Advertisement

ನಾಳೆ ವಿಶ್ವ ಮಲೇರಿಯಾ ದಿನ

09:32 AM Apr 24, 2019 | Lakshmi GovindaRaju |

ಬೆಂಗಳೂರು: 2022ರ ವೇಳೆಗೆ ಮಲೇರಿಯದಲ್ಲಿ ರಾಜ್ಯವು ಶೂನ್ಯ ಹಂತ ಸಾಧಿಸುವ ಗುರಿ ಹೊಂದಿದ್ದು, ಹೀಗಾಗಿ, ಏ.25ರಂದು ವಿಶ್ವ ಮಲೇರಿಯಾ ದಿನದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ “ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಘೋಷ ವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈ ಅನಾಫಿಲಿಸ್‌ ಸೊಳ್ಳೆಯಿಂದ ಈ ಜ್ವರ ಕಾಣಿಸಿಕೊಳ್ಳುತ್ತದೆ. 2017ರಲ್ಲಿ ರಾಜ್ಯದಲ್ಲಿ 7,381 ಮಲೇರಿಯಾ ಪ್ರಕರಣಗಳು ಪತ್ತೆಯಾದರೆ, 2018ರಲ್ಲಿ 5,2890 ಪ್ರಕರಣಗಳು ಕಾಣಿಸಿಕೊಂಡಿದೆ. ಸಕಾಲದಲ್ಲಿ ಚಿಕಿತ್ಸೆ ಮತ್ತು ಮದ್ದು ಸಿಗದಿದ್ದಲ್ಲಿ ನಿರೋಧಕ ಶಕ್ತಿ ಕುಗ್ಗಿ ಮಲೇರಿಯಾ ಪೀಡಿತರು ಚೇತರಿಸಿಕೊಳ್ಳುವುದು ಕಷ್ಟ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮಾನವ ಸಂಪನ್ಮೂಲ ಮತ್ತು ವೈದ್ಯಕೀಯ ಸಲಕರಣೆಗಳನ್ನು ಹೆಚ್ಚಿಸಿಕೊಂಡು, ಮಲೇರಿಯಾ ಪ್ರಕರಣಗಳಗಳಲ್ಲಿ 24 ಗಂಟೆಗಳ ಒಳಗೆ ರಕ್ತ ಪರೀಕ್ಷೆ, ಉಚಿತ ಹಾಗೂ ಶೀಘ್ರ ಚಿಕಿತ್ಸೆ ನೀಡುವುದು. ಈ ಸಂಬಂಧ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಲೇರಿಯಾ ನಿವಾರಣಾ ಔಷಧಿಯನ್ನು ಪೂರೈಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ಈ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಬಾರಿ ಯಾವುದೇ ಮಲೇರಿಯಾ ಪ್ರಕರಣಗಳು ದೃಢಪಟ್ಟಿಲ್ಲ. ಆದರೂ, ಮುಂಜಾಗೃತಾ ಕ್ರಮವಾಗಿ ಮಲೇರಿಯಾ ಪ್ರಕರಣಗಳನ್ನು ಶೂನ್ಯ ಸ್ಥಿತಿಗೆ ತರಲು ರಾಜ್ಯ ಸರ್ಕಾರ ರೂಪಿಸಿದ್ದ ಕ್ರಮಗಳನ್ನು ನಗರ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಸೂಚಿಸಿದ್ದಾರೆ.

ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿ, ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ. ಜತೆಗೆ ರೋಗ ತಡೆಗಟ್ಟುವ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಲು ಆರೋಗ್ಯ ಶಿಕ್ಷಣದ ಚಟುವಟಿಕಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

Advertisement

ದಕ್ಷಿಣ ಕನ್ನಡವೊಂದರಲ್ಲೇ ಕಳೆದ ವರ್ಷ 4,741 ಪ್ರಕರಣಗಳು ಪತ್ತೆಯಾಗಿದ್ದವು. ವರ್ಷದಿಂದ ಈಚೆಗೆ 494 ಪ್ರಕರಣಗಳು ಬೆಳಕಿಗೆ ಬಂದಿವೆ. ವಿಪರೀತ ಜ್ವರ, ಮೈ ಬೆವರುವುದು, ಕೆಲವರಿಗೆ ವಾಂತಿ, ಮೈಕೈ ನೋವು, ನಿಶಕ್ತಿ, ಮಲೇರಿಯಾ ರೋಗದ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳು ಪ್ರತಿನಿತ್ಯ ಅಥವಾ ದಿನ ಬಿಟ್ಟು ದಿನ ಕಾಣಿಸಿಕೊಳ್ಳುತ್ತದೆ.

ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವುದು, ರಾತ್ರಿ ಮಲಗುವಾಗ ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಉಪಯೋಗ ಮಾಡುವುದು, ಜ್ವರ ಕಾಣಿಸಿಕೊಂಡಾಗ ಅಲಕ್ಷ್ಯ ಮಾಡದೆ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇಂತಹ ಕ್ರಮಗಳ ಮೂಲಕ ಮಲೇರಿಯಾವನ್ನು ನಿಯಂತ್ರಣಕ್ಕೆ ತರಬಹುದಾಗಿದೆ.

ವಿವಿಧ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು
ರಾಜ್ಯದಲ್ಲಿ ಒಟ್ಟು – 621
ದಕ್ಷಿಣ ಕನ್ನಡ 494, ಉಡುಪಿ 27, ಬಾಗಲಕೋಟೆ 8, ಗದಗ 12 ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿವೆ.

ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ
ವರ್ಷ ಪ್ರಕರಣಗಳು ಮರಣ
2014 14,784 02
2015 12,548 –
2016 10,630 –
2017 7,381 –
2018 5,289 –

Advertisement

Udayavani is now on Telegram. Click here to join our channel and stay updated with the latest news.

Next