Advertisement

ತಂಬಾಕು ಮತ್ತು ಕೋವಿಡ್‌-19 ಅಪಾಯಗಳು

02:23 PM Jun 06, 2021 | Team Udayavani |

ಕೋವಿಡ್‌ ಮಹಾಮಾರಿಯು ವಿಶ್ವದೆಲ್ಲೆಡೆ ಹಾಹಾಕಾರವನ್ನು ಹಬ್ಬಿಸಿ ಈಗ ಭಾರತದಲ್ಲಿಯೂ ಎರಡನೇ ಅಲೆಯ ಮುಖಾಂತರ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಭಾರತ ಸರಕಾರ ಹಾಗೂ ನಮ್ಮ ರಾಜ್ಯ ಸರಕಾರದವರು ಸೋಂಕನ್ನು ತಡೆಗಟ್ಟಲು ಲಸಿಕೆ ಹಾಕಿಸುವುದನ್ನು ಚುರುಕುಗೊಳಿಸಿ “ಟ್ರ್ಯಾಕ್‌, ಟೆಸ್ಟ್‌, ಟ್ರೀಟ್‌’ ಮತ್ತು ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅರಿವು ಮೂಡಿಸುತ್ತಿದ್ದಾರೆ. ಸರಕಾರೇತರ ಸಂಸ್ಥೆಗಳು ಕೂಡ ಇದರಲ್ಲಿ ಸಹಕಾರ ಕೊಟ್ಟು ಸರಕಾರದೊಡನೆ ಹೆಗಲು ಕೊಟ್ಟು ನಡೆಯುತ್ತ ಬಂದಿವೆ. ಆದರೆ ಈ ಮಹಾಮಾರಿಯನ್ನು ಸದೆಬಡಿಯಲು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕೈ ಜೋಡಿಸಿದರೆ ಮಾತ್ರ ಸಾಧ್ಯ.

Advertisement

ಕೋವಿಡ್‌ ಪ್ರಾರಂಭವಾದಾಗಿನಿಂದ ಈಗಿನವರೆಗೆ ವಿಶ್ವದೆಲ್ಲೆಡೆ ಸಾಕಷ್ಟು ಸಂಶೋಧನೆ ನಡೆದು ಹತ್ತು ಹಲವಾರು ಅಂಶಗಳು ಬೆಳಕಿಗೆ ಬಂದಿರುತ್ತವೆ. ಇವೆಲ್ಲವೂ ಸದ್ಯದ ವಿಪತ್ತನ್ನು ನಿಯಂತ್ರಿಸಲು ಬಹಳ ಉಪಯುಕ್ತವಾಗಿರುತ್ತವೆ. ನಮಗೀಗ ಯಾವ ವ್ಯಕ್ತಿಯಲ್ಲಿ ಸೋಂಕು ಮಾರಕವಾಗಬಹುದು ಎಂಬ ಅಂಶ ತಿಳಿದಿದೆ. ಯಾರಲ್ಲಿ ಹೆಚ್ಚಿನ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಶ್ವಾಸಕೋಶ ಹಾಗೂ ಕಿಡ್ನಿ ತೊಂದರೆಗಳಿರುತ್ತವೆಯೋ ಅವರಲ್ಲಿ ಕೋವಿಡ್‌ ಉಪಟಳ ತೀವ್ರವಾಗಿ ಇರುತ್ತದೆ ಎಂದು ಬೆಳಕಿಗೆ ಬಂದಿದೆ. ಇದರ ಜತೆಗೆ ಧೂಮಪಾನ ಹಾಗೂ ಅತಿಯಾದ ತೂಕ (ಆMಐ|30 kಜ/ಞ2) ಇರುವವರು ಕೋವಿಡ್‌ನಿಂದ ಹೆಚ್ಚಿನ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ.

 ಏನು ಮಾಡಬಹುದು?

ಹಾಗಾದರೆ ಜನ ಸಾಮಾನ್ಯರು ಕೋವಿಡ್‌ ಸಾಂಕ್ರಾಮಿಕ ರೋಗವನ್ನು ತಡೆಯಲು ಏನು ಮಾಡಬಹುದು? ಈಗ ಮೇಲ್ಕಂಡಂತೆ ಕೋವಿಡ್‌ ಸೋಂಕು ಮಾರಕವಾಗಿಸುವ ಅಂಶಗಳ ಮೇಲೆ ಗಮನ ಹರಿಸೋಣ. ಈಗ ಬಂದಿರುವ ಮಾಹಾಮಾರಿಯು ನಮ್ಮೆಲ್ಲರ ಜೀವನಶೈಲಿಯನ್ನು ಬದಲಾಯಿಸಲು ಒಂದು ಅವಕಾಶವನ್ನು ನೀಡಿದೆ ಎಂದುಕೊಳ್ಳೋಣ. ಎಲ್ಲರೂ ಅವರವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡು ಸದೃಢರಾಗುವುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ಯಾರಿಗಾದರೂ ಅಸಾಂಕ್ರಾಮಿಕ ರೋಗಗಳು ಇದ್ದಲ್ಲಿ,  ಅಂದರೆ ಹೆಚ್ಚಿನ ರಕ್ತದೊತ್ತಡ, ಮಧುಮೇಹ ಇತರೆ ತೊಂದರೆಗಳಿದ್ದರೆ ಸೂಕ್ತ ವೈದ್ಯಕೀಯ ಸಲಹೆ ಪಡೆದು ನಿಯಮಿತ ಔಷಧಗಳನ್ನು ತಪ್ಪದೇ ಸೇವಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಆಹಾರದಲ್ಲಿ ಮಿತಿಯನ್ನು ಪಾಲಿಸಿ, ಎಲ್ಲ ಪದಾರ್ಥಗಳನ್ನು ಒಳಗೊಂಡ ಸಮತೋಲಿತ ಆಹಾರವನ್ನು ಸ್ವೀಕರಿಸಿ ಮನೆಯಲ್ಲಿಯೇ ನಿಯಮಿತವಾಗಿ ವ್ಯಾಯಮ ಹಾಗೂ ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳುವುದು ಸೂಕ್ತ. ಇದಲ್ಲದೇ ಈ ಅಸಂಕ್ರಾಮಿಕ ಖಾಯಿಲೆಗೆ ಕಾರಣವಾದ ಧೂಮಪಾನ ಮತ್ತು ತಂಬಾಕು ಸೇವನೆಯನ್ನು ಬಿಡಲು ಪ್ರಯತ್ನಿಸುವುದು ಬಲು ಸೂಕ್ತ.

Advertisement

ಈ ವರ್ಷದ ವಿಶ್ವ ತಂಬಾಕುರಹಿತ ದಿನ 31 ಮೇ 2021. ಈ ಬಾರಿ “ತಂಬಾಕು ತ್ಯಜಿಸುವುದಕ್ಕೆ ಬದ್ಧರಾಗುವುದು’ ಎಂಬುದು ಘೋಷವಾಕ್ಯವಾಗಿದ್ದು, ಈ ಬಗ್ಗೆ ಒತ್ತು ನೀಡಲಾಗಿದೆ. ಈ ಮಧ್ಯೆ ಕೆಲವು ಸಂಶೋಧನೆಗಳು ತಂಬಾಕು ಉಪಯೋಗಿಸುವುದರಿಂದ ಕೋವಿಡ್‌ ಸೋಂಕನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟಿವೆ ಎಂಬ ವದಂತಿಗಳಿವೆ. ಈ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿರುವುದು ವಿಷಾದನೀಯ. ಜನರನ್ನು ದಿಕ್ಕು ತಪ್ಪಿಸಲು ಧೂಮಪಾನ ಮಾಡುವವರಲ್ಲಿ ಕೋವಿಡ್‌ ಸೋಂಕು ತಗುಲುವುದಿಲ್ಲವೆಂದು ವದಂತಿ ಹಬ್ಬಿಸಲಾಗಿದೆ.

ನಿಜಕ್ಕೂ ಅದೊಂದು ತಪ್ಪು ಕಲ್ಪನೆ. ಹಲವಾರು ಅಧ್ಯಯನಗಳು ಪ್ರಕಟಿಸಿರುವ ಹಾಗೆ ಧೂಮಪಾನವು ಕೋವಿಡ್‌ ಸೋಂಕಿನೊಂದಿಗೆ ನೇರ ಸಂಪರ್ಕ ಹೊಂದಿದೆ. ಚೀನ ಮತ್ತು ಇತರ ದೇಶಗಳಲ್ಲಿ ಈ ತಪ್ಪು ಕಲ್ಪನೆಯಿಂದಾಗಿ ಕೋವಿಡ್‌ ಸಂದರ್ಭದಲ್ಲಿ ಧೂಮಪಾನವನ್ನು ಹೆಚ್ಚಿಸಿರುತ್ತಾರೆ. ಹಾಗೆಯೇ ಫ್ರಾನ್ಸ್‌ನಂತಹ ದೇಶಗಳಲ್ಲಿ ತಂಬಾಕಿನ ಪ್ರಮುಖ ಅಂಶವಾದ ನಿಕೋಟಿನ್‌ ಧೂಮಪಾನಿಗಳನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ಈ ತಪ್ಪು ಕಲ್ಪನೆ ಬರಲು ಕಾರಣ ಪ್ರಾಥಮಿಕ ಹಂತದಲ್ಲಿ ನಡೆದ ಕೋವಿಡ್‌ ರೋಗಿಗಳ ಮೇಲಿನ ಸಂಶೋಧನೆಯಲ್ಲಿ ಧೂಮಪಾನಿಗಳ ಸಂಖ್ಯೆ ಕಡಿಮೆ ಆಗಿತ್ತು ಮತ್ತು ಹೃದ್ರೋಗ ಮತ್ತಿತರ ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ, ಈ ಕಾಯಿಲೆಗಳು ಧೂಮಪಾನದಿಂದ ಶುರುವಾಗಿರುವ ಸಾಧ್ಯತೆಯನ್ನು ಪರಿಗಣಿಸಲಾಗಿಲ್ಲ.

ಈ ರೀತಿಯ ಸುಳ್ಳು ವದಂತಿಗಳಿಗೆ ಜನರು ಬಲಿ ಆಗದೆ ತಂಬಾಕು ವ್ಯಸನದಿಂದ ಹೊರಬರಲು ಪ್ರಯತ್ನಿಸುವುದು ಒಳ್ಳೆಯದು. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತ ಸರಕಾರದ ವತಿಯಿಂದ ಧೂಮಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಹೀರಾತನ್ನು ಬಿಡುಗಡೆ ಮಾಡಲಾಗಿದೆ.

ಇದುವರೆಗಿನ ಸಂಶೋಧನೆಗಳ ಪ್ರಕಾರ ಧೂಮಪಾನಿಗಳಲ್ಲಿ ಕೋವಿಡ್‌ನಿಂದ ಹೆಚ್ಚಿನ ತೊಂದರೆ ಆಗಿ ನ್ಯುಮೋನಿಯ ಆಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಕೃತಕ ಉಸಿರಾಟದ ಆವಶ್ಯಕತೆಯೂ ಹೆಚ್ಚು ಇರುವ ಸಾಧ್ಯತೆ ಇರುತ್ತದೆ ಎಂಬುದು ಗೋಚರವಾಗುತ್ತಿದೆ.

ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (ಎಅಖಖ 2) ಪ್ರಕಾರ, ಭಾರತದಲ್ಲಿ ಶೇ.42.4 ಪುರುಷರು, ಶೇ. 14.2 ಮಹಿಳೆಯರು ಮತ್ತು ಶೇ. 28.6 ವಯಸ್ಕರು ಪ್ರಸ್ತುತ ತಂಬಾಕನ್ನು ಬಳಕೆ ಮಾಡುತ್ತಿದ್ದಾರೆ (9 ಮೇ, 2021ರ ವರದಿಯ ಪ್ರಕಾರ, ಕೋವಿಡ್‌-19ನಿಂದಾಗಿ ಭಾರತದಲ್ಲಿ 2.27 ಕೋಟಿ ಪ್ರಕರಣಗಳು ಮತ್ತು 2.46 ಲಕ್ಷ ಸಾವಿನ ಪ್ರಕರಣಗಳು ವರದಿಯಾಗಿದೆ). ಕೆಎಂಸಿ ಮಣಿಪಾಲದ ಸಮುದಾಯ ವೆÂದ್ಯಕೀಯ ವಿಭಾಗದಿಂದ ನಡೆಸಲಾದ ತಂಬಾಕು ನಿಯಂತ್ರಣದಲ್ಲಿ ನಿರತರಾದ ಸಂಶೋಧಕರು, ವೈದ್ಯರು, ಪ್ರಾಧ್ಯಾಪಕರು ಹಾಗು ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ಸುಮಾರು ಶೇ. 75 ಭಾಗೀದಾರರು ಕೋವಿಡ್‌ 19 ಸಾಂಕ್ರಾಮಿಕ ಸಂದರ್ಭದಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಬೇಕೆಂದು ತಿಳಿಸಿರುತ್ತಾರೆ. ಸರಿಸುಮಾರು ಶೇ. 50 ಅಧ್ಯಯನ ಭಾಗೀದಾರರು ತಂಬಾಕು ನಿಯಂತ್ರಣ ನೀತಿಗಳ ಮೇಲೆ ಕೋವಿಡ್‌-19 ಪರಿಣಾಮ ಬೀರುತ್ತದೆ ಮತ್ತು ಈ ಸನ್ನಿವೇಶವು ದೇಶದಲ್ಲಿ ತಂಬಾಕು ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಂಬಾಕುವನ್ನು ನಿಲ್ಲಿಸುವುದರಿಂದ ಕೋವಿಡ್‌-19ರಿಂದ ತೊಂದರೆ ಕಡಿಮೆಯಾಗುವುದರ ಬಗ್ಗೆ ಸಂದೇಶಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಬೇಕು.

ತಂಬಾಕಿನಿಂದ ಕೋವಿಡ್‌ ಪರಿಣಾಮ ಹೆಚ್ಚಳ

ಈ ಎಲ್ಲ ಅಧ್ಯಯನಗಳನ್ನು ಒಳಗೊಂಡು, ಓದುಗರಿಗೆ ತಿಳಿಯ ಬಯಸುವುದೇನೆಂದರೆ ಧೂಮಪಾನ ಹಾಗು ತಂಬಾಕು ಸೇವನೆಯಿಂದ ದುಷ್ಪರಿಣಾಮಗಳು ಸಂಭವಿಸುವುದು ಮತ್ತು ಕೋವಿಡ್‌ ಹರಡುವಿಕೆ ಹೆಚ್ಚಾಗುವುದು ಖಚಿತ. ಆದ್ದರಿಂದ ತಂಬಾಕು ಸೇವನೆಯನ್ನು ಇಂದೇ ತ್ಯಜಿಸುತ್ತೇವೆಂದು ಪಣತೊಟ್ಟು ದಿಟ್ಟ ಹೆಜ್ಜೆಯನ್ನು ತಗೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ನಿಮ್ಮ ವೈದ್ಯರ ಬಳಿ ತಿಳಿಸಿ ಸೂಕ್ತ ಸಲಹೆಯನ್ನು ಇಂದೇ ತೆಗೆದುಕೊಳ್ಳಿ. ದೃಢ ಸಂಕಲ್ಪ ಮಾಡಿ, ಯಾವ ದಿನದಿಂದ ತಂಬಾಕು ಸೇವನೆಯನ್ನು ನಿಲ್ಲಿಸುತ್ತೀರೆಂದು ನಿರ್ಧರಿಸಿ. ನಿಮ್ಮ ಕುಟುಂಬದವರ ಸಹಕಾರವನ್ನು ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನೀವು ಉಚಿತ ಸಹಾಯವಾಣಿ 1800112356ಗೆ ಮನೆಯಿಂದಲೇ ಕರೆ ಮಾಡಿ ಆಪ್ತ ಸಮಾಲೋಚನೆಯನ್ನು ಪಡೆದುಕೊಳ್ಳಬಹುದು. ವಿಶ್ವ ಆರೋಗ್ಯ ಸಂಸ್ಥೆಯ Stop smoking app (https://play.google.com/store/apps/details?id=com.tobacco1.tobacco1)  ಕೂಡ ಉಪಯುಕ್ತವಾಗಿದೆ.

ಈ ರೀತಿಯಲ್ಲಿ ನಿಮಗೆ ತಂಬಾಕು ವರ್ಜಿಸಲು ಸಾಕಷ್ಟು ಸಹಾಯಗಳಿದ್ದು, ನಿಮ್ಮ ದೃಢ ನಿರ್ಧಾರ ಒಂದೇ ಬೇಕಾಗಿರುವುದು. ತ್ವರೆ ಮಾಡಿ, ತಂಬಾಕಿನ ಎಲ್ಲ ಪದಾರ್ಥಗಳನ್ನು ವರ್ಜಿಸಿದ ಜೀವನವನ್ನು ಆಯ್ದುಕೊಳ್ಳಿ.

 

ಡಾ| ಮುರಳೀಧರ ಕುಲಕರ್ಣಿ

ಡಾ| ರೋಹಿತ್‌ ಭಾಗವತ್‌

ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next