Advertisement

ನೋಂದಣಿಗೆ ಸೀಮಿತ: ತೊಗರಿ ಖರೀದಿಗೆ ಮೀನಾಮೇಷ

04:00 PM Jan 30, 2022 | Team Udayavani |

ಮಸ್ಕಿ: ಸರಕಾರ ನಿಗ ಪಡಿಸಿದ ಕನಿಷ್ಟ ದರಕ್ಕೆ ತೊಗರಿ ಖರೀದಿಗೆ ರೈತರ ಹೆಸರು ನೋಂದಣಿ ಮಾಡಿಕೊಂಡಿದ್ದಷ್ಟೇ; ಆದರೆ ಇದುವರೆಗೆ ತೊಗರಿ ಖರೀದಿ ಪ್ರಕ್ರಿಯೆಯೇ ಆರಂಭವಾಗುತ್ತಿಲ್ಲ!.
ಮಸ್ಕಿ ಸೇರಿ ಜಿಲ್ಲೆಯ ಬಹುತೇಕ ಕಡೆ ಈ ಬಾರಿ ತೊಗರಿಯನ್ನು ಯತೇತ್ಛವಾಗಿ ಬಿತ್ತನೆ ಮಾಡಲಾಗಿತ್ತು. ಆದರೆ, ಅಕಾಲಿಕ ಮಳೆಯಿಂದ ಕೆಲವು ಕಡೆ ಹಾನಿಯಾಗಿದ್ದು, ಉಳಿದ ಬೆಳೆಯನ್ನು
ಕಟಾವು ಮಾಡಿ ರೈತರು ರಾಶಿ ಹಾಕಿದ್ದಾರೆ.

Advertisement

ಆದರೆ, ಸೂಕ್ತ ಬೆಲೆ ಇಲ್ಲದ ಕಾರಣ ರೈತರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಹಿಂದೇಟು ಹಾಕಿದ್ದರು. ಹೀಗಾಗಿ ಸರಕಾರ ರೈತರು ಬೆಳೆದ ತೊಗರಿ ಬೆಳೆಯನ್ನು ಖರೀದಿ ಮಾಡಲು ಎಪಿಎಂಸಿ,
ಟಿಎಪಿಎಂಸಿ, ಪಿಎಸ್‌ಎಸ್‌ಎನ್‌ಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಒಂದು ತಿಂಗಳ ಹಿಂದೆ ಆರಂಭ ಮಾಡಿದೆ. ಕ್ವಿಂಟಲ್‌ ತೊಗರಿಗೆ 6200 ರೂ. ನಂತೆ ದರ ನಿಗದಿ ಮಾಡಿದ್ದು, ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟ ಮಾಡಲು ಆಸಕ್ತರಿರುವ ರೈತರು ತಮ್ಮ ಹೆಸರುಗಳನ್ನು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಲು ಅವಕಾಶ ನೀಡಲಾಗಿತ್ತು. ಈ ಪ್ರಕಾರ ಮಸ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗುಡದೂರು, ಬಳಗಾನೂರು, ತುರುವಿಹಾಳ, ಪಾಮನಕಲ್ಲೂರು, ಹಾಲಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಾವಿರಾರು ರೈತರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿದ್ದಾರೆ. ಆದರೆ, ಹೆಸರು ನೋಂದಣಿ ಮಾಡಿಕೊಂಡ ರೈತರ ತೊಗರಿಗಳನ್ನು ಖರೀದಿ ಮಾಡುವುದಕ್ಕೆ ಇದುವರೆಗೂ ಚಾಲನೆ ಸಿಕ್ಕಿಲ್ಲ.

ಗುಳ್ಯಾಳಗೆ ಇಲ್ಲ ದರ: ಸರಕಾರ ಕನಿಷ್ಟ ದರ ನಿಗದಿ ಮಾಡಿ ಖರೀದಿ ಕೇಂದ್ರಗಳನ್ನು ಆರಂಭಿಸಿದ ಬಳಿಕ ಮಾರುಟಕ್ಟೆಯಲ್ಲಿ ತೊಗರಿ ಬೆಲೆ ಕ್ವಿಂಟಲ್‌ಗೆ 6 ಸಾವಿರ ರೂ. ಗಡಿ ದಾಟಿದೆ. ಆದರೆ ಇದು ಕೇವಲ ಟಿಎಸ್‌ಆರ್‌ ಮಾದರಿಯ ತೊಗರಿಗೆ ಮಾತ್ರ. ಗುಳ್ಯಾಳ ಮಾದರಿಯ ತೊಗರಿಗೆ ಇದುವರೆಗೂ ಸೂಕ್ತ ಬೆಲೆ ಸಿಕ್ಕಿಲ್ಲ. ಆರಂಭದಲ್ಲಿ 5500 ರೂ. ವರೆಗೆ ಮಾರಾಟವಾದರೂ ಈಗ ಪುನಃ ದರ ಕುಸಿತವಾಗಿದೆ. ಮಾರುಕಟ್ಟೆಯಲ್ಲಿ ಗುಳ್ಯಾಳ ಮಾದರಿಯ ತೊಗರಿಗೆ ಕ್ವಿಂಟಲ್‌ಗೆ 5000 ರೂ. ವರೆಗೆ ಮಾತ್ರ ಬೇಡಿಕೆ ಬಂದಿದೆ. ಹೀಗಾಗಿ ರೈತರು ತೊಗರಿ ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಖರೀದಿ ಆರಂಭವಿಲ್ಲ: ತೊಗರಿ ನೋಂದಣಿ ಪ್ರಕ್ರಿಯೆ ಬಳಿಕ ಸರಕಾರದಿಂದಲೇ ತೊಗರಿ ಖರೀದಿ ಆರಂಭವಾಗಬೇಕಿತ್ತು. ಆದರೆ, ಕೇಂದ್ರಗಳಲ್ಲಿ ನೋಂದಾಯಿಸಿದ ರೈತರ ತೊಗರಿ ಖರೀದಿ ಮಾಡಲು ಸರಕಾರ ಮೀನಮೇಷ ಎಣಿಸುತ್ತಿದೆ. ಕೇವಲ ನೋಂದಣಿ ಪ್ರಕ್ರಿಯೆಯ ಆ್ಯಪ್‌ ಬಿಟ್ಟಿದ್ದರಿಂದ ಖರೀದಿ ಕೇಂದ್ರದ ಸಿಬ್ಬಂದಿಗಳು ನೋಂದಣಿಯಷ್ಟೇ ಮಾಡಿಕೊಂಡಿದ್ದಾರೆ. ಖರೀದಿ
ಮಾಡಲು ಸರಕಾರ ಇದುವರೆಗೆ ಆದೇಶ ನೀಡಿಲ್ಲ. ಖರೀದಿಗೆ ಬೇಕಾದ ತಂತ್ರಾಂಶಗಳನ್ನು ನೀಡಿಲ್ಲ. ಹೀಗಾಗಿ ಖರೀದಿಯನ್ನು ಆರಂಭಿಸಿಲ್ಲ ಎನ್ನುತ್ತಾರೆ ಖರೀದಿ ಕೇಂದ್ರದ ಸಿಬ್ಬಂದಿ. ಆದರೆ ಖರೀದಿ ಕೇಂದ್ರವನ್ನೇ ನಂಬಿಕೊಂಡು ಮಾರಾಟ ಮಾಡದೇ ರಾಶಿ ಇಟ್ಟುಕೊಂಡ ರೈತರು ಮಾತ್ರ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

– ಮಲ್ಲಿಕಾರ್ಜುನ ಚಿಲ್ಕರಾಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next