದಣ್ಣ ಅವರಿಗೆ ಜಾಕ್ ಪಾಟ್‌ ವರ್ಷವಂದೇ ಹೇಳಬಹುದು. ʼಅನಿಮಲ್‌ʼ ಸಿನಿಮಾ ದೊಡ್ಡ ಹಿಟ್‌ ಆಗಿದೆ. ಇದರೊಂದಿಗೆ ಅವರ ಮುಂದಿನ ಸಿನಿಮಾಗಳು ಅನೌನ್ಸ್‌ ಆಗಿದೆ.
ಸಿನಿಮಾದ ವಿಚಾರ ಬಿಟ್ಟು ರಶ್ಮಿಕಾ ಡೀಪ್‌ ಫೇಕ್‌ ವೈರಲ್‌ ಫೋಟೋ ವಿಚಾರದಿಂದ ಸುದ್ದಿಯಾಗಿದ್ದರು. ರಶ್ಮಿಕಾ ಅವರ ಮುಖವನ್ನು ಬಳಸಿಕೊಂಡು ಬ್ರಿಟೀಷ್‌ ಸೋಶಿಯಲ್‌ ಮೀಡಿಯಾ ತಾರೆಯಾದ ಝರಾ ಪಟೇಲ್‌ ಅವರ ವಿಡಿಯೋವೊಂದಕ್ಕೆ ಎಐ ಮೂಲಕ ಎಡಿಟ್‌ ಮಾಡಲಾಗಿತ್ತು. ಇದು ಸಿನಿರಂಗದಲಿ ಅನೇಕರ ಆಕ್ರೋಶಕ್ಕೆ‌ ಕಾರಣವಾಗಿತ್ತು.
ಡೀಪ್‌ ಫೇಕ್‌ ಸುದ್ದಿ ರಾಜಕೀಯವಾಗಿಯೂ ಸದ್ದು ಮಾಡಿತ್ತು.

ಸುದ್ದಿಯಾದ ತ್ರಿಷಾ – ಟೀಕೆಗೆ ಒಳಗಾದ ಹಿರಿಯ ನಟ: ಈ ವರ್ಷ ತ್ರಿಷಾ ʼಪೊನ್ನಿಯಿನ್ ಸೆಲ್ವನ್ 2ʼ ಹಾಗೂ ʼಲಿಯೋʼ ಸಿನಿಮಾದಲ್ಲಿ 14 ವರ್ಷದ ಬಳಿಕ ವಿಜಯ್‌ ಜೊತೆ ತ್ರಿಷಾ ನಟಿಸಿದ್ದರು. ಸಿನಿಮಾ ಅಂದುಕೊಂಡಂತೆ ಹಿಟ್‌ ಆಯಿತು. ಆದರೆ ತ್ನ ಬಗ್ಗೆ ಹಿರಿಯ ನಟ ಮನ್ಸೂರ್‌ ಆಲಿಖಾನ್‌ ಅವರು ನೀಡಿದ ʼಬೆಡ್‌ ರೂಮ್‌ʼ ಕುರಿತ ಅಸಭ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸದ್ದು ಮಾಡಿದ್ದರು. ತನಗೆ ತ್ರಿಷಾ ಜೊತೆ ರೇಪ್‌ ಸೀನ್‌ ʼಲಿಯೋʼ ಸಿನಿಮಾದಲ್ಲಿ ರೇಪ್‌ ಸೀನ್‌ ಮಾಡಲು ಸಿಗಲಿಲ್ಲ ಎಂದಿದ್ದರು. ಇದಕ್ಕೆ ತ್ರಿಷಾ ತಾನು ಜೀವಮಾನದಲ್ಲಿ ಯಾವತ್ತೂ ಮನ್ಸೂರ್‌ ಅಲಿಖಾನ್‌ ಜೊತೆ ಸ್ಕ್ರೀನ್‌ ಹಂಚಿಕೊಳ್ಳಲ್ಲ ಎಂದಿದ್ದರು. ನಟಿ ತ್ರಿಷಾ ಪರ ಅನೇಕ ಕಲಾವಿದರು ಧ್ವನಿ ಎತ್ತಿದ್ದರು. ಪರಿಣಾಮ ಕಲಾವಿದರ ಸಂಘದಿಂದ ಮನ್ಸೂರ್‌ ಆಲಿಖಾನ್‌ ಕೆಲ ಸಮಯ ಬ್ಯಾನ್‌ ಆಗಿದ್ದರು. ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು.

ಎ.ಆರ್‌ ರೆಹಮಾನ್:‌  ತನ್ನ ಮ್ಯೂಸಿಕ್‌ ನಿಂದ ಸುದ್ದಿಯಾಗುವ ದಿಗ್ಗಜ  ಎಆರ್ ರೆಹಮಾನ್ ಅವರ ಸಂಗೀತ ಸಂಜೆಯಲ್ಲಿ ಉಂಟಾದ ಅವ್ಯವಸ್ಥೆಯಿಂದ ಈ ವರ್ಷ ಸುದ್ದಿಯಾಗಿದ್ದರು. ಎಆರ್ ರೆಹಮಾನ್ ಹಾಗೂ ಎಸಿಟಿಸಿ ಇವೆಂಟ್‌ ಇವರ ಸಹಭಾಗಿತ್ವದಲ್ಲಿ ‘ಮರಕುಮಾ ನೆಂಜಮ್’ ಎಂಬ ಸಂಗೀತ ಕಾರ್ಯಕ್ರಮವನ್ನು ಭಾನುವಾರ(ಸೆ.10 ರಂದು) ಚೆನ್ನೈನ ಪನೈಯೂರಿನಲ್ಲಿರುವ ಆದಿತ್ಯರಾಮ್ ಪ್ಯಾಲೇಸ್ ಆಯೋಜಿಸಲಾಗಿತ್ತು.

50 ಸಾವಿರ ಜನರು ಒಟ್ಟುಗೂಡುವ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜನ 5 ಸಾವಿರದಿಂದ 25 ಸಾವಿರ‌ ರೂಪಾಯಿವರೆಗಿನ ಟಿಕೆಟ್‌ ನ್ನು ಜನ ಖರೀದಿಸಿದ್ದರು. ಆದರೆ ಕಾರ್ಯಕ್ರಮ ಆರಂಭವಾಗಲು ಕೆಲ ನಿಮಿಷ ಇರುವ ವೇಳೆ ಟಿಕೆಟ್‌ ಹೊಂದಿರುವ ಜನರನ್ನು ಒಳಗೆ ಬಿಡಲು ನಿರಾಕರಿಸಲಾಗಿದೆ. ನಿರೀಕ್ಷೆಗಿಂತ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಸೇರಿದ್ದರಿಂದ ಟಿಕೆಟ್‌ ಇರುವ ಜನರನ್ನು ಒಳಗೆ ಬಿಡಲು ನಿರಾಕರಿಸಲಾಗಿತ್ತು. ಈ ಕಾರಣದಿಂದ ಅವರೆಲ್ಲ ಗೇಟ್‌ ನಲ್ಲೇ ನಿಲ್ಲುವ ಸ್ಥಿತಿ ಉಂಟಾಗಿತ್ತು. ಇದರಿಂದ ನೂಕುನುಗ್ಗಲು ಉಂಟಾಗಿತ್ತು.

ಹೆಂಗಸರು ಕಿರುಕುಳಕ್ಕೊಳಗಾದರು, ಕಾಲ್ತುಳಿತದಲ್ಲಿ ಮಕ್ಕಳು ಗಾಯಗೊಂಡರು, ಉಸಿರುಗಟ್ಟುವಿಕೆಯಿಂದಾಗಿ ವೃದ್ಧರು ಕುಸಿದುಬಿದ್ದರು, ಇಷ್ಟೆಲ್ಲ ಆದರೂ ಎಆರ್ ರೆಹಮಾನ್ ಅವರು ಏನೂ ಆಗದಂತೆ ಹಾಡುತ್ತಿದ್ದರು ಎಂದು ಒಬ್ಬರು ಅಸಮಾಧಾನವನ್ನು ಹೊರಹಾಕಿದ್ದರು.

ಈ ಕುರಿತು ಎಆರ್‌ ರಹೆಮಾನ್‌ ಕ್ಷಮೆಯಾಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next