Advertisement

ಮಕ್ಕಳಲ್ಲಿ ದೈವ-ದೇವರ ಅರಿವು ಮೂಡಿಸಿ: ನಿತ್ಯಾನಂದ ಡಿ. ಕೋಟ್ಯಾನ್‌

02:44 PM Mar 18, 2021 | Team Udayavani |

ಮುಂಬಯಿ: ಉಡುಪಿ ಜಿಲ್ಲೆಯ ಕಲ್ಯಾಣಪುರ ಮೂಡುತೋನ್ಸೆಯ ಬ್ರಹ್ಮಶ್ರಿ ಬೈದರ್ಕಳ ಪಂಚ ಧೂಮಾವತೀ ಗರೋಡಿಯ ಸರ್ವೋನ್ನತಿಗಾಗಿ ಸೇವಾನಿರತವಾಗಿರುವ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್‌ ಮುಂಬಯಿ ಇದರ ದ್ವಿತೀಯ ವಾರ್ಷಿಕ ಮಹಾಸಭೆಯು ಮಾ. 14ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ನಿತ್ಯಾನಂದ ಡಿ. ಕೋಟ್ಯಾನ್‌ ಅಧ್ಯಕ್ಷೀಯ ಭಾಷಣಗೈದು, ಭವಿಷ್ಯದಲ್ಲಿ ನಮ್ಮ ಟ್ರಸ್ಟ್‌ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಮತ್ತು ಸದಸ್ಯರಲ್ಲಿ  ಏಕತೆಯನ್ನು ತರಲು ವಿಭಿನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸಬೇಕು. ಯುವಕರು ಮತ್ತು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಟ್ರಸ್ಟ್‌  ತೋನ್ಸೆ ಗರೋಡಿ ಧಾರ್ಮಿಕ ಕ್ರಮಬದ್ಧತೆಯ ಚಟುವಟಿಕೆಗಳಿಗೆ ಕೊಡುಗೆ ನೀಡಬೇಕು. ಭಕ್ತರಿಂದ ಹಣಕಾಸಿನ ಸಹಾಯಕ್ಕಾಗಿ ಮನವಿ ಮಾಡಲು ಮುಂದಾಗಬೇಕು ಎಂದು ತಿಳಿಸಿ, ಟ್ರಸ್ಟ್‌ನ ಆರ್ಥಿಕ ಬಲವನ್ನು ಹೆಚ್ಚಿಸಲು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸದಸ್ಯರಿಗೆ ಮನವಿ ಮಾಡಿದರು.

ಹಿರಿಯರು ಮತ್ತು ಕಿರಿಯರ ಸರ್ವಕಾಲಿಕ ಮತ್ತು ಸಮಯೋಚಿತ ಬೆಂಬಲಕ್ಕಾಗಿ ಧನ್ಯವಾದಗಳು. ಇಂದಿನ ಮಹಾಸಭೆಯಲ್ಲಿ ಸೇರಿರುವ ಇಷ್ಟೊಂದು ಸಂಖ್ಯೆಯ ಸದಸ್ಯರನ್ನು ಕಂಡಾಗ ಸಂತೋಷವಾಗುತ್ತದೆ. ನಾವೆಲ್ಲರು ಒಮ್ಮತ ಮತ್ತು ಒಗ್ಗಟ್ಟಿನಿಂದ ಸಮಿತಿಯನ್ನು ಮುನ್ನಡೆಸುವುದರೊಂದಿಗೆ ಮಕ್ಕಳಲ್ಲಿ ಧಾರ್ಮಿಕ ಭಾವನೆಯನ್ನು ಮೂಡಿಸೋಣ ಎಂದು ತಿಳಿಸಿದರು.

ಜತೆ ಕಾರ್ಯದರ್ಶಿ ಕರುಣಾಕರ್‌ ಬಿ. ಪೂಜಾರಿ ಅವರು ಗತಸಾಲಿನ ಮಹಾಸಭೆಯ ವರದಿ ವಾಚಿಸಿದರು. ವರದಿಯನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಗತ ವರ್ಷದ ಕಾರ್ಯಚಟುವಟಿಕೆಗಳ ಮಾಹಿತಿಯನ್ನಿತ್ತು ಟ್ರಸ್ಟ್‌ನ ವೈದ್ಯಕೀಯ ನೆರವು ಯೋಜನೆಗೆ ಕೊಡುಗೆ ನೀಡಿದವರ, ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಇತ್ಯಾದಿ ವಿವರಗಳೊಂದಿಗೆ ವಾರ್ಷಿಕ ವರದಿ ಪ್ರಸ್ತುತಪಡಿಸಿದರು. ಗೌರವ ಪ್ರಧಾನ ಕೋಶಾಧಿಕಾರಿ ರವಿರಾಜ್‌ ಕಲ್ಯಾಣಪುರ ಅವರು ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.

ಈ ವರೆಗೆ ಉಚಿತ ಸೇವೆಗಳನ್ನು ಸಲ್ಲಿಸುತ್ತಿರುವ ಎಸ್‌. ಎನ್‌. ಪೂಜಾರಿ ಆ್ಯಂಡ್‌ ಕಂಪೆನಿ ಚಾರ್ಟರ್ಡ್‌ ಅಕೌಂಟೆಂಟ್‌ ಅವರನ್ನೇ 2020-21ರ ಸಾಲಿಗೂ ಲೆಕ್ಕ ಪರಿಶೋಧಕರನ್ನಾಗಿ ಸಭೆಯಲ್ಲಿ ಸರ್ವಾನುಮತದಿಂದ ನೇಮಿಸಲಾಯಿತು. ಬಿಇ ಮೆಕ್ಯಾನಿಕಲ್‌ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ ಸಾಹಿಲ್‌ ಮಹೇಶ್‌ ಮತ್ತು ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣರಾದ ಸಿಯಾ ಕಿರಣಚಂದ್ರ ಪೂಜಾರಿ ಮತ್ತು ಅನುಷಾ ಜಯ ಪೂಜಾರಿ ಅವರನ್ನು ಟ್ರಸ್ಟ್‌ ಪರವಾಗಿ ಸ್ಮರಣಿಕೆ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿಶ್ವನಾಥ ತೋನ್ಸೆ ಪ್ರತಿಭಾನ್ವಿತರ ಬಗ್ಗೆ ಮಾಹಿತಿ ನೀಡಿದರು.

Advertisement

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ನಡುವೆ ಸಭೆಯಲ್ಲಿ ಅನೇಕ ಸದಸ್ಯರು ಹಾಜರಿರುವುದು ನಮ್ಮ ಟ್ರಸ್ಟ್‌ನ ಹಿರಿಮೆ. ಯಾವುದೇ ಸಂಘವು ತನ್ನ ಧ್ಯೇಯವನ್ನು ನಿರ್ವಹಿಸಲು ಬಲವಾದ ಅಡಿಪಾಯ ಅಗತ್ಯವಾಗಿದ್ದು, ನಿರಂತರ ಬೆಂಬಲವಿದೆ ಎಂದು ಉಪಾಧ್ಯಕ್ಷರಾದ ಸಿ. ಕೆ. ಪೂಜಾರಿ ಮತ್ತು ಡಿ. ಬಿ. ಅಮೀನ್‌ ಅವರು ತಿಳಿಸಿ, ಸಂತೋಷ ವ್ಯಕ್ತಪಡಿಸಿದರು. ಸಭಿಕರ ಪರವಾಗಿ ಕೃಷ್ಣ ಪಾಲನ್‌, ಭಾರತಿ ಎನ್‌. ಸುವರ್ಣ, ಲಕ್ಷ್ಮೀ ಎನ್‌. ಕೋಟ್ಯಾನ್‌, ವಿಜಯ್‌ ಸನಿಲ್‌, ಸಾಹಿಲ್‌ ಮಹೇಶ್‌ ಮತ್ತು ಅನುಷಾ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು, ಸಲಹೆಗಾರರು, ಸದಸ್ಯರು ಹಾಜರಿದ್ದು, ಸದಸ್ಯರು ಶ್ರೀ ಬ್ರಹ್ಮ ಬೈದರ್ಕಳರಿಗೆ ಪ್ರಾರ್ಥನೆಗೈದು ಮಹಾಸಭೆ ಉದ್ಘಾಟಿಸಿದರು. ಉಪಾಧ್ಯಕ್ಷ ವಿಶ್ವನಾಥ ತೋನ್ಸೆ ಸ್ವಾಗತಿಸಿದರು. ಗತ ಸಾಲಿನಲ್ಲಿ ಅಗಲಿದ ಟ್ರಸ್ಟ್‌ನ ಹಿತೈಷಿ ಹಾಗೂ ಕೊಡುಗೈದಾನಿಗಳಾದ ಜಯ ಸಿ. ಸುವರ್ಣ, ಎಂ. ಬಿ. ಕುಕ್ಯಾನ್‌, ಪ್ರೊ| ಶಿವ ಬಿಲ್ಲವ ಮತ್ತು ಟ್ರಸ್ಟ್‌ನ

ಸದಸ್ಯ ಶೇಖರ್‌ ಪೂಜಾರಿ ಸಹಿತ ಅನೇಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಜೀವ ಪೂಜಾರಿ ತೋನ್ಸೆ ಅವರು ಭಕ್ತರು ಒದಗಿಸಿದ ಹಣಕಾಸಿನ ಸಹಾಯದ ವಿವರಗಳನ್ನು ನೀಡಿ, ದಾನಿಗಳ ಹೆಸರುಗಳನ್ನು ತಿಳಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next