Advertisement

ಮುಂಬೈಗೆ ಇಂದು ಮೂರನೇ ಪ್ರಯತ್ನ; ಎರಡರಲ್ಲೂ ಸೋತಿರುವ ರೋಹಿತ್‌ ಪಡೆ

05:49 PM Apr 05, 2022 | Team Udayavani |

ಪುಣೆ: ಅತೀ ಹೆಚ್ಚು ಸಲ ಐಪಿಎಲ್‌ ಟ್ರೋಫಿಯ ಮೇಲೆ ಹಕ್ಕು ಸ್ಥಾಪಿಸಿರುವ ಮುಂಬೈ ಇಂಡಿಯನ್ಸ್‌ 2022ರ ಮೊದಲ ಗೆಲುವಿನ ನಿರೀಕ್ಷೆಯೊಂದಿಗೆ ಬುಧವಾರ ಕೋಲ್ಕತಾ ನೈಟ್‌ರೈಡರ್ ವಿರುದ್ಧ ಕಣಕ್ಕಿಳಿಯಲಿದೆ.

Advertisement

ಮುಂಬೈ ಈವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನೊಂದೆಡೆ ಮೂರರಲ್ಲಿ 2 ಪಂದ್ಯ ಗೆದ್ದ ಕೆಕೆಆರ್‌ ಉತ್ತಮ ಲಯದಲ್ಲಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದೆ. ಮುಂಬೈ ಕೆಳಗಿನಿಂದ ಮೂರನೇ ಸ್ಥಾನಿಯಾಗಿದೆ. ಹೀಗಾಗಿ ಮುಂಬಯಿಯವರೇ ಆಗಿರುವ ಕೆಕೆಆರ್‌ ನಾಯಕ ಶ್ರೇಯಸ್‌ ಅಯ್ಯರ್‌ ಸಹಜವಾಗಿಯೇ ಹೆಚ್ಚು ಉತ್ಸಾಹದಲ್ಲಿದ್ದಾರೆ.

ಸತತ ಸೋಲು ಹೊಸತಲ್ಲ
ಐಪಿಎಲ್‌ ಕೂಟದ ಆರಂಭಿಕ ಪಂದ್ಯಗಳಲ್ಲಿ ಸೋಲು ಕಾಣುವುದು ಮುಂಬೈ ಇಂಡಿಯನ್ಸ್‌ಗೆ ಹೊಸತೇನೂ ಅಲ್ಲ. ಸತತವಾಗಿ ಮುಗ್ಗರಿಸಿ, ಕೊನೆಗೊಮ್ಮೆ ಸೆಟೆದು ನಿಂತು ಟ್ರೋಫಿ ಎತ್ತಿದ ನಿದರ್ಶನ ಕಣ್ಮುಂದಿದೆ. ಹೀಗಾಗಿ ರೋಹಿತ್‌ ಪಡೆ ಸತತ 2 ಪಂದ್ಯಗಳಲ್ಲಿ ಸೋತಿತು ಅಂದಮಾತ್ರಕ್ಕೆ ಆತಂಕಗೊಳ್ಳಬೇಕಾದ ಅಗತ್ಯವೇನೂ ಇಲ್ಲ.
ಆದರೆ ಈ ಬಾರಿಯ ಪರಿಸ್ಥಿತಿ ತುಸು ಭಿನ್ನ. ಕ್ವಿಂಟನ್‌ ಡಿ ಕಾಕ್‌, ಟ್ರೆಂಟ್‌ ಬೌಲ್ಟ್ ಸೇರಿದಂತೆ ಬಹಳಷ್ಟು ಮಂದಿ ಸ್ಟಾರ್‌ ಆಟಗಾರರು ಮುಂಬೈ ತಂಡದಿಂದ ಬೇರ್ಪಟ್ಟಿದ್ದಾರೆ. ಹಾರ್ಡ್‌ ಹಿಟ್ಟಿಂಗ್‌ ಬ್ಯಾಟ್ಸ್‌ಮನ್‌ ಕೈರನ್‌ ಪೊಲಾರ್ಡ್‌ ದೊಡ್ಡ ಇನ್ನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅನನುಭವಿಗಳೇ ತುಂಬಿದ್ದಾರೆ. ಆದರೂ ಪ್ರತಿಭಾನ್ವಿತ ತಿಲಕ್‌ ವರ್ಮ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ:ಗೋವಾವನ್ನು ಭಾರತದ ಪ್ರವಾಸಿ ರಾಜಧಾನಿಯನ್ನಾಗಿ ಮಾಡಲು ಸರ್ಕಾರದಿಂದ ಹೆಚ್ಚಿನ ಪ್ರಯತ್ನ: ಸಾವಂತ್

ಸೂರ್ಯಕುಮಾರ್‌ ನಿರೀಕ್ಷೆಯಲ್ಲಿ..
ಸೂರ್ಯಕುಮಾರ್‌ ಯಾದವ್‌ ಫಿಟ್‌ ಆದರೂ ಬಲಿಷ್ಠ ರಾಜಸ್ಥಾನ್‌ ಎದುರಿನ ಕಳೆದ ಪಂದ್ಯದಲ್ಲಿ ಅವರನ್ನು ಆಡಿಸದಿದ್ದುದು ಅಚ್ಚರಿಯಾಗಿ ಕಂಡಿತು. ಬಹುಶಃ ಸೂರ್ಯಕುಮಾರ್‌ ಆಡಿದ್ದರೆ ಮುಂಬೈ ಗೆಲುವು ಸಾಧಿಸಬಹುದಿತ್ತೋ ಏನೋ. ರಾಜಸ್ಥಾನ್‌ ವಿರುದ್ಧ 194 ರನ್‌ ಗಳಿಸುವ ಹಾದಿಯಲ್ಲಿ ಮುಂಬೈ 170ರ ತನಕ ಬಂದಿತ್ತು.

Advertisement

ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಮೊದಲ ಪಂದ್ಯದಲ್ಲಿ ಮುಂಬೈ 4 ವಿಕೆಟ್‌ಗಳ ಸೋಲನುಭವಿಸಿತ್ತು. ರೋಹಿತ್‌ ಪಡೆಗೆ 177 ರನ್ನುಗಳ ದೊಡ್ಡ ಮೊತ್ತವನ್ನು ಉಳಿಸಿಕೊಳ್ಳಲಾಗಲಿಲ್ಲ. 72 ರನ್ನಿಗೆ ಎದುರಾಳಿಯ 5 ವಿಕೆಟ್‌ ಉರುಳಿಸಿಯೂ ಪಂದ್ಯವನ್ನು 18.2 ಓವರ್‌ಗಳಲ್ಲೇ ಕಳೆದುಕೊಂಡಿತ್ತು. ಕಾರಣ, ಬೌಲಿಂಗ್‌ ವೈಫಲ್ಯ. ಇಲ್ಲಿ ದುಬಾರಿಯಾದ ಬುಮ್ರಾ ಮರು ಪಂದ್ಯದಲ್ಲೇ ಲಯಕ್ಕೆ ಮರಳಿದ್ದು ಮುಂಬೈ ಪಾಲಿನ ಸಮಾಧಾನಕರ ಸಂಗತಿ.

ಕೆಕೆಆರ್‌ ವಿರುದ್ಧ ಸೂರ್ಯಕುಮಾರ್‌ ಅವರನ್ನು ಆಡಿಸಬೇಕಾದುದು ಅನಿವಾರ್ಯ. ಇವರಿಗಾಗಿ ಅನ್ಮೋಲ್‌ಪ್ರೀತ್‌ ಸಿಂಗ್‌ ಜಾಗ ಬಿಡಬೇಕಾಗುತ್ತದೆ.

ಮುಂಬೈಗೆ ಇನ್ನೂ ಬಲಿಷ್ಠ ತಂಡವನ್ನು ಕಟ್ಟುವ ಅವಕಾಶವಿದೆ. ಫ್ಯಾಬಿಯನ್‌ ಅಲೆನ್‌, ಜೈದೇವ್‌ ಉನಾದ್ಕತ್‌, ರಿಲೀ ಮೆರಿಡಿತ್‌, ಮಾಯಾಂಕ್‌ ಮಾರ್ಕಂಡೆ ಮೊದಲಾದವರು ರೇಸ್‌ನಲ್ಲಿದ್ದಾರೆ. ಟಿಮ್‌ ಡೇವಿಡ್‌ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದು, ಸ್ಥಾನ ಕಳೆದುಕೊಳ್ಳಬಹುದು.

ಉತ್ಸಾಹದಲ್ಲಿ ಕೆಕೆಆರ್‌
ಕಳೆದ ಸಲದ ರನ್ನರ್ ಅಪ್‌ ಕೆಕೆಆರ್‌ ಉದ್ಘಾಟನ ಪಂದ್ಯದಲ್ಲೇ ಚಾಂಪಿಯನ್‌ ಚೆನ್ನೈಗೆ ಸೋಲುಣಿಸಿ ಶುಭಾರಂಭ ಮಾಡಿದೆ. ಬಳಿಕ ಆರ್‌ಸಿಬಿ ಎದುರಿನ ಸಣ್ಣ ಮೊತ್ತದ ಸ್ಪರ್ಧೆಯಲ್ಲಿ 3 ವಿಕೆಟ್‌ಗಳಿಂದ ಎಡವಿತು. ಕಳೆದ ಮುಖಾಮುಖಿಯಲ್ಲಿ ಬಲಿಷ್ಠ ಪಂಜಾಬ್‌ ಕಿಂಗ್ಸ್‌ಗೆ 6 ವಿಕೆಟ್‌ ಸೋಲುಣಿಸಿದ ಉತ್ಸಾಹದಲ್ಲಿದೆ.

ಆದರೂ ಕೆಕೆಆರ್‌ ಇನ್ನೂ ಪರಿಪೂರ್ಣ ಸಾಮರ್ಥ್ಯ ಪ್ರದರ್ಶಿಸಿಲ್ಲ ಎಂಬುದನ್ನು ಗಮನಿಸಬೇಕು. ಓಪನರ್‌ ವೆಂಕಟೇಶ್‌ ಅಯ್ಯರ್‌, ಅಜಿಂಕ್ಯ ರಹಾನೆ, ನಿತೀಶ್‌ ರಾಣಾ ಪ್ರತಾಪ ತೋರಿಲ್ಲ.

ಕೆಕೆಆರ್‌ ಬೌಲಿಂಗ್‌ ವಿಭಾಗದಲ್ಲಿ ಉಮೇಶ್‌ ಯಾದವ್‌ ಸ್ಟಾರ್‌ ಆಗಿ ಮಿಂಚುತ್ತಿರುವುದು ವಿಶೇಷ. ಪವರ್‌ ಪ್ಲೇಯಲ್ಲಿ ವಿಕೆಟ್‌ ಉಡಾಯಿಸುವ ಮೂಲಕ ತಂಡಕ್ಕೆ ಮೇಲುಗೈ ಒದಗಿಸುತ್ತಿದ್ದಾರೆ. ಟಿಮ್‌ ಸೌಥಿ, ಸುನೀಲ್‌ ನಾರಾಯಣ್‌, ವರುಣ್‌ ಚಕ್ರವರ್ತಿ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗ ವೈವಿಧ್ಯಮಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next