Advertisement

ನಿಲಿಸುಗಲ್ಲು ಸಮಾಧಿ ಪತ್ತೆ

02:39 PM May 29, 2022 | Team Udayavani |

ಬಾಳೆಹೊನ್ನೂರು: ಕಳಸ ತಾಲೂಕು ಸಂಸೆ ಗ್ರಾಮದಲ್ಲಿ ಭದ್ರಾ ನದಿಯ ಉಪನದಿಯಾದ ಸೋಮಾವತಿ ನದಿಯ ಎಡತೀರದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಎಚ್.ಆರ್. ಪಾಂಡುರಂಗ ಅವರು ಬೃಹತ್‌ ಶಿಲಾಯುಗದ ಸಂಸ್ಕೃತಿಯ ಸಮಾಧಿ ನಮೂನೆಗಳಲ್ಲಿ ಒಂದಾದ ‘ನಿಲಿಸುಗಲ್ಲು ಸಮಾಧಿ’ ಸಂಶೋಧನೆ ಮಾಡಿದ್ದು ಕಳಸ ಹೋಬಳಿಯ ಭದ್ರಾ ನದಿತೀರದಲ್ಲಿ ವಾಸವಾಗಿದ್ದ ಪ್ರಾಚೀನ ಮಾನವರ ಅಸ್ತಿತ್ವದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ.

Advertisement

ಸಂಸೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧವಾದ ಪಟೇಲರ ಕುಟುಂಬದ ಚಾವಡಿಮನೆ ಸುದರ್ಶನ ಸೆಟ್ಟಿ ಅವರ ಚಾವಡಿಬಯಲು ಭತ್ತದ ಗದ್ದೆ ಬದುವಿನ ಮೇಲೆ ನೇರವಾಗಿ ನಿಲ್ಲಿಸಲ್ಪಟ್ಟ 6.4 ಅಡಿ ಎತ್ತರ 2.6 ಅಡಿ ಅಗಲ ಹಾಗೂ 1.2 ಅಡಿ ದಪ್ಪ ಅಳತೆಯ ಶಿರೋಭಾಗ ಚೂಪಾದ ಈ ಕಲ್ಲು, ತ್ರಿಶೂಲ ಸಹಿತವಾಗಿ ನಿಂತಿದ್ದು ಸಂಸೆ ಮೂರ್ನಾಡಿನ ಅರಮನೆ ಹಾಗೂ ಸುತ್ತಮುತ್ತಲಿನ ಜನರಿಂದ “ಜಟಿಂಗರಾಯ’ನೆಂದು ಕರೆಯಲ್ಪಡುತ್ತಾ ಸ್ಥಳೀಯ ಕೃಷಿಕರ ಕಾವಲು ದೈವವಾಗಿ ಆರಾಧಿಸಲ್ಪಡುತ್ತಿದೆ.

ಆದರೆ ವಾಸ್ತವಾಗಿ ಜಟಿಂಗರಾಯನೆಂಬ ದೈವದ ಈ ನಿಲಿಸುಗಲ್ಲು ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಸಂಸೆ ಗ್ರಾಮದ ಸೋಮಾವತಿ ನದಿತೀರದಲ್ಲಿ ವಾಸವಾಗಿದ್ದ ಕಬ್ಬಿಣ ಯುಗದ ಬೃಹತ್‌ ಶಿಲಾ ಸಂಸ್ಕೃತಿಯ ಮಾನವರ ಸಮುದಾಯದ ನಾಯಕನೊಬ್ಬನ ಮರಣದ ನೆನಪಿಗೆ ನಿಲ್ಲಿಸಿ ಆರಾಧಿಸಲ್ಪಡುತ್ತಿದ್ದ ಸಮಾಧಿ ನೆನಪಿನ ಕಲ್ಲಾಗಿದೆ. ಕಾಲಾನಂತರ ಕ್ರಮೇಣ ಇದೇ ಸಮಾಧಿ ಕಲ್ಲು ಜಟಿಂಗರಾಯನೆಂಬ ದೈವವಾಗಿ ಪರಿವರ್ತನೆಯಾಗಿ ಇಂದಿಗೂ ಸ್ಥಳೀಯರಿಂದ ಆರಾಧಿಸಲ್ಪಡುತ್ತಿದೆ ಹಾಗೂ ಕಾವೇರಿನದಿ ತೀರದ ಮೈಸೂರು ಭಾಗದಲ್ಲಿ ಇದೇ ರೀತಿಯ ನಿಲಿಸುಗಲ್ಲುಗಳನ್ನು “ಮುನೇಶ್ವರನ ಕಲ್ಲು-ಮಾರಮ್ಮನ ಕಲ್ಲು, ಅಮ್ಮನಕಲ್ಲು’ ಎಂದೂ ತುಂಗಾನದಿ ತೀರದ ತೀರ್ಥಹಳ್ಳಿಯ ನೊಣಬೂರಿನಲ್ಲಿ “ಭೂತರಾಯ’ನೆಂದೂ, ಬೊಂಬಳಿಗೆಯಲ್ಲಿ “ಚೌಡಿದೇವರು’ ಎಂದೂ ಸ್ಥಳೀಯರು ನಂಬಿಕೊಂಡು ಆರಾಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಪ್ರಾಗೈತಿಹಾಸಿಕ ಅಮೂಲ್ಯ ಸ್ಮಾರಕಗಳು ಇಂದಿಗೂ ಉಳಿದಿವೆ.

ಸಂಸೆ-ಚಾವಡಿ ಬಯಲಿನ ‘ಜಟಿಂಗರಾಯ’ನೆಂಬ ಈ ನಿಲಿಸುಗಲ್ಲು ಕ್ರಿ.ಪೂ. 1200-200 ನೇ ಕಾಲಾವಧಿಯ ಬೃಹತ್‌ ಶಿಲಾಯುಗ ಸಂಸ್ಕೃತಿಯ ಸಮಾಧಿ ಸ್ಮಾರಕವಾಗಿದೆ ಎಂದು ಸಂಶೋಧಕರಾದ ಪಾಂಡುರಂಗ ಅಭಿಪ್ರಾಯ ಪಡುತ್ತಾರೆ.

ಕಳಸ ಸಾಂತರರು, ಭೈರವರಸರು ಹಾಗೂ ಕೆಳದಿ ನಾಯಕರಿಂದ ಆಳಲ್ಪಡುತ್ತಿದ್ದ ಕಳಸ ರಾಜ್ಯದ ‘ಸೋಮಾವತಿ’ ನದಿ ತೀರದ ಐತಿಹಾಸಿಕ ಸಂಸೆ ಮೂರ್ನಾಡು ಪ್ರದೇಶದಲ್ಲಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಇತಿಹಾಸ ಪೂರ್ವಕಾಲದ ಕಬ್ಬಿಣ ಯುಗದ ಬೃಹತ್‌ ಶಿಲಾಸಂಸ್ಕೃತಿಯ (ಮೆಗಾಲಿಥಿಕ್‌)ನಾಗರಿಕತೆಯೂ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಜಟಿಂಗರಾಯನೆಂಬ ಈ ನಿಲಿಸುಗಲ್ಲು ಸಾಕ್ಷಿಯಾಗಿದೆ ಎನ್ನಲು ಹೆಮ್ಮೆಯಾಗುತ್ತದೆ ಎನ್ನುತ್ತಾರೆ ಸಂಶೋಧಕರಾದ ಪಾಂಡುರಂಗ.

Advertisement

ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಸಂಸೆ ಪಟೇಲ್‌ ಸುದರ್ಶನ ಸೆಟ್ಟಿ ಹಾಗೂ ಅವರ ಪುತ್ರ ಸೌಧರ್ಮ ಸೆಟ್ಟಿ ಹಾಗೂ ಮಹಾವೀರ ಪ್ರಭು ಕಳಸ, ಸಂಶೋಧನಾ ಮಾರ್ಗದರ್ಶಕರಾದ ರವಿ ಕೋರಿಸೆಟ್ಟರ್‌, ಭಾರತದ ಪ್ರಸಿದ್ದ ಪ್ರಾಗೈತಿಹಾಸಿಕ ತಜ್ಞರು ಹಾಗೂ ನಿರ್ದೇಶಕರಾದ ರಾಬರ್ಟ್‌ ಬ್ರೂಸ್‌ ಪೂಟ್‌ ಸಂಗನಕಲ್ಲು ಪ್ರಾಗೈತಿಹಾಸಿಕ ವಸ್ತು ಸಂಗ್ರಹಾಲಯ, ಬಳ್ಳಾರಿ ಹಾಗೂ ಶರಣಬಸಪ್ಪ ಕೋಲ್ಕಾರ್‌, ಪ್ರಾಗೈತಿಹಾಸಿಕ ವಿದ್ವಾಂಸರು-ಗಂಗಾವತಿ ಅವರಿಗೂ ಪಾಂಡುರಂಗ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next