Advertisement

ಇಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ: ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕನೇ ಶ್ರೇಷ್ಠ

12:28 AM Dec 24, 2023 | Team Udayavani |

ಪ್ರತಿಯೊಬ್ಬ ನಾಗರಿಕ, ಗ್ರಾಹಕನೂ ಹೌದು. ಮಾರುಕಟ್ಟೆಯು ತನ್ನದೇ ಆದ ನೀತಿ ನಿಯಮ ಹಾಗೂ ಮೌಲ್ಯಗಳಿಂದ ನಡೆಯುತ್ತದೆ. ಈ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರು ಕನಿಷ್ಠ ಜ್ಞಾನವನ್ನು ಹೊಂದಿರದಿದ್ದಲ್ಲಿ, ಮೋಸಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಇದೇ ಕಾರಣದಿಂದ ಗ್ರಾಹಕರ ರಕ್ಷಣೆಗಾಗಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಆತನಿಗೆ ಕೆಲವೊಂದು ಹಕ್ಕುಗಳನ್ನು ಸಹ ನೀಡಲಾಗಿದೆ. ಗ್ರಾಹಕ ಹಕ್ಕುಗಳು ಮತ್ತು ಕಾನೂನು ನಿಯಮಾವಳಿಗಳ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಡಿ.24ರಂದು ದೇಶದಲ್ಲಿ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.

Advertisement

ಗ್ರಾಹಕ ಸಂರಕ್ಷಣ ಕಾಯಿದೆ
ದೇಶದಲ್ಲಿ ಮೊದಲ ಬಾರಿಗೆ 1986ರಲ್ಲಿ ಗ್ರಾಹಕ ಸಂರಕ್ಷಣ ಕಾಯಿದೆಯನ್ನು ಜಾರಿಗೆ ತರಲಾಯಿತು. ಸರಕು ಸಾಮಾಗ್ರಿಗಳ ಮಾರಾಟ ಹಾಗೂ ಖರೀದಿಯ ವೇಳೆ ಗ್ರಾಹಕ ಯಾವುದೇ ವಂಚನೆ ಗೊಳಗಾಗಬಾರದು ಮತ್ತು ಗ್ರಾಹಕ ಸುರಕ್ಷೆಯನ್ನು ಆದ್ಯತೆಯಾಗಿರಿಸಿಕೊಂಡು ಈ ಕಾಯಿದೆಯನ್ನು ರೂಪಿಸಲಾಗಿತ್ತು. ಈ ಕಾಯಿದೆಯ ಜಾರಿಯ ಬಳಿಕ ದೇಶದ ನಾಗರಿಕರಿಗೆ ಗ್ರಾಹಕ ಹಕ್ಕುಗಳ ಬಗೆಗೆ ಜಾಗೃತಿ ಮೂಡಲಾರಂಭಿಸಿತು.

ಸ್ಫರ್ಧಾತ್ಮಕ ಮಾರುಕಟ್ಟೆ ಮತ್ತು ಗ್ರಾಹಕ ಶೋಷಣೆ
1990ರ ದಶಕದ ಬಳಿಕ ಭಾರತದ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಳ್ಳುತ್ತಾಹೋಯಿತು. ಕೇಂದ್ರ ಸರಕಾರ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಯನ್ನು ದೇಶದಲ್ಲಿ ಜಾರಿಗೆ ತಂದ ಬಳಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಯು ಹೆಚ್ಚಾಯಿತು. ಇದರಿಂದ ಗ್ರಾಹಕರಿಗೂ ಹೆಚ್ಚಿನ ಆಯ್ಕೆಗಳು ದೊರೆತವು. ಸಹಜವಾಗಿಯೇ ಮಾರುಕಟ್ಟೆಯಲ್ಲಿ ಪೈಪೋಟಿ ಆರಂಭವಾಗಿ ಬೆಲೆ ಇಳಿಕೆಗೆ ಕಾರಣವಾಯಿತು. ಆದರೆ ಈ ಪೈಪೋಟಿಯ ಭರದಲ್ಲಿ ವಸ್ತುಗಳ ಗುಣಮಟ್ಟದಲ್ಲಿ ಇಳಿಕೆ ಕಂಡುಬಂತು. ಇದರಿಂದ ಪರೋಕ್ಷವಾಗಿ ಗ್ರಾಹಕರ ಶೋಷಣೆಗೊಳಗಾಗುವಂತಾಯಿತು. ಹೀಗಾಗಿ ದಿನಗಳುರುಳಿದಂತೆ ಸ್ಪರ್ಧಾತ್ಮಕ ಮಾರುಕಟ್ಟೆಯ ಮೇಲಿನ ಗ್ರಾಹಕರ ನಂಬಿಕೆಯು ಕಡಿಮೆಯಾಯಿತು. ಈ ಸಂದರ್ಭದಲ್ಲಿ ದೇಶದಲ್ಲಿ ಗ್ರಾಹಕ ಹಕ್ಕುಗಳ ಬಗೆಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಲಾರಂಭಿಸಿತು. ಅಷ್ಟು ಮಾತ್ರವಲ್ಲದೆ ಗ್ರಾಹಕ ವೇದಿಕೆಗಳು, ಗ್ರಾಹಕ ನ್ಯಾಯಾಲಯಗಳು ಅಸ್ತಿತ್ವಕ್ಕೆ ಬಂದವು. ಕಾಲಕ್ರಮೇಣ ಗ್ರಾಹಕರಲ್ಲಿ ನಿಧಾನವಾಗಿ ತಮ್ಮ ಹಕ್ಕುಗಳ ಬಗೆಗೆ ಜಾಗೃತಿ ಮೂಡತೊಡಗಿತು.

ಮತ್ತಷ್ಟು ಗ್ರಾಹಕಸ್ನೇಹಿಯಾದ ಕಾಯಿದೆ ಜಾರಿ
2019ರಲ್ಲಿ ಕೇಂದ್ರ ಸರಕಾರ ಸಂಸತ್‌ನಲ್ಲಿ ಹೊಸದಾಗಿ ಗ್ರಾಹಕ ಸಂರಕ್ಷಣ ಮಸೂದೆಯನ್ನು ಮಂಡಿಸಿತು. ಅನಂತರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣ ಸಚಿವಾಲಯವು 2020ರ ಜುಲೈಯಿಂದ ಈ ಹೊಸ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಗ್ರಾಹಕರನ್ನು ಮತ್ತಷ್ಟು ಸಶಕ್ತವನ್ನಾಗಿಸಿದವು. ಈ ಕಾಯಿದೆಯು ಗ್ರಾಹಕರಿಗೆ ರಕ್ಷಣೆಯ ಹಕ್ಕು, ಮಾಹಿತಿ ತಿಳಿಸುವ ಹಕ್ಕು, ಆಯ್ಕೆಯ ಹಕ್ಕು, ಕೇಳುವ ಹಕ್ಕು, ಪರಿಹಾರ ಕಂಡುಕೊಳ್ಳುವ ಹಕ್ಕು ಹಾಗೂ ಗ್ರಾಹಕ ಶಿಕ್ಷಣದ ಹಕ್ಕನ್ನು ಒಳಗೊಂಡಿದೆ. ಎಲ್ಲ ಹಂತದ ಗ್ರಾಹಕ ಆಯೋಗಗಳ ಮೇಲೆ ನಿಯಂತ್ರಣ ಹೊಂದಿರುವ ಸಾಂವಿಧಾನಿಕ ಸಂಸ್ಥೆ ಗ್ರಾಹಕ ರಕ್ಷಣ ಪರಿಷತ್‌ ಸ್ಥಾಪನೆ ಈ ಕಾಯಿದೆಯ ಅತ್ಯಂತ ಮಹತ್ವದ ಅಂಶ.

Advertisement

Udayavani is now on Telegram. Click here to join our channel and stay updated with the latest news.

Next