Advertisement

ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ನಾಳೆಯಿಂದ

03:54 PM Apr 14, 2022 | Team Udayavani |

ಗದಗ: ಮಹಾಮಾರಿ ಕೋವಿಡ್‌ ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಗಿದ್ದ ಜ| ತೋಂಟದಾರ್ಯ ಸಂಸ್ಥಾನ ಮಠದ ಜಾತ್ರೆಯನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಏ. 15ರಿಂದ ಏ. 18ರ ವರೆಗೆ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ ಹೇಳಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 15ರಂದು ಬೆಳಗ್ಗೆ 10.30ಕ್ಕೆ ಜಾತ್ರಾ ಪ್ರಾರಂಭೋತ್ಸವ ನೆರವೇರಲಿದೆ.

ಲಿಂ| ಜಗದ್ಗುರು ಡಾ| ತೋಂಟದ ಸಿದ್ಧಲಿಂಗ ಸ್ವಾಮೀಜಿ ಐಕ್ಯ ಮಂಟಪವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡುವರು. ಹುಬ್ಬಳ್ಳಿ-ಹಾನಗಲ್‌ ಮೂರು ಸಾವಿರ ಮಠದ ಪೀಠಾಧಿಪತಿ ಡಾ| ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮ್ಮುಖ ಅರಭಾವಿಯ ದುರದುಂಡೀಶ್ವರಮಠದ ಸಿದ್ಧಲಿಂಗ ಸ್ವಾಮೀಜಿ, ಮುಂಡರಗಿ-ಬೈಲೂರು ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಶಿರೋಳ ತೋಂಟದಾರ್ಯ ಶಾಖಾಮಠದ ಗರುಬಸವ ಸ್ವಾಮೀಜಿ, ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ವಹಿಸುವರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ, ಸಾರಿಗೆ ಸಚಿವ ಬಿ. ಶ್ರೀರಾಮುಲು, ಸಂಸದ ಶಿವಕುಮಾರ ಉದಾಸಿ, ಶಾಸಕ ಎಚ್‌.ಕೆ. ಪಾಟೀಲ, ಕಳಕಪ್ಪ ಬಂಡಿ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಮಾಜಿ ಸಚಿವ ಎಸ್‌.ಎಸ್‌. ಪಾಟೀಲ ಭಾಗವಹಿಸುವರು. ಇದೇ ವೇಳೆ ಐಕ್ಯಮಂಟಪದ ಶಿಲ್ಪಿಗಳಾದ ಶಂಕರ ಸ್ತಪತಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಪುಸ್ತಕೋತ್ಸವ: ಏ. 15ರಂದು ಸಂಜೆ 7.30ಕ್ಕೆ ಪುಸ್ತಕೋತ್ಸವ ಉದ್ಘಾಟಿಸಲಾಗುತ್ತದೆ. ಶಿವಾನಂದ ಬೃಹನ್ಮಠದ ಜ| ಸದಾಶಿವಾನಂದ ಭಾರತಿ ಸ್ವಾಮೀಜಿ, ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಡಾ| ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಬಿಡುಗಡೆಯಾಗುವ ಪ್ರಾಚೀನ, ನೂತನ, ಅನುವಾದ ಮಾಲೆಯ ಹಾಗೂ ಪುಣ್ಯಪುರುಷ ಮಾಲೆಯ ಕೃತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್‌. ನಂದೀಶ ಹಂಚೆ ಬಿಡುಗಡೆಗೊಳಿಸುವರು.  ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಸಕ ಡಾ| ರಮೇಶ ಕಲ್ಲನಗೌಡರ ಗ್ರಂಥಗಳನ್ನು ಪರಿಚಯಿಸುವರು. ರೇವಣಸಿದ್ಧಯ್ಯ ಮರಿದೇವರಮಠ ವಚನ ಸಂಗೀತ ನೀಡುವರು.

Advertisement

16ರಂದು ಮಹಾರಥೋತ್ಸವ: ಏ. 16ರಂದು ಸಂಜೆ 6.30ಕ್ಕೆ ಚಿತ್ತಾ ನಕ್ಷತ್ರದಲ್ಲಿ ಮಹಾರಥೋತ್ಸವ ನೆರವೇರಲಿದೆ. ಅದಕ್ಕೂ ಮುನ್ನ ಸಂಜೆ 4ಕ್ಕೆ ಎಸ್‌. ಎಸ್‌. ಕಳಸಾಪುರಶೆಟ್ಟರ್‌ ಮನೆಯಿಂದ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಪೂಜ್ಯರು ಆಗಮಿಸುವರು. ರಾತ್ರಿ 7.30ಕ್ಕೆ ಜರುಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ವಿಜಯಪುರದ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಡಾ| ತೋಂಟದ ಸಿದ್ಧರಾಮ ಸ್ವಾಮಿಗಳು ವಹಿಸುವರು. ಧಾರವಾಡ-ಮುಳಗುಂದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಶರಣ ಸಾಹಿತಿಗಳಾದ ಆರ್‌.ಎಂ. ಕರಡಿಗುದ್ದಿ ಅವರನ್ನು ಸನ್ಮಾನಿಸಲಾಗುತ್ತಿದೆ.

ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಮುಂಡರಗಿಯ ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಧಾರವಾಡದ ರತಿಕಾ ನೃತ್ಯ ಕಲಾನಿಕೇತನದ ನಾಗರತ್ನ ಹಡಗಲಿ ಅವರಿಂದ ವಚನ ನೃತ್ಯ ವೈಭವ ನಡೆಯಲಿದೆ.

ಲಘು ರಥೋತ್ಸವ: ಏ. 17ರಂದು ಸಂಜೆ 6.30ಕ್ಕೆ ಲಘುರಥೋತ್ಸವ ಜರುಗಲಿದ್ದು, ಸಂಜೆ 4ಕ್ಕೆ ಬಸವೇಶ್ವರ ನಗರದ ಕುಬಸದ ಅವರ ಮನೆಯಿಂದ ಮೆರವಣಿಗೆ ಮೂಲಕ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಶ್ರೀಮಠಕ್ಕೆ ಆಗಮಿಸುವರು. ಲಘು ರಥೋತ್ಸವದ ಬಳಿಕ 7.30ಕ್ಕೆ ಮಹಿಳಾಗೋಷ್ಠಿ ನಡೆಯಲಿದ್ದು, ಸಾನ್ನಿಧ್ಯವನ್ನು ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಡಾ| ಗಂಗಾದೇವಿ ಮಾತಾಜಿ, ಹೊಸಪೇಟೆ-ಹಾಲಕೆರೆಯ ಕೊಟ್ಟೂರು ಬಸವಲಿಂಗ ಸ್ವಾಮಿಗಳು ವಹಿಸುವರು. ಸಮ್ಮುಖವನ್ನು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ನರಗುಂದ ವಿರಕ್ತಮಠದ ಶಿವಕುಮಾರ ಸ್ವಾಮಿಗಳು, ಯಶವಂತನಗರದ ಗಂಗಾಧರ ಸ್ವಾಮಿಗಳು ವಹಿಸುವರು. ವೆಂಕಟೇಶಕುಮಾರ ಅವರನ್ನು ಸಂಮ್ಮಾನಿಸಲಾಗುವುದು.

ಬೆಳಗಾವಿಯ ವಿಶ್ರಾಂತ ಪ್ರಾಧ್ಯಾ ಪಕ ಡಾ| ಗುರುದೇವಿ ಹುಲೆಪ್ಪನವರಮಠ ಉಪನ್ಯಾಸ ನೀಡುವರು. ರಾತ್ರಿ 9ಕ್ಕೆ ಪದ್ಮಶ್ರೀ ಪಂ| ವೆಂಕಟೇಶಕುಮಾರ ಅವರಿಂದ ಶಾಸ್ತ್ರೀಯ ಗಾಯನ ಹಾಗೂ ವಚನ ಸಂಗೀತ ನಡೆಯಲಿದೆ.

18ರಂದು ಪರಿಸರೋತ್ಸವ: ಏ. 18ರಂದು ಬೆಳಗ್ಗೆ 10.30ಕ್ಕೆ ಪರಿಸರೋತ್ಸವ ಹಾಗೂ ಸಂತ ಸೇವಾಲಾಲ ಗ್ರಂಥ ಬಿಡುಗಡೆ ಜರುಗುವುದು. ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಣ್ಣ ಬ್ಯಾಟಿ ವಿರಚಿತ ಸಂತ ಸೇವಾಲಾಲ ಪುರಾಣ ಗ್ರಂಥ ಬಿಡುಗಡೆಗೊಳ್ಳುವುದು. ಮಹಾರಾಷ್ಟ್ರದ ಪೌರಾದೇವಿ ಕ್ಷೇತ್ರದ ಪೀಠಾಧಿಪತಿಗಳಾದ ಬಾಬುಸಿಂಗ್‌ ಮಹಾರಾಜರು ಗ್ರಂಥ ಬಿಡುಗಡೆಗೊಳಿಸುವರು.

ಜಾತ್ರೆ ಮಂಗಲೋತ್ಸವ: 18ರಂದು ಸಂಜೆ 7.30ಕ್ಕೆ ಮಂಗಲೋತ್ಸವ ನಡೆಯಲಿದ್ದು, ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೈದರಾಬಾದ್‌ನ ಶಿವ ಹಂಸಾರೂಢ ಪ್ರಭು ಸ್ವಾಮೀಜಿ, ತೋಂಟದಾರ್ಯ ಮಠದ ಮಹಾಂತದೇವರು ಸಮ್ಮುಖ ವಹಿಸುವರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಬಳಿಕ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು ಎಂದರು.

ದಾನಯ್ಯ ಗಣಾಚಾರಿ, ಮೈಲಾರಪ್ಪ ಅರಣಿ, ಬಸವರಾಜ ಹಿರೇಹಡಗಲಿ, ಕೊಟ್ರೇಶ ಮೆಣಸಿನಕಾಯಿ, ಮಲ್ಲಿಕಾರ್ಜುನ ಚಂದಪ್ಪನವರ, ಎಂ.ಸಿ. ಐಲಿ, ಮುರಗೇಶ ಬಡ್ನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next