Advertisement

ಇಂದು ನಾಗರಪಂಚಮಿ: ವ್ಯಾಪಾರ ವಹಿವಾಟು ಬಿರುಸು

05:37 PM Aug 05, 2019 | Sriram |

ಉಡುಪಿ: ನಾಗರ ಪಂಚಮಿ ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ವ್ಯಾಪಾರ ವಹಿವಾಟು ಬಿರುಸುಗೊಂಡಿದೆ. ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಹಬ್ಬ ಆಚರಣೆಗೆ ಸಂಬಂಧಪಟ್ಟ ವಸ್ತುಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ. ನಾಗರ ಪಂಚಮಿಗೆ ಬೇಕಾದ ಎಲ್ಲ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡಿದೆ.

Advertisement

ಹಿಂಗಾರ, ಅರಶಿನ ಎಲೆಗೂ ಬೇಡಿಕೆ
ನಾಗರಪಂಚಮಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಹಿಂಗಾರದ ಒಂದು ಹಾಳೆಗೆ 150- 200 ರೂ. ದರವಿದೆ. ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲದ ಕಾರಣ 50ರಿಂದ 70 ರೂ.ನಷ್ಟು ಏರಿಕೆ ಕಂಡಿದೆ. ಸಾಮಾನ್ಯ ದಿನಗಳಲ್ಲಿ ಹಿಂಗಾರದ ದರ 80ರಿಂದ 120ರಷ್ಟಿರುತ್ತದೆ. ಅರಶಿನ ಎಲೆಯ 25ರ ಒಂದು ಕಟ್ಟಿಗೆ ಈ ಬಾರಿ 40 ರೂ.ನಿಂದ 50 ರೂ.ಗೆ ಏರಿಕೆಯಾಗಿದೆ. ಮಳೆ ಕಡಿಮೆಯಾಗಿರುವುದು ಕೂಡ ಇದಕ್ಕೆ ಒಂದು ಕಾರಣವಾಗಿದೆ.

ಕೇದಗೆ ವಿರಳ
ನಾಗದೇವರಿಗೆ ಪ್ರಿಯವಾಗಿರುವ ವಸ್ತುಗಳಲ್ಲಿ ಕೇದಗೆಯೂ ಒಂದು. ಆದರೆ ಉಡುಪಿ ಮಾರುಕಟ್ಟೆಯಲ್ಲಿ ಮಾತ್ರ ವಿರಳವಾಗಿತ್ತು. ಶನಿವಾರ ನಗರದ ಕೆಲವೆಡೆಗಳಲ್ಲಿ ಕೇದಗೆ ಮಾರಾಟ ಇತ್ತಾದರೂ ಸಂಜೆಯ ವೇಳೆಗೆ ಎಲ್ಲವೂ ಖಾಲಿ ಯಾಗಿದ್ದವು.ಲಭ್ಯವಿದ್ದ ಕಡೆಗಳಲ್ಲಿ ಇದರ ದರ ಸುಮಾರು 150ರಷ್ಟಿತ್ತು. ಹಳದಿ ಸೇವಂತಿಗೆ ಕೂಡ ಕುಚ್ಚಿಗೆ
1,500ರಷ್ಟಿದೆ. ಒಂದು ಮಾರು ಸೇವಂತಿಗೆಗೆ 120 ರೂ., ಕೇದಗೆಗೆ 120, ಶಂಕರಪುರ ಮಲ್ಲಿಗೆ 1,050, ಕಾಕಡ 80, ಮಾರಿಗೋಲ್ಡ್‌ 150, ಕನಗೆಳೆ 80, ಗೊಂಡೆ 70, ಕನಕಾಂಬರ 80 ರೂ., ಬಾಳೆಹಣ್ಣು 80ರೂ. ಸಹಿತ ಒಟ್ಟಾರೆ ಪಂಚಮಿಗೆ ಬೆಕಾದ ಪ್ರಮುಖವಾದ ವಸ್ತುಗಳ ಬೆಲೆ ಗಗನಕ್ಕೆ ತಲುಪಿದೆ.

ಸೀಯಾಳ ರಾಶಿ
ರಸ್ತೆಬದಿಯ ಹೂವಿನ ವ್ಯಾಪಾರಸ್ಥರೂ ಹೂವಿನ ಜತೆಗೆ ಸೀಯಾಳವನ್ನೂ ಮಾರಾಟ ಮಾಡುತ್ತಿರುವುದು ಕಂಡುಬಂತು. ಕೆಂದಾಳಿಯ ಎರಡು ಜಾತಿಯ ಸೀಯಾಳಗಳು ಕೇರಳದಿಂದ ಬಂದಿವೆ. ಬಾರಕೂರು ಹಾಗೂ ಕೆಲವು ಸ್ಥಳೀಯ ಸೀಯಾಳಗಳೂ ಮಾರುಕಟ್ಟೆಯಲ್ಲಿವೆ. ಕೆಂದಾಳಿ ಸೀಯಾಳದ ದರ 45ರಿಂದ 50 ರೂ.ಗಳಿದ್ದರೆ, ಸ್ಥಳೀಯ ಸೀಯಾಳಗಳ ದರ 35ರೂ.ಗಳಷ್ಟಿತ್ತು.

ಅನ್ಯ ಜಿಲ್ಲೆಯವರೇ ಅಧಿಕ
ಹಾಸನ, ಚಿಕ್ಕಮಗಳೂರು, ದಾವಣಗೆರೆ ಭಾಗದಿಂದ ಹಲವಾರು ಮಂದಿ ಹೂವಿನ ವ್ಯಾಪಾರಸ್ಥರು ನಗರದೆಲ್ಲೆಡೆ ವ್ಯಾಪಾರ ನಡೆಸುತ್ತಿದ್ದಾರೆ. ಸಹಜವಾಗಿಯೇ ನಗರದ ಹೋಲ್‌ಸೇಲ್‌ ವ್ಯಾಪಾರಿಗಳಿಗೆ ಇದರಿಂದ ಹೊಡೆತ ಬಿದ್ದಿದೆ. ಮಲ್ಲಿಗೆ ಒಂದನ್ನು ಬಿಟ್ಟು ಉಳಿದ ಎಲ್ಲ ಹೂವು ಗಳನ್ನು ಅವರು ಕಡಿಮೆ ಬೆಲೆಗೆ ನಮ್ಮಿಂದ ಖರೀದಿಸಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸುತ್ತಾರೆ ನಗರದ ಹೋಲ್‌ಸೇಲ್‌ ವ್ಯಾಪಾರಸ್ಥರು. ನಗರದ ಸಿಟಿ ಬಸ್‌ನಿಲ್ದಾಣ, ಸರ್ವೀಸ್‌ ಬಸ್‌ ನಿಲ್ದಾಣ, ನಗರಪಂಚಾಯತ್‌ ಎದುರುಭಾಗದಲ್ಲಿ, ಕೃಷ್ಣಮಠದ ಪರಿಸರ, ಹಳೇ ಡಯಾನ ಸರ್ಕಲ್‌ಬಳಿ, ಮಣಿಪಾಲ ಬಸ್‌ ತಂಗುದಾಣದಲ್ಲಿ ಸಹಿತ ಹಲವಾರು ಕಡೆಗಳಲ್ಲಿ ಅನ್ಯ ಜಿಲ್ಲೆಯ ವ್ಯಾಪಾರಸ್ಥರು ತುಂಬಿಹೋಗಿದ್ದಾರೆ.

Advertisement

ಬೆಳಗ್ಗೆ ಡಲ್‌; ಸಂಜೆ ಫ‌ುಲ್‌ ವ್ಯಾಪಾರ
ಹೆಚ್ಚಿನ ಕಡೆಗಳಲ್ಲಿ ಬೆಳಗ್ಗಿನ ವೇಳೆ ವ್ಯಾಪಾರ ತುಸು ನಿಧಾನಗತಿಯಲ್ಲಿತ್ತು. ಸಂಜೆ ವೇಳೆಗೆ ವ್ಯಾಪಾರ ಬಿರುಸಿನಿಂದ ನಡೆಯುತ್ತಿತ್ತು. ರಜಾದಿನ ಹಾಗೂ ಬೆಳಗ್ಗೆ, ಮಧ್ಯಾಹ್ನದ ವೇಳೆಗೆ ಮಳೆ ಸುರಿದ ಪರಿಣಾಮ ಕೆಲ ಗ್ರಾಹಕರು ಮಾರುಕಟ್ಟೆಗೆ ಆಗಮಿಸಲಿಲ್ಲ. ರಾತ್ರಿ ವೇಳೆಯ ರಶ್‌ ತಪ್ಪಿಸುವ ಸಲುವಾಗಿ ಹೆಚ್ಚಿನವರು ಸಂಜೆಯ ವೇಳೆಗೆ ಮಾರುಕಟ್ಟೆಯತ್ತ ಮುಖಮಾಡುತ್ತಿರುವುದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next