Advertisement

ತಂಬಾಕು ಸೇವನೆ ಅಪಾಯಕಾರಿ

09:19 AM Jun 01, 2019 | Suhan S |

ದೊಡ್ಡಬಳ್ಳಾಪುರ: ಇಂದಿನ ಯುವ ಪೀಳಿಗೆ ಧೂಮಪಾನ ಮೊದಲಾದ ತಂಬಾಕು ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಸಿ.ಚಂದ್ರಶೇಖರ್‌ ತಿಳಿಸಿದರು.

Advertisement

ನಗರದ ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ವಕೀಲರ ಸಂಘದ ವತಿಯಿಂದ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನಜಾಗೃತಿ ಅಗತ್ಯ: ಜಗತ್ತಿನಲ್ಲಿ ಪ್ರತಿ ವರ್ಷ 70ಲಕ್ಷ ಮಂದಿ ತಂಬಾಕು ಸೇವನೆಯಿಂದ ಮೃತಪಡುತ್ತಿದ್ದಾರೆ. ಇದರಲ್ಲಿ ಐದನೇ ಒಂದು ಭಾಗ ಧೂಮಪಾನಿಗಳ ಸಮೀಪವಿದ್ದು, ಪರೋಕ್ಷ ವಾಗಿ ತೊಂದರೆಗೊಳಗಾಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಮಾರಕ ರೋಗಗಳಿಗೆ ಬಲಿಯಾಗುವ ಜನರ ಸಂಖ್ಯೆ ಇಳಿಮುಖವಾಗಬೇಕು ಎಂದು ಸರ್ಕಾರಗಳು ಸಾಕಷ್ಟು ಕಾಯಿದೆಗಳನ್ನು ರಚಿಸುತ್ತಿವೆ. ಆದರೆ, ಈ ಬಗ್ಗೆ ಜನಜಾಗೃತಿ ಇಲ್ಲದೇ ಇರುವುದು ಹೆಚ್ಚಿನ ದುಷ್ಪರಿಣಾಮಗಳಿಗೆ ಕಾರಣವಾಗುತ್ತಿವೆ ಎಂದರು.

ಶಾಶ್ವತ ನಿಧಿ ಸ್ಥಾಪಿಸಿ: ಸದ್ಯಕ್ಕೆ ತಂಬಾಕು ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಮಾಡುವುದು ಅಸಾಧ್ಯವಾಗಿದೆ. ಆದರೆ, ಸರ್ಕಾರ ತಂಬಾಕು ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ಹಾಕುವುದು ಹಾಗೂ ತಂಬಾಕು ಉತ್ಪನ್ನಗಳಿಂದ ಸರ್ಕಾರಕ್ಕೆ ಬರುವ ಆದಾಯದಿಂದ ಒಂದು ಶಾಶ್ವತ ನಿಧಿ ಸ್ಥಾಪಿಸಿ, ತಂಬಾಕು ಸೇವನೆಯಿಂದ ಅಥವಾ ಪರೋಕ್ಷವಾಗಿ ತೊಂದರೆಗೊಳಗಾದವರ ನೆರವಿಗೆ ಬಳಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ತಂಬಾಕು ಬಳಕೆ ದುರದೃಷ್ಟಕರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ವಿಜಯಲಕ್ಷ್ಮೀ ಮಾತನಾಡಿ, ತಂಬಾಕು ಸೇವನೆ ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೂ ಮೂಲವಾಗಿದೆ. ಇದಲ್ಲದೇ, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಿದೆ. ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-2003ರ ಪ್ರಕಾರ ಸೆಕ್ಷನ್‌ 4, ಸೆಕ್ಷನ್‌ 5, ಸೆಕ್ಷನ್‌ 6 ಹೀಗೆ ಸಾಕಷ್ಟು ಕಾಯ್ದೆಗಳು ಜಾರಿಗೊಂಡಿವೆ. ದೇಶದಲ್ಲಿ ಕೋಟ್ಪಾ ಕಾಯ್ದೆ 2003 ಸೆಕ್ಷನ್‌-5 ರ ಪ್ರಕಾರ ತಂಬಾಕನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ. ಆದರೂ, ಸಾರ್ವಜನಿಕ ಸ್ಥಳಗಳಲ್ಲಿ ಸಾಕಷ್ಟು ತಂಬಾಕು ಬಳಕೆಯ ಪ್ರಕರಣಗಳು ಎದುರಾಗುತ್ತಿರುವುದು ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

401 ಪ್ರಕರಣ ದಾಖಲು: ತಂಬಾಕಿನಿಂದಾಗುವ ದುಷ್ಪರಿಣಾಮಗಳು ಹಾಗೂ ಅಕ್ರಮವಾಗಿ ಮಾರಾಟ ಮಾಡುವ ಮತ್ತು ಸೇವನೆ ಮಾಡುವವರಿಗೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ದಂಡ ವಿಧಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ 401 ಪ್ರಕರಣ ದಾಖಲಿಸಲಾಗಿದ್ದು, 58,700 ರೂ. ದಂಡ ವಿಧಿಸಲಾಗಿದೆ. ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರವನ್ನು ತೆರೆಯಲಾಗಿದ್ದು, 56 ತಂಬಾಕು ವ್ಯಸನಿಗಳನ್ನು ವ್ಯಸನದಿಂದ ಬಿಡಿಸಲಾಗಿದೆ ಎಂದು ತಿಳಿಸಿದರು.

ಕಾನೂನು ಅರಿವು ಅಗತ್ಯ: ವಕೀಲೆ ಜೆ.ಮಂಜುಳಾ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷದ ಮೇ 31ರಂದು ವಿಶ್ವ ತಂಬಾಕು ರಹಿತ ದಿನವೆಂದು ಘೋಷಿಸಿದೆ. ತಂಬಾಕು ಮುಕ್ತ ದೇಶ ನಿರ್ಮಿಸುವ ಪಣತೊಟ್ಟು, ತಂಬಾಕು ಸೇವನೆಯಿಂದಾಗುವ ಮಾರಣಾಂತಿಕ ಕಾಯಿಲೆಗಳಿಗೆ ಮುಕ್ತಾಯ ಹಾಡಲು ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ. ಈ ಸಾಲಿನ ತಂಬಾಕು ದಿನಾಚರಣೆಯನ್ನು ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುಕೊಳ್ಳುವುದರೊಂದಿಗೆ ಕಾನೂನು ಅರಿವು ಸಹ ಅಗತ್ಯವಾಗಿದೆ ಎಂದರು.

ವಕೀಲ ಡಿ.ಎಂ.ರೇಣುಕಾ ಮೂರ್ತಿ ಕೋಟ್ಪಾ ಕಾಯ್ದೆ ಕುರಿತು ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಬಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಮಮತಾ ಶಿವಪೂಜೆ, ತಾಲೂಕು ಆರೋಗ್ಯಾಧಿಕಾರಿ ಡಾ.ಶರ್ಮಿಳಾ ಹೆಡೆ, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಅಸಾದುಲ್ಲಾಖಾನ್‌, ಗೌರವ ಅಧ್ಯಕ್ಷ ರಾ.ಬೈರೇಗೌಡ, ಹಿರಿಯ ವಕೀಲ ಎ.ಆರ್‌.ನಾಗರಾಜನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ವರಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ನರಸಿಂಹಮೂರ್ತಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next