Advertisement

ಇಂದು “ಸ್ವಚ್ಛ ಸರ್ವೇಕ್ಷಣ್‌’ವರದಿ ಬಿಡುಗಡೆ

06:20 AM Mar 06, 2019 | |

ಬೆಂಗಳೂರು: ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ನಡೆಸಿದ ನಡೆಸಿದ “ಸ್ವಚ್ಛ ಸರ್ವೇಕ್ಷಣ್‌’ ಅಭಿಯಾನದ ವರದಿ ಬುಧವಾರ (ಮಾ.6) ಬಿಡುಗಡೆಯಾಗಲಿದ್ದು, ಈ ಬಾರಿಯಾದರೂ ಬೆಂಗಳೂರು ಉತ್ತಮ ರ್‍ಯಾಂಕ್‌ ದೊರೆಯಲಿದೆಯೇ ಎಂಬ ಕುತೂಹಲ ಮೂಡಿದೆ.

Advertisement

ಸ್ವಚ್ಛತೆ-ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ, ಸಮುದಾಯ ಶೌಚಾಲಯ ವ್ಯವಸ್ಥೆ ಕಲ್ಪಿಸುವ ವಿಚಾರದಲ್ಲಿ ನಗರಗಳ ನಡುವೆ ಪೈಪೋಟಿ ಹುಟ್ಟು ಹಾಕುವುದು ಅಭಿಯಾನದ ಉದ್ದೇಶವಾಗಿದೆ. ಅದರಂತೆ ಪ್ರಸಕ್ತ ಸಾಲಿನ ಸ್ವಚ್ಛ ಸರ್ವೆಕ್ಷಣ್‌ ಅಭಿಯಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬುಧವಾರ ನಗರಾಭಿವೃದ್ಧಿ ಇಲಾಖೆಯು ದೇಶದ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ ಮಾಡಲಿದೆ.

ಪೈಪೋಟಿಯ ಮೂಲಕ ನಗರ ಪ್ರದೇಶದಲ್ಲಿ ನೈರ್ಮಲ್ಯ ಹೆಚ್ಚಿಸುವುದು ಹಾಗೂ ನಾಗರಿಕರ ಸಮಸ್ಯೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ಉತ್ತಮವಾಗಿ ಸ್ಪಂದಿಸುವಂತೆ ಮಾಡಲು ಕೇಂದ್ರ ಸರ್ಕಾರ 2016ರಿಂದ ಸ್ವಷf ಸರ್ವೆಕ್ಷಣ್‌ ಅಭಿಯಾನ ಆರಂಭಿಸಿದೆ.

ಅದರಂತೆ 2016ರಲ್ಲಿ 73 ನಗರಗಳು ಭಾಗಿಯಾಗಿದ್ದರೆ, 2017ರಲ್ಲಿ 434 ಹಾಗೂ 2018ರಲ್ಲಿ 4,203 ನಗರಗಳು ಪಾಲ್ಗೊಂಡಿದ್ದವು. ಪ್ರಸಕ್ತ ಸಾಲಿನಲ್ಲಿಯೂ 4,237 ನಗರಗಳು ಸ್ಪರ್ಧೆಯಲ್ಲಿದ್ದು ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಯಾವ ನಗರದ ಪಾಲಾಗಲಿದೆ ಕಾದು ನೋಡಬೇಕಾಗಿದೆ. 

ಪ್ರತಿ ನಗರಗಳ ಸ್ಥಳೀಯ ಆಡಳಿತಗಳು ಸ್ವಚ್ಛತೆ ಕುರಿತು, ಪೂರಕ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ. ಅದರಂತೆ ಅಭಿಯಾನಕ್ಕಾಗಿ ಎಲ್ಲ ನಗರಗಳಿಂದ 4.5 ಲಕ್ಷ ದಾಖಲೆಗಳು ಸಲ್ಲಿಕೆಯಾಗಿದ್ದು, ಈ ಬಾರಿ ಕೇವಲ 28 ದಿನಗಳಲ್ಲಿ ಅಭಿಯಾನದ ಪ್ರಕ್ರಿಯೆ ಪೂರ್ಣಗೊಂಡಿರುವುದು ವಿಶೇಷ. 

Advertisement

ಕಳೆದ ಮೂರು ವರ್ಷಗಳಿಂದ ಅಭಿಯಾನಕ್ಕೆ ಕೇಂದ್ರ ಸರ್ಕಾರ ನಿಯೋಜಿಸಿರುವ ತಂಡಗಳು ನಗರಗಳಿಗೆ ಭೇಟಿ ನೀಡಿ ವಾಸ್ತವಾಂಶಗಳನ್ನು ಪರಿಶೀಲಿಸಿ ವರದಿ ನೀಡಲು ಕನಿಷ್ಠ 45 ದಿನಗಳು ತೆಗೆದುಕೊಳ್ಳುತ್ತಿದ್ದವು. ಆದರೆ, ಈ ಬಾರಿ ಕೇವಲ 28 ದಿನಗಳಲ್ಲಿ 4,237 ನಗರಗಳಿಗೆ ಭೇಟಿ ನೀಡಿದ ಮೂರನೇ ವ್ಯಕ್ತಿಯ ತಂಡಗಳು ಕೇಂದ್ರಕ್ಕೆ ವರದಿ ನೀಡಿವೆ. 

ಅಭಿಯಾನದ ದೇಶದಾದ್ಯಂತ 41 ಲಕ್ಷ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದು, 64 ಲಕ್ಷ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದರೊಂದಿಗೆ 4 ಕೋಟಿಗೂ ಹೆಚ್ಚಿನ ಜನರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ತಮ್ಮ ನಗರದ ಸ್ವಚ್ಛತೆ ಬಗ್ಗೆ ಮತ್ತು ಅಭಿಯಾನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

4 ಸಾವಿರ ನಗರಗಳು ಬಹಿರ್ದೆಸೆ ಮುಕ್ತ: ಸ್ವಚ್ಛ ಸರ್ವೆಕ್ಷಣ್‌ ಅಭಿಯಾನದಲ್ಲಿ ಭಾಗವಹಿಸಿರುವ 4,237 ನಗರಗಳ ಪೈಕಿ ಬಹುತೇಕ ನಗರಗಳು ತಮ್ಮನ್ನು ಬಯಲು ಬಹಿರ್ದೆಸೆ ಮುಕ್ತ ನಗರವೆಂದು ಘೋಷಿಸಿಕೊಂಡಿವೆ. ಈ ಬಾರಿಯ ಅಭಿಯಾನದಲ್ಲಿ ಬಹಿರ್ದೆಸೆ ಮುಕ್ತ ನಗರಕ್ಕೆ ಹೆಚ್ಚಿನ ಅಂಕಗಳನ್ನು ನಿಗದಿಪಡಿಸಿದರಿಂದ ಬೆಂಗಳೂರು ಸೇರಿದಂತೆ 4,141 ನಗರಗಳು ಬಯಲು ಬಹಿರ್ದೆಸೆ ಮುಕ್ತ ನಗರ ಎಂದು ಘೋಷಿಸಿಕೊಂಡಿವೆ. 

ಉತ್ತಮ ರ್‍ಯಾಂಕ್‌ ದೊರೆಯುವುದೇ?: ಕಳೆದ ಮೂರು ವರ್ಷಗಳಿಂದ ದೇಶದ ಪ್ರಮುಖ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಬೆಂಗಳೂರು ವಿಫ‌ಲವಾಗಿದೆ. 2016ರಲ್ಲಿ 73 ನಗರಗಳೊಂದಿಗೆ ಸ್ಪರ್ಧಿಸಿ 16ನೇ ಸ್ಥಾನ ಪಡೆದಿರುವುದು ಈವರೆಗೆ ಉತ್ತಮ ಸಾಧನೆಯಾಗಿದೆ.

ಉಳಿದಂತೆ 2017ರ ಅಭಿಯಾನದಲ್ಲಿ 210ನೇ ರ್‍ಯಾಂಕ್‌ ಹಾಗೂ 2018ರ ಅಭಿಯಾನದಲ್ಲಿ 216ನೇ ರ್‍ಯಾಂಕ್‌ಗೆ ಪಡೆದಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಉತ್ತಮ ರ್‍ಯಾಂಕ್‌ ಪಡೆಯಲೇಬೇಕೆಂಬ ಉದ್ದೇಶದಿಂದ ಪಾಲಿಕೆಯ ಅಧಿಕಾರಿಗಳು ಸ್ವಚ್ಛತಾ ಕಾರ್ಯಕ್ರಮಗಳನ್ನು ರೂಪಿಸಿದ್ದು, ಉತ್ತಮ ರ್‍ಯಾಂಕ್‌ ಪಡೆಯುವ ನಿರೀಕ್ಷೆಯಲ್ಲಿ ಪಾಲಿಕೆಯಿದೆ. 

ಅಭಿಯಾನದಲ್ಲಿ ದೇಶದಾದ್ಯಂತ ಕಂಡು ಬರುವ ಅಂಶಗಳು
– ಶೇ.89 ನಗರಗಳಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಜಾರಿ
– ಶೇ.61 ದೇಶದಾದ್ಯಂತ ವಿಂಗಡಣೆಯಾಗುತ್ತಿರುವ ತ್ಯಾಜ್ಯ ಪ್ರಮಾಣ
– ಶೇ.51 ವೈಜ್ಞಾನಿಕವಾಗಿ ಸಂಸ್ಕರಣೆಯಾಗುತ್ತಿರುವ ತ್ಯಾಜ್ಯ ಪ್ರಮಾಣ 
– 5.12 ಸಮುದಾಯ ಶೌಚಾಲಯಗಳ ನಿರ್ಮಾಣ 

ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಕಳೆದ ವರ್ಷ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರೂ ಉತ್ತಮ ರ್‍ಯಾಂಕ್‌ ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿ ಇನ್ನೂ ಹೆಚ್ಚಿನ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗಿದೆ. ಹೀಗಾಗಿ ಈ ಬಾರಿ ಬೆಂಗಳೂರಿಗೆ ಉತ್ತಮ ರ್‍ಯಾಂಕ್‌ ದೊರೆಯುವ ವಿಶ್ವಾಸವಿದೆ. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next