ಹೆಬ್ರಿ: 41ವರ್ಷಗಳ ನಿರಂತರ ಹೋರಾಟದ ಫಲವಾಗಿ ಕನಸಾಗಿದ್ದ ಹೆಬ್ರಿ ತಾಲೂಕು ರಚನೆ ಕೊನೆಗೂ ನನಸಾಗಿ ಫೆ.17ರಂದು ತಾಲೂಕು ಕಚೇರಿಗೆ ಅಧಿಕೃತ ಚಾಲನೆ ದೊರೆಯಲಿದೆ. ನೂತನ ಕಟ್ಟಡವಾಗುವ ತನಕ ತಾತ್ಕಲಿಕವಾಗಿ ಹೆಬ್ರಿ ಬಸ್ಸು ತಂಗುದಾಣ ಸಮೀಪದ ಹಳೆಯ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಹೆಬ್ರಿ ತಾಲೂಕು ಕಚೇರಿಗೆ ಫೆ.17ರಂದು ಸಂಜೆ 4ಗಂಟೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 4ಹೊಸ ತಾಲೂಕುಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 49 ಹೊಸ ತಾಲೂಕುಗಳಾಗಿದ್ದು ಫೆ.14ರಂದು ಕಾಪು,ಬ್ರಹ್ಮಾವರ ಹಾಗೂ ಬೈಂದೂರು ತಾಲೂಕುಗಳು ಉದ್ಘಾಟನೆಗೊಂಡಿದೆ.
ದಾನಿಗಳ ನೆರವಿನಿಂದ ಮೂಲಭೂತ ಸೌಲಭ್ಯ:
ಸರ್ಕಾರದ ಆದೇಶದಲ್ಲಿ ಹೊಸ ತಾಲೂಕುಗಳ ಕಾರ್ಯಾರಂಭ ಮತ್ತು ಆಡಳಿತಾತ್ಮಕ ಪ್ರಕ್ರಿಯೆಯನ್ನು ಪ್ರಾರಂಭಿಸಲು ಪ್ರತಿ ತಾಲೂಕಿಗೆ ರೂ.5ಲಕ್ಷಗಳಂತೆ ಬಿಡುಗಡೆ ಮಾಡಿ ಆದೇಶಿಸಲಾಗಿದ್ದು, ಹೆಬ್ರಿ ತಾಲೂಕು ಕಚೇರಿಗೆ ಅಗತ್ಯವಾದ ಸೌಕರ್ಯಗಳಿಗೆ ಸರಕಾರದಿಂದ ಅನುದಾನ ಸಿಗಲಿದ್ದು, ಅನುದಾನ ಮಂಜೂರಾಗುವವರೆಗೆ ತಾತ್ಕಾಲಿಕವಾಗಿ ಸ್ಥಳೀಯ ದಾನಿಗಳ ನೆರವಿನಿಂದ ಮೂಲಭೂತ ಸೌಲಭ್ಯಗಳನ್ನು ಪೂರೈಸಿಕೊಂಡು ಹೆಬ್ರಿ ತಾಲೂಕು ಕಚೇರಿ ಕಾರ್ಯಾರಂಭವಾಗಲಿದೆ. ಚುನಾವಣಾ ಸಮಯವಾದ್ದರಿಂದ ಹೆಬ್ರಿ ತಾಲೂಕಿನ ಪ್ರಭಾರ ತಹಶೀಲ್ದಾರ್ ಮಹಾದೇವಯ್ಯ ಮಂಗಳವಾರ ಹಾಗೂ ಶುಕ್ರವಾರ ಹೆಬ್ರಿ ತಾಲೂಕು ಕಚೇರಿಯಲ್ಲಿ ಲಭ್ಯವಿದ್ದಾರೆ.
16 ಗ್ರಾಮಗಳು: ಹೆಬ್ರಿ ಹೊಸ ತಾಲೂಕಿಗೆ ಕಾರ್ಕಳ ತಾಲೂಕಿನಲ್ಲಿದ್ದ ಬೇಳಂಜೆ, ಕುಚ್ಚಾರು, ಹೆಬ್ರಿ, ಚಾರ, ಶಿವಪುರ, ಕೆರೆಬೆಟ್ಟು, ಮುದ್ರಾಡಿ, ಕಬ್ಬಿನಾಲೆ, ನಾಡಾ³ಲು, ವರಂಗ, ಪಡುಕುಡೂರು,ಅಂಡಾರು ಹಾಗೂ ಕುಂದಾಪುರ ತಾಲೂಕಿನಲ್ಲಿದ್ದು ಬೆಳ್ವೆ, ಅಲಾºಡಿ, ಶೇಡಿಮನೆ, ಮಡಾಮಕ್ಕಿ ಸೇರಿದಂತೆ 46663 ಜನಸಂಖ್ಯೆಯನ್ನು ಒಳಗೊಂಡ 16ಗ್ರಾಮಗಳು ಒಳಗೊಂಡಿದೆ.
ಈಗಿರುವ ಕಚೇರಿ: ಸರಕಾರಿ ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಮೆಸ್ಕಾಂ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ವಲಯ ಅರಣ್ಯ ಇಲಾಖೆ, ಸಾರ್ವಜನಿಕ ಗ್ರಂಥಾಲಯ,ಪೊಲೀಸ್ ಠಾಣೆ ಹಾಗೂ ಇತರ ಕಚೇರಿಗಳಿವೆ.
ಆಗಬೇಕಾದ ಕಚೇರಿಗಳು: ತಾಲೂಕು ಕಚೇರಿ ನೂತ ಕಟ್ಟಡ , ತಾ.ಪಂ. ಕಚೇರಿ,ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಲೋಕೋಪಯೋಗಿ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯಾಧಿಕಾರಿಗಳ ಕಚೇರಿ, ಕೃಷಿ ಉತ್ಪನ್ನ ,ಮಾರುಕಟ್ಟೆ ಸಮಿತಿ, ನ್ಯಾಯಾಲಯ, ರೇಷ್ಮೆ ಇಲಾಖೆ, ಅಬಕಾರಿ ಇಲಾಖೆ, ಅಗ್ನಿಶಾಮಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಹಕಾರ ಅಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ, ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ, ಪಶುಸಂಗೋಪನ ಇಲಾಖೆ, ಯುವಜನ ಸೇವಾ, ಕ್ರೀಡಾ ಇಲಾಖೆ, ಕೈಗಾರಿಕೆ, ವಾಣಿಜ್ಯ ಇಲಾಖೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾಕರ ಇಲಾಖೆ, ವಿಶೇಷ ತಹಶೀಲ್ದಾರರ ಕಚೇರಿ, ಆರಕ್ಷಕ ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು, ಆರಕ್ಷಕ ಉಪ ನಿರೀಕ್ಷಕರು, ಜಿ.ಪಂ. ಎಂ. ಉಪ ವಿಭಾಗ, ಶಿಕ್ಷಣಾಧಿಕಾರಿಗಳ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ಉಪ ಖಜಾನೆ ಇಲಾಖೆಗಳು ಆಗಬೇಕಾಗಿದೆ.
41ವರ್ಷಗಳ ಹೋರಾಟಕ್ಕೆ ಸಂದ ಜಯ
ಹೆಬ್ರಿ ತಾಲೂಕು ರಚನೆಯ ಹೋರಾಟ ಇಂದು ನಿನ್ನೆಯದಲ್ಲ. ನಿರಂತರವಾಗಿ 41ವರ್ಷಗಳ ಅಧಿಕ ಸಮಯದಿಂದ ಇಲ್ಲಿನ ಜನತೆ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯ ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ ಸೇರಿದಂತೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಗ್ಗಳಿಕೆ ಹೆಬ್ರಿಯದ್ದಾಗಿದೆ. ತಾಲೂಕು ಪುನರ್ ರಚನಾ ರಾಜ್ಯ ಸಮಿತಿಯ 2012ರಲ್ಲಿ ಅಧ್ಯಕ್ಷರಾಗಿದ್ದ ಎಮ್. ಬಿ ಪ್ರಕಾಶ್ ಉಡುಪಿ ಜಿಲ್ಲೆಯಲ್ಲಿ ಹೆಬ್ರಿ ತಾಲೂಕು ರಚನೆಗೆ ಸಾಕಷ್ಟು ಧನಾತ್ಮಕ ಅಂಶಗಳಿವೆ ಎಂದು ತಿಳಿಸಿದ್ದರು.2012-13ರ ಬಜೆಟ್ನಲ್ಲಿ 43 ಹೊಸ ತಾಲೂಕು ಘೋಷಣೆ ಮಾಡಿ ಮೂಲ ಸೌಕರ್ಯ ಒದಗಿಸಲು ಭರವಸೆ ನೀಡಿದರೂ ಸಹ ಅನುಷ್ಠಾನಗೊಂಡಿರಲಿಲ್ಲ. ಇದೀಗ 16ಗ್ರಾಮಗಳನ್ನೊಳಗೊಂಡ ಹೆಬ್ರಿ ತಾಲೂಕು ಘೋಷಣೆಯಾಗುದರ ಮೂಲಕ ಈ ಭಾಗದ ಜನರ ಗನನ ಕುಸಮವಾಗಿದ್ದ ಹೆಬ್ರಿ ತಾಲೂಕು ರಚನೆಯ ಕನಸು ನನಸಾಗಿದೆ ಎಂದು ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಎಚ್ ಭಾಸ್ಕರ್ ಜೋಯಿಸ್ ಹಾಗೂ ಸಂಚಾಲಕ ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಹೆಬ್ರಿ ಉದಯಕುಮಾರ್ ಶೆಟ್ಟಿ